ಓ ಮಂಚವೇ ಮೊದಲ ರಾತ್ರಿ ಕಳೆದವರ ಅದೆಷ್ಟು ಮಂದಿಯ ಕಂಡಿರುವೆ, ಹೇಳು
ಮಕರಂದವ ಜೇನು ಮಾಡಿದವನೇ,
ಒಲುಮೆಯ ವಸಂತನೇ
ಕುಶಲವೆ?
ನಿನ್ನ ಹೃದಯವ ಪರಿಮಳಿಸುವಂತೆ ಮಾಡಿದ ದವನ ಮರುಗಕ್ಕೆ ನನ್ನ ಕೃಜ್ಞತೆ. ನಿನ್ನೋಲೆಯಲ್ಲಿ ನೀನೇ ಪರಿಮಳವಾದಂತೆ ಅನ್ನಿಸಿದ್ದು ನಿಜ. ಪ್ರೀತಿಯೇ ಇಲ್ಲಿ ಪರಿಮಳದ ರಾಗದಲಿ ಹಾಡಿದೆ. ಇದು ಹೊಸ ರಾಗನುಭವದಿ ಅನುರಾಗದ ಸುಖೋಷ್ಣತೆ.
ನಿನ್ನ ಸೆರಗು ಹಾರಾಡುವ ಲಯವನ್ನು ಮನಸಿಗೆ ಕೇಳಿಸಿದ ಗಾಳಿ
ನೀ ಬರೆದೋಲೆ ಓದುವಾಗ ಸಂಜೆ. ಆಕಾಶ ನೋಡಿದೆ. 'ಮುಗಿಲ ಮಾರಿಗೆ ರಾಗರತಿಯ ನಂಜು ಏರಿತ್ತ' ಎಂಬ ಬೇಂದ್ರೆಯವರ ಕವಿತೆ ನೆನಪಿಸಿತು ಬಾನು ಮತ್ತು ಆ ಸಂಜೆ.
ಮನೆಯ ಕೈತೋಟದ ಮಲ್ಲಿಗೆ ಗಿಡ ಹೂತುಂಬಿ, ಏನೇ ಶಕೂ, ನಿನ್ನ ವಸಂತನ ನೆನಪಿನಲ್ಲಿ ನನ್ನೊಡನೆ ಠೂ ಬಿಟ್ಟಂತಿದೆ. ಬೆಳಗಾಗುತ್ತಲೇ ಬಂದು ನೀರೆರೆಯುತ್ತಿದ್ದೆ. ಹೊತ್ತು ಇಳಿಯುವಾಗ ಮೊಗ್ಗು ಬಿಡಿಸಿ ಜಗುಲಿಯಲಿ ಕುಳಿತು ನನ್ನೆದುರೇ ದಂಡೆ ಕಟ್ಟಿ ಮುಡಿದು ನನ್ನತ್ತ ಮುಗುಳು ನಗೆ ಬೀರುತ್ತಿದ್ದೆ. ಈಗ ನಿನ್ನ ವಸಂತನೇ ನನ್ನ ಜಾಗವನ್ನು ಆಕ್ರಮಿಸಿಬಿಟ್ಟಿರುವ. ಇದಕ್ಕಾಗಿ ಇದೋ ನನ್ನ ಶಾಪ ನಿನಗೆ, ಆ ನಿನ್ನ ವಸಂತನು ನಿಮ್ಮ ಮೊದಲ ರಾತ್ರಿಯಲ್ಲಿ ನನ್ನನ್ನು ಬೊಗಸೆಯಲಿ ತುಂಬಿ ನಿನ್ನ ಮೇಲೆರಚಲಿ. ಅವನಿಗೆ ನನ್ನ ಕಂಪಿನ ಅಮಲೇರಿ ಇಡೀ ರಾತ್ರಿ ನಿನ್ನ ನಿದ್ದೆ ಕೆಡಿಸಲಿ ಎಂದು ಶಪಿಸಿ, ಅರಿಯದ ಆ ರಾತ್ರಿಯ ಕುರಿತು ಕುತೂಹಲ ಕೆರಳಿಸಿತು.
ಇನಿದನಿಯ ಇನಿಯ ಸುಂದರ ವಸಂತಾ, ರಾತ್ರಿ ಮಂಚದ ಮೇಲೆ ಕುಳಿತು 'ಓ ಮಂಚವೇ, ಮೊದಲ ರಾತ್ರಿ ಕಳೆದವರ ನೀನು ಕಂಡಿರುವೆ. ಅದನ್ನು ವಿವರಿಸುವೆಯ' ಎಂದು ಕೇಳಿದೆ. ಅದು ಹೇಗೆ ಹೇಳುವುದೆಂದು ಯೋಚಿಸುತ್ತಿತ್ತೇನೊ? ಆಗ ಕೋಣೆ ತುಂಬ ಸುಗಂಧ ತುಂಬಿತು. ನೋಡಿದೆ. ಸುಗಂಧಗಳ ಕುದುರೆ!
ದಂಪತಿಗಳ ಪ್ರಣಯ ಸೀಮೆಯಲಿ ರತಿ, ಮದನ ವಿಹಾರ ಗಾನ
ಬೆನ್ನನೇರು ಎಂಬಂತೆ ಕೆನೆಯಿತು. ಏರಿ ಕುಳಿತೆ. ಕ್ಷಣದಲ್ಲೇ ಅದು ನೀನು ಹೇಳಿದ ದವನದ ತೋಟದ ಮಧ್ಯೆ ಇಳಿಸಿತು. ಓಹೋ, ನೀನೆಯೋ ಶಕುಂತಲೆ ಎಂದು, ನೀನು ಓದಿದ್ದ ನನ್ನ ಪತ್ರದ ಪದಗಳನ್ನು ಪಟಪಟ ನುಡಿದು ನಾಚುವಂತೆ ಮಾಡಿತು. ನಾವು ನಿನ್ನ ಮದುವೆ ಮಂಟಪದ ಬಾಗಿಲಲ್ಲಿದ್ದು ನಿಮ್ಮವರ ಸ್ವಾಗತಿಸುವೆವೆಂದು ಹೇಳಿ ಬೀಳ್ಕೊಟ್ಟವು. ಅಲ್ಲಿಂದ ಆ ಕುದುರೆ ನಿನ್ನ ಮನೆಯಂಗಳಕೇ ಕರೆತಂದು ಇಳಿಸಿತು. ಮರುಗ ನಕ್ಕು ನಿನ್ನ ಕೋಣೆಯ ತೆರೆದ ಕಿಟಕಿಯತ್ತ ತನ್ನ ಸುಗಂಧದ ತೋರುಬೆರಳು ತೋರಿತು.
ವಸಂತಾ, ಏನೆಂದು ವರ್ಣಿಸಲಿ ಆ ದೃಶ್ಯ? ನಿನ್ನ ಕೋಣೆಯ ಕಿಟಕಿಗೆ ಸರಿಯಾಗಿ ಚಂದ್ರ ನಿಂತುಬಿಟ್ಟಿದ್ದ. ಬೆಳದಿಂಗಳ ಬೆಳಕು ನೀನಾಗಿ ಮಲಗಿದ್ದೆ. ನನಗೆ ಮದನಮೋಹನರಾಜನಾಗಿ ಕಂಡೆ. ಈ ದೂರ ಸಹಿಸಲಾಗದಾದೆ. ಬಳಿಗೋಡಿ ಬಂದೆ. ನಿನ್ನ ಅಪ್ಪಿ .......
ಏನು ಕಂಡಿತೋ ನಮ್ಮ ಸಾಕುನಾಯಿ? ಬೊಗಳುತ್ತಿತ್ತು. ಜೇನಿನಂಥ ಕನಸನ್ನು ಅದರ ಬೊಗಳು ನೆಕ್ಕಿಬಿಟ್ಟಿತ್ತು. ನಿದ್ದೆ ಹತ್ತದೆ ಎದ್ದು ಕುಳಿತೆ. ಆಗ ಮನಸು ನುಡಿದ ಪದ್ಯ-
'ಕಾಮನಬಿಲ್ಲಿನೇಳು ಬಣ್ಣಗಳಲ್ಲಿ
ಎದೆಯ ಕನಸುಗಳನು ತುಂಬಿ
ಚೆಲ್ಲಿಬಿಟ್ಟೆ ಗಾಳಿಗೆ
ಬರಲು ನಿನ್ನ ಮನದ ಸೀಮೆಗೆ.'