ಸ.ರಘುನಾಥ್ ಅಂಕಣ: ಮುಳ್ಳಿನಮರ ಹತ್ತುವ ಕೆಲಸ
ಕೆಂಪರಾಜ ಹಣ ಕೊಡುವುದು ಬೇಡ ಅನ್ನುವಾಗಲೇ ನರಸಿಂಗರಾಯನ ಮನದಲ್ಲಿ ಆರು ತಿಂಗಳಿಗೆ ಬರಲಿರುವ ಗ್ರಾಮ ಪಂಚಾಯತಿ ಚುನಾವಣೆಗೆ ಕೆಂಪರಾಜನನ್ನು ಅಣಿಗೊಳಿಸುವ ಆಲೋಚನೆ ಹುಟ್ಟಿತ್ತು. ಆಗಿನ ಖರ್ಚಿಗೆ ಇರಲಿ ಎಂದು ಬೇಡವೆಂದಿದ್ದ. ಹಾಗೆಯೇ ಈ ಹಣ ದೊಡ್ಡದೊಂದು ಕೆಲಸಕ್ಕೆ ಬೇಕಾಗುವುದು. ಆದುದರಿಂದ ಖರ್ಚು ಮಾಡದಿರಲು ತಿಳಿಸಿದ್ದ. ಆ ಕೆಲಸ ಯಾವುದೆಂದು ಕೆಂಪರಾಜನಿಗೀಗ ಅರ್ಥವಾಯಿತು. ತನ್ನಿಂದ ಕಿಂದರಿಜೋಗಿ ವೇಷ ಕಟ್ಟಿಸಿದ್ದು, ತನ್ನಲ್ಲಿ ನಿರ್ಮಾಣದ ಮನೋಭಾವ ಹುಟ್ಟಲು ಎಂದು ಅರಿವಾಯಿತು.
ಆದರೆ ಕುಳ್ಳಪ್ಪನಿಂದ ಹಣ ತೆಗೆಂದುಕೊಂಡಿದ್ದರ ಆಂತರ್ಯವೇನೆಂದು ತಿಳಿದಿರಲಿಲ್ಲ. ಕುಳ್ಳಪ್ಪನೂ ಹೀಗೆಯೇ ಯೋಚಿಸುತ್ತಿರುವನೆಂದು ಊಹಿಸಿದ ನರಸಿಂಗರಾಯ, ಆಗ ಕುಳ್ಳಪ್ಪನನ್ನು ಚುನಾವಣೆಗೆ ಇಳಿಸಬೇಕು ಅನ್ನಿಸಿರಲಿಲ್ಲ. ನಂತರ ನಿನೊಬ್ಬ ಸದಸ್ಯನಾದರೆ ಬಲ ಸಾಕಾಗದು. ಕುಳ್ಳಪ್ಪನೂ ಇರಲಿ ಅನ್ನಿಸಿತು. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಬೇಕೆನ್ನಿಸುತ್ತಿದೆ. ನಿಮ್ಮ ಜೊತೆಗೆ ಇನ್ನಷ್ಟು ಬಲ ಹೆಚ್ಚಿಸಿಕೊಳ್ಳಲು ಇನ್ನೊಂದಿಬ್ಬರಾದರು ಇರಬೇಕು ಅನ್ನಿಸುತ್ತಿದೆ ಅಂದ. ಅದು ಸರಿ, ನಮ್ಮೂರಿಗಿರುವುದು ಎರಡೇ ಸೀಟು. ಇನ್ನೆರಡು ಹೇಗೆ ಸಾಧ್ಯವೆಂದು ಕುಳ್ಳಪ್ಪನೇ ಕೇಳಿದ.
ಸ.ರಘುನಾಥ ಅಂಕಣ; ಕೆಂಪರಾಜನ ವಿಚಾರಣೆ ಇಲ್ಲದ ತೀರ್ಪು
ಗ್ರಾಮ ಪಂಚಾಯತಿಗೆ ನಮ್ಮೂರೊಂದೇ ಸೇರಿದ್ದಲ್ಲವಲ್ಲ. ಇನ್ನೂ ಆರು ಊರುಗಳು ಇದರ ವ್ಯಾಪ್ತಿಯಲ್ಲಿವೆ ಒಟ್ಟು ಹದಿಮೂರು ಸ್ಥಾನಗಳು. ಆ ಊರುಗಳಿಂದ ಯಾರಾದರೂ ಇಬ್ಬರನ್ನು ಸೇರಿಸಿಕೊಳ್ಳಬೇಕಾಗುತ್ತದೆ ಅಂದ ನರಸಿಂಗರಾಯ, ಯಾರಾಗಬಹುದೆಂದು ತಾನೇ ಪ್ರಶ್ನೆ ಎತ್ತಿದ. ಹಾಲಿ ಸದಸ್ಯರ ಹೆಸರು, ಅವರ ಗುಣಗೋತ್ರಗಳು ಚರ್ಚಿತವಾದವು. ಅವರು ರಾಜಕೀಯದಲ್ಲಿ ಪಳಗಿದವರು.
ಯಾವಾಗ ಯಾವಕಡೆ ಜಿಗಿಯುವರೆಂದು ಹೇಳಲಾಗದು. ನಮ್ಮ ಗುರಿ ಧ್ಯೇಯಗಳ ಬಗ್ಗೆ ಅರಿವಿರುವವರಾಗಬೇಕು. ಕಡತೂರಿನ ಸಿದ್ಧಪ್ಪ ಈಗ ಮೆಬರಾಗಿದ್ದರೂ ಶುದ್ಧಹಸ್ತ. ಅವನನ್ನು ಕೇಳಿಕೊಳ್ಳಬೇಕು. ತಿಮ್ಮಜೋಗಿ ಅವನ ಶಿಷ್ಯ. ಗುರುವಿನ ಜೊತೆಗೆ ಅವನಿದ್ದರೆ ಒಳ್ಳೆಯದೆಂದು ಹೇಳಿದ. ಹಾಗಿದ್ದರೆ ನಾಳೆಯೇ ಅವರನ್ನು ಕಂಡು ಮಾತಾಡೋಣ ಎಂದು ರಂಗ ತುದಿಗಾಲಲ್ಲಿ ನಿಂತ.
ಅದಕ್ಕೆ 'ಆತುರಗಾರ ಎಲೆಯಲ್ಲಿ ಬಡಿಸು ಅಂದರೆ, ನನಗೆ ನೆಲದಲ್ಲೇ ಬಡಿಸು' ಅನ್ನುವಂಥವನು ಇವನು ಅಂದು ಪಿಲ್ಲಣ್ಣ, ಕೆಂಪರಾಜನ ಅಮ್ಮ ಒಪ್ಪಬೇಕು. ಅದಕ್ಕಿಂತ ಮುಖ್ಯವಾಗಿ ಮುನೆಂಕಟೇಗೌಡ ಒಪ್ಪಬೇಕು. ಆಮೇಲೆ ಊರಿವರೊಂದಿಗೆ ಮಾತಾಗಬೇಕು. ಎಲ್ಲರೂ ಸೈ ಅಂದಮೇಲೇನೇ ಸಿದ್ಧಪ್ಪ, ತಿಮ್ಮಜೋಗಿ ಜೊತೆ ಮಾತು ಎಂದು ವಿವರಿಸಿದ.
ಸ.ರಘುನಾಥ್ ಅಂಕಣ: ಮನದ ಗುಟ್ಟು ರಟ್ಟು ಮಾಡಿದ ನರಸಿಂಗರಾಯ
ಅಪ್ಪಯ್ಯ, ಒಳ್ಳೇದೆ. ಆದರೆ ಇವತ್ತಿನ ರಾಜಕೀಯ ಅಂದರೆ ಮುಳ್ಳಿನಮರ ಹತ್ತುವ ಕೆಲಸ. ಅಪಾಯವಿಲ್ಲದೆ ಹತ್ತಿ ಇಳಿತೀವಿ ಅನ್ನೋದಾದರೆ ಅಭ್ಯಂತರವಿಲ್ಲ ಅಂದ. ಅಮ್ಮಯ್ಯನಿಗೆ ರಾಜಕೀಯದ ಗಂಧವೂ ಇರಲಿಲ್ಲವಾಗಿ ಮಧ್ಯೆ ಬಾಯಿ ಹಾಕಲಿಲ್ಲ. ದುಗ್ಗಪ್ಪನಾದಿಯಾಗಿ ಹಿರಿಯರನ್ನು ಒಪ್ಪಿಸಿದರಾದರೂ ಮುನೆಂಕಟೇಗೌಡ ಭೀಷ್ಮಮೌನ ತಳೆದು ಕೂತುಬಿಟ್ಟ. ಅವನು ಬಾಯಿ ಬಿಡದೆ ಸಾದಮ್ಮ ಹೂಂ ಅನ್ನುವಂತಿರಲಿಲ್ಲ.
ಮುನಿನಾರಾಯಣಿಯ ಹೆಸರು ಪ್ರಸ್ತಾಪಕ್ಕೆ ಬಂದು, ಮೋಟಪ್ಪ ಸಮ್ಮತಿಸಿದರೂ ಮುನಿನಾರಾಯಣಿಯೇ ಮುಂದೆ ಬರಲಿಲ್ಲ. ಆಗ ಮುನೆಂಕಟೇಗೌಡ, ನಿನಗಿಂತಾನ? ನೀನೇ ನಿಂತುಬಿಡು ಎಂದು ಮೌನ ಮುರಿದ. ಆ ಮಾತಿಗೆ ನರಸಿಂಗರಾಯ, ಮಾವಾ, ನನ್ನ ಇಪ್ಪತ್ತಾರು ಕೆಲಸಗಳ ನಡುವೆ ಅದನ್ನು ನಿಭಾಯಿಸಲು ಆಗದು. ಇದು ನಿನಗೆ ತಿಳಿಯದ್ದೇನಲ್ಲ ಅಂದ. ಮುನೆಂಕಟೇಗೌಡ ಮತ್ತೆ ಮೌನಿಯಾದ.
ಅವನ ಮೊಂಡುತನಕ್ಕೆ ದುಗ್ಗಪ್ಪ ಮುನಿಸಿಕೊಂಡ. ಹಾಗಾದರೆ ನಾವು ಹೋಗಬಹುದೋ ಎಂದು ಬೀರಣ್ಣ ನಿಷ್ಟುರವಾಗಿ ಹೇಳಿದ. ಉಳಿದವರೂ ಅದೇ ನಿಷ್ಟುರದ ಮಾತಾಡಿದಾಗ ಮೆತ್ತಗಾದ ಮುನೆಂಕಟೇಗೌಡ, ಅದು ಹಾಗಲ್ರೋ, ದೊಡ್ಡಗೋವಿಂದನು ನೆಂಟ. ಮತ್ತೆ ಅವನೇ ನಿಲ್ಲುವಂತಿದೆ. ಅದೇ ಬಂದೀರೋದು ಅಂದ. ಅದು ಆ ಮೇಲಿಂದು. ಈಗ ನೀನು ಆಯ್ತು ಅಂತೀಯೋ ಇಲ್ಲವೋ ಅಂದ ದುಗ್ಗಪ್ಪ. ನಿಮ್ಮ ನ್ಯಾಸ್ತಕ್ಕಿಂತ ಅವನು ದೊಡ್ಡೋನಲ್ಲ. ಆಯ್ತು ನಿಮ್ಮಿಷ್ಟದಂತೆ ಆಗಲಿ ಎಂದ.