ಶಕುಂತಲೇ, ನಿನ್ನ ಕಾಗದದ ಪದಪದ ವಿರಹ ತಾಪವನ್ನು ಹೆಚ್ಚಿಸುತ್ತಿದೆ
ಬಂದುಬಿಡಲೇ ಶಕುಂತಲೆ
ನನ್ನೆದೆಯ ಒಲವಿನ ಹಾಡೇ, ಶಕುಂತಲೆ,
ನನ್ನೊಲವೇ, ನಲಿವೇ, ಚೆಲುವೆ ನಮ್ಮಿಬ್ಬರ ಪಾಡು, ಹಾಡು ಒಂದೇ ಆಗಿದೆ. ಸರಿಯಾಗಿ ಊಟ ಸೇರದು. 'ನಿನ್ನ ಹೆಂಡತಿಯೇನು ಅಲ್ಲಿಯೇ ಇದ್ದುಬಿಡುವುದಿಲ್ಲ. ಜಗತ್ತಿನಲ್ಲಿ ಇಂಥ ಗಂಡ ನೀನೊಬ್ಬನೇ ಅಲ್ಲ. ನೀನೆ ಮೊಲನೆಯವನಲ್ಲ. ಕೊಂಚ ತಾಳಪ್ಪ ದೊರೆ' ಅನ್ನುವಳು ಅಮ್ಮ. ಅವಳಿಗೇನು ಗೊತ್ತು ನನ್ನ ಕಷ್ಟ ಅನ್ನುವಂತಿಲ್ಲ. ಅನುಭವಿ ಜೀವಿ ಅಲ್ಲವೆ?
ಆಕಾಶದ ನಕ್ಷತ್ರಗಳನ್ನೆಲ್ಲಾ ಬಾಚಿ ಸೆರಗಿನಲ್ಲಿ ಕಟ್ಟಿಕೊಂಡಂತೆ!
ನಿನ್ನ ಕಾಗದ ತೋರಿಸಲೆ ಅವಳಿಗೆ ಅಂದುಕೊಂಡೆ. ಸುಮ್ಮನಾದೆ. ಆದರೆ ನಿನ್ನ ಸೊಸೆಯ ಅಪ್ಪ ಹೀಗೆ ಮಾಡಿದರಂತೆ ಅಂದೆ, ನಿನ್ನಲ್ಲಿಗೆ ಬರಲು ಅವಕಾಶ ಕೊಡುವಳೇನೋ ಎಂಬ ದೂರದ ಆಸೆ. ಬೇಡವೋ. ಅತ್ತೆ ಮನೆಯವರು ಸಲೀಸೆಂದುಕೊಂಡು ಬಿಡುತ್ತಾರೆ ಅಂದಳು. ಶಕುಂತಲೆಯ ಅಪ್ಪನಂತೆ ನಮ್ಮಪ್ಪನೂ ಮಾಡಿದ್ದನೆ ಎಂದೆ. ಥೂ, ಹೋಗೊ ಪೋಲಿಮುಂಡೇದೆ ಎಂದು ನಾಚಿಕೊಂಡಳು. 'ಏನಂತೆ ನಿನ್ನ ಮಗರಾಯನದು?' ಎಂದು ಕೇಳುತ್ತ ಬಂದರು ಅಪ್ಪ. ಅವನು ತಲೆಹರಟೆ. ಅವನ ಜೊತೆಗೆ ನೀವೂ ಒಬ್ಬರು ಎಂದಳು. ವಿಷಯ ಏನೆಂದು ಹೇಳದೆ ಹೀಗೆ ಮಾತಾಡಿದರೆ ಹೇಗೆ? ಏನಯ್ಯ ಅದು ಎಂದರು. ಹೇಳಲೋ ಬೇಡವೋ ಎಂದು ಹೇಳಿದೆ. ಓಹೋಹೋ ಎಂದು ನಕ್ಕು, ನಿಮ್ಮಮ್ಮನನ್ನೇ ಕೇಳಿಕೊ ಎಂದು ರೂಮಿಗೆ ಹೋದರು. ಮಾಡಿದ್ದು ಅವರು ನನ್ನ ಹೇಗೆ ಸಿಕ್ಕಿಸುತ್ತಾರೆ ನೋಡು ಎಂಬ ಮಾತಿನಲ್ಲೇ ಗುಟ್ಟು ರಟ್ಟು ಮಾಡಿದಳು.
ನಿನ್ನ ಕೆಂದುಟಿಯ ನೆನಪು ತಂದ ಗಿಳಿ ಕೊಕ್ಕಿಗೆ ಮೆತ್ತಿದ ಬೆಳ್ಳನೆ ಹಾಲು
ಶಕುಂತಲೇ, ಆಷಾಢ ಹೀಗೊಂದು ಕಳ್ಳ ಪರಂಪರೆಯನ್ನೇ ಸೃಷ್ಟಿಸಿದೆ ಅನ್ನಿಸಿತು.
ಶಕುಂತಲೇ, ನಿನ್ನ ಕಾಗದದ ಪದಪದ ವಿರಹ ತಾಪವನ್ನು ಹೆಚ್ಚಿಸುತ್ತಿದೆ. ಓದುವ ಪ್ರೇಮ ಕವನ, ಕೇಳುವ ಪ್ರಣಯಗೀತೆಗಳ ಭಾವಗಳು ನನ್ನ ಶಕುಂತಲೆಯದು, ನನ್ನದು ಅನಿಸುತಿದೆ. ಓಡಿ ಬಂದುಬಿಡಲೇ ನಿನ್ನ ಬಳಿಗೆ ಅನ್ನಿಸುತ್ತದೆ. 'ಕೂಡಿಡು ಒಲವ ಮಾಲೆ ಕಟ್ಟಿ, ನಿನ್ನ ಶಕುಂತಲೇ ಬರುವ ದಿನ ಸ್ವಾಗತಕ್ಕೆ' ಎಂದು ಮನಸ್ಸು ಹೇಳಿತು. ಅರೇ ಇದು ಕವಿಯು ಹೇಳಿದಂತಿದೆಯಲ್ಲ! ಯಾರು ಹೇಳಿದ್ದೆಂದು ನೆನಪಿಸಿಕೊಂಡೆ. ಇದು ನನ್ನದೇ ಎಂದು ತಿಳಿದಾಗ ಆಶ್ಚರ್ಯವಾಯಿತು. ನಾನು ಕವಿ ಅನ್ನಿಸಿತು. ಹೀಗೆ ಕವಿಯನ್ನು ಮಾಡಿದ್ದು ನೀನು. ನೀನು ನನ್ನೆದೆಯ ಮಧುರವಾಣಿ ಶಕುಂತಲೆ.
ಮುತ್ತು ಕಸಿಯಿತು ಆಷಾಢ
ಅಪ್ಪಿಕೊಂಡು ಮುತ್ತು ಕೊಡು
ಮುತ್ತಿಗೆ ಮುತ್ತು ಎಂದಿತು ಶ್ರಾವಣ.
ಹೀಗೆ ಹೇಳುತ್ತಿರುವುದು ನನ್ನ ಸ್ವಗತವೆ? ನಿನಗೆ ಹೇಳುತ್ತಿರುವುದೆ? ಉತ್ತರವಿಲ್ಲದ ಪ್ರಶ್ನೆ ಶಕುಂತಲೆ. ಇಷ್ಟೆಲ್ಲ ಏಕೆ ಬಂದುಬಿಡಲೆ?