ಶೃಂಗಾರ ಭಾವದ ಮಾಲೆ ಕಟ್ಟಿದ ಮಲ್ಲಿಗೆ, ಹಿತ ಚೆಲ್ಲುವ ಬೆಳದಿಂಗಳು
'ಹುವ್ವು ಬೇಕೆ ಎಂದು ಮನೆಬಾಗಿಲಿಗೆ ಬಂದು' ಕೇಳಿದಾಗ ನಾಕಾರು ಹೂಗಳ ಒಂದಾದ ಪರಿಮಳಗಳ 'ಗಮಲ'ನ್ನು ಕಡೆಗಣಿಸಿ ಬೇಡ ಎನ್ನುವ ಮಾತು ನಾಲಗೆ ತುದಿಯಲ್ಲಿದ್ದರೂ ಮನಸ್ಸಿನಲ್ಲಿನ ಭಾವ ಬೇಕು ಅನ್ನುತ್ತಿರುತ್ತದೆ. ಹುವ್ವಿನವರು ಮೊದಲನೇ ಮೊಳದಿಂದ ಎರಡನೇ ಮೊಳಕ್ಕೆ ಹೋಗುವಾಗ ಅಳತೆಯನ್ನು ಕುಗ್ಗಿಸಿಯೆ ಕೊಡುವುದು. ಇದನ್ನು ಕಂಡರೂ ಎರಡನೇ ಬಾರಿಗೆ ತಕರಾರಿಗಿಳಿಯುವವರು ವಿರಳ.
ಅನೇಕ ವೇಳೆ ಮಲ್ಲಿಗೆ ವಿಷಯದಲ್ಲಿ ಮೊಳ ಕುಗ್ಗಿಸಿದರೂ ಅದರ ಪರಿಮಳದ ಆಕರ್ಷಣೆ ಆ ಕುಗ್ಗುವುದರತ್ತ ಗಮನ ಹೋಗದಂತೆ ಮಾಡುತ್ತದೆ. ಹಾಗೊಂದು ವೇಳೆ ತಕರಾರು ಮಾಡುವುದು ದೇವರಿಗಾಗಿ ಕೊಳ್ಳುವವರು ಮತ್ತು ನಡುವಯಸ್ಸಿನ ಗೃಹಿಣಿಯರು. ಇವರಂತವರಾದ ಗಂಡಸರು.
ಎರೆಯೆಣ್ಣೆ ತೆರೆಯಾಗಿ ಬತ್ತಿ ನಂದನವಾಗಿ...
ಹುವ್ವಿನ ಚೌಕಾಸಿಯೇನಿದ್ದರು ಹೆಂಗಸರಲ್ಲೆ ಹೆಚ್ಚು. ಗಂಡಸರ ಚೌಕಾಸಿ 'ಅಟಕ್ಕುಂಟು, ಲೆಕ್ಕಕ್ಕಿಲ್ಲ' ಎಂಬುವಂತಹುದು. ಹಾಗಾಗಿ ಹುವ್ವಾಡಿಗರು ಗಂಡಸರ ಚೌಕಾಸಿಯನ್ನು ಸಮಾಧಾನದಿಂದಲೆ ಸ್ವೀಕರಿಸುತ್ತಾ ಕೊಟ್ಟ ಹಾಗೂ ಇರಬೇಕು, ಕೊಟ್ಟಿದ್ದರಿಂದ ನಷ್ಟವಿರಬಾಗದು ಎಂಬ ಮಾರ್ಗವನ್ನು ಹಿಡಿಯುತ್ತಾರೆ.
ನಾಚಿಕೆಯಿಂದ ತಲೆ ತಗ್ಗಿಸುತ್ತಿದೆ ಜಾನಪದ
ಚಿಲ್ಲರೆ ಇಲ್ಲ. ಅದಕ್ಕೆ ಬದಲಿಗೆ ಹುವ್ವನ್ನೆ ತಗೊಳ್ಳಿ ಎನ್ನುತ್ತ ಒಪ್ಪಿಗೆಗೂ ಕಾಯದೆ ಮೊಳ ಹಾಕಿ, ತುಂಡು ಮಾಡಿ ಕೊಟ್ಟುಬಿಡುತ್ತಾರೆ. ಈಗ ಹಾಕುವ ಅಳತೆಯಲ್ಲಿ ಹಿಂದಿನ ಸೋಡಿಯ ನಷ್ಟವನ್ನು ಕೈ ಚಳಕದಲ್ಲಿ ತುಂಬಿಕೊಂಡುಬಿಡುತ್ತಾರೆ. ಮನೆಯಲ್ಲಿ ಹೆಂಡತಿ ಮೊಳ ಹಾಕಿ ರೇಗಿದಾಗಲೇ ಅದು ತಿಳಿಯುವುದು. ಮುಂದಿನ ಸಲ ಎಚ್ಚರಿಕೆಯಿಂದ ವ್ಯವಹರಿಸಬೇಕು ಅಂದುಕೊಂಡರೂ ಹಳ್ಳಕ್ಕೆ ಬೀಳದೆ ಇರುವುದಿಲ್ಲ. ಒಂದು ವೇಳೆ ಅವರನ್ನು ಬಿಟ್ಟು ಬೇರೊಬ್ಬರಲ್ಲಿ ಕೊಂಡರೂ ಅಂತಿಮ ಅಲ್ಲಿಯೂ ಇದೇ.
ಹೂವಷ್ಟೇ ಮುಕ್ಯ, ಅಳತೆಯಲ್ಲ
ಪ್ರೇಯಸಿಗಾಗಿ ಹುವ್ವು ಕೊಳ್ಳುವವರು, ನವ ವಿವಾಹಿತರು ಹೂ ಕೊಳ್ಳುವಾಗ ಇತ್ತ ಗಮನವನ್ನೇ ಕೊಡುವುದಿಲ್ಲ. ಅವರಿಗೆ ಹೂವಷ್ಟೆ ಮುಖ್ಯ. ಅಳತೆಯಲ್ಲ. ಇದನ್ನು ಹುವ್ವಾಡಿಗರು ಚೆನ್ನಾಗಿ ಬಲ್ಲರು. ಗೃಹಿಣಿಯರಿಂದ ಮಾಡಿಕೊಂಡ ನಷ್ಟವನ್ನು ಇಲ್ಲಿ ತುಂಬಿಕೊಳ್ಳುವ ಜಾಣ್ಮೆಯೂ ಇವರಿಗುಂಟು.
ಮಲ್ಲಿಗೆಯೊಂದಿಗೆ ಬೆಳದಿಂಗಳ ನೆನಪು
ಮಲ್ಲಿಗೆಯೊಂದಿಗೆ ನೆನಪಿಗೆ ಬರುವುದು ಬೆಳದಿಂಗಳು. ಋತುವಿದ್ದರೆ ಮಾವು. ಬೆಳದಿಂಗಳಿಗಾಗಿ ಅದನ್ನು ಕೊಡುವ ಚಂದಮಾಮನೊಂದಿಗೆ ಯಾರದೂ ಯಾವುದೇ ತಕರಾರಿರದು. ಏಕೆಂದರೆ ಚಂದ್ರ ಬೆಳದಿಂಗಳ ಬಿಕರಿದಾರನಲ್ಲ. ಅವನದೇನಿದ್ದರೂ ಮುಫತ್ತು. ಎಷ್ಟೇ ಆಗಲಿ ಉಚಿತ.
ಅವನದು ಲೋಕಸೇವೆ. ಆದುದರಿಂದ ಯಾವ ಶುಲ್ಕವೂ ಇಲ್ಲ. ಅವನದು ಸಮ್ಯಕ್ಕ್ ಪ್ರೀತಿ. ಆದುದರಿಂಲೆ ಬೆಳದಿಂಗಳು ಅವನ ಕೊಡುಗೆ. ಶುಕ್ಲಪಕ್ಷದ ದಿನಗಳಲ್ಲಿ ಮೋಡಗಳಿರಬಾರದಷ್ಟೆ. ಇದಕ್ಕೆ ಚಂದ್ರ ಯಾವ ರೀತಿಯಲ್ಲೂ ಹೊಣೆಗಾರನಲ್ಲ. ಇದು ಬೆಳದಿಂಗಳ ಪ್ರಿಯರಿಗೆಲ್ಲ ಗೊತ್ತು.
ನೀ ದೊರೆತ ಮೇಲೆ ಬೆಳದಿಂಗಳೇಕೆ
ಮಲ್ಲಿಗಮ್ಮ ಹಾಗೂ ಬೆಳದಿಂಗಳಮ್ಮ 'ಮಧುರಭಾವ ಸೃಜಕ'ರು. ಇಂದ್ರಿಯ ಪರಿಮಳದ ಮಲ್ಲಿಗೆ, ಭಾವ ಪರಿಮಳದ ಬೆಳದಿಂಗಳು ಕೂಡಿ ಮನಸ್ಸಿಗೆ ಈಯುವ ಪರಿಮಳವನ್ನು ಭಾವಜೀವಿ ಆರಾಧಿಸಿ ಕೊಡುವ ಹೆಸರು 'ಪ್ರೀತಿ.' ಕವಿಯಾದವರು, ಕವಿಯ ಮನಸ್ಸುಳ್ಳವರು 'ನೀ ದೊರೆತ ಮೇಲೆ ಬೆಳದಿಂಗಳೇಕೆ' ಎಂದು ಹಾಡಿ ಅದನ್ನು ನೋಯಿಸುತ್ತಾರೆ.
ಆದರೆ ಬೆಳದಿಂಗಳು ಈ ನೋವನ್ನು ಉಳಿಸಿಕೊಳ್ಳುವುದಿಲ್ಲ. ಅವರ ಪ್ರೀತಿಯ ನೆನಪುಗಳ ಪ್ರಚೋದಕ 'ಪ್ರೀತಿವ್ರತಿ'ಯಾಗಿ ತನ್ನನ್ನು ಅರ್ಪಿಸಿಕೊಳ್ಳುತ್ತಿರುತ್ತದೆ. ಇದು ಅದರ ನಿರಂತರವಾದ ಪ್ರೇಮ ವಾಹಿನಿ. ಅದರಿಂದಾಗಿಯೆ ಹೆಣ್ಣು- ಗಂಡುಗಳಿಗೆ ಬೆಳದಿಂಗಳೆಂದರೆ ಬತ್ತದ ಮುದ, ಹಿಂಗದ ಆಕರ್ಷಣೆ, ಬೇಕೆಂಬ ಹಂಬಲ.
ಅವಳ ಸ್ಮೃತಿಯಲ್ಲಿ ಮೈ ಮರೆವು
ಈ ಗುಣಗಳಲ್ಲಿ ಮಲ್ಲಿಗೆ ಬೆಳದಿಂಗಳ ಅವಳಿ. ಮುಡಿದು, ಹಾಸಿ ನಲುಗಿಸಿದರೂ ತನ್ನ ಪರಿಮಳವನ್ನು ಅವರ ಇಂದ್ರಿಯ ಮನಸ್ಸುಗಳಿಗೆ ಈಯುತ್ತಲೇ ಇರುತ್ತದೆ.
ಮಲ್ಲಿಗೆ ಮುಡಿದು, ತುಂಬು ಬೆಳದಿಂಗಳಿನಲ್ಲಿ ಪ್ರಿಯತಮನ ಪತ್ರ ಓದುವುದು ಇಲ್ಲವೆ ನೆನೆಯುವುದು ಎಂಥ ಹಾಯಿ ! ಮಲ್ಲಿಗೆ ಪರಿಮಳವನ್ನು ಎದೆ ತುಂಬ ತುಬಿಕೊಂಡು ಬೆಳದಿಂಗಳಲ್ಲಿ ಪ್ರೇಯಸಿಯ ಓಲೆ ಓದುವುದು ಇಲ್ಲವೆ ಅವಳ ಸ್ಮೃತಿಯಲ್ಲಿ ಮೈ ಮರೆಯುವುದೆಂತಹ ಹಿತದ ಯಾತನೆ !
ಮಧುರ ಗೀತೆಗಳ ಮೆಲುಕು
ಕೈಯಲ್ಲಿ ಪ್ರೇಮ ಪತ್ರ ಇರಲೇ ಬೇಕೆಂದೇನಿಲ್ಲ. ನೆನಪಷ್ಟೆ ಸಾಕು. ಕವಿಗಳ ಕವಿತೆಗಳ ಸಾಲುಗಳು ಮನಸ್ಸಿನಲ್ಲಿ ಮೆರವಣಿಗೆ ಬರುತ್ತವೆ. ಅವುಗಳೊಂದಿಗೆ ಸಿನೆಮಾ ಪ್ರಿಯರಾಗಿದ್ದರೆ ಕವಿ- ಕಾವ್ಯ ಸಮತುಲ್ಯವಾದ ಚಿತ್ರಗೀತೆಗಳು ಎದೆಗೆ ಬರುತ್ತವೆ. ಅಂತಹ ಕೆಲವು ಮಧುರ ಗೀತೆಗಳನ್ನು ನೆನೆಯಬಹುದು.
ಮಲ್ಲಿಗೆ ಹಾಗೂ ಬೆಳದಿಂಗಳು ನವನವೀನ
ಮಲ್ಲಿಗೆ, ಬೆಳುದಿಂಗಳನ್ನು ಪ್ರೀತಿಸುವೆಲ್ಲ ಹೃದಯಗಳು ಕವಿಯಾಗದಿದ್ದರೂ ಇವು ಹುಟ್ಟಿಸುವ ಭಾವನೆಗಳನ್ನು ಕವಿಯಂತೆ ಅನುಭವಿಸಬಲ್ಲವು. ಇದನ್ನೇ ಕವಿಹೃದಯ ಅನ್ನುವುದು. ಪ್ರೇಮಿಗಳು ಒಬ್ಬರನ್ನೊಬ್ಬರು ಕವಿಯಂತಾಗಿಸಬಲ್ಲರು. ಮಲ್ಲಿಗೆ ಮತ್ತು ಬೆಳುದಿಂಗಳು ಇಂಥ ಭಾವನೆಗಳನ್ನು ತರುವ ವಾಹಕಗಳು. ಯುಗ ಯುಗಗಳು ಕಳೆದರೂ ಮಲ್ಲಿಗೆ ಹಾಗೂ ಬೆಳದಿಂಗಳು ನವನವೀನ.