ಅಕ್ಷಿನ್ ಸಾಬಿಮನೆಯ ಸಾರು, ಕೌಜುಗಳು ಹುಟ್ಟಿಸಿದ ಆತಂಕ
ಮಂಗಳವಾರದ ಗೌನಿಪಲ್ಲಿ ಸಂತೆಯಲ್ಲಿ ಮೊಲ, ಗಿನಿಪಿಗ್ಗು, ಗಿಳಿಗಳಿಗಾಗಿ ತರಕಾರಿ, ಕಾಯಿ, ಹಣ್ಣುಗಳಿಗಾಗಿ 'ಜೋಳಿಗೆ' ಹಿಡಿದು ತಿರುಗುತ್ತಿದ್ದಾಗ ಜೋಡಿ ಕೌಜುಗಳು ಕಣ್ಣಿಗೆ ಬಿದ್ದವು. ಬೆಲೆ ಕೇಳಿದಾಗ 'ಹಿಡಿಗಾರ' 120 ರುಪಾಯಿಗಳೆಂದ. ಚೌಕಾಸಿಯಲ್ಲಿ ಎಂಬತ್ತಕ್ಕೆ ವ್ಯಾಪಾರ ಕುದುರಿಸಿ ಕೊಂಡುಕೊಂಡೆ. ಶಾಲೆಗೆ ತಂದು ಪರೀಕ್ಷಿಸಿದಾಗ ಅವುಗಳ ಎದೆಯ ಭಾಗದಲ್ಲಿ ಗಾಯವಾಗಿತ್ತು.
ಒಂದರ ಎಡಗಾಲಿನ ಚರ್ಮ ಹರಿದಿತ್ತು. ಇನ್ನೊಂದರ ರೆಕ್ಕೆಯ ಅಡಿ ಗಾಯವಾಗಿತ್ತು. ಇವನ್ನು ಕೌಜುಗಳನ್ನು ಬಳಸಿ ಹಿಡಿದಿಲ್ಲವೆಂಬುದನ್ನು ಗಾಯಗಳು ಹೇಳುತ್ತಿದ್ದವು. ಡಾಕ್ಟರು ಕಲ್ಲಿನಿಂದಾದ ಪೆಟ್ಟು ಎಂದು ಹೇಳಿದ್ದರಿಂದ ಕ್ಯಾಟರಿಬಿಲ್ಲಿನಿಂದ ಹೊಡೆದು ಗಾಯಗೊಳಿಸಿ, ಹಿಡಿದಿರಬಹುದು. ಉಪಚಾರ ಮಾಡಿ, ಬೋನಿನಲ್ಲಿ ಇಟ್ಟೆವು.
ನಮ್ಮೂರಿನಲ್ಲಿನ ನಕ್ಷತ್ರದಾಮೆ ಮತ್ತು ಹುಡುಗರ ಪಾಲಿನ ಮೊಸರನ್ನ
ಐದಾರು ದಿನಗಳು ಕಳೆದವು. ಕಾಲಿನ ಊತ ತಗ್ಗಿತ್ತು. ಗಾಯವಿನ್ನೂ ಹಸಿಯಾಗಿಯೇ ಇತ್ತು. ನೋವು ಕಡಿಮೆಯಾಗಿದ್ದೀತು. ಪಂಜರದಲ್ಲೇ ತಮ್ಮ ಚಲನವಲನಗಳನ್ನು ಅವು ಚುರುಕುಗೊಳಿದಿದ್ದವು. ಮೇವನ್ನೂ ತಿನ್ನುತ್ತಿದ್ದವು. ನಾಲ್ಕೈದು ದಿನಗಳು ಯಾವ ಸಮಸ್ಯೆಯೂ ಇರಲಿಲ್ಲ. ಆಮೇಲೆ ಅವು ಒಡ್ಡಿದ ಸಮಸ್ಯೆ ದಿಕ್ಕುಗೆಡಿಸಿತು.
ಅಂದು ಬೆಳಗ್ಗೆ ಪಂಜರವನ್ನು ಶುಚಿಗೊಳಿಸಲು ಹೋದ ಮಕ್ಕಳು 'ಸಾ, ಸಾ' ಎಂದು ಓಡಿ ಬಂದರು. ಏನೆಂದು ಕೇಳಿದೆ. 'ನೋಡ್ಬನ್ನಿ ಸಾ ಏನಾಗಿದೆ ಅಂತ' ಏದುಸಿರು ಬಿಡುತ್ತ ಕರೆದರು. ಏನೋ ಅನಾಹುತವಾಗಿದೆ ಅನ್ನಿಸಿತು. ದಿಗುಲು ಎದೆ ಸೇರಿತು. ಹಿಂದಿನೊಂದು ದುರ್ಘಟನೆ ನೆನಪಾಗಿ ಮೈ ನಡುಗಿತು.
ದುರುಳರಾರೋ ದಾಳಿ ನಡೆಸಿ ತೋಟವನ್ನು ಹಾಳು ಮಾಡಿದ್ದಲ್ಲದೆ, ಕೆಲವು ಪ್ರಾಣಿಗಳ ಸಾವಿಗೂ ಕಾರಣರಾಗಿದ್ದರು. ಅದೇನಾದರೂ ಮರುಕಳಿಸಿದ್ದೀತೆ ಎಂದು ಭಯವಾಯಿತು. ಹೋಗಿ ನೋಡಿದೆ. ಅಂತಹ ಅನಾಹುತವೇನೂ ನಡೆದಿರಲಿಲ್ಲ. ಉಸಿರಾಟವನ್ನು ಸಮಸ್ಥಿತಿಗೆ ತಂದುಕೊಂಡು ನೋಡಿದೆ. ಆತಂಕ ಹುಟ್ಟಿಕೊಂಡಿತು.
ಗೌನಿಪಲ್ಲಿ ಶಾಲೆಗೆ ಬಂದ ಲಜ್ಜಾ ಸುಂದರಿ ಕಾಡುಪಾಪ ವೃತ್ತಾಂತ
ಎರಡೂ ಕೌಜುಗಳ ನೆತ್ತಿ ರಕ್ತಸಿಕ್ತವಾಗಿತ್ತು. ಯಾರು ಏನು ಮಾಡಿದಿರೋ ಎಂದು ಕೇಳಿದೆ. ಅವರೆಲ್ಲರೂ 'ನಮ್ಮಮ್ನಾಣೆ ನಾವೇನೂ ಮಾಡಿಲ್ಲ ಸಾ' ಎಂದು ಒಬ್ಬರಾಗಿ ಆಣೆ ಮಾಡಿದರು. ಆದರೆ ಕಾರಣವೆಂಬುದು ಇರಲೇಬೇಕಲ್ಲ. ಅದೇ ಸಿಗುತ್ತಿಲ್ಲ. ಏನಾಯ್ತೆಂದು ಆಮೇಲೆ ನೋಡುವ. ಈಗ ಗಾಯಕ್ಕೆ ಔಷಧಿ ಹಚ್ಚಿ ಎಂದು ತಿಳಿಸಿ, ಇನ್ನು ಯಾವು ಯಾವಕ್ಕೆ ಏನೇನಾಗಿದೆಯೊ ಎಂದು ನೋಡಲು 'ರೌಂಡು' ಹೊರಟೆ.
ಎಲ್ಲವೂ ಸುಸ್ಥಿತಿಯಲ್ಲಿದ್ದವು. ನಿಟ್ಟುಸಿರು ಹೊರಬರುತ್ತಿರುವಾಗಲೆ, 'ಸಾ ಬೇಗ ಬಾ' ಎಂದು ಕೂಗುತ್ತ ಹುಡುಗನೊಬ್ಬ ಓಡೋಡಿ ಬಂದ. ಅವನ ಹಿಂದೆ ಹೊರಟೆ. ಕೌಜುಗಳು ಹಾರಿ ಹಾರಿ ಪಂಜರದ ಕಂಬಿಗೆ ತಲೆ ಚಚ್ಚಿಕೊಳ್ಳುತ್ತಿದ್ದವು. ಏಕೆಂದು ಅರ್ಥವಾಗದೆ ಆತಂಕಗೊಂಡೆ. ಡಾಕ್ಟರಲ್ಲಿಗೆ ಹೋಗಿ ಪರಿಸ್ಥಿಯನ್ನು ವಿವರಿಸಿದೆ. ಗಾಬರಿಗೊಂಡಿವೆ ಅನ್ನಿಸುತ್ತೆ. ಮೇವು ಹಾಕಿ, ಜನ ಓಡಾಡದ ಜಾಗದಲ್ಲಿಡಿ ಎಂದು ಸಲಹೆ ನೀಡಿದರು.
ಮೊಲಗಳಿದ್ದ ರೂಮನ್ನು ಖಾಲಿ ಮಾಡಿಸಿ, ಅಲ್ಲಿಟ್ಟು ಬಂದೆ. ಒಂದರ್ಧ ಗಂಟೆಯ ನಂತರ ಸದ್ದು ಮಾಡದೆ ಹೋಗಿ ಕಿಟಕಿಯಿಂದ ಇಣುಕಿ ನೋಡಿದೆ. ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಕಂಡು ಬರಲಿಲ್ಲ. ಚಿಂತೆಗಿಟ್ಟುಕೊಂಡಿತು.
ಅವುಗಳ ವರ್ತನೆಯಿಂದ ಅನಾಹುತ ಗ್ಯಾರಂಟಿ ಅನ್ನಿಸಿತು. ಏನು ಮಾಡಲೂ ತೋಚದೆ ಇದ್ದಾಗ 'ನಮ್ಮ ಮಕ್ಕಳು' ನಲ್ಲಿ ಓದುತ್ತಿದ್ದ ಅಕ್ಷಿನ್ ಸಾಬಿ ಎಂಬುವವನ ಅಮ್ಮ, ಅಪ್ಪ ಬಂದರು. ನನ್ನ ಆತಂಕ ಕಂಡು 'ಕ್ಯಾ ಹೋಗ ಸಾಮಿ?' ಎಂದು ಹೆಂಗಸು ಕೇಳಿದಳು. ಅಲೆಮಾರಿಗಳಾಗಿದ್ದ ಅವರು ಹಕ್ಕಿಗಳೊಂದಿಗೆ ಪಳಗಿದ್ದವರು. ಕೌಜುಗಳನ್ನು ಹಿಡಿಯುವುದರಲ್ಲಿ ನಿಸ್ಸೀಮರಾಗಿದ್ದರು.
ಅವರಿಗೆ ತೋರಿಸಿದೆ. ಅವರು ತಣ್ಣಗೆ 'ಹಾರಿ ಹೋಗಲು ಯತ್ನಿಸುತ್ತಿವೆ. ಭಯ ಬೇಡ' ಎಂದರು. 'ಡರ್ದೆ'(ಭಯಪಡದೆ) ಇನ್ನೇನು ಮಾಡಲಿ?' ಎಂದು ಕೇಳಿದೆ. ಅವರು 'ನಮಗೆ ಕೊಟ್ಟುಬಿಡು' ಎಂದರು. ಆಗೊಲ್ಲ ಎಂದೆ. ಅದಕ್ಕವರು, ಗಾಯ ವಾಸಿಯಾಗೊವರೆಗೆ ದೊಡ್ಡ ಮಕ್ಕರಿಯಡಿ ಬಿಡಿ ಎಂದು ಸೂಚಿಸಿದರು. ಸೂಕ್ತವಾದ ಸಲಹೆಗೆ ಮನಸ್ಸು ಹಗುರವಾಯಿತು. ಒಂದು ದೊಡ್ಡ, ಎತ್ತರದ ಬಿದಿರಿನ ಬುಟ್ಟಿ ಸಿಕ್ಕಿತು. ಬೆಲೆ ಒಂದು ನೂರು ರುಪಾಯಿಗಳು!
ಬಿಳಿ ಇಲಿಯನ್ನು ಸಾಕಿದ ಸಂತಸ ಹಾಗೂ ಸಂಕಟಗಳು
ನೆಗೆದರೂ ಗಾಯವಾಗದಂದಂತೆ ಬುಟ್ಟಿಯಲ್ಲಿ ನೆಲ್ಲುಹುಲ್ಲನ್ನು ಹರಡಿ ದಬ್ಬಣದಿಂದ ಹೊಲೆದು ಅದರಡಿ ಬಿಟ್ಟು, ಕಲ್ಲಿನ ಭಾರ ಹೇರಿದೆ. ಹತ್ತು ದಿನಗಳು ಕಳೆದವು. ನೆತ್ತಿಯ ಗಾಯ ಒಣಗಿಟ್ಟಿತ್ತು. ಅಕ್ಷಿನ್ ಸಾಬಿಯ ತಾಯಿಯನ್ನು ಕರೆಸಿ, ತೋರಿಸಿದೆ. ಇನ್ನು ಕಾಡಿಗೆ ಬಿಡಬಹುದೆ ಎಂದು ಕೇಳಿದೆ. ಆಕೆ 'ಛೋಡೋ' ಅಂದಳು.
ಆ ಕೆಲಸವನ್ನು ಆಕೆಗೇ ವಹಿಸಿ, ಏನಾದರೂ ಎಡವಟ್ಟು ಮಾಡಿದರೆ ನಿನ್ನ ಮಗನ ಓದಿಗೆ ಸಹಾಯ ಮಾಡುವುದಿಲ್ಲವೆಂದು ಬೆದರಿಸಿದೆ. ಆಕೆ 'ಖುದಾ ಕೀ ಕಸಂ' ಮಾಡಿದಳು. ಮಾರನೇ ದಿನ ಬಂದು ವರದಿ ಕೊಡಲು ಇಪ್ಪತ್ತೈದು ರೂಪಾಯಿ ಬಸ್ ಚಾರ್ಜು ಕೊಟ್ಟೆ. ಮರು ದಿನ ಬಂದು ಕೊಂಡಾಮರಿಯ ಗುಡ್ಡದಲ್ಲಿ ಬಿಟ್ಟುದಾಗಿ ಹೇಳಿದಳು. ಆದರೂ ಅನುಮಾನವಿತ್ತು.
ನಾಲ್ಕೈದು ದಿನಗಳ ನಂತರ ಅಕ್ಷಿನ್ ಸಾಬಿಯನ್ನು ಕರೆದು, 'ಈ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಏನೇನು ಸಾರು ಮಾಡಿದ್ದರು' ಎಂದು ಕೇಳಿದೆ. ಹೇಳಿದ್ದರಲ್ಲಿ ಮಾಂಸದ ಸಾರಿನ ವಾಸನೆ ಇರಲಿಲ್ಲ. ಆದರೂ ಸಮಾಧಾನವಾಗದೆ ಮತ್ತೆರಡು ದಿನ ಬಿಟ್ಟು ಕೇಳಿದೆ. ಅದೇ ಉತ್ತರ ಬಂದಿತು. ಸಮಾಧಾನವಾಯಿತು.