ಸ ರಘುನಾಥ ಅಂಕಣ; ಸುನಂದಾಳ ಸೊಂಟ ಬಳಸಿ ಕುಣಿವ ಆಸೆಗೆ ಬಿದ್ದು ಬಣ್ಣ ಕಳೆದುಕೊಂಡ ಕೆಂಪರಾಜ
ಪಾತ್ರಗಳ ಹಂಚಿಕೆಗಾಗಿ ಹುಣಿಸೆ ತೋಪಿನಲ್ಲಿ ಸಂಜೆ ಹೊತ್ತಿನಲ್ಲಿ ಸಭೆ ಸೇರಿತು. ಅಪ್ಪಯ್ಯನನ್ನು ಬಿಟ್ಟು ಉಳಿದವರೆಲ್ಲ ಸೇರಿದ್ದರು. ಬರಿಗೈಲಿ ಬಂದಿದ್ದ ಮುನೆಕ್ಕನನ್ನು ನೋಡಿದ ರಂಗ, ಮುನೆಕ್ಕನ ಕೈ ಬೋಂಡ ಇಲ್ಲದೆ ಸಭೆ ನಡೆಯುವುದಾದರು ಹೇಗೆ? ಮುನೆಕ್ಕ ಬೋಂಡ ತಂದ ಮೇಲೆಯೇ ಮುಂದಿನದು ಅಂದ. ನಿಂತ ನಿಲುವಲೇ ಬೋಂಡ ಎಂದರೆ, ಅದೂ ಇಪ್ಪತ್ತು ಜನಕ್ಕೆ ಅಂದಳು ಮುನೆಕ್ಕ.
ಆಗ ದುಗ್ಗಪ್ಪ ತಿಂಡಿಪೋತ ಮುಂಡೇದು ಅದು, ಕಾರವಾದ್ದು ಅಂಗಡಿಯಲ್ಲೇನಿದೆ. ದುಡ್ಡು ನಾನು ಕೊಡುತ್ತೇನೆ, ತಾ ಹೋಗು ಅಂದ. ಕಾರದವಲಕ್ಕಿ ಇದೆ. ದುಡ್ಡೇನು ಬೇಡವೆಂದ ಮುನೆಕ್ಕ, ರಂಗನನ್ನೇ ಹಿಂದಿಟ್ಟುಕೊಂಡು ಮನೆಗೆ ಹೊರಟಾಗ ಈರುಳ್ಳಿ ತರೋದನ್ನ ಮರೀಬೇಡಿ ಎಂದು ಕುಳ್ಳಪ್ಪ ಹಿಂದಿನಿಂದ ಕೂಗಿದ.
ಸ ರಘುನಾಥ ಅಂಕಣ; ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ...
ಸಾರಾಯಿ ಕುಡಿಯುವವರಿಗೆಂದೇ ಮಾಡಿದ್ದರಿಂದ ಕಾರ ಜೋರಾಗಿಯೇ ಇತ್ತು. ರಂಗನ ಹೆಗಲಿಗೆ ಏರಿಸಿ ತಂದಿದ್ದ ಒಂದು ಬಿಂದಿಗೆ ನೀರು ಖಾಲಿಯಾಯಿತು. ಪಾತ್ರಗಳ ಹಂಚಿಕೆ ಪ್ರಾರಂಭವಾಯಿತು.
ಪಿಲ್ಲಣ್ಣ ಕಣ್ವ, ಬೋಡೆಪ್ಪ ಮಾರೀಚಮುನಿ, ರಂಗ ಪ್ರಿಯಂವದೆ, ಯಾಲಗಿರಿ ಅನಸೂಯೆ, ಮುನಿಕೃಷ್ಣಪ್ಪನ ಮೊಮ್ಮಗ, ನಾಲ್ಕನೆಯ ತರಗತಿಯ ಸುನೀಲ ಭರತ, ಮುನಿನಾರಯಣಿ ಸಖಿ, ಹೀಗೆ ಪಟ್ಟಿ ಓದಿದ ನರಸಿಂಗರಾಯ. ಸೂತ್ರಧಾರ ಯಾರು ಎಂದಳು ಮುನೆಕ್ಕ. ನೀನೇ ಎಂದ ಬೀರಣ್ಣ ನಗೆ ಹುಟ್ಟಿಸಿದ. ನಗೆ ನಿಂತ ಮೇಲೆ ನರಸಿಂಗರಾಯ, ಸೂತ್ರಧಾರನ ಪಾತ್ರ ಕೆಂಪರಾಜನಿಗೆ. ಅವನು ನಾಜೂಕಾಗಿ ಮಾತನಾಡುತ್ತಾನೆ ಅಂದ. ಈ ಮಾತಿನಿಂದ ಕೆಂಪರಾಜ ಹಿಗ್ಗಿಬಿಟ್ಟ.
ಸ ರಘುನಾಥ ಅಂಕಣ; ಹಾರುಗುದುರೆ ಬೆನ್ನು ಏರಿದ ನಾಟಕದ ಉತ್ಸಾಹ
ಜಮಾಯಿಂಪು (ತಾಲೀಮು) ನಡೆಸಿ, ಇನ್ನು ನಾಟಕ ಆಡಬಹುದೆಂದು ನರಸಿಂಗರಾಯನ ಬಾಯಿಯಿಂದ ಮಾತು ಹೊರಟ ಮೇಲೆ ನಾಟಕದ ದಿನ ಗೊತ್ತುಮಾಡುವುದೆಂದು ಮೋಟಪ್ಪ ಘೋಷಿಸಿದ.
ಆರು ತಾಲೀಮುಗಳು ನಡೆದು ಏಳನೆಯ ತಾಲೀಮು ಪ್ರಾರಂಭಗೊಂಡಿತು. ಆಗ ಕೆಂಪರಾಜ ತನ್ನ ಮನದಲ್ಲಿ ಕುಣಿಯುತ್ತಿದ್ದ ಆಸೆಯನ್ನು ಹೊರಹಾಕಿದ. ಅದು ಒತ್ತಾಯವೂ ಆಗಿ ಹೊರಬಂದಿತು. ಅಲ್ಲದೆ ನಾಟಕದ ಆರಂಭ ಎಲ್ಲ ರೀತಿಯಿಂದಲೂ ಚೆನ್ನಾಗಿ ಮೂಡಲೆಂದು ನರಸಿಂಗರಾಯ ಸೂತ್ರಧಾರನ ಪಾತ್ರಧಾರ ಕೆಂಪರಾಜನಲ್ಲಿ ಕೊಂಚ ಹೆಚ್ಚಿನ ಪ್ರಾಮುಖ್ಯ ಕೊಡುತ್ತಿದ್ದ. ಹಾಗಾಗಿ ತನ್ನ ಮಾತಿಗೆ ಅಡ್ಡಿಯಿಲ್ಲವೆಂದು ಅವನು ಮನಸ್ಸಿನಲ್ಲಿ ಧಿಮಾಕು ತುಂಬಿಕೊಂಡಿದ್ದ. ಅಲ್ಲದೆ, ಈ ಹಂತದಲ್ಲಿ ಒತ್ತಡ ತಂದರೆ ತನ್ನ ಬಯಕೆ ಈಡೇರುವುದೆಂದುಕೊಂಡಿದ್ದ.
ಆದುದರಿಂದಲೇ ಸೂತ್ರಧಾರನ ಜೊತೆಗೆ ಸುನಂದಾಳ ಡ್ಯಾನ್ಸು ಇಡಬೇಕು. ಇದರಿಂದ ಪ್ರಾರಂಭವೇ ಕಳೆಗಟ್ಟುತ್ತದೆ ಎಂದ. ಈ ಮಾತಿನಿಂದ ಮೋಟಪ್ಪ ಸಿಡಿದ. ಮೂಳೆ ಇದೆಯೇನೊ ನಿನಗೆ? ಸುನಂದಾ ನಾಟಕದಲ್ಲಿ ನರ್ತಕಿಯಲ್ಲ, ಶಕುಂತಲೆ ಎಂದ. ಈಗ ತನ್ನನ್ನು ಬಿಟ್ಟರೆ ಗತಿಯಾರು ಇವರಿಗೆ ಅಂದುಕೊಂಡಿದ್ದರಿಂದ, ಸುನಂದಾಳ ಡ್ಯಾನ್ಸು ಇಲ್ಲಾಂದರೆ ನನಗೆ ಪಾರ್ಟು ಬೇಡವೆಂದ. ಈ ಸಂದರ್ಭಕ್ಕಾಗಿಯೇ ಕಾದಿದ್ದ ಕುಳ್ಳಪ್ಪ, ಡ್ಯಾನ್ಸು ಮಾಡಿ ಆಮೇಲೆ ಶಕುಂತಲೆ ಪಾರ್ಟು ಮಾಡಲಿ. ಕೊಳ್ಳೆ ಹೋಗೋದೇನೆಂದು ಕೆಂಪರಾಜನನ್ನು ಬೆಂಬಲಿಸಿದ.
ಸ ರಘುನಾಥ ಅಂಕಣ; ನರಸಿಂಗರಾಯನಲ್ಲಿ ಅವನದೇ ಪ್ರಶ್ನೆಗಳು
ಇದಕ್ಕೆ ಯಾರೂ ಒಪ್ಪಲಿಲ್ಲ. ಮುಖ್ಯವಾಗಿ ಮುನೆಕ್ಕ, ಬೀರಣ್ಣ ಬಿಲ್ಕುಲ್ ಇದಾಗದೆಂದರು. ಕೆಂಪರಾಜ, ಕುಳ್ಳಪ್ಪ ಪಟ್ಟು ಹಿಡಿದು ಕುಳಿತರು. ಕಡೆಗೆ ರೋಸಿಹೋದ ಕೆಂಪರಾಜನ ಸೋದರಮಾವನೂ ಆಗಿದ್ದ ಮುನೆಂಕಟೇಗೌಡ, ಮಾಡೊಲ್ಲ ಅಂದರೆ ಒತ್ತಾಯ ಯಾಕೆ? ಬಿಡಿ ಅಂದ. ಹಾಗೆಯೆ ಆಯಿತು. ಸೂತ್ರಧಾರನ ಪಾತ್ರ ಪಿಲ್ಲಣ್ಣನ ಹೆಗಲಿಗೆ ಬಿದ್ದಿತು. ಪ್ರಾಕ್ಟೀಸೊ ಅಂದ ಪಿಲ್ಲಣ್ಣನಿಗೆ, ಇಷ್ಟು ದಿನ ಕೇಳಿಸಿಕೊಂಡಿದ್ದೆ ಅಲ್ಲವ, ಎರಡು ಜಮಾಯಿಂಪು ಹೆಚ್ಚಿಗಾದರೆ ಆಯ್ತು ಎಂದು ಮುನೆಂಕಟೇಗೌಡನೇ ಹೇಳಿದ.
ಕಣ್ವನ ಪಾರ್ಟು ಯಾರಿಗೆ ಎಂದು ಮುನಿನಾರಾಯಣಿ ಕೇಳಿದ್ದಕ್ಕೆ ದುಗ್ಗಪ್ಪ, ನಮ್ಮ ಅಪ್ಪಯ್ಯ ಪಾರ್ಟು ಕಟ್ಟೋದು ಬಿಟ್ಟು ಶಾನೆ ಕಾಲವಾಯ್ತು. ಈಗಾರ ನೋಡೋಣ, ಕಣ್ವನ ಪಾರ್ಟು ಅಪ್ಪಯ್ಯನದೇ ಅಂದ. ದುಗ್ಗಪ್ಪನ ಮಾತೇ ಅಪ್ಪಯ್ಯನದೂ ಎಂದು ತಿಳಿದಿದ್ದರಿಂದ ತಾಲೀಮು ಸುಸೂತ್ರವಾಗಿ ಮುಂದುವರೆಯಿತು.