ಮುಂಭಾರವಾಗಿ ಮುಗ್ಗರಿಸುವಳೇನೋ ಅನ್ನಿಸುವಂಥ ಮಾತಂಗಿ ದರ್ಶನ
ನರಸಿಂಗರಾಯ ಬೆಳಗ್ಗೆ ತಂಗಳುಂಡು ದನಗಳನ್ನು ಹೊಡೆದುಕೊಂಡು ಹೊಲಕ್ಕೆ ಹೋದ. ಉಬ್ಬೆ(ಪುಬ್ಬಾ) ಮಳೆ ನಡೆಯುತ್ತಿತ್ತು. ಬಿಸಿಲು ಚುರುಕಾಗಿತ್ತು. ಸಂಜೆಗೊ, ರಾತ್ರಿಗೂ ಮಳೆ ಬರಬಹುದು ಅನ್ನಿಸಿತು.
ಗರಿ ಮೇಯಲು ದನಗಳನ್ನು ಹೊಲಕ್ಕೆ ಬಿಡುವ ಕಾಲ. ದನ ಗರಿ ಮೇದರೆ ತೆನೆ ಚೆನ್ನಾಗಿ ಕಟ್ಟುತ್ತೆ. ತಾನೇ ಲೇಟು. ಕೆಲವರಾಗಲೇ ಮೇಯಿಸುತ್ತಿದ್ದಾರೆ. ರಾಗಿ ಪೈರು ಚೆನ್ನಾಗಿ ಗರಿಯಿಟ್ಟಿತ್ತು. ಎತ್ತುಗಳನ್ನು ಮೇಯಲು ಬಿಟ್ಟ. ಎಮ್ಮೆಗಳನ್ನು ಕರಿಕಲ್ಲು ಗುಡ್ಡದಲ್ಲಿ ಬಿಟ್ಟ. ಎತ್ತುಗಳು ಅವರೆ, ಜೋಳದ ಸಾಲಿಗೆ ಬಾಯಿ ಹಾಕದಂತೆ ಕಾಯತ್ತ ಹಿಂದೆಯೇ ಇದ್ದ.
ಅವು ಮೇಯುತ್ತ ಗೆನಿಮೆ(ಬದು)ಯತ್ತ ಹೆಜ್ಜೆ ಹಾಕಿದವು. ಹೊಟ್ಟೆ ತುಂಬ ಮೇದಿವೆ. ನೆರಳಲ್ಲಿ ಕಟ್ಟಿದರೆ ನಮುರು(ಮೆಲುಕು) ಹಾಕಿಕೊಳ್ಳುತ್ತವೆ ಎಂದುಕೊಂಡು, ನೀರು ಕುಡಿಯಲು ಕುಂಟೆಯತ್ತ ತಿರುಗಿಸಬೇಕು ಅಂದುಕೊಳ್ಳುವಾಗ್ಗೆ ಅವು ಬದುವಿನಲ್ಲಿದ್ದ ಹುತ್ತದ ಹತ್ತಿರ ಬಂದಿದ್ದವು.
ನರಸಿಂಗರಾಯನಿಗೆ ಆ ಸುಖದುಸಿರು ಪ್ರಣಯ ಗೀತೆಯಾಗಿ ಧ್ವನಿಸುತ್ತಿತ್ತು
ಎತ್ತುಗಳಿಗೆ ನೀರು ಕುಡಿಸಿ ಅತ್ತಿ ಮರದಡಿ ಕಟ್ಟಿ ಹುತ್ತದತ್ತ ನೋಡಿದ. ಮನಸ್ಸು ಕನಸ್ಸಿನಲ್ಲಿ ಕಾಮಕಸ್ತೂರಿ ಪೂಸಿಕೊಂಡು ಬಂದ ನಾಗಿಣಿಯ ರೂಪ, ಗಂಧ ತುಂಬಿಕೊಂಡಿತು. ಬೆಳಗಿನ ಜಾವದ ಕನಸು ಸುಳ್ಳಾಗದಂತೆ! ಹುತ್ತದಿಂದ ನಾಗಿಣಿ ಎದ್ದು ಬಂದು, ಕನಸು ನಿಜವಾದೀತೆ? ಹುತ್ತದ ಹತ್ತಿರ ನಿಂತ.
ತಲೆ ಮೇಲೆ ನೆರಳು ಕವಿಯಿತು. ತಲೆಯೆತ್ತಿ ನೋಡಿದ. ದೊಡ್ಡ ಕರಿಮೋಡ. ನಾಗಿಣಿಯ ಮೈ ಬಣ್ಣವೂ ಹೀಗೆ ಕಪ್ಪಗಿತ್ತು. ನಾಗಿಣಿಯರು ಕಾಮರೂಪಿಗಳಂತೆ! ಮೋಡ ನಾಗಿಣಿಯಾಗುವುದೇನೋ ಎಂದು ನೋಡುತ್ತ ನಿಂತ. ಕತ್ತು ನೋವು ಬಂತು.
ನಾಗಿಣಿ ಕಪ್ಪೆಂದರೆ ಕಪ್ಪು. ಮೈ ಮಿರಗುಟ್ಟುತ್ತಿತ್ತು. ಮಿಂಚು ಕಣ್ಣುಗಳು. ಪೊರೆಯಂತೆ ಮೈಗಂಟಿದ ಬಿಳಿಸೀರೆ. ಮುಂಭಾರವಾಗಿ ಮುಗ್ಗರಿಸುವಳೇನೋ ಅನ್ನಿಸುವಂತೆ ಎದೆ. ಸೊಂಟವಿಲ್ಲದೆ ನಡೆಯುತ್ತಿರುಂತೆ ನವಿರಾದ ಸಣ್ಣ ನಡು. ಅಮಾವಾಸ್ಯೆಯ ಇರುಳೇ ಕಿರಿದಾದಂತೆ ಹೊಕ್ಕುಳು.
ಇರುಳ ಕಡಲಲೆಯ ಉಬ್ಬಿನಂತಹ ಪಿರ್ರೆಗಳು. ಮಳೆ ಬರುವಾಗ ನೆಲದತ್ತ ಇಳಿವ ಮೋಡದ ಜಡೆಗಳಂತಂತಹ ಕೂದಲು. ನಡಿಗೆ ಗಾಳಿ ತೆರೆಯನ್ನು ಸೀಳಿ ಬರುವಾಗ ಹೊಮ್ಮುವ ತಾಳೆ, ಹಿಪ್ಪೆ ಹೂಗಳ ಅಮಲು ತರುವ ಪರಿಮಳ. ಈಗಲೂ ಹಾಗೆಯೇ ಅನ್ನಿಸತೊಡಗಿತು. ಮೋಡ ಸರಿದು, ನೆರಳು ಹರಿದು ಬಿಸಿಲು ಸುರಿಯಿತು. ಆ ಹುತ್ತ, ಆ ಹುತ್ತ ಎಂದು ಸುತ್ತಲಿನ ಹೊಲಗಳ ಹತ್ತಿರದ ಹುತ್ತಗಳ ಬಳಿ ಹೋಗಿ ನಿಂತ. ಕಾದ. ಕರು ನೆನಪಾಗಿ ಎಮ್ಮೆ ವಂಯ್ ಎಂದಿತು.
ಎತ್ತುಗಳನ್ನು ಬಿಚ್ಚಿ ಒಂದರ್ಧ ಗಂಟೆ ಮೇಯಲು ಹೊಲದೊಳಕ್ಕೆ ಹೊಡೆದ. ದನಗಳಿಗೆ ಸಾಯಂಕಾಲದ ನೀರು ಕುಡಿಸಿ ಮನೆಗೆ ಹೊರಟಾಗ ನಾಗಿಣಿ ಮನದಲ್ಲೇ ಇದ್ದಳು. ಇಂದೇಕೊ ಎಮ್ಮೆ ನಡೆಯುವಾಗ ಒಂದು ರೀತಿಯ ಒಯ್ಯಾರ ಮಾಡುತ್ತಿದೆ ಅನ್ನಿಸಿತು. ನಾಗಿಣಿ ಇದರಲ್ಲಿ ಹೊಕ್ಕಿರುವಳೇ ಅನ್ನಿಸಿತು.
ಮನೆಯಂಗಳಕ್ಕೆ ಬರುತ್ತಿದ್ದಂತೆ ನರಸಿಂಗರಾಯ ಬೆಚ್ಚಿದ, ರೋಮಾಂಚನಗೊಂಡ, ಮೈಮರೆತ. ಎಮ್ಮೆ ಹಿಡಿದುಕೊಂಡಿದ ಹಗ್ಗವನ್ನು ಜಗ್ಗಿ ಕರುವಿನತ್ತ ನುಗ್ಗಿದಾಗ ಆಯತಪ್ಪಿ ಬಿದ್ದ. ಬಿದ್ದಂತೆಯೇ ನೋಡಿದ. ಜಗುಲಿಯಲ್ಲಿ ನಾಗಿಣಿ!!!
ಆಗಲೇ ಹೊರಬಂದ ಅಮ್ಮ, 'ಬೇಗ ಹಿಡಿ ಮಾತಂಗಿ' ಎಂದು ಕಾಫಿಲೋಟ ಅವಳ ಕೈಗಿತ್ತು, ಓಡೋಡಿ ಬಂದಳು. 'ನೀನು ಒಳಗೆ ಹೋಗು. ದನಗಳನ್ನು ನಾನು ಕಟ್ಟಿ ಬರುತ್ತೇನೆ' ಎಂದಳು. ಈ ಅನಿರೀಕ್ಷಿತ ಸಂಭವದಿಂದ ಗಾಬರಿಗೊಂಡ ಮಾತಂಗಿ ಜಗುಲಿಯಿಂದಿಳಿದು ನಿಂತಳು.
ನರಸಿಂಗರಾಯ ನೋಡಿದ. ಕಪ್ಪೆಂದರೆ ಕಪ್ಪು. ಮೈ ಮಿರಗುಟ್ಟುತ್ತಿತ್ತು. ಮಿಂಚು ಕಣ್ಣುಗಳು. ಪೊರೆಯಂತೆ ಮೈಗಂಟಿದ ಬಿಳಿಸೀರೆ. ಮುಂಭಾರವಾಗಿ ಮುಗ್ಗರಿಸುವಳೇನೋ ಅನ್ನಿಸುವಂತೆ ಎದೆ. ಸೊಂಟವಿಲ್ಲದೆಯೇ ನಿಂತಿರುವಂತಿರುವ ನವಿರಾದ ಸಣ್ಣ ನಡು. ಅಮಾವಾಸ್ಯೆಯ ಇರುಳೇ ಕಿರಿದಾದಂತೆ ಹೊಕ್ಕುಳು. ಇರುಳ ಕಡಲಲೆಯ ಉಬ್ಬಿನಂತಹ ಪಿರ್ರೆಗಳು. ಮಳೆ ಬರುವಾಗ ನೆಲದತ್ತ ಇಳಿವ ಮೋಡದ ಕಾಲುಗಳಂತಹ ಕೂದಲು. ಅವಳನ್ನು ದಾಟಿ ಹೋಗುವಾಗ ಮೂಗಿಗೆ ತಾಳೆ, ಹಿಪ್ಪೆ ಹೂಗಳ ಅಮಲು ತರುವ ಪರಿಮಳ. ನಾಗಿಣಿ... ಮಾತಂಗಿ!