ಗೌರಿಯ ತೆಕ್ಕೆಯಿಂದ ಓಡಿ ಬಂದ ನರಸಿಂಗರಾಯ ಮತ್ತೆಂದೂ ಅತ್ತ ಸುಳಿಯಲಿಲ್ಲ
ಅಂದು ದನ ಕಾಯಲು ಜೊತೆಯಾದ ವೆಂಕಟರಮಣ, 'ಏನು ನರಸಿಂಗ, ಗೋಪಾಲನ ಲವ್ ಕೇಸು ಎಲ್ಲಿಗೆ ತಂದೆ' ಎಂದು ಕೇಳಿದ. ನರಸಿಂಗರಾಯ ಪಿಳಿಪಿಳಿ ಕಣ್ಣು ಬಿಟ್ಟು ಅವನತ್ತ ನೋಡಿದ. ನಂಗೆ ಗೊತ್ತಿಲ್ಲಪ್ಪ ಅಂದ. ಡೂಸು ಬಿಡಬೇಡ. ನಂಗೆಲ್ಲ ಗೊತ್ತು. ಏನಾಯ್ತು ಅಂದ. ಏನೂ ಆಗ್ಲಿಲ್ಲ. ಅವಳು ಕ್ಯಾರೇ ಅನ್ನಲಿಲ್ಲ ಅಂದ.
ಈ ಬೊಡ್ಡಿಮಗ ಸಿಐಡಿ ಇದ್ದಾನೆ ಹುಷಾರಾಗಿರಬೇಕು ಅಂದುಕೊಂಡ. ವೆಂಕಟರಮಣನೂ 'ಹೆಣ್ಣುಮೇಯಿಗ'ನೇ ಅನ್ನೋದು ತಿಳಿದಿದ್ದ ನರಸಿಂಗರಾಯ, ನಿಂದೂ ಎಲ್ಲೆಲ್ಲೋ ನಡೀತಿದೆಯಂತೆ ಅಂದ. ಏ ಏನಿಲ್ಲ ಬಿಡು ಅಂದ. ಅವನ ಕಣ್ಣಲ್ಲಿ 'ಆ' ಸುಖದ ಹೊಳಪಿತ್ತು. ನಂಗೆಲ್ಲ ಗೊತ್ತಿದೆ ಹೇಳು ಎಂದು ನರಸಿಂಗರಾಯ ಕಣ್ಣು ಹೊಡೆದ. ವೆಂಕಟರಮಣನಲ್ಲಿ ಹೇಳಿಕೊಳ್ಳುವ ಹೆಮ್ಮೆ ಹುಟ್ಟಿತು. ಅದರ ಎಳೆಯನ್ನು ಜಗ್ಗಿದ ನರಸಿಂಗರಾಯ.
ಹೊರಟಾನೊ ನರಸಿಂಗರಾಯ ಶಕುಂತಲೆಯ ಅನ್ವೇಷಣೆಗೆ
ಗಿಡ್ಡಪ್ಪನ ಮಗಳು ಗೌರಿ ಗೊತ್ತಲ್ಲ. ಭಾಳ ದಿನದಿಂದ ಅವಳ ಮೇಲೆ ಮನಸಿತ್ತು. ಅವಳಿಗಾಗಿ ಕೋಳಿ ಕದ್ದು, ಮಾರಿ ಖರ್ಚು ಮಾಡಿದೆ. ರಾಗಿ ಕದ್ದು ಮುನೆಮ್ಮನ ಅಂಗಡಿಗೆ ಕೊಟ್ಟು ಬೋಂಡ, ಚೌಚೌ, ಕೋಪರಾಪಾಕು ಎಲ್ಲ ತಿನ್ನಿಸಿದೆ. ಕೈಗೆ ಸಿಕ್ಕದಂಗೇ ಸಿಕ್ಕಿ ಜಾರಿಕೊಳ್ಳೋಳು. ಇವತ್ತು ಬೆಳಗ್ಗೆ ನಮ್ಮ ಹೊಲದಲ್ಲಿ ಹುಲ್ಲು ಕದಿಯಾಕೆ ಬಂದು ಸಿಕ್ಕಿಬಿಟ್ಟಳು.
ಅವಳು ಸಿನಿಮಾ ಹೀರೋಯಿನ್ ಕಟ್ಟೊ ಬಾಡೀನ ಕಟ್ಟಿಕೊಂಡಿದ್ಲು. ಅದರಲ್ಲಿ ಎಷ್ಟು ಚೆಂದಾಗಿ ಕಂಡ್ಲು ಅಂತಿ. ಅದರಾಗೆ ಗೌರಿ ಗೌರೀನೆ ಬಿಡು ಎಂದ. ಅದನ್ನು ನೋಡಬೇಕೆಂಬ ಆಸೆ ಹುಟ್ಟಿಸಿದ. ಗೌರಿ ಕಂಡಾಗಲೆಲ್ಲ ನರಸಿಂಗರಾಯ ಅದನ್ನು ಕಣ್ಣಲ್ಲೇ ಹುಡುಕುವಂತೆ ಮಾಡಿದ್ದ.
ಕಬ್ಬಾಳ ಪಾಪಯ್ಯನ ಹೆಂಡತಿ ಪ್ರೀತಿ ಮುಂದೆ 'ಕಳ್ಳು' ಆಸೆಯೂ ಕನಿಷ್ಠ
ನರಸಿಂಗರಾಯನಿಗೆ ಒಂದು ದಿನ ಆ ಛಾನ್ಸೂ ಸಿಕ್ಕಿಬಿಟ್ಟಿತು. ಹೊಲಕ್ಕೆ ಕೂಲಿ ನೇಗಿಲು ಬರುತ್ತೀಯ ಎಂದು ಅವಳ ಅಪ್ಪನನ್ನು ಕೇಳಲು ಅವನ ಮನೆಗೆ ಹೋಗಿದ್ದ. ಯಾರೂ ಇದ್ದಂತಿರಲಿಲ್ಲ. ಆದರೆ ಒಳಗೆ ಬಳೆಯ ಸದ್ದು. ಕಿಟಕಿಯಿಂದ ಇಣುಕಿದ. ಸ್ನಾನ ಮಾಡಿದ್ದ ಗೌರಿ ವೆಂಕಟರಮಣ ಹೇಳಿದ್ದನ್ನು ತೊಟ್ಟು ರವಿಕೆ ಕೈಗೆತ್ತಿಕೊಂಡಿದ್ದಳು.
ಕಿಟಕಿಯಲ್ಲಿ ನೆರಳಾಡಿದ್ದರಿಂದ ಅತ್ತ ನೋಡಿದಳು. ನರಸಿಂಗರಾಯ. ಪರವಾಗಿಲ್ಲ ಬಾ ಎಂದು ಬಾಗಿಲು ತೆರೆದು ಕೈ ಹಿಡಿದು ಒಳಕ್ಕೆ ಎಳೆದುಕೊಂಡಳು. ನರಸಿಂಗರಾಯನ ಕಣ್ಣಿನಲ್ಲಿ ಕತ್ತಲು. ಮೈ ನಡುಕ. ತುಟಿ ಒಣಗುತ್ತಿತ್ತು. ಬೀರಪ್ಪನ ತೋಟದ ಟಮಾಟ ಹಣ್ಣಂಗಿದ್ದಿ ನರಸಿಂಗ ಅಂದು, ಅವನನ್ನು ಇನ್ನೂ ಹತ್ತಿರಕ್ಕೆಳೆದುಕೊಂಡಳು.
ಆ ಕನಸು ಕೂಡ ದೋಚಿಕೊಳುವ ದೊರೆಗಳೇತಕೆ?
ಕೆನ್ನೆಗಳು ನೋಡು ಸೇಬುಗಳಿದ್ದಂಗಿವೆ ಎಂದು ಎಡಗೆನ್ನೆ ಗಿಲ್ಲಿದವಳೇ ಗಟ್ಟಿಯಾಗಿ ಅಪ್ಪಿಕೊಂಡು, ಅವನ ಕೆಳದುಟಿಯನ್ನು ಕಚ್ಚಿದಳು. ನರಸಿಂಗರಾಯ ಅವಳ ಎದೆಗೆ ಕೈ ಹಾಕಿ ಹಿಂದಕ್ಕೆ ದೂಡಿ ಓಡಿ ಹೋದವನು ಮುಂದೆಂದಿಗೂ ಅವಳ ಮನೆಯತ್ತ ಸುಳಿಯಲೇ ಇಲ್ಲ. ಆದರೆ ಸುಮಾರು ದಿನ ಅವಳ ಮೈ ಅಪ್ಪುಗೆ, ತುಟಿ ಕಚ್ಚಿ ನೋವು ಹುಟ್ಟಿಸಿದ್ದರೂ ಈಗ ಹಿತವೆನ್ನಿಸುತ್ತಿದ್ದ ಚುಂಬನ ಕಾಡುತ್ತಿತ್ತು.