ಸ.ರಘುನಾಥ್ ಅಂಕಣ: ಮನದ ಗುಟ್ಟು ರಟ್ಟು ಮಾಡಿದ ನರಸಿಂಗರಾಯ
ತಮ್ಮೊಂದಿಗೆ ಬರಲಿದ್ದ ಕುಳ್ಳಪ್ಪ, ಕೆಂಪರಾಜನಿಗೆ ನಾವು ಕರೆದಾಗ ಬಾರೆಂದು ಹೇಳಿ, ನರಸಿಂಗರಾಯ ಉಳಿದ ನಾಲ್ಕು ಜನ ಗೆಳೆಯರೊಂದಿಗೆ ಹುಣಿಸತೋಪಿನಲ್ಲಿ ಕುಳಿತ. ಕುಳ್ಳಪ್ಪ, ಕೆಂಪರಾಜರನ್ನು ತಡೆದುದರ ಗುಟ್ಟು ತಿಳಿಯದೆ ಅಯೋಮಯದಲ್ಲಿದ್ದವರಿಗೆ ಸಿಗರೇಟು ಕೊಟ್ಟು ತಾನೊಂದು ಹಚ್ಚಿ ಹೊಗೆಯನ್ನು ಹುಣಿಸೆ ಮರದ ಕೊಂಬೆಯತ್ತ ಊದಿ ಹೊಗೆಯ ಲಾಸ್ಯವನ್ನು ನೋಡುತ್ತ ಕುಳಿತ. ಏನೋ ದೊಡ್ಡ ಸಂಗತಿಯನ್ನು ಹೊರಹಾಕುತ್ತಾನೆ ಎಂದುಕೊಳ್ಳುತ್ತ ಅವರೂ ಹೊಗೆಯಾಟ ನೋಡುತ್ತ ಅದರಷ್ಟೇ ಮೌನವಾಗಿ ಕುಳಿದ್ದರು.
ಪಂಚಾಯ್ತಿ ಎಲೆಕ್ಷನ್ಗೆ ಕುಳ್ಳಪ್ಪ ಹಾಗೂ ಕೆಂಪರಾಜನನ್ನು ನಿಲ್ಲಿಸಿದರೆ ಹೇಗೆ? ನಮ್ಮೂರಿನದು ಎರಡು ಸೀಟು ಅಲ್ಲವ? ಎಂದು ಸಿಗರೇಟಿನ ಕೊನೆಯ ದಂ ಎಳೆದ. ಇದರ ಕಲ್ಪನೆಯೂ ಇರದ ಅವರು ಗೊಂಬೆಗಳಾದರು. ಪಿಲ್ಲಣ್ಣನ ತುಟಿಗಳ ನಡುವೆಯಿದ್ದ ಸಿಗರೇಟು ಬಿಗಿ ತಪ್ಪಿ ಕೆಳಗೆ ಬಿದ್ದಿತು. ನಿನಗೆ ಚುನಾವಣೆ ದೆವ್ವ ಮೆಟ್ಟಿದ್ದು ಯಾವಾಗ ಎಂದು ಬೋಡೆಪ್ಪ ಕೇಳಿದ. ಎರಡನೆಯ ಸಲ ಎಮ್ಮೆಲ್ಯೆ ಹತ್ತಿರ ಹೋಗಿ ಬಂದಾಗ. ದೊಡ್ಡಗೋವಿಂದಪ್ಪ ಎರಡು ಟರ್ಮಿನಿಂದ ಮೆಂಬರ್.
ಹೊರಟಾನೊ ನರಸಿಂಗರಾಯ ಶಕುಂತಲೆಯ ಅನ್ವೇಷಣೆಗೆ
ಊರಿಗಾಗಿ ಕಿಸಿದಿದ್ದು ಏನಿದೆ? ಎಮ್ಮೆಲ್ಯೆಯ ಬಾಲವಾಗಿ ಒಂದಿಷ್ಟು ಕಾಸು ಮಾಡಿಕೊಂಡ ಅಷ್ಟೆ. ಎಷ್ಟು ಅಂತ ಯಾರಿಗೆ ಗೊತ್ತು ಅಂದ. ಗೊತ್ತಿದ್ದು ಏನು ಮಾಡುವುದು? ಮಾಡಿಕೊಂಡಿದ್ದರಲ್ಲಿ ಮುಕ್ಕಾಲು ಪಾಲು ಮದನಪಲ್ಲಿ ಲಾಡ್ಜುಗಳಲ್ಲಿ ಕಳೆದಿದ್ದಾನಂತ ಮಾತು. ಪಾಪಿ ಹೆಣ್ಣು ಅವನ ಹೆಂಡಿರು ಕೂಲಿಗೆ ಹೋಗೋದು ತಪ್ಪಿಲ್ಲ ಅಂದ ರಂಗ. ಅವನ ಮಾತಿರಲಿ, ನನ್ನ ಮಾತಿಗೆ ಏನಂತೀರಿ ಅಂದ ನರಸಿಂಗರಾಯ.
ಇಲ್ಲಿಯವರೆಗೆ ನಾವು ಅಂದುಕೊಂಡಂತೆಯೆ ಆಯಿತು ಅಂತ ಇದೂ ಆಗುತ್ತೆ ಅಂದುಕೊಂಡಿದ್ದೀಯ? ಇದು ಚುನಾವಣೆ ನರಸಿಂಗ, ನಾಟಕ ಅಲ್ಲ, ಭಜನೆ ಅಲ್ಲ, ಸ್ಕೂಲು, ಗರಡಿಮನೆ ಅಲ್ಲ. ರಾಜಕೀಯದ ಗರಡಿ. ಅಲ್ಲಿನ ಪಟ್ಟುಗಳೇ ಬೇರೆ ಅಂದ ಬೋಡಪ್ಪ. ನಿಂದೇನು ಅಂದಾಗ, ಗೆಲ್ಲಿಸ್ತೀವ? ಹೇಗೆ ಅಂತ ಯೋಚಿಸಬೇಕು. ಸೋತರೆ ಅವಮಾನ. ಕುಳ್ಳಪ್ಪನ ಜಾತಿಯವರು ಹೆಚ್ಚು ಜನರಿಲ್ಲ ಅಂದ ಪಿಲ್ಲಣ್ಣ. ಜಾತಿ ಲೆಕ್ಕಾಚಾರ ನಮಗೆ ಬೇಡ. ಊರಿನ ಜನ ಅಷ್ಟೆ. ಅವರಿಬ್ಬರನ್ನು ಒಪ್ಪಿಸಿ, ಮನೆಮನೆಗೆ ಹೋಗಿ ಹೀಗೀಗೆ ಎಂದು ಹೇಳಿ, ನೀವೆಲ್ಲ ಆಯ್ತು ಅಂದರೆ ಅವರು ನಿಲ್ಲುತ್ತಾರೆ. ಇಲ್ಲದಿದ್ದರೆ ಇಲ್ಲ ಎಂದು ಹೇಳೋಣ. ಅವರು ಮಾತುಕೊಟ್ಟರೆ ಆಯಿತು. ಇಲ್ಲವೆಂದರೆ ನಮ್ಮ ಕೆಲಸಗಳು ನಮಗಿರುತ್ತವೆ ಎಂದ ನರಸಿಂಗರಾಯ.
ಕರೆಗಾಗಿ ಕಾಯುತ್ತ ಚಡಪಡಿಸುತ್ತಿದ್ದವರು, ರಂಗನು ಹೋಗಿ ಕರೆದ ಕೂಡಲೇ ಬಂದರು. ಬೋಡೆಪ್ಪ ಆವರೆಗಿನ ಮಾತುಗಳನ್ನು ಹೇಳಿದ. ನಮ್ಮವರು ಅನ್ನೋರು ಅಂಥ ಸ್ಥಾನನದಲ್ಲಿರಬೇಕು. ಆಗ ಊರಿಗೆ ಬಹಳ ಮಾಡಬಹುದು ಅಂದ ನರಸಿಂಗರಾಯ. ಗೆಲ್ತೀವ ಎಂದು ರಾಗವೆಳೆದ ಕುಳ್ಳಪ್ಪ. ನಂ ಮುನೆಂಕಟೇಗೌಡ ಮಾಮ ಒಪ್ತಾನ ಅಂದ ಕೆಂಪರಾಜ. ಅದನ್ನ ನಮಗೆ ಬಿಡು ಅಂದ ಪಿಲ್ಲಣ್ಣ. ಸೋಲ್ತೀವಿ ಅಂತಲೇ ನಿಲ್ಲಿ. ನಷ್ಟ ಏನಿಲ್ಲ ಅಂದ ನರಸಿಂಗರಾಯ. ದುಡ್ಡು ಬೇಕಲ್ಲ ಅಂದರು ಇಬ್ಬರೂ ಒಟ್ಟಿಗೆ.
ನೀನು ಅವತ್ತು ದುಡ್ಡು ಕೊಡಲು ಬಂದಾಗ ಬೇಡ ಅಂದಿದ್ದು ಇದಕ್ಕೇ. ನಿನಗೆ ಕಿಂದರಿಜೋಗಿ ಪಾರ್ಟು ಕೊಟ್ಟಿದ್ದು ಒಳ್ಳೆಯ ಕೆಲಸ ಮಾಡುವುದು ಹೇಗೆಂದು ಅರ್ಥವಾಗಲಿ ಎಂದ ಕೆಂಪರಾಜ. ಈಗ ಕುಳ್ಳಪ್ಪನಿಗೆ ಊರಿನಲ್ಲಿ ಒಳ್ಳೆಯ ಹೆಸರಿದೆ. ಅದನ್ನು ಉಳಿಸಿಲಿಕೊಳ್ಳಲು ಎಲೆಕ್ಷನ್ನಿನಲ್ಲಿ ನಿಲ್ಲಲು ಹೇಳುತ್ತಿರುವುದು ಎಂದು ನರಸಿಂಗರಾಯ ಹೇಳಿದಾಗಲೇ ನರಸಿಂಗರಾಯನಲ್ಲಿ ಚಾಣಕ್ಯನೊಬ್ಬನಿದ್ದಾನೆ ಎಂದು ಅವರ ಅರಿವಿಗೆ ಬಂದಿದ್ದು.
ಕುಳ್ಳಪ್ಪ, ಕೆಂಪರಾಜ ಒಪ್ಪಿಗೆ ಸೂಚಿಸಿದಾಗ, ಒಂದು ರಥ, ಇಬ್ಬರು ಅರ್ಜುನರು, ಒಬ್ಬ ಸಾರಥಿ, ಶಂಖವನು ಊದೈ ಪಿಳ್ಳ ಎಂದ ಬೋಡೆಪ್ಪನ ಮಾತಿಗೆ, ಏಮಿ ಡೈಲಾಗು ಕೊಟ್ಟಿತಿವಿರಾ ಬಿಡ್ಡಾ (ಏನು ಡೈಲಾಗು ಹೊಡೆದೆಯೋ ಮಗನೆ) ಎಂದು ರಂಗ ಅವನ ಬೆನ್ನಿಗೆ ಗುದ್ದಿದ.