ಸ ರಘುನಾಥ ಅಂಕಣ; ಮುನೆಕ್ಕನಿಂದ ಎಲ್ಲರ ಬಾಲಗಳು ಮುದುಡಿಕೊಂಡವು
ಬೀರಣ್ಣ ಮಗನನ್ನು ಮಾಲೂರಿನಲ್ಲಿದ್ದ ಮಗಳು ಗೋಪಮ್ಮನ ಮನೆ ಸೇರಿಸಿದ. ಪೊರಕೆ ಏಟು ತಿನ್ನುವುದೆಂದರೆ ಶನಿಮಹಾತ್ಮನು ಹೆಗಲೇರಿದಂತೆ. ಮುಂದೆ ಏನೇನು ಕಾದಿದೆಯೋ ಎಂದು ಬೀರಣ್ಣನ ಹೆಂಡತಿ ಚೌಡಮ್ಮ ಗೋಳಾಡಿದಳು. ಶನಿದೇವರ ಗುಡಿಗೆ ಪೂಜೆಗೆ ಕೊಡಿಸಿದಳು. ಬೀರಣ್ಣ ಸೀತಾರಾಮಶಾಸ್ತ್ರಿಗಳನ್ನು ಕರೆಸಿ ವಿಷಯ ತಿಳಿಸಿ ಶಾಂತಿಪೂಜೆ ಮಾಡಿಸಿದ ಮೇಲೆ ಅವಳಗೆ ಎಷ್ಟೋ ಸಮಾಧಾನವಾಯಿತು.
ಪ್ರಸಾದ ತಂದು ಸುನಂದಾಳಿಗೆ ಕೊಟ್ಟು, 'ನೀನು ನನ್ನ ಮಗಳಿದ್ದ ಹಾಗೆ. ಮನಸ್ಸಿಗೆ ಹಾಕಿಕೊಳ್ಳಬೇಡ ಮಗಳೆ' ಎಂದು ಚೌಡಮ್ಮ ಕಣ್ಣು ತುಂಬಿಕೊಂಡಳು. 'ನಾನೂ ದುಡುಕಿಬಿಟ್ಟೆ. ಚೌಡಮ್ಮ' ಎಂದು ಮುನೆಕ್ಕ ಅವಳ ಎರಡೂ ಕೈ ಹಿಡಿದುಕೊಂಡಳು.
ಸ ರಘುನಾಥ ಅಂಕಣ; ಬೇಸ್ತವಾರಕ್ಕೆ ಮೂರು ದಿನ ಮುಂಚೆ...
ಮುನೆಕ್ಕ ನಡೆದುದೆಲ್ಲವನ್ನೂ ಅಪ್ಪಯ್ಯನ ಮನೆಯವರಿಗೆ ಹೇಳಿದಳು. ಏನೇ ಆಗಲಿ ನೀನು ಹಾಗೆ ಮಾಡಬಾರದಿತ್ತು ಎಂದು ಅಮ್ಮ ಆಕ್ಷೇಪಿಸಿದಳು. ಸುನಂದಾ ಕಣ್ಣು ತುಂಬಿಕೊಂಡು, ನಾನು ಮದನಪಲ್ಲಿಗೆ ಹೋಗಿಬಿಡುತ್ತೇನೆ ಎಂದು ಬಿಕ್ಕಿದಳು. 'ಈಗೇನು ಸಾಮ್ರಾಜ್ಯ ಮುಳುಗಿತು ಅಂತ? ಇಂಥವಕ್ಕೆಲ್ಲ ಹೆದರುತಾರೇನೆ ಹುಚ್ಚಮ್ಮ' ಎಂದ ಅಪ್ಪಯ್ಯ. 'ಏನೂ ಆಗಿಲ್ಲ ಅಂತ ಇದ್ದುಬಿಡಿ. ಎಲ್ಲೂ ಬಾಯಿ ಬಿಡಬೇಡಿ. ಬೀರಣ್ಣ ಕೆಟ್ಟೋನೇನಲ್ಲ' ಅಂದಳು ಅಮ್ಮ.
ನರಸಿಂಗರಾಯ ಎದೆಯೊಳಗೇ ಮರುಗಿದ, ಕೊರಗಿದ, ಕನಲಿದ. ಮಗನತ್ತ ನೋಡಿದ ಅಪ್ಪಯ್ಯ, 'ನರಸಿಂಗ ಹುಷಾರ್, ನಿನ್ನ ಗೆಳೆಯರಿಗೆ ಹೇಳಬೇಡ. ಇದು ಇನ್ನೆಲ್ಲಿಗೋ ಹೋಗುತ್ತೆ. ಹಾಗಾಗೋದು ಬೇಡ' ಅಂದ.
ನರಸಿಂಗರಾಯನಿಗೆ ಬೋಡಪ್ಪ, ಪಿಲ್ಲಣ್ಣನಿಗೆ ಹೇಳದಿರಲಾಗಲಿಲ್ಲ. ಹಾಗೆಯೇ ಅಪ್ಪನ ಮಾತನ್ನೂ ಹೇಳಿದ. ನಾವೇನು ಮಾಡೋಕೂ ಇಲ್ಲದಂತೆ ಮುನೆಕ್ಕ ಮಾಡಿದ್ದಾಳೆ ಬಿಡು ಎಂದ ಬೋಡಪ್ಪ.
ಶಿವರಾತ್ರಿ ಕಳೆದ ವಾರಕ್ಕೆ ಸದಾರಮೆ ನಾಟಕ
ಮಾಡೋದೇನೂ ಬೇಡ. ಸೋಮೇಶನ ಆ ನಾಲ್ಕು ನಾಯಿಗಳ ಕಿವಿಗೆ ಹಾಕೋಣ. ಉಚ್ಚೆ ಹೊಯ್ಕೊಳ್ತಾವೆ ಅಂದ ಪಿಲ್ಲಣ್ಣ. ಆ ಮೂವರ ಮಾತುಗಳನ್ನು ಕೇಳಿಸಿಕೊಂಡಿದ್ದ ಲಕ್ಷ್ಮೀನಾರಾಯಣ, ನೀವು ಹೇಳೋಕೇನೂ ಉಳಿದಿಲ್ಲ. ಅವು ಆಗಲೇ ಹುಯ್ಕೊಂಡಾಗಿದೆ. ಈಗ ಅವರಂತಹ ಯಾರಿಗೂ ಸುನಂದಾಳನ್ನು ನೋಡಿ ಹಲ್ಕಿಸಿಯೋಕೂ ಭಯ ಹುಟ್ಟಿಕೊಂಡಿದೆ. ಮುನೆಕ್ಕ ನಮ್ಮೂರ ಹೆಣ್ಗಂಡು ಅಂದ. ನಿನ್ನ ಕಿವೀಗೂ ಬಿತ್ತ! ಇನ್ನು ಏಡುಕೊಂಡಲವಾಡಾ ವೆಂಕಟರಮಣಾ... ಎಂದು ನರಸಿಂಗರಾಯ ಹೇಳುತ್ತಿದ್ದಂತೆ ಉಳಿದಿಬ್ಬರು ಸೋಮೇಶನ ಗತಿ ಗೋವಿಂದಾ ಗೋವಿಂದ ಎಂದರು.
ಈ ವಿಷಯದಲ್ಲಿ ಕೊಂಚ ನಿನ್ನ ಬಾಯನ್ನ ಹೊಲಕೊ ಲಚ್ಚ ಎಂದು ನರಸಿಂಗರಾಯ ಹೇಳಿದ. ಹೊಲಕೊಳ್ಳೋಕೆ ಆಗಲೆ ಬಾಯಿ ಖಾಲಿ ಆಗೋಗಿದೆ ಅಂದ ಲಕ್ಷ್ಮೀನಾರಾಯಣ. ಗೆಳೆಯರು ಮತ್ತೊಮ್ಮೆ ಗೋವಿಂದಾ ಗೋವಿಂದಾ ಎಂದರು.
ಬಾಯೆನ್ನುವವರೆಗೆ ಊರಿಗೆ ಬಂದುಗಿಂದೀಯ ಜೋಕೆ ಎಂದು ಸೋಮೇಶನಿಗೆ ಬೀರಣ್ಣ ತಾಕೀತು ಮಾಡಿದ್ದ. ಇದರಿಂದ ಪಿಲ್ಲಣ್ಣ ಹೇಳಿದ 'ಆ ನಾಲ್ಕು ನಾಯಿಗಳು' ಬಾಯಾರಿಕೆ ತಾಳದೆ, ಸೋಮೇಶ ಬರುತ್ಲೇ ಕೊಡುವುದಾಗಿ ಹೇಳಿ ಹಂದಿಜೋಗಪ್ಪನ ಸಾರಾಯಿ ಗುಡಿಸಲಿನಲ್ಲಿ ಸಾಲ ಬರೆಸುವಂತಾಯಿತು. ಅವನು ದಿನಕ್ಕೆ ನಾಲ್ಕು ಕ್ವಾರ್ಟರ್ ಕೊಟ್ಟು, ಅವರು ಹೋದ ಮೇಲೆ ಆರು ಕ್ವಾರ್ಟರ್ ಎಂದು ಕಿಟಕಿ ಬಾಗಿಲ ಹಿಂದೆ ಆರು ಗೀಟುಗಳನ್ನು ಹಾಕುತ್ತಿದ್ದ. ಅವುಗಳ ಅಡಿಯಲ್ಲಿ ಎಂಟು ಚಿಕ್ಕ ಗೆರೆಗಳು. ಅವು ಬೋಂಡಗಳ ಲೆಕ್ಕ.
ಸೋಮೇಶ ಜೊತೆಯಲ್ಲಿದ್ದಾಗ ಸಿಗರೇಟನ್ನೇ ಸೇದುತ್ತಿದ್ದವರು ಈಗ ಬೀಡಿಗೆ ಬಂದಿದ್ದರು. ಮುನೆಕ್ಕನಿಗೆ ಗುಟುಕಿಗೊಂದು ಬೈಗುಳ, ಸುನಂದಾಳಿಗೆ ದಮ್ಮಿಗೊಂದು ಬೈಗುಳ ಅರ್ಪಿಸುತ್ತ ಸೋಮೇಶನ ಆಗಮನಕ್ಕಾಗಿ ಕಾಯುತ್ತಿದ್ದರು.