ಪೂರ್ಣದರ್ಶನದ ಭಾಗ್ಯ ಕೊಟ್ಟ ನನ್ನೊಲವ ಶಕುಂತಲೆಗೆ ಪ್ರೀತಿ ತುಂಬಿದ ಪತ್ರ
ನನ್ನ ಶಕುಂತಲೇ,
ರೈಲು ಬರುತ ಕೂಗಿತು ನೀನು ಬಂದೆಯೆಂದು. ರೈಲು ಹೋಗುತ ಕೂಗಿತು ನೀನು ಇಳಿದಿರುವಿಯೆಂದು. ನಿಲ್ದಾಣಕ್ಕೆ ಬಂದಿದ್ದ ಅಪ್ಪನ ಹಿಂದೆ ನೀನು. ಅವನು ಒಳಬಂದಾಗ ಬಾಗಿಲಲ್ಲಿ ನನಗೆ ನಿನ್ನ ಪೂರ್ಣದರ್ಶನ ಭಾಗ್ಯ ಕೊಟ್ಟೆ ಶಕುಂತಲೆ.
ನಿನ್ನ ನಡುನೆತ್ತಿಯಲಿ ಓರೆಯಾದ ಬೈತಲೆ ಬೊಟ್ಟು, ಮುಡಿದ ಕನಕಾಂಬರದ ಜಡೆ ನಡುವೆ ಸೇವಂತಿಗೆ ಜಡೆಬಿಲ್ಲೆ, ಕೊರಳಲಿ ಚಿಂತಾಕು ಪದಕ, ಜೊತೆಗೆ ಕಾಸಿನಸರ, ಮುತ್ತಿನ ಮೂಗುತಿ, ತೋಳಬಂಧಿ, ಕಿವಿಯಲ್ಲಿ ಹೊಳೆವ ಮತ್ಸ್ಯದೋಲೆ, ಸೊಂಟದಲಿ ಬಂಗಾರದ ಡಾಬು, ಕಾಲಿನಲಿ ಬೆಳ್ಳಿ ಚೈನು, ಹಸಿರು ರೇಷಿಮೆಸೀರೆ - ರವಿಕೆ, ಹಗಲು ಇರುಳಾಯಿತೆ ಅನಿಸುವ ಕಣ್ಣ ಕಾಡಿಗೆ.
ಗಗನದಲ್ಲಿ ಹಕ್ಕಿಯಾಗುವ ನೆಲ್ಲದ ಹುಲ್ಲು ಕಾಣುವ ಚಂದದ ಅನುಭವಕ್ಕೆ...
ಅಮ್ಮ ಕೆನ್ನೀರಿನಾರತಿ ಎತ್ತಿ ದಾಸವಾಳದ ಗಿಡಕೆರಚಿ ಬಂದಳು ದೃಷ್ಟಿ ನಿವಾರಣೆಗೆ. ನೀನು ಒಳಬಂದಾಗ ಮನೆಯಲ್ಲಿ ಎಂಥದೋ ಕಾಂತಿ. ನೀನಾಗ ಪ್ರಭಾದೇವಿ ಅನಿಸಿತು. ಕೋಳಿ ಕೂಗಿಗೆ ಕನಸು ಕರಗಿ ಎಚ್ಚರಗೊಂಡೆ ಶಕುಂತಲೆ.
ಅಂದು ಗದ್ದೆಯ ಕೆಲಸ. ನಾಟಿ ಮಾಡಿದ ನೆಲ್ಲುಪೈರು ಹೊಸಬೇರು ಬಿಟ್ಟು ನೆಟ್ಟಗೆ ನಿಂತು ಹೊಸ ಹಸಿರುಗರಿಯಿಟ್ಟಿತ್ತು. ಕನಸಿನಲಿ ನೀನುಟ್ಟ ಹಸಿರು ಸೀರೆಯಂತೆ. ಕಳೆ ತೆಗೆಯುವ ಕೆಲಸ ಕೆಸರುಗದ್ದೆಯಲ್ಲಿ. ಹೆಣ್ಣಾಳುಗಳು ಬಾಗಿ ತೆಗೆಯುತ್ತಿದ್ದರು ಕಳೆ. ಬಾಗಿದ ಅವರು ಕಾಣುತ್ತಿದ್ದರು ರಂಗುರಂಗಿನ ಬೆಳ್ಳಕ್ಕಿಯಮ್ಮರಂತೆ.
ಅವರಲ್ಲಿ ಒಬ್ಬಾಕೆ, ನಿನ್ನೆ ತವರಿಂದ ಬಂದವಳು ಉಟ್ಟಿದ್ದಳು ತವರಿನವರು ಕೊಟ್ಟಿದ್ದ ಗಿಳಿಯಂಚು ಹಸಿರುಸೀರೆ. ಅವಳ ಹೆಸರು ಗನ್ನೇರಿ. ಅವಳ ಪಕ್ಕದಲೆ ಇದ್ದಳು ಹುಲಿಬಣ್ಣದ ಸೀರೆ-ರವಿಕೆ ತೊಟ್ಟ. ನಿನ್ನೆಯಷ್ಟೇ ನಿಶ್ಚಿತಾರ್ಥ ಮುಗಿದಿದ್ದ ಜವ್ವನಿ. ಅವಳ ಹೆಸರು ಜವರಾಲು.
ಭೂ ತಾಯಿ ಒಡಲಿಗೆ ವಿಷ ತುಂಬಲ್ಲ ಎಂದು ಆಣೆ ಮಾಡಿದಂತೆ ಬದುಕುತ್ತಿರುವ ಯುವಕರಿವರು
ಕೆಂಪು ಸೀರೆಯುಟ್ಟವಳು ವರದಮ್ಮ. ಅವಳದು ಚಲುವು ಮಾಸದ ನಡುವಯಸು. ಕಷ್ಟದ ಜೀವ, ಇಪ್ಪತ್ತೈದಕ್ಕೇ ನಾಲ್ಕು ಮಕ್ಕಳ ತಾಯಿ. ಚೌಡಿ ಉಟ್ಟಿದ್ದಳು ಅಮ್ಮ ಕೊಟ್ಟ ನೀಲಿ ರಂಗಿನ ಸೀರೆ. ನಮ್ಮ ಗದ್ದೆಯಲ್ಲಿ ಮೂಡಿತ್ತು ಶಕುಂತಲೆ ಕಾಮನಬಿಲ್ಲು. ಅಲ್ಲಿ ಕಂಡಿತು ಹಳದಿ ಬಣ್ಣದ ಕೊರತೆ. ಅದನು ತುಂಬಲು ಅಲ್ಲಿ ನಾ ನಿನ್ನ ಕಲ್ಪಿಸಿಕೊಂಡೆ.
ನಾನು ಕೊನೆಯಲ್ಲಿ ಆಳುಗಳ ಜೊತೆ ಸೊಂಟ ಬಗ್ಗಿಸಿದ್ದೆ. ಬದುವಿನ ಮೇಲೆ ಕುಳಿತಿದ್ದ ಅಪ್ಪ ಮಾಡುತ್ತ ಕೆಲಸದ ಅಜಮಾಯಿಷಿ. ಆಗ ಬೆಳಗಿನ ಒಂಬತ್ತು ಗಂಟೆ. ಕಾಯುತಿದ್ದೆವು ಅಮ್ಮನಿಗೆ ಅವಳು ಹೊತ್ತು ತರುವ ತಂಗಳು ಮಕ್ಕರಿಗೆ. ಅಮ್ಮ ಬರುತಲಿದ್ದಳು ಅನ್ನಪೂರ್ಣೆಯಂತೆ. ತಂಗಳುಂಡು ಆಳುಗಳು ಗದ್ದೆಗಿಳಿದರು. ಅವವರೊಡನೆ ಅಮ್ಮ ಕೈ ಹಾಕಿದಳು. ನಾನು ಎತ್ತುಗಳ ಮೇಸಲು ಕೆರೆಕಟ್ಟೆಗೆ ಹೋದೆ.
ಸರಕಾರಿ ಯೋಜನೆಯನ್ನೇ ಬಂಡವಾಳ ಮಾಡಿಕೊಂಡ ಈತ ಈಗ 'ಲಕ್ಷಾಧಿಪತಿ'
ಕೆರೆಯ ಕೋಡಿ ಅಂಚಿನಲ್ಲಿದ್ದ ಎಲೆಯಿರದ ಕಕ್ಕೆಮರದ ತುಂಬ ನೆಲದತ್ತ ಜೋಲುತ್ತಿದ್ದವು ಉದ್ದ ಮುಗ್ಗು-ಹೂ ಮುಡಿದ ಗೊಂಚಲುಗಳು. ಆ ಗೊಂಚಲುಗಳ ಹಿಡಿದು ಯಾರೋ ಇಳಿದು ಮರದಡಿಗೆ ಬಂದಂತೆ. ತಲೆದೂಗುತಿದ್ದವು ತಂಗಡಿ ಹೂಗಳು ಸ್ವಾಗತಿಸುವಂತೆ. ತಿತ್ತಿರಿ ಹಕ್ಕಿ ಬಾನಲ್ಲಿ ಸುತ್ತಿ ಹಾಡುತ್ತಿತ್ತು ಸ್ವಾಗತದ ಶುಭಗೀತೆ.
ಆಕಾಶದ ನಕ್ಷತ್ರಗಳನ್ನೆಲ್ಲಾ ಬಾಚಿ ಸೆರಗಿನಲ್ಲಿ ಕಟ್ಟಿಕೊಂಡಂತೆ!
ಬಾರೆಂದು ಕರೆಯುತ್ತಿರುವ ಆ ಯಾರು? ನೋಡಿದೆ. ನೋಡುತ್ತ ನೋಡುತ್ತ ಕಾಣಿಸಿತು ಸ್ಪಷ್ಟ. ಅದು ನೀನೇ. ಕನಸಿನಲಿ ಕಂಡ ಒಡವೆ ವಸ್ತ್ರಗಳಲ್ಲಿ ನನ್ನ ಶಕುಂತಲೆ. ಹಗಲಿನಲಿ ಮರುಕಳಿಸಿದ ಇರುಳು ಕಂಡ ಕನಸು. ಗದ್ದೆ ಕಡೆಯಿಂದ ಹಾಡು:
ಅರಮನೆ ಬಾಕುಲಕ ಮಾಸಿಗುರು ತ್ವಾರಣ ಕಟಿಸಿ
ದ್ವಾರಕ ಬಾಡದ ದಾಳಿಂಬ್ರಿ ಹೂ ಮಾಲೆ ಹಾಕಿಸಿ
ಅರಮನೆ ಒಳಿಗೆ ಅತ್ತರು ಮಲಿಗೂವ್ವ ಗಮಲು
ಅರಸ ಕಾತವನೆ ಮನುಮತನಂತ ರೂಪು
ಮನದೊಳಗಿನ ಕನಸಿನ ಗುಂಗಿಗೆ ಹಾಡಿನಿಂಪು. ಆ ಇಂಪಿನಲಿ ನಿನ್ನ ಕಾಡಿಗೆ ಕಣ್ಣೋಟದ ಪ್ರೀತಿಯ ಬೆಳಕು.