ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಸಂಜೆ ಸಿಕ್ಕ ಕೊಕ್ಕರೆ, ನಮ್ಮ ಶಾಲೆ ಆವರಣದಲ್ಲಿನ ಮಣ್ಣಿನಡಿ ನೆನಪು

By ಸ ರಘುನಾಥ, ಕೋಲಾರ
|
Google Oneindia Kannada News

ಬೆಳ್ಳಬೆಳ್ಳನೆ ಕೊಕ್ಕರೆ. ಮೂಡಣ ಕೆಂಪೇರುತಿರುವಾಗ ಕಣ್ಣು ತೆರೆದ ಅದು ಅಂದು ಯಾರ ಮುಖ ದರ್ಶನ ಮಾಡಿತ್ತೊ! ಸಂಜೆ ಗೂಡಿಗೆ ಮರಳುತ್ತ ವೇಗವಾಗಿ ಬರುತ್ತಿದ್ದ ಬಸ್ಸಿನ ಮುಂಭಾಗದ ಗಾಜಿಗೆ ಬಡಿದು ಗಾಯಗೊಂಡಿತ್ತು. ಘಟನೆ ಅಚಾನಕದ್ದು. ಡ್ರೈವರನು ಅದನ್ನು ಅಲ್ಲಿಯೇ ಬಿಟ್ಟು ಬರದೆ ಶಾಲೆಗೆ ತಂದು ಒಪ್ಪಿಸಿದ. ಎತ್ತಿಕೊಂಡೆ. ಮಕ್ಕಳ ಗುಂಪು ನೆರೆಯಿತು. ಎಲ್ಲ ಕೂಡಿ ಪರೀಕ್ಷಿಸಿದೆವು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೆಕ್ಕೆಯ ಬಳಿ ಗಾಯವಾಗಿ ರಕ್ತ ಒಸರುತ್ತಿತ್ತು. ಕಾಲಿಗೂ ಕೊಂಚ ಪೆಟ್ಟಾಗಿತ್ತು. ಅಂಥ ಪುಟ್ಟ ಜೀವಿಯ ಗಾಯಕ್ಕೆ ಸ್ಪಿರಿಟ್ ಹಚ್ಚಿ ತೊಳೆಯಬಾರದು, ಟಿಂಚರ್ ನಂಥ ಕ್ಷಾರದ ಮದ್ದು ಹಾಕಬಾರದು ಎಂದು ಹಿಂದಿನ ಅನುಭವದಿಂದ ತಿಳಿದಿತ್ತು. ಇದನ್ನು ಮಕ್ಕಳಿಗೂ ಮನವರಿಕೆ ಮಾಡಿಕೊಟ್ಟಿದ್ದೆ. ಇಂಥ ಕೆಲಸಕ್ಕೆಂದೆ ತರಬೇತುಗೊಳಿಸಿದ್ದ ನಾಗರಾಜ ಓಡಿ ಹೋಗಿ ಹೈಡ್ರೋಜನ್ ಪರಾಕ್ಸೈಡ್ ಬಾಟಲಿಯನ್ನು ತಂದ.

ಅದರಿಂದ ಗಾಯವನ್ನು ತೊಳೆದು ಮುಲಾಮು ಹಚ್ಚಿದೆವು. ಈ ಎಲ್ಲ ಕ್ರಿಯೆಗಳಿಂದ ಅದು ಷಾಕಿನಲ್ಲಿತ್ತು. ನೀರು ಕುಡಿಸಿದೆವು. ಕೊಂಚ ಹೊತ್ತಿಗೆ ಅದು ತಾನಿದ್ದ ಪರಿಸರವನ್ನು ಗುರುತಿಸುವಂತಾಯಿತು. ಇದು ಆದಾಗ ಸಂಜೆಯಾಗಿತ್ತು. ಆಗ ಅದರ ಅನ್ನದ ಚಿಂತೆ ಇರಲಿಲ್ಲ. ಈ ಚಿಂತೆ ಹುಟ್ಟಿದ್ದು ಮಾರನೇ ದಿನವೆ. ಇದು ಚಿಂತೆಯಷ್ಟೆ ಆಗಿರಲಿಲ್ಲ. ಸಮಸ್ಯೆಯೂ ಆಗಿತ್ತು.

ಕೊಕ್ಕರೆ ರೆಕ್ಕೆಯೇ ಮುರಿದಿತ್ತು

ಕೊಕ್ಕರೆ ರೆಕ್ಕೆಯೇ ಮುರಿದಿತ್ತು

ಇದಕ್ಕೆ ಪರಿಹಾರ ಸಿಕ್ಕೀತು, ಚಿಕಿತ್ಸೆಯೂ ಆದೀತೆಂದು ಗೆಳೆಯರು, ಪಶುವೈದ್ಯರು ಆಗಿದ್ದ ಡಾಕ್ಟರ್ ಶಂಕರರಾಯರಲ್ಲಿಗೆ ಒಯ್ದೆವು. ಅವರು ಪರೀಕ್ಷಿಸಿ, ನೀವು ತಿಳಿದಂತೆ ರೆಕ್ಕೆಗೆ ಗಾಯ ಮಾತ್ರವಾಗಿಲ್ಲ. ಮುರಿದಿದೆ ಎಂದರು. ಈ ಮಾತು ಗಾಬರಿ ಹುಟ್ಟಿಸಿತು. ಇದನ್ನು ಉಳಿಸುವುದು ಹೇಗೆಂದು ಕೇಳಿದೆ. ಕಷ್ಟ. ಬಹಶಃ ಸಾಧ್ಯವಿಲ್ಲ ಎಂದರು.

ಹೋಗಲಿ ಇದ್ದಷ್ಟು ದಿನ ಇರಲಿ. ಆಹಾರ ಕೊಡುವುದು ಹೇಗೆಂದು ಕೇಳಿದೆ. ಆ ಅನುಭವ ನನಗಿಲ್ಲ. ಇರುವಷ್ಟು ದಿನ ಚಿಕಿತ್ಸೆ ಕೊಡೋಣ ಎಂದರು. ನೋಡೋಣ ಎಂದುಕೊಂಡು ಶಾಲೆಗೆ ತಂದೆವು.

ಮೀನಿನ ಮರಿ ತಿನ್ನಿಸಿದರೆ ಹೇಗೆ?

ಮೀನಿನ ಮರಿ ತಿನ್ನಿಸಿದರೆ ಹೇಗೆ?

ದಾರಿಯಲ್ಲಿ ಹುಡುಗನೊಬ್ಬ, 'ಸಾ, ಮೀನಿನ ಸಣ್ಣ ಮರಿಗಳನ್ನು ತಂದು ತಿನ್ನಿಸಿದರೆ ಹೇಗೆ?' ಅಂದ. ಸಾಧ್ಯಾನ ಅಂದೆ. ಟ್ರೈ ಮಾಡಾಣ ಸಾ ಅಂದ. ಸರಿ ಎಂದು ಮಕ್ಕರಿಯಲ್ಲಿ ಹಿಡಿಯನ್ನು ಹಾಕಿಸಿ ತೆಗೆದುಕೊಂಡು ಹುಡಗರೊಂದಿಗೆ ಕೋನಪ್ಪಸ್ವಾಮಿ ಬಾವಿಗೆ ಹೋದೆ. ಒಂದು ಗಂಟೆಯ ಪ್ರಯತ್ನದಲ್ಲಿ ನಾಕಾರು ಸಣ್ಣ ಮೀನುಮರಿಗಳು ಸಿಕ್ಕಿದವು.

ತಂದು, ಒಂದು ಬಟ್ಟಲಿಗೆ ನೀರು ಹಾಕಿ ಕೊಕ್ಕರೆಯ ಮುಂದೆ ಇರಿಸಿದೆವು. ಸುಮಾರು ಹೊತ್ತು ಕಾದರೂ ಅದು ಮೀನಿನ ಮರಿಗಳಲ್ಲಿ ಒಂದನ್ನೂ ಎತ್ತಿ ನುಂಗಲಿಲ್ಲ. ನಾವೆಲ್ಲ ಇರುವುದರಿಂದ ಭಯಬಿದ್ದು ಅದು ತಿನ್ನುತ್ತಿಲ್ಲ. ಬನ್ನಿ ಎಂದು ಮಕ್ಕಳನ್ನು ಕರೆದುಕೊಂಡು ತರಗತಿಗೆ ಹೋದೆ. ಎರಡನೇ ಪೀರಿಯಡ್ ಮುಗಿಸಿ ಹೋಗಿ ನೋಡಿದಾಗ ಮರಿಗಳು ಬಟ್ಟಲ ನೀರಿನಲ್ಲಿ ಆಡಿಕೊಂಡಿದ್ದವು.

ಬಾಯಿ ತೆರೆದು ಮೀನು ತಿನ್ನಿಸೋಣ ಎಂಬ ಸಲಹೆ

ಬಾಯಿ ತೆರೆದು ಮೀನು ತಿನ್ನಿಸೋಣ ಎಂಬ ಸಲಹೆ

ಅದೇ ನಾಗರಾಜ, 'ಸಾ ಅದರ ಬಾಯಿ ತೆರೆದು ಮೀನ ಮರಿಯನ್ನು ಹಾಕಿ ನೀರು ಕುಡಿಸಿದರೆ ಹೇಗೆ' ಅಂದ. ನೋಡೋಣ. ಹಾಗೇ ಮಾಡು ಎಂದೆ. ಈ ಪ್ರಯತ್ನದಲ್ಲಿ ಎರಡು ಮರಿಗಳು ಕೊಕ್ಕರೆಯ ಹೊಟ್ಟೆ ಸೇರಿದವು. ಇನ್ನೊಂದು ಮರಿಗೆ ಕೈ ಹಾಕಿದಾಗ, ಸಾಕು. ಇದನ್ನು ಜೀರ್ಣ ಮಾಡಿಕೊಂಡರೆ ಮುಂದುವರೆಸೋಣ ಎಂದು ಹೇಳಿ ತಡೆದೆ.

ಶಾಲೆ ಮುಗಿಯಿತು. ವೈದರು ವಾರ್ಡ್ ರೌಂಡು ಹಾಕುವಂತೆ ಗಿಳಿಗಳ ಪಂಜರ, ಮೊಲಗಳ ಗೂಡು, ಕಾಡುಪಾಪದ ಬೋನು ನೋಡಿಕೊಂಡು ಕೊಕ್ಕರೆ ಇದ್ದಲ್ಲಿಗೆ ಬಂದೆ. ನನ್ನ ಹಿಂದೆ ಮರಿ ಡಾಕ್ಟರುಗಳಂತೆ ಮಕ್ಕಳು. ಕೊಕ್ಕರೆ ವಿಶ್ರಮಿಸುವಂತೆ ಮಲಗಿತ್ತು. ಮಕ್ಕಳು ನಿದ್ದೆ ಮಾಡ್ತಿದೆ ಅಂದರು. ಅದು ನಿದ್ದೆ ಮಾಡಿಬಿಟ್ಟಿತ್ತು. ನಾವು ನುಂಗಿಸಿದ್ದ ಮೀನು ಮರಿಗಳು ಹೊರಬಂದಿದ್ದವು. ಅವುಗಳಿಗೆ ಇರುವೆಗಳು ಮುತ್ತಿಕೊಂಡಿದ್ದವು.

ಶಾಲೆ ಆವರಣದಲ್ಲೇ ಮಣ್ಣಾದ ಕೊಕ್ಕರೆ

ಶಾಲೆ ಆವರಣದಲ್ಲೇ ಮಣ್ಣಾದ ಕೊಕ್ಕರೆ

'ನನ್ನ ಮನಕೊಂದು ಮಾತು ಹೇಳದೆ ಹೋದೆ ಹಂಸಾ' ಎಂಬ ತತ್ವಪದ ನೆನಪಾಯಿತು. ಕೊಕ್ಕರೆಯ ಶವವನ್ನು ದುಃಖದೊಂದಿಗೆ ಒಯ್ದು ಶಾಲೆಯ ಆವರಣದಲ್ಲಿದ್ದ ನುಗ್ಗೆ ಮರದ ಬುಡದಲ್ಲಿ ಮಣ್ಣು ಮಾಡಿದೆವು. ಬಟ್ಟಲಲ್ಲಿ ಉಳಿದಿದ್ದ ಮೀನುಮರಿಗಳು ಸಾಯುವುದು ಬೇಡವೆಂದು ಹಿಡಿದು ತಂದ ಬಾವಿಗೆ ಬಿಡಿಸಿದೆ.

English summary
Last day of stork which met with an accident in Srinivasapura. Here is the heart melting story of a bird by Oneindia Kannada columnist Sa Raghunatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X