ಸ ರಘುನಾಥ ಅಂಕಣ; ಕಾಯಿಸಿ ಕಾಯಿಸಿ ದರ್ಶನಕೊಟ್ಟ ಎಂಎಲ್ ಎ
ಇಪ್ಪತ್ತು ಜನ ಹೊರಟು ನಿಂತಾಗ ಮುನೆಂಕಟೇಗೌಡ, ಸುನಂದಮ್ಮನೂ ಬರಲೇಳು ಅಂದದ್ದಕ್ಕೆ ಬೀರಣ್ಣ, ಅದಕ್ಕೇನೀಗ ಬರಲೇಳು ಅಂದ. ಹಾಗಾದರೆ ಬೆಸೆ ಆಗುತ್ತೆ. ಇನ್ನೊಬ್ಬರು ಬರಬೇಕಾಗುತ್ತೆ. ಇಲ್ಲಾಂದ್ರೆ ಯಾರಾದರೊಬ್ಬರನ್ನು ಬಿಡಬೇಕಾಗುತ್ತೆ. ಯಾರೋ ಯಾಕೆ? ನಾನೇ ಬರೊಲ್ಲ ಅಂದ ಬೋಡೆಪ್ಪ.
ಹೊರಟ ಮೇಲೆ ಬರೋಲ್ಲ ಅನ್ನೋದು ಅಪಶಕುನಾನೆ. ಇನ್ನೊಬ್ಬರನ್ನು ಕರಕೊಂಡ್ರಾಯ್ತು ಅಂದ ಅಪ್ಪಯ್ಯ. ಸಿರ್ರಂತ ಕೋಪ ಮಾಡ್ಕೊಳ್ಳೊ ರಂಗನೇ ಬರಲಿ. ಅವನಂತೋರು ಒಬ್ಬರಿರ್ಲಿ ಅಂದ ಯಾಲಗಿರೆಪ್ಪ. ರಂಗನಿಗೆ ತನಗೆ ಸಿಕ್ಕಿದ ಪ್ರಾಮುಖ್ಯಕ್ಕೆ ಖುಷಿಯಾಯಿತು. ಅವನ ಕೈಹಿಡಿದೆಳೆದು, ಬಾರ್ಲೆ ಸಿರ್ರೋನೆ ಅಂದ ಪಿಲ್ಲಣ್ಣ. ಆಗಿನಿಂದಲೇ ಅವನಿಗೆ 'ಸಿರ್ರೋನು' ಎಂಬ ಅಡ್ಡಹೆಸರು ಬಿದ್ದಿತು.
ಸ ರಘುನಾಥ ಅಂಕಣ; ನಗೆ ಮೊಗದ ಚಲ್ಲಾಪುರಮ್ಮನೆಷ್ಟು ಸುಂದರ!
ಕಂಟ್ರಾಕ್ಟರುಗಳು ಒಬ್ಬೊಬ್ಬರಾಗಿ ಹೊರಬಂದು ಕಾರುಗಳನ್ನು ಹತ್ತಿ ಹೋದರು. ನಂತರದ ಸರದಿ ತಹಸಿಲ್ದಾರನದು. ಆ ಮೇಲೆ ಇಂಜನಿಯರುಗಳು, ಅವರ ಹಿಂದೆ ಪುಡಿ ಪುಢಾರಿಗಳು, ಅಬಕಾರಿ ಅಧಿಕಾರಿಯ ಜೊತೆಯಲ್ಲೆ ಬಾರ್ ಮಾಲಿಕರು, ಪೋಲಿಸ್ ಇನ್ಸ್ ಪೆಕ್ಟರನ ಜೀಪು ಬುರುಗುಟ್ಟಿ ಹೋಗುತ್ತಲೇ ಎಮ್ಮೆಲ್ಯೆ ಸಾಹೇಬರು ಅಂಗಳಕ್ಕೆ ಬಂದು ದರ್ಶನಕೊಟ್ಟರು. ಕಡೆಗೂ ದೊಡ್ಡೋರ ಕಣ್ಣಿಗೆ ಬಿದ್ವಲ್ಲ ಎಂದ ರಂಗ. ಸಾಹೇಬರು ಆ ಮಾತನ್ನು ನಿರ್ಲಕ್ಷ್ಯ ಮಾಡಿ, ಏನೆಲ್ಲ ಕಟ್ಟು ಕಟ್ಟಿಕೊಂಡು ಬಂದಿದ್ದೀರಿ ಅಂದರು. ನೀವು ಬರೋಕೆ ಎಲೆಕ್ಷನ್ನು ಬಂದಿಲ್ವಲ್ಲ. ಅದಕ್ಕೆ ನಾವೆ ಬಂದ್ವಿ ಎಂದು ರಂಗ ಮಾತಿನಲ್ಲೆ ಗಿಲ್ಲಿದ. ಕೂಡಲೆ ದುಗ್ಗಪ್ಪ ಅವನಿಗೆ ಸುಮ್ಮನಿರಲು ಸೂಚಿಸಿ, ನೀರಿನ ಬವಣೆಯನ್ನು ವಿವರಿಸಿ, ಪರಿಹರಿಸಲು ವಿನಂತಿಸಿದ.
ಇದು ನಿಮ್ಮೂರಿನ ಸಮಸ್ಯೆ ಮಾತ್ರವಲ್ಲ ದುಗ್ಗಪ್ಪನೋರೆ. ರಾಜ್ಯದ್ದು, ದೇಶದ್ದು, ಅಷ್ಟೆ ಯಾಕೆ ಜಗತ್ತಿಂದು... ಬೇಸಗೆ ಬರಲಿ ಟ್ಯಾಂಕರಿನಲ್ಲಿ ನೀರು ಹೊಡೆಸೋಣ. ದಿನಕ್ಕೆ ಎರಡು ಟ್ಯಾಕಂಟರು ಸಾಕಾದೀತೊ ಎಂದು ಪಿ.ಎ.ಯನ್ನು ಕರೆದು ಇವರ ಊರಿಗೆ ದಿನಕ್ಕೆರಡು ಟ್ಯಾಂಕರು ಬರಕೊ ಅಂದು, ಇಷ್ಟಕ್ಕೆಲ್ಲ ಈ ತಾಯಂದಿರನ್ನ ಯಾಕೆ ಕರೆದುಕೊಂಡು ಬರೋಕೆ ಹೋದಿರಿ ಅಂದು ಸುನಂದಳತ್ತ ಅದೊಂದು ಥರ ನೋಡಿ 'ಎವರೀ ಅಮ್ಮಾಯಿ' (ಯಾರೀ ಹುಡುಗಿ) ಎಂದು ಕೇಳಿದರು. ಬೆಂಗಳೂರಿನ ಪಬ್ಬಿನ ಹುಡುಗೀರು ನೆನಪಾದರೇನೊ ಸಾಹೇಬರಿಗೆ ಅಂದ ರಂಗ.
ಸ ರಘುನಾಥ ಅಂಕಣ; ತೋಟಗಳು ಬೀಡು ಬೀಳುತ್ತ, ಮಳೆಗಾಲದಲ್ಲೇ ಗೋಕುಂಟೆ ಬತ್ತಿತು...
ಯಾಲಗಿರೆಪ್ಪ ಮುಚ್ಚೊಂಡು ಕುಂತ್ಕೊ ಅಂದ. ಟ್ಯಾಂಕರ್ ಮಾತು ಆಮೇಲಾಗ್ಲಿ ಸಾರ್. ಕೆರೇಲಿ ಹೂಳೆತ್ಸಿ ಮೊದಲು. ನಿಮ್ಮ ಫಾಲೊಯರ್ಗಳಿಂದ ಕೆರೆ ಒತ್ತುವರಿ ಆಗ್ತಿದೆ, ದಯವಿಟ್ಟು ಅವರನ್ನು ತಡೀರಿ ಅಂದ ನರಸಿಂಗರಾಯ. ಓ ನರಸಿಂಗರಾಯ್ರಲ್ವಾ? ಹೌವಾರ್ಯೂ? ಅಂದರು ಸಾಹೇಬರು. ಯಾಕೊ ನರಸಿಂಗರಾಯ ತಾಳ್ಮೆ ಕಳೆದುಕೊಂಡ. ಸತ್ತ ಹಾಗಿದ್ದೀವಿ. ಹಿಂದೊಮ್ಮೆ ಬಂದು ಕೇಳಿದ್ವಿ. ಏನೂ ಮಾಡ್ಲಿಲ್ಲ. ಮೊದಲು ಕೆರೆ ಹೂಳೆತ್ತಿಸಿಕೊಟ್ಟು ಆ ಮೇಲೆ ಹೌ ಆರ್ ಯು ಅಂತ ಕೇಳಿ. ಫೈನ್ ಅಂತೀವಿ ಅಂದ.
ಅವನ ಸಿಟ್ಟಿಗೆ ಎಲ್ಲರೂ ಬೆರಗಾದರು. ಎಂ.ಎಲ್.ಎ. ಪೆಚ್ಚಾದರೂ ತೋರಿಸಿಕೊಳ್ಳದೆ, ಥರಾವರಿ ರಾಜಕೀಯದ ನಗೆ ನಗುತ್ತ, ಸೀ ಮಿಸ್ಟರ್ ನರಸಿಂಗರಾಯ, ದೀಸ್ ಆರ್ ಪಾಲ್ಸಿ ಮ್ಯಾರ್ ಯು ನೊ. ನಿಮಗಾಗಿ ಐ ಟ್ರೈ ಇನ್ ಅಫಿಶಿಯಲ್ ಲೆವೆಲ್ ಅಂದಾಗ, ನರಸಿಂಗರಾಯ ಆತ ಹೇಳಿದ್ದನ್ನು ಕನ್ನಡದಲ್ಲಿ ಹೇಳಿದ. ಆಗ ಅಪ್ಪಯ್ಯ, ಸ್ವಾಮಿ ಅದೆಲ್ಲ ನಮಗೆ ಯಾಕೆ? ನಮ್ಮ ಕೆರೆ ಹೂಳೆತ್ತಿಸಿ. ನೀವೇ ಮೊನ್ನೆ ಹೇಳಿದಿರಲ್ಲ ಪೇಪರಿನೋರಿಗೆ, ನಾವು ಜನರ ಋಣ ತೀರಿಸಬೇಕು ಅಂತ, ಈಗ ತೀರಿಸಿ ಅಂದ.
ಓ ನಾಟಕದ ಮೇಸ್ಟ್ರು ಅಲ್ವ? ನೀವೂ ಬರೋದಾ? ಅಂದರು. ನಾಟಕದ ಮೇಸ್ಟ್ರಿಗೇನು ನೀರು ಬೇಡ್ವ? ಅವರೇನು ನಾಟಕಾನ ಕುಡೀತಾರ, ಅದರಲ್ಲೆ ತೊಳಕೋತಾರ? ಅಂದುಬಿಟ್ಟ ರಂಗ. ಹುಡುಗ ಚುರುಕಾಗಿದ್ದಿ. ಬಾ ನನ್ನ ಜೊತೇಲಿರು ಅಂದು ರಾಜಕೀಯ ಮರ್ಮದ ಮಾತಾಡಿದರು ಸಾಹೇಬರು. ಯಾಕೆ ಮೂಳೆ ಹಾಕೋಕೇನು? ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರಂಗ. ಲೇಯ್ ಏನ್ ಮಾತಾಡ್ತೀಯೊ ಸಾಹೇಬ್ರನ್ನು? ಆಗಬೇಕ ಸೇವೆ ಅಂದ ಲೋಕಲ್ ಪಿ.ಎ. ಚೇಲಾ. ಗುಂಪಿನಲ್ಲಿದ್ದ ಹುಡುಗರು ದಮ್ಮಿದ್ರೆ ಬಾರೋ ಎಂದು ಸವಾಲು ಹಾಕಿ ನಿಂತರು. ಹಿರಿಯರು ಅವರನ್ನು ಸಮಾಧಾನಗೊಳಿಸಿದರು.
ಸ ರಘುನಾಥ ಅಂಕಣ; ಟ್ರಂಕು ಸೇರಿದ ಸದಾರಮೆ ನಾಟಕದ ನೋಟುಬುಕ್ಕು
ದುಗ್ಗಪ್ಪ, ಇದೆಲ್ಲ ಸರಿಯಲ್ಲ ಸ್ವಾಮಿ. ನಮ್ಮೂರಲ್ಲೂ ಓಟಿದೆ. ಊರಲ್ಲಿ ಒಗ್ಗಟ್ಟಿದೆ ಎಂದು ನೇರವಾಗಿ ಹೇಳಿದ. ಈಗ ಎಮ್ಮೆಲ್ಯೆಗೆ ಬಿಸಿ ತಟ್ಟಿತು. ಹಾಗೆಲ್ಲ ಮಾತಾಡಿದ್ರೆ ಕೆನ್ನೆಗೆ ಬಾರಿಸ್ತೀನಿ ನೋಡು. ಗೋ ಇನ್ಸೈಡ್ ಎಂದು ಲೋಕಲ್ ಪಿ.ಎ.ಗೆ ಹೇಳಿ ಕಳಿಸಿದರು. ನೋಡಿ ಯಾಕೊ ಟೈಂ ಸರಿಯಿಲ್ಲ. ಒಂದಿಷ್ಟು ಜವಾಬ್ದಾರಿ ಇರೋರು ಇನ್ನೊಂದು ದಿನ ಬನ್ನಿ ಮಾತಾಡೋಣ ಎಂದರು. ಇಲ್ಲಿ ಬೇಜವಾಬ್ದಾರಿ ಜನ ಯಾರು ಬಂದಿಲ್ಲ ಸ್ವಾಮಿ ಅಂದ ಮುನೆಂಕಟೇಗೌಡ. ಆಯ್ತು ಯಜಮಾನ್ರೆ. ಇನ್ನೊಂದು ದಿನ ಬನ್ನಿ. ಡೋನ್ಟ್ ಅಂಗ್ರಿ ಎಂದು ಕೈ ಮುಗಿದರು ಸಾಹೇಬರು.
ಎಲ್ಲ ಟೆಂಪೋ ಹತ್ತಿ ನಿಂತಾಗ ಮುನೆಂಕಟೇಗೌಡ, ಅವನೇನು ಅಂದಿದ್ದು? ಅಂಗಿ ಅಂತ್ಲ? ನನಗಿಂತ ಚೆನ್ನಾಗಿರೋದೆ ಹಾಕ್ಕೊಂಡಿದ್ದ ಅಂದ. ಅಂಗಿ ಅಲ್ಲ ಅಂಗ್ರಿ. ಅಂದ್ರೆ ಕೋಪ ಮಾಡಿಕೊಬೇಡ ಅಂತ ಹೇಳಿದ್ದು ಅಂದಳು ಸುನಂದಾ.