ಭೈರಪ್ಪಜ್ಜನ ಆ 'ಒಂದು ರುಪಾಯಿ'ಯ ಮೌಲ್ಯ ಗೂಗಲ್ ಗೂ ಸಿಗಲ್ ವೇನೋ?
'...... ನಾವು ಪ್ರಾರ್ಥನಾ ಮಂದಿರವನ್ನು ಕಟ್ಟಲಿರುವೆವೆಂದು ಕೇಳಿ, ನಾವು ಕೇಳದೆಯೇ ಮೂವರು ಮಹಿಳೆಯರು ಭಕ್ತಿಯಿಂದ ಒಬ್ಬರು ಮೂರು ರುಪಾಯಿಗಳನ್ನು, ಮತ್ತಿಬ್ಬರು ತಲಾ ಐದು ರುಪಾಯಿಗಳನ್ನು ನನಗೆ ಕಳುಹಿಸಿದರು. ಧನಿಕರಾದ ಪುರುಷರು ಕೊಡಮಾಡಿದ ನೂರಾರುಗಳಿಗಿಂತಲೂ ಪರಾವಲಂಬಿಗಳಾದ ಅಬಲೆಯರು ನೀಡಿದ ಈ ಮೂರು, ಐದುಗಳು ಭಗವಂತನಿಗೆ ಹೆಚ್ಚಿನ ಪ್ರೀತಿದಾಯಕವೆಂದು ನಾನು ಭಾವಿಸುತ್ತೇನೆ.'
ಆ ಕ್ಷಣ ಯಾರಾದರೊಬ್ಬರು ನಿಲ್ಲಿಸಿ ಮಾತನಾಡಿಸಿದ್ದರೆ!
-ಆಂಧ್ರದ ಮಹಾನ್ ಸಮಾಜ ಸುಧಾರಕ ಕಂದುಕೂರಿ ವೀರೇಶಲಿಂಗಂ ಪಂತುಲು ಅವರು ತಮ್ಮ ಆತ್ಮಕಥೆಯಲ್ಲಿ ಈ ಪ್ರಸಂಗವನ್ನು ಮೆಲುಕು ಹಾಕಿದ್ದಾರೆ. ಇದು 1893ರ ಮಾತು. ಅದು ಹಣಕ್ಕೆ ಅತ್ಯಂತ ಬೆಲೆ ಇದ್ದ ಕಾಲ. ಒಂದು ಆಣೆ ಕೂಡಿಡುವುದಿರಲಿ, ಸಂಪಾದಿಸಲೂ ಹೆಣಗಾಡಬೇಕಿದ್ದ ಕಾಲವದು.
ಅಂತಹ ದಿನಗಳಲ್ಲಿ ಆ ಮಹಿಳೆಯರ ಕೊಡುಗೆ ಬಲು ದೊಡ್ಡದು. ಅಷ್ಟು ಹಣವನ್ನು ಅವರು ಹೇಗೆ ಹೊಂದಿಸಿದರೋ? ಕಂದುಕೂರಿಯವರು ಹೇಳಿದ ಭಗವಂತನಿಗೆ ಮತ್ತು ಹಣ ಕೊಟ್ಟ ಆ ಮೂವರಿಗಷ್ಟೇ ಗೊತ್ತು. ರಾಮ ಲಂಕೆಗೆ ಸೇತುವೆ ನಿರ್ಮಿಸುವಾಗ ಅಳಿಲಿನ ಸ್ವಯಂ
ಕಾಲೇಜು ಮೆಟ್ಟಿಲನ್ನೇ ಹತ್ತದ ನಾನು 1954ನೇ ಬ್ಯಾಚಿನ ಎಮ್ಮೆ
ಪ್ರೇರಿತ ಸೇವೆ, ಕೃಷ್ಣನಿಗೆ ಕುಚೇಲನು ತಂದುಕೊಟ್ಟ ಹಿಡಿಯಷ್ಟು ಅವಲಕ್ಕಿ, ಇದೇ ಕೃಷ್ಣ ಸಂಧಾನಕ್ಕಾಗಿ ಹೋದಾಗ, ಸುಯೋಧನ ಏನೆಲ್ಲ ಸಿದ್ಧತೆ ಮಾಡಿಕೊಂಡಿದ್ದ.
ಆದರೆ, ಕೃಷ್ಣ ನಡೆದದ್ದು ವಿದುರನ ಮನೆಗೆ. ಕೊಡುವುದೆಷ್ಟೇ ಆಗಿರಲಿ ಕೊಡುವ ಪ್ರೀತಿಯಲ್ಲಿ ಅಣುವು ಮಹತೋ ಮಹೀಯಾನ್ ಆಗಿಬಿಡುತ್ತದೆ. ಪ್ರೀತಿ, ಆದರಣೆಯಿಲ್ಲದೆ ರಾಶಿಯಷ್ಟು ಕೊಟ್ಟರೂ ಪ್ರಯೋಜನವಿರದು.
ಈ ಎಲ್ಲವನ್ನೂ ನೆನಪಿಗೆ ತಂದುಕೊಳ್ಳಲು ಕಾರಣಾರಾದವರು ತೊಂಬತ್ತೈದು ದಾಟಿದ ಭೈರಪ್ಪ ಎಂಬ ಮುದುಕರು. ನಾನು ಮೇಸ್ಟರಾಗಿದ್ದ ಕಶೆಟ್ಟಿಪಲ್ಲಿ ಎಂಬ ಪುಟ್ಟ ಹಳ್ಳಿಯಾತ. ಎಂದೂ ಬರದ ಈ ಭೈರಪ್ಪ ತಾತ ಒಂದು ದಿನ ಶಾಲೆ ಒಳಕ್ಕೆ ಬಂದುದು ಆಶ್ಚರ್ಯದ ಸಂಗತಿ. ಕುರ್ಚಿಯಿಂದ ಎದ್ದು, ಕುಳಿತುಕೊಳ್ಳಲು ಹೇಳಿದೆ.
ಮಕ್ಕಳ ಜತೆ ಕಷ್ಟಪಡ್ತೀ ತಕೋ
'ಕುಸೊನೇಕಿ ರಾಲ್ಯಾ.' (ಕೂತ್ಕೊಳ್ಳೋಕೆ ಬರಲಿಲ್ಲ) ಎಂದು, 'ತೀಸ್ಕೋ' (ತೆಗೆದುಕೊ) ಎಂದು ಒಂದು ರುಪಾಯಿ ನಾಣ್ಯವನ್ನು ಕೈಲಿಟ್ಟರು. ಯಾತಕ್ಕೆ ಅಂದೆ. 'ಪಿಲ್ಕಾಯಲ್ತೋ ಪಾಟು ಪಡ್ತಾವು. ತೀಸ್ಕೋ.' (ಮಕ್ಕಳ ಜೊತೆ ಕಷ್ಟಪಡ್ತೀ ತಕೋ) ಅಂದರು.
ಅವರನ್ನು ಮನೆಯಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಕಾಸು ಕೊಡುತ್ತಿರಲಿಲ್ಲ. ಆತನಿಗೆ ಮಾಡುವಂಥ ಯಾವ ಖರ್ಚೂ ಇರಲಿಲ್ಲ. ಇದು ನನಗೆ ತಿಳಿದಿತ್ತು. ಹೇಗೆ ಈ ಒಂದು ರೂಪಾಯನ್ನು ತಂದರು ಎಂದುಕೊಳ್ಳುತ್ತ ಬೇಡವೆಂದೆ. ಆತ ಕೇಳಲೇ ಇಲ್ಲ. ತೆಗೆದು ಕೊಂಡೆ. ಅವರಿಗೆ ಸಮಾಧಾನವಾಯಿತು.
ಪಾಠೋಪಕರಣವಾಗಿ ಬಳಸಿದೆ
ಆ ಬಹುದೊಡ್ಡ ಮೊತ್ತವನ್ನು (ವ್ಯಂಗ್ಯವಿಲ್ಲ) ಯಾವುದಕ್ಕೆ ಖರ್ಚು ಮಾಡುವುದೆಂದು ತೋಚಲಿಲ್ಲ. ಗಣಿತದಲ್ಲಿ ನಾಣ್ಯಗಳನ್ನು ಪರಿಚಯಿಸುವ ಪಾಠವೊಂದಿತ್ತು. ಅದನ್ನು ಪಾಠೋಪಕರಣವಾಗಿ ಬಳಸಲು ತೀರ್ಮಾನಿಸಿದೆ. ಒಂದು ದಪ್ಪ ರಟ್ಟಿಗೆ ಅದನ್ನು ಅಂಟಿಸಿ, ಕೆಳಗೆ 'ಭೈರಪ್ಪ ತಾತನ ಕೊಡುಗೆ' ಎಂದು ಬರೆದು ಕೆಲವು ದಿನ ಬಳಸಿದೆ.
ಊಟವಿಲ್ಲದೆ ಶಾಲೆಗೆ ಬಂದ ಹುಡುಗ
ಒಂದು ದಿನ ಹುಡುಗನೊಬ್ಬ ಊಟವಿಲ್ಲದೆ ಶಾಲೆಗೆ ಬಂದಿದ್ದ. ಅವನನ್ನು ಹಸಿವೆಯಲ್ಲಿಟ್ಟು ಪಾಠ ಹೇಳಲು ಮನಸ್ಸಾಗಲಿಲ್ಲ. ಊರಿನಲ್ಲಿ ಇದ್ದೊಂದು ಪುಟ್ಟ ಅಂಗಡಿಯಿಂದ ಏನನ್ನಾದರು ತರಿಸಿ ಕೊಡಲು ಜೇಬಿಗೆ ಕೈ ಹಾಕಿದೆ. ಥಟ್ಟನೆ ಭೈರಪ್ಪ ತಾತನ ರುಪಾಯಿ ನೆನಪಿಗೆ ಬಂದಿತು.
ಹಸಿವೆ ನೀಗಿಸಿತ್ತು
ಆ ರಟ್ಟನ್ನು ತರಿಸಿ ಅಂಟಿನಿಂದ ಬಿಡಿಸಿ ಬನ್ನೊಂದದನ್ನು ತರಿಸಿ ಆ ಹುಡುಗನಿಗೆ ತಿನ್ನೆಂದು ಕೊಟ್ಟೆ. ಆ ಹುಡುಗ ತಿಂದು, ನೀರು ಕುಡಿದು ಹಸಿವೆ ನೀಗಿಸಿಕೊಂಡು ಪಾಠ ಕೇಳಿದ. ಪಾಠ ಮುಗಿದ ಮೇಲೆ ಆ ಒಂದು ರುಪಾಯಿಯ ನೆನಪಾಯಿತು. ಅದನ್ನು ಸುಮಾರು ಒಂದು ನೂರು ಮಕ್ಕಳು ಕಲಿಕೆಗಾಗಿ ಬಳಸಿದ್ದರು. ಹುಡುಗನೊಬ್ಬನ ಹಸಿವೆಯನ್ನು ನೀಗಿಸಿತ್ತದು.
ಆ ರುಪಾಯಿಯ ಮೌಲ್ಯವೆಷ್ಟು?
ಇಷ್ಟೆಲ್ಲಕ್ಕೂ ಬೆಲೆ ಕಟ್ಟುವುದು ಸಾಧ್ಯವಾದರೆ ಆ ರುಪಾಯಿಯ ಬೆಲೆ, ಅದರಿಂದಾದ ಎಲ್ಲದರಷ್ಟು ಎಂದು ಅನ್ನಿಸಿತು. ಗಣಿತದಲ್ಲಿ ಪ್ರತಿಭೆ ಇರದ ನನ್ನಿಂದ ಅದರ ಮೌಲ್ಯ ಕಟ್ಟುವುದು ಸಾಧ್ಯವಿಲ್ಲದ್ದಾಗಿತ್ತು. ಗಣಿತ ಹೇಳಿಕೊಡುವ ಮೇಡಂನನ್ನು ಅದರ ಮೌಲ್ಯವೆಷ್ಟೆಂದು
ಕೇಳಿದೆ. ಆಕೆ ಅದರಿಂದ ಏನೇ ಆಗಿರಲಿ, ಗಣಿತದಂತೆ ಅದರ ಮೌಲ್ಯ ಒಂದು ಪೈಸೆಯೂ ಹೆಚ್ಚಾಗುವುದಿಲ್ಲ. ಅದರ ಮೌಲ್ಯ ಒಂದು ರುಪಾಯಿ ಮಾತ್ರ ಎಂದುಬಿಟ್ಟರು.
ಗೂಗಲ್ ಗೂ ಹೊಳೆಯದ ಉತ್ತರ
ಆ ಲೆಕ್ಕವೇನೊ ಸರಿಯೆ. ಆದರೆ ಅದರ ಉಪಯೋಗದ ಮೌಲ್ಯ? ಇಂದಿಗೂ ಅದು ಬಗೆಹರಿದಿಲ್ಲ. ಯಾರಾದರೂ ಅರ್ಥಶಾಸ್ತ್ರಜ್ಞರನ್ನು ಕೇಳಿದರೆ ಹೇಳಿಯಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಮೇಡಂ ಕೊಟ್ಟ ಉತ್ತರವೇ ಅವರದೂ ಅನ್ನಿಸಿತು. ಇದರ ಲೆಕ್ಕಾಚಾರದಲ್ಲಿ ಗಣಿತ, ಅರ್ಥಶಾಸ್ತ್ರಗಳು ಯಶಸ್ವಿಯಾಗಲಾರವು. ಏಕೆಂದರೆ ಆ ರುಪಾಯಿ ಬಹು ದೊಡ್ಡ ಮೊತ್ತ. ಭಾವಾತ್ಮಕವಾಗಿ ಎಷ್ಟೆಂದರೆ 'ಗೂಗಲ್' ಸಂಖ್ಯಾ ಕಲ್ಪನೆಗೂ ಮೀರಿದ್ದು ಅದರ ಮೌಲ್ಯ.