ಸರಕಾರಿ ಯೋಜನೆಯನ್ನೇ ಬಂಡವಾಳ ಮಾಡಿಕೊಂಡ ಈತ ಈಗ 'ಲಕ್ಷಾಧಿಪತಿ'
ಕಳೆದ ಕೆಲವು ದಿನಗಳಿಂದ ಮನಸಿನಲ್ಲಿ ಎಂಥದೋ ತಳಮಳ. ಹಾಗೆ ಆದಾಗ ಸ್ಕೂಟರ್ ಹತ್ತಿ ಹತ್ತಾರು ಕಿ.ಮೀ. ಸುತ್ತಾಡಿ, ಮರ-ಗಿಡ, ಪಕ್ಷಿಗಳ ಜತೆ ಮಾತನಾಡಿ, ಹೃದಯ ಹಗುರಾಗಿಸಿಕೊಳ್ತೀನಿ. ಆದರೆ ಈ ಬಾರಿ ಅಷ್ಟಕ್ಕೇ ಸರಿಯಾಗಲಿಲ್ಲ. 'ಹಸಿರು ಹೊನ್ನೂರು' ಎಂಬ ದೊಡ್ಡ ಸಂಸಾರಿಯ ಪಟ್ಟ ಕಟ್ಟಿಸಿಕೊಂಡ ನನಗೆ, ಅಲ್ಲಿನ ಜವಾಬ್ದಾರಿಗಳ ಬಗ್ಗೆಯೂ ಚಿಂತೆ ಇರುತ್ತದೆ.
ಕೆಲವರ ಗಮಕ್ಕೆ ಮಾತ್ರ ಸಿಕ್ಕಿರುವ ಹಸಿರುಹೊನ್ನೂರಿನ ಬಗ್ಗೆ ಹೇಳುಬೇಕು. ತಮಿಳುನಾಡಿನ ತಿರುವಣ್ಣಾಮಲೈ ಆಚೆಯಂಚಿನ ಕಡೆಯಿಂದ ಬಂದ ಅಲೆಮಾರಿ ಕುಟುಂಬಗಳ ಕರುಣಾಜನಕ ಕಣ್ಣೀರ ಕಥೆಯನ್ನು ನನಗೆ ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲೂಕಿನ ಬೋರೆಡ್ಡಿಪಲ್ಲಿ, ಬಾಲೆವಾರಿಪಲ್ಲಿಯ ಕೆಲ ರೈತ ಮಿತ್ರರು ತಿಳಿಸಿದರು.
ಎರಡು ರಾಜ್ಯದ ಮಕ್ಕಳು ಬರುವ ಒಂದು ಕನ್ನಡ ಶಾಲೆಯ ಕಥೆ
ಆ ಕುಟುಂಬಗಳಲ್ಲಿ ಆರು ತಿಂಗಳ ಕೈಗೂಸಿನಿಂದ ಎಂಬತ್ತು ವರ್ಷದ ಅಜ್ಜಿ ತನಕ ಯಾರ ಹತ್ತಿರವೂ ಇವರು ಭಾರತೀಯರು ಅನ್ನೋದಿಕ್ಕೆ ಒಂದು ದಾಖಲೆ ಸಹ ಇರಲಿಲ್ಲ. ಇವರಿಗೊಂದು ನೆಲೆ ಆಗಲಿ ಅನ್ನೋ ಕಾರಣಕ್ಕೆ ರೂಪಿಸಿದ್ದೇ ಹಸಿರುಹೊನ್ನೂರು. ಅಲ್ಲಿ ಅವರಿಗಾಗಿಯೇ ಕೆಲ ಮನೆಗಳನ್ನು ನಿರ್ಮಿಸಿದ್ದೀವಿ. ಈಗ ಎಲ್ಲರೂ ಅಲ್ಲೇ ವಾಸಿಸುತ್ತಿದ್ದಾರೆ.
ಒಂದು ಸಲಕ್ಕಾದರೂ ಅವರ ಜತೆಗೆ ನೀವು ಬೆರೆಯಬೇಕು
ಒಂದು ಸಲಕ್ಕಾದರೂ ನೀವು ಅವರನ್ನು ನೋಡಬೇಕು, ಅವರೆಲ್ಲರ ಜತೆ ಬೆರೆಯಬೇಕು. ಏಕೆಂದರೆ ಬದುಕು ಕಟ್ಟಿಕೊಳ್ಳಲಾಗದವರು ಹೇಗೆ ಕಣ್ಣೀರ ಕಥೆಯಾಗುವುದೆಂದು ತಿಳಿಯುತ್ತದೆ. ಅಂದಹಾಗೆ ಇವರಾರಿಗೂ ಕನ್ನಡ ಬರಲ್ಲ. ತಮಿಳುನಾಡಿನಿಂದ ಬಂದವರು ಅಂದ ಮಾತ್ರಕ್ಕೆ ಪೂರ್ತಿ ತಮಿಳು ಕೂಡ ಬರದು. ಇವರದು ತಮಿಳುಮಿಶ್ರಿತ ತೆಲುಗು ಭಾಷೆ. ಈಗ ಈ ಕುಟುಂಬಗಳ ಮಕ್ಕಳ ಸಲುವಾಗಿ ಒಂದು ಪುಟಾಣಿ ಶಾಲೆಯನ್ನು 'ಕಲಿಕೆಯ ಮಡಿಲು' ಹೆಸರಿನಿಂದ ನಡೆಸುತ್ತಾ ಇದ್ದೀವಿ. ಅಲ್ಲೊಬ್ಬರು ಶಿಕ್ಷಕಿಯೂ ಇದ್ದಾರೆ. ಆದರೂ ಅವರ ಸಲುವಾಗಿ ನನ್ನ ಮನೆಗೆ 50 ಕಿ.ಮೀ. ದೂರದಲ್ಲಿರುವ ಹಸಿರು ಹೊನ್ನೂರಿಗೆ ನಿತ್ಯವೂ ಹೋಗಿಬರ್ತೇನೆ.
ಇವರನ್ನು ದುಡಿಮೆ ಹಾದಿಗೆ ಹಚ್ಚಬೇಕು
ಅ ಮಕ್ಕಳು ಕಲಿಯುತ್ತಿವೆ. ಆದರೆ ದೊಡ್ಡವರಿಗೆ ದುಡಿಮೆಯ ಹಾದಿಗೆ ಹಚ್ಚಬೇಕು. ಏನು ಮಾಡೋದು? ಇವರಿಗೆ ಕೃಷಿ ಕೂಡ ಸರಿಯಾಗಿ ಬಾರದು. ಈಗಾಗಲೇ ಕೈ ಬರಿದು ಮಾಡಿಕೊಂಡಿರುವ ನನಗೆ ಹಸು-ಕುರಿ ಖರೀದಿಸಿ, ಇವರಿಗಾಗಿ ದುಡಿಮೆ ದಾರಿ ತೋರಿಸುವ ಶಕ್ತಿ ಇಲ್ಲ. ಸರಕಾರದ ಕಡೆಗೆ-ದಾನಿಗಳ ಕಡೆಗೆ ನೋಡುವುದಕ್ಕೆ ಕಣ್ಣಾರೆ ಕಂಡ ಅನುಭವಗಳು ಹಂಗಿಸಿದಂತೆ ಭಾಸವಾಗುತ್ತವೆ. ಹಾಗಂತ ಸರಕಾರಗಳು-ದಾನಿಗಳು ಏನೂ ಮಾಡಲ್ಲ ಅನ್ನೋದಿಲ್ಲ. ಆದರೆ ಅವುಗಳು ಹೇಗೆ ಬಳಕೆಯಾಗುತ್ತವೆ ಎಂಬುದು ಅನೇಕ ಗುಮಾನಿಗಳ ಹುತ್ತ. ಒಂದು ಉದಾಹರಣೆ ಹೇಳ್ತೀನಿ.
ಕಾಸು ಕಮಾಯಿಸುವ ಪರಿ ಹೀಗಿದೆ
ನಾನು ಕಂಡ ಹಾಗೇ ರೈತನ ಲೇಬಲ್ ಮೆತ್ತಿಕೊಂಡ ವ್ಯಕ್ತಿಯೊಬ್ಬನನ್ನು ಭೇಟಿಯಾಗಿದ್ದೆ. ಅವನು ತನ್ನದೇ ವ್ಯಾಪಾರ ಕಂಡುಕೊಂಡಿದ್ದಾನೆ. ಅದೇನೆಂದರೆ, ಸರಕಾರದಿಂದ ಶೌಚಾಲಯ ನಿರ್ಮಿಸಿಕೊಳ್ಳಿ ಅಂತ ದುಡ್ಡು ಕೊಡುತ್ತದೆ. ಆ ಶೌಚಾಲಯ ನಿರ್ಮಿಸುವುದಕ್ಕೆ ಕಲ್ಲು, ಮೇಲೆ ಹಾಸುವುದಕ್ಕೆ ಶೀಟ್ ಕೈ ಬದಲಾಯಿಸುತ್ತಾ ಕಮಾಯಿಸುತ್ತಾನೆ. ಒಂದು ಸಲ ಅದರ ಫೋಟೋ ಹಿಡಿದು, ಫಲಾನುಭವಿಗಳಿಗೆ ಹಣ ಬಂದ ತಕ್ಷಣ ಕಲ್ಲು, ಕಟ್ಟಡದ ಮೇಲೆ ಹಾಸಿದ ಶೀಟ್ ಇತರ ವಸ್ತುಗಳನ್ನೆಲ್ಲ ಮತ್ತೆ ಇವನವೇ. ಗುಟ್ಟೆಂಬಂತೆ ಅವನೇ ಹೇಳಿದ ಲೆಕ್ಕದಂತೆ ಆತನಿಗೆ ಆದ ಸಂಪಾದನೆ ಸರಿ ಸುಮಾರು ಒಂದು ಲಕ್ಷ ರುಪಾಯಿಗಳ ಆಚೆ. ಇನ್ನು ಹಳ್ಳಿ ರಾಜಕೀಯಗಳ ಬಗ್ಗೆ ಬರೆದರೆ ಅದೊಂದು ಮಹಾಪುರಾಣವೇ ಆದೀತು.
ದಳ್ಳಾಳಿಗಳ ನಡುವೆ ನಾವು ನಿಲ್ಲಬಲ್ಲೆವೆ?
ಹಾಗಂತ ನನಗೆ ವ್ಯವಸ್ಥೆ ಬಗ್ಗೆ ನಂಬಿಕೆ ಏನೂ ಹೋಗಿಲ್ಲ. ಈಗೆಲ್ಲ ಪೇಪರ್ ಕಪ್ ಮಾಡ್ತಾರಂತಲ್ಲ, ಅದಕ್ಕೆ ಒಂದು ಯಂತ್ರ ಖರೀದಿಸಿ, ಈ ಕುಟುಂಬದವರಿಗೆ ದುಡಿಮೆಗೆ ಹಚ್ಚಿದರೆ ಹೇಗೆ ಅನ್ನೋ ಆಲೋಚನೆ ತಲೆಯಲ್ಲಿದೆ. ಅದರ ಪ್ರಯತ್ನದಲ್ಲಿ ನಿತ್ಯವೂ ಅಲೆದಾಡುತ್ತಾ ಇದ್ದೇನೆ. ಸರಕಾರದಿಂದಲೇ ಏನೇನೋ ಸ್ಕೀಮುಗಳಿರುವಾಗ ಇವೆಲ್ಲ ಯಾಕೆ ಎಂಬ ಸಲಹೆಗಳೂ ನನಗೆ ಹೇಳುವವರು ಇದ್ದಾರೆ. ಯಾವುದೇ ಯೋಜನೆ ಇರಲಿ ಅದರಲ್ಲಿ ಎಷ್ಟು ಕಳ್ಳ ದಾರಿಗಳಿವೆ, ಆ ಮೂಲಕ ಹೇಗೆ ಹಣ ಮಾಡಬಹುದು ಅಂತ ಯೋಚನೆಗಳ ಸಂತೆ ದಳ್ಳಾಳಿಗಳ ನಡುವೆ ನಾವು ನಿಲ್ಲಬಲ್ಲೆವೆ? ತಮ್ಮ ಚೀಲ ತುಂಬಿದ್ದರೂ ಖಾಲಿ ಕಣಜ ತೋರಿಸುವವರಿಗೆ ಯಾವ ಗಾಂಧಿ, ಅಂಬೇಡ್ಕರರಿಂದ ಪಾಠ ಹೇಳಿಸಬೇಕೋ ತಿಳಿಯದು. ಇದೆಲ್ಲ ಇರಲಿ ಬಿಡಿ, ಈ ಲೇಖನ ಓದಿದ ಮೇಲೆ ನಿಮ್ಮ ಪೈಕಿ ಯಾರಿಗಾದರೂ ಈ ಪೇಪರ್ ಕಪ್ಪಿನ ಯಂತ್ರ ಹಾಗೂ ಆ ಪೇಪರ್ ಕಪ್ ನ ಮಾರ್ಕೆಟ್ ಹೇಗಿದೆ ಎಂಬ ಬಗ್ಗೆ ಗೊತ್ತಾದರೆ ದಯವಿಟ್ಟು ಮಾಹಿತಿ ತಿಳಿಸಿ.