ಸ ರಘುನಾಥ ಅಂಕಣ; ತೋಟಗಳು ಬೀಡು ಬೀಳುತ್ತ, ಮಳೆಗಾಲದಲ್ಲೇ ಗೋಕುಂಟೆ ಬತ್ತಿತು...
ಬಿತ್ತನೆಯಾದ ಮೂರು ತಿಂಗಳಲ್ಲಿ ಎರಡು ಕೊಯ್ಲು ಕೊಟ್ಟ ಸೊಪ್ಪು ಒಳ್ಳೆಯ ಬೆಲೆಗೆ ಹೋಯಿತು. ಸ್ವಂತ ಗೊಬ್ಬರ, ನೀರಾದರೂ ಅದಕ್ಕೂ ಬೆಲೆ ಕಟ್ಟಿ ಪಾಲು ಎಂದ ನರಸಿಂಗರಾಯ. ಆ ಮಾತಿಗೆ ಪಿಲ್ಲಣ್ಣ ರೇಗಿ, ನಿಂದು ಸ್ನೇಹಾನೊ, ವ್ಯಾಪಾರಾನೊ? ಬೇಕಿದ್ರೆ ಕರೆಂಟು ಚಾರ್ಜು ತೆಗೀರಿ. ನಾನು ಅದುನೂ ಕೇಳೋನಲ್ಲ ಅಂದ. ಅವನು ಹೇಳಿದಂತೆ ಖರ್ಚೆಲ್ಲ ಹೋಗಿ ತಲೆಗೆ ಏಳು ಸಾವಿರದ ಎಂಟುನೂರ ಹದಿನಾರು ರೂಪಾಯಿ ಸಿಕ್ಕಿತು. ಆ ದಿನಕ್ಕೆ ಅವರಿಗೆ ಅದೇ ದೊಡ್ಡಭಾಗ್ಯ.
ಮೂರನೆಯ ಕೊಯ್ಲು ಬರುವುದಕ್ಕೆ ಗೊಬ್ಬರವೇನು ಬೇಕಿರಲಿಲ್ಲ. ನೀರೊಂದು ಸಾಕಿತ್ತು. ಆದರೆ ಅದೇ ಕಷ್ಟವಾಗಿದ್ದು. ಹೇಳಿಕೊಳ್ಳುವಂಥ ಬೆಳೆ ಬರಲಿಲ್ಲ. ಸಾಲದಕ್ಕೆ ಬೆಲೆಯೂ ಬಿದ್ದು ಹೋಯಿತು. ಕಡಪಕ್ಕೆ ಹಾಕಿದ್ದು ಟೆಂಪೋ ಬಾಡಿಗೆಗೆ ಸರಿಹೋಯಿತು. ಮಾಲೂರಿನಲ್ಲಿ ಮಾರಿ ಬಂದ ಮೂರು ಸಾವಿರವಷ್ಟೆ ಗಟ್ಟಿ. ಉಳಿದದ್ದನ್ನು ಬೇಕಾದವರು ಕಿತ್ತುಕೊಳ್ಳಲು ಬಿಟ್ಟು, ದನಗಳಿಗೆ ಹಾಕಿದರು.
ಸ ರಘುನಾಥ ಅಂಕಣ; ವ್ಯವಹಾರ ಕುದುರಿಸಿ ಸಾಕ್ಷಿಯಾದ ನರಸಿಂಗರಾಯ
ಒಣಗಿದ ಬೆಳೆಗಳು ಒಣಗುತ್ತ, ತೋಟಗಳು ಕೊಯ್ಲಾದ ಹೊಲದಂತೆ ಒಂದೊಂದಾಗಿ ಬೀಡುಬಿದ್ದವು. ಆಗೀಗ ಬೀಳುತ್ತಿದ್ದ ಹನಿಮಳೆಗೆ ರಾಗಿ ಪೈರು ಉಸಿರಾಡಿಕೊಂಡಿದ್ದವು. ಬದು, ಗುಡ್ಡಗಳಲ್ಲಿ ಚಿಗುರುತ್ತಿದ್ದ ಹುಲ್ಲನ್ನು ದನಗಳು ಬಾಯಾಡಿಸಿ ಬರುತ್ತಿದ್ದವು. ಮುನೆಂಕಟೇಗೌಡ ಮಾತಿಗೆ ಕುಂತಲ್ಲೆಲ್ಲ ಹೇಳುತ್ತಿದ್ದ. ಮಳೆ ಮನುಷ್ಯನನ್ನು ಮರೆತು ಆರೇಳು ವರ್ಷ ಆಯಿತು. ನೀನೇ ದಿಕ್ಕು ಅಂದುಕೊಂಡ ನಿಯತ್ತಿನ ದನಗಳಿಗೆ ಚಿಗುರು ಕಚ್ಚೋಷ್ಟು ಹನಿಗಳನ್ನು ಉದುರಿಸ್ತದೆ. ಅವನ ಮಾತೂ ನಿಜವೂ ಆಗಿತ್ತು.
ಸುನಂದಾ ಅಂಗಡಿಯಲ್ಲೆ ಕುಳಿತು ದಪ್ಪ ಪುಸ್ತಕವನ್ನು ಓದುತ್ತಿದ್ದಳು. ಗೆಳೆಯರೊಂದಿಗೆ ಬಂದ ನರಸಿಂಗರಾಯ, ನಾವು ಬಂದುದೂ ತಿಳೀದಷ್ಟು ಮೈ ಮರೆತು ಓದೋ ಪುಸ್ತಕ ಯಾವುದದು ಎಂದು ಕೇಳಿ, ಅವಳ ಓದಿಗೆ ಭಂಗ ತಂದ. ತೆಲುಗಿನ ಪೋತನ ಭಾಗವತ ಅಂದಳು. ಯಾವ ಪ್ರಸಂಗವೋ ಅಂದ ಪಿಲ್ಲಣ್ಣ. ಪೃಥು ಭೂದೇವಿಯನ್ನು ಅಟ್ಟಿ ಹೋದುದು ಎಂದಳು. ಅವನು ಯಾಕೆ ಅಟ್ಟಿಸಿಕೊಂಡು ಹೋಗಿದ್ದೆಂದು ಬೋಡೆಪ್ಪ ಕೇಳಿದ. ನರಸಿಂಗರಾಯನಲ್ಲಿಯೂ ಇದ್ದುದು ಅದೇ ಪ್ರಶ್ನೆ.
ಸ ರಘುನಾಥ ಅಂಕಣ; ಅಖಂಡ ಜ್ಯೋತಿಯೆತ್ತಿ ಊರದ್ಯಾವರ ಮಾಡಿ
ತನ್ನ ಮೇಲಿನ ಒತ್ತಡ ತಡೆಯಲಾಗದೆ ಭೂದೇವಿ ಹಸುವಿನ ವೇಷ ಧರಿಸಿ ಕಾಡಿಗೆ ಓಡಿ ಹೋಗುತ್ತಾಳೆ. ರಾಜ ಪೃಥು ತನ್ನ ಪ್ರಜೆಗಳ ಆಹಾರಕ್ಕಾಗಿ ಬಿಲ್ಲು ಬಾಣ ಹಿಡಿದು ಭೂದೇವಿಯನ್ನು ಅಟ್ಟಿಸಿಕೊಂಡು ಹೋಗುತ್ತಾನೆ. ಕಾಡಿನಲ್ಲಿ ಓಡಿ ಓಡಿ ಸುಸ್ತಾದ ಅವಳು ನಿಂತು ಬಿಡುತ್ತಾಳೆ. ಪೃಥು ಬಾಣ ಗುರಿಯಿಟ್ಟಾಗ ಭೂದೇವಿ, ನಾನು ಸ್ತ್ರೀ. ನನ್ನನ್ನು ಕೊಲ್ಲುವುದು ಪಾಪ ಅನ್ನುತ್ತಾಳೆ. ಪ್ರಜೆಗಳಿಗಾಗಿ ಕೊಂದರೆ ರಾಜನಿಗೆ ಸ್ತ್ರೀ ಹತ್ಯಾ ದೋಷವಿರದು ಅನ್ನುತ್ತಾನೆ. ನನ್ನನ್ನು ಕೊಂದು ಎಷ್ಟು ದಿನ ನಿನ್ನ ಪ್ರಜೆಗಳಿಗೆ ಹಾಕುತ್ತಿ ಅನ್ನುತ್ತಾಳೆ. ಆದಷ್ಟು ದಿನ ಅನ್ನುವುದು ಅವನ ಉತ್ತರ.
ಆಗ ಭೂದೇವಿ, ರಾಜಾ ಇದು ಶಾಶ್ವತ ಪರಿಹಾರ ಅಲ್ಲ. ನನ್ನ ಮೇಲೆ ನೀರು ಸಮಾನವಾಗಿ ಹಂಚಿಕೆಯಾಗುತ್ತಿಲ್ಲ. ಇದರಿಂದ ನನ್ನ ಮೇಲೆ ಒತ್ತಡ ಹೆಚ್ಚಿದೆ. ಅದನ್ನು ಕಳೆಯಲು ನೀರು ಸಮನಾಗಿ ನಿಲ್ಲುವಂತೆ ಮಾಡು ಎಂದು ಹೇಳುತ್ತಿರುವಾಗ ನೀವು ಬಂದಿರಿ ಎಂದು, ಓದುತ್ತಿದ್ದ ಪುಟದ ಗುರ್ತಿಗೆ ಸಿಗರೇಟು ಪ್ಯಾಕಿನ ಸುನ್ನೇರಿಯನ್ನಿಟ್ಟು ಮುಚ್ಚಿ, ಏನು ಸವಾರಿ ಇತ್ತ ಎಂದಳು. ನರಸಿಂಗರಾಯ ಮಾಡಲು ಕೆಲಸವಿಲ್ಲದೆ ಅಂದ. ಆಗ ನೀರಿನ ಕೊಡ ಹೊತ್ತು ಬಂದ ಮುನೆಕ್ಕ, ಒಂದು ಕೊಡ ನೀರು ಹುಟ್ಟಿಸಿಕೊಂಡು ಬರೋ ಹೊತ್ತಿಗೆ ಹೆಣಬಿದ್ದು ಹೋಗುತ್ತೆ. ಊರು ತುಂಬಾ ಗಂಡಸರೇ. ಕುಡಿಯೊ ನೀರಿಗಾದರು ಏನಾದರು ಮಾಡೋರಿಲ್ಲ ಎಂದು ಮೂದಲಿಸಿದಳು.