ನರಸಿಂಗರಾಯನಿಗೆ ಮುನೆಕ್ಕ ಹೇಳಿದ ಕಥೆಯನ್ನು ಕೇಳಿದ ಮೇಲೆ ಏನಾಯಿತು?
ಮುನೆಕ್ಕ ತನ್ನ ಕೈಲಿ ಧನಿಯಾ ಕುಟ್ಟಿಸಿದ್ದು ತನಗೆ ಮಾಡಿದ ಅಪಮಾನವೆಂದು ನರಸಿಂಗರಾಯ ಮನಸ್ಸಿನಲ್ಲಿ ಚಿತ್ರಿಸಿಕೊಂಡಿದ್ದ. ಅವಳು ಮನೆಗೆ ಬಂದು ಮಾಡಿದ ಉಪಚಾರದ ಆಂತರ್ಯ ತಿಳಿಯದಾಗಿತ್ತು. ಅವಳನ್ನು ಕಂಡಾಗ, ಅವಳು ಎದುರಾದಾಗ ಮುಖ ಸೊಟ್ಟು ಮಾಡುತ್ತಿದ್ದ. ಇದನ್ನು ಅರಿತ ಮುನೆಕ್ಕ ಒಂದು ದಿನ ಅವನ ಕೈ ಹಿಡಿದು ಹರಕೆಯ ಕುರಿಯನ್ನು ಎಳೆದೊಯ್ಯುವಂತೆ ಮನೆಗೆ ಎಳೆದೊಯ್ದಳು.
ನಡುಮನೆಯಲ್ಲಿ ಕೂತು, ಕುಕ್ಕರಿಸು ಎಂದು ಕೈ ಹಿಡಿದೆಳೆದು, ತನ್ನೆದುರು ಕೂರಿಸಿಕೊಂಡಳು. ಕೈ ಚಾಚಿ ಡಬ್ಬದಲ್ಲಿದ್ದ ಪಾಕನ್ ಪೊಪ್ಪನ್ನು ಕೊಟ್ಟು, ತಿನ್ನು ವಿಷ ಹಾಕಿಲ್ಲ ಎಂದಳು. ಅವನು ತಿಂದೆ, ತಿನ್ನದಿರುವೆ ಅನ್ನುವ ಹಾಗೆ ಕಚ್ಚುತ್ತಿದ್ದ.
ಮುನೆಕ್ಕನನ್ನು ಅಪ್ಪಿ ಕೆನ್ನೆಗೆ ಮುತ್ತು ಕೊಟ್ಟುಬಿಟ್ಟ ನರಸಿಂಗರಾಯ
"ನಾನು ನಿನ್ನ ತಲೆ ಮೇಲೆ ಕಲ್ಲಿನ ಚಪ್ಪಡಿ ಇಟ್ಟಿಲ್ಲ. ಬಾಯಿ ತೆಗೆದು ತಿನ್ನು. ನಿನ್ನ ನೆತ್ತಿಗೆ ಕಾದೆಣ್ಣೆ ಸುರಿದಿಲ್ಲ. ಹಾಗೇಕೇ ಆಡ್ತಿದ್ದಿ. ಕೆಡದಿರೋದರ ಕಷ್ಟ ಗೊತ್ತಾಗ್ಲಿ ಅಂತಲೇ ಹಾಗೆ ಮಾಡಿದ್ದು. ಅದು ದೊಡ್ಡದಾಯ್ತು ಅನ್ನಿಸಿದ್ದಕ್ಕೇ ಎಣ್ಣೆ ಹಚ್ಚಿ, ನೀರೆದು ಸಮಾಧಾನಪಟ್ಟಿದ್ದು. ಹೇಳಿದ್ದು ಹತ್ತಿತಾ ಮೂಳೆಗೆ" ಎಂದು ಕುಡಿಯಲು ಹಾಲು ಕೊಟ್ಟು, ನಿನಗೊಂದು ಕತೆ ಹೇಳಬೇಕು ಅನ್ನಿಸಿತು ಅದಕ್ಕೆ ಎಳಕೊಂಡು ಬಂದೆ ಎಂದಳು.
ಒಂದೂರಲ್ಲಿ ನಿನ್ನಂತೋನೊಬ್ಬ ಇದ್ದ. ಆ ಊರಲ್ಲೊಬ್ಬ ನಾಯಕಸಾನಿ ಇದ್ದಳು. ಅವಳ ಸೊಗಸಿಗೆ ಊರಿಗೂರೇ ಬೆರಗಾಗಿ ಕೊಂಡಾಡ್ತಿರೋದು. ಅವನು ಅವಳಿಗಿಂತ ಶಾನಾನೇ ಚಿಕ್ಕೋನು. ಆದರೆ ವಯಸು ನೋಡು ಅವಳ ಮೇಲೆ ಕಣ್ಣು ಹಾಕಿದ. ಒಂದಿನ ಮಧ್ಯಾಹ್ನವೇ ಅವಳ ಮನೆಗೆ ನುಗ್ಗಿದ್ದೋನೆ ನುಗ್ಗಿದ್ದು.
ಮಗ ಹುಟ್ಟಿದ್ರೆ ಇವನ ವಯಸ್ಸೇ ಇರ್ತಿತ್ತು ಅಂದುಕೊಂಡಳು. ಅವನು ಕೈ ಹಿಡಕೊಂಡಾಗ ನಕ್ಕಳು. ಹಾಲು ತರ್ತೀನಿರು ರಾಜ ಎಂದು ಮಂಚದ ಮೇಲೆ ಕೂರಿಸಿ ರೂಮಿಂದ ಆಚೆ ಬಂದು ಬಾಗಿಲು ಎಳೆದು ಚಿಲಕ ಹಾಕಿದಳು. ಸಾಯಂಕಾಲ ಆಯ್ತು, ರಾತ್ರಿ ಆಯ್ತು. ಬಾಗಿಲು ತೆಗೀಲಿಲ್ಲ. ಅವನಿಗೆ ಹಸಿವು. ಎಂದೂ ಇಷ್ಟು ಉಪವಾಸ ಇದ್ದೋನಲ್ಲ.
ನರಸಿಂಗರಾಯನಿಗೂ ಇತ್ತೊಂದು ಪ್ರೇಮ ಕಥೆ; ಆಕೆ ಹೆಸರು ಚಿನ್ನಕ್ಕ
ನಡುರಾತ್ರಿ. ಬಾಗಿಲು ತೆಗೆದು ಒಳ ಬಂದಳು. ಎದೆಯ ಮೇಲೆ ಸೆರಗಿರಲಿಲ್ಲ. ಒಂದು ಕೈಲಿ ಅನ್ನದ ತಟ್ಟೆ, ಇನ್ನೊಂದು ಕೈಲಿ ನೀರಿನ ಚೆಂಬು. ತನ್ನ ಎದೆ ಕಡೆ ಕಣ್ಣು ಹಾಯಿಸಿ, ನಿನ್ನ ಕೈಗೆ ಇದು ಕೊಡಲೆ, ಅನ್ನ ನೀರು ಕೊಡಲೆ. ಯಾವುದು ಬೇಕು ಎಂದಳು. 'ಅಮ್ಮಾ, ಅನ್ನ ನೀರು ಕೊಡು' ಎಂದು ಬೇಡಿದ.
'ಈಗ ಹೇಳು, ನಾನು ಮಾಡಿದ್ದು ತಪ್ಪೇ ಆದರೆ, ನಿನಗೆ ಈ ಮೈ ಬೇಕಾದರೆ ಬಾ' ಎಂದು ಚಾಪೆಯ ಮೇಲೆ ಮಲಗಿ ಎರಡೂ ಕೈ ಚಾಚಿ ಕರೆದಳು. ನರಸಿಂಗರಾಯ ತಲೆ ತಗ್ಗಿಸಿ, ಹಾಲಿನ ಲೋಟವನ್ನು ಕೈಗೆತ್ತಿಕೊಂಡ. ಮುನೆಕ್ಕ ಸೆರಗು ಹೊದ್ದು ಬಂದು ಅವನ ಪಕ್ಕ ಕುಳಿತು, ಕೃಷ್ಣಗಿರಿಯಿಂದ ತಾಟಿಬೆಲ್ಲ ತರೋ ಪೆರುಮಾಳ ಬೆಳಗ್ಗೆ ಬಂದಿದ್ದ. ತಗೊಂಡಿದ್ದೆ. ಅದನೇ ಹಾಕಿರೋದು. ಕೊಂಚ ಸಿಹಿ ಕಡಿಮೆಯಷ್ಟೆ. ಅರೋಗ್ಯಕ್ಕೆ ಒಳ್ಳೇದು ಕುಡಿ ಎಂದಳು.