ಸ.ರಘುನಾಥ ಅಂಕಣ; ಕೆಂಪರಾಜನ ವಿಚಾರಣೆ ಇಲ್ಲದ ತೀರ್ಪು
ವಿಚಾರಣೆ, ತೀರ್ಮಾನ ಎಲ್ಲ ಮುನೆಂಕಟೇಗೌಡನದು. ಇದಕ್ಕೆ ಎಲ್ಲರೂ ಬದ್ಧರಾಗಿರಬೇಕು. ಯಾರೂ ದೂಸರಾ ಮಾತನಾಡುವಂತಿಲ್ಲ ಎಂದು ದುಗ್ಗಪ್ಪ ಫರ್ಮಾನು ಹೊರಡಿಸಿದ. ಅಮ್ಮನ ಬೆನ್ನಿನ ಮರೆಯಲ್ಲಿ ಕುಳಿತಿದ್ದ ಕೆಂಪರಾಜನಿಗೆ ಸಭೆಯ ಮುಂದೆ ಬಂದು ಕೈಕಟ್ಟಿ ನಿಲ್ಲುವಂತೆ ಮುನೆಂಕಟೇಗೌಡ ಸೂಚಿಸಿದ. ಅವನು ಬಂದು ಕೈಕಟ್ಟಿ ತಲೆ ತಗ್ಗಿಸಿ ನಿಂತ. ಆಗ ಎದೆಯಲ್ಲಿ ಅನುಮಾನವಿದ್ದವರಿಗೆ ಗೌಡ ಸರಿಯಾಗಿ ನ್ಯಾಯ ಕೊಡುತ್ತಾನೆ ಎಂಬ ನಂಬಿಕೆ ಬಂದಿತು.
ಯಾಕೆ ಹೀಗೆ ಮಾಡಿದಿ ಬೊಗಳೊ ಕೆಂಪ ಎಂದು ಮುನೆಂಕಟೇಗೌಡ ಗುಡುಗಿದ. ಕೂಡಲೆ ಸಾಕಮ್ಮ ಎದ್ದು ಕೈ ಮುಗಿದು ನಿಂತು, ಯಾಕಂತ ಎಲ್ಲರಿಗೂ ತಿಳಿದಿದೆ. ಮನೆ ಮಾನ ಬೀದಿಗೆ ಬಿದ್ದಿದೆ. ಈಗ ಅದನ್ನು ಹರಾಜು ಮಾಡೋದು ಬೇಡ. ನಾಲ್ಕು ಜನ ಹೇಳೋದಕ್ಕೆ ಅವನು ಕಟ್ಟುಬಿದ್ದಿರುತ್ತಾನೆ.
ಸ ರಘುನಾಥ ಅಂಕಣ; ಟ್ರಂಕು ಸೇರಿದ ಸದಾರಮೆ ನಾಟಕದ ನೋಟುಬುಕ್ಕು
ಗಂಡನಿಲ್ಲದ ಹೆಂಗಸಿನ ಮೇಲೆ ದಯೆಯಿಡಿ ಎಂದು ಬೇಡಿದಳು. ಅಲ್ಲಿದ್ದವರ ಮನಸ್ಸು ಕರಗಿತು. ಮುನೆಕ್ಕ ಎದ್ದು ನಿಂತು, ಸಾಕಮ್ಮನ ಗುಣ ಊರಿಗೇ ಗೊತ್ತು. ಎಂದೂ ಬೀದೀಲಿ ನಿಂತೋಳಲ್ಲ. ಅವಳ ಮಾತು ನಡೆಸಿಕೊಡಿ ಎಂದಳು. ನೀವು ಏನಂತೀರಿ ಎಂದು ಮುನೆಂಕಟೇಗೌಡ ಜನರನ್ನು ಕೇಳಿದ. ಎಲ್ಲರೂ ಮುನೆಕ್ಕನ ಮಾತು ಸರಿ ಅಂದರು.
ಮುನೆಂಕಟೇಗೌಡ ಎದ್ದು ನಿಂತ. ಸಾಕಮ್ಮ ನನ್ನ ತಂಗಿ, ಕೆಂಪ ಸೋದರಳಿಯ ಅನ್ನೋದು ನಿಮಗೆಲ್ಲ ತಿಳಿದಿದೆ. ಊರವಿಷಂಯದಲ್ಲಿ ನನಗೆ ತನ್ನೋರು, ನನ್ನೋರು ಅನ್ನೋದಿಲ್ಲ.. ಸಾಕಮ್ಮ ಗಂಡ ಸತ್ತ ಮೇಲೆ ನನ್ನ ನೆರಳಲ್ಲಿ ಮರ್ಯಾದೆಯಿಂದ ಬದುಕು ನಡೆಸೋದು ಊರಿಗೇ ತಿಳಿದಿದೆ. ಅವಳ ಹೊಟ್ಟೇಲಿ ಹುಟ್ಟಿದ್ದು ಮಗ ಅಲ್ಲ, ಹುಳ ಅಂತ ಗೋತ್ತಾಗಿದೆ. ಆ ಹುಳಕ್ಕೆ ಬುದ್ಧಿ ಕಲಿಸಬೇಕಿದೆ ಅಂದು, ಲೇ ಬೋಸುಡಿಕೆ, ನೀನು ತಪ್ಪು ಮಾಡಿದ್ದೀಯೊ ಇಲ್ಲವೋ ಬಾಯಿಬಿಡು ಅಂದ. ಕೆಂಪರಾಜ ಒಪ್ಪಿಕೊಂಡ.
ಕೆಂಪರಾಜ ತಾಳಿಬೊಟ್ಟು, ಪಟ್ಟುಶಾಲೆ (ರೇಷ್ಮೆ ಸೀರೆ) ತಂದು ಉಡಿದಮನೆ (ತವರು) ಕಾಣಿಕೆ ಅಂತ ಸುನಂದಮ್ಮನಿಗೆ ಕೊಡಬೇಕು. ಸುದರ್ಶನರೆಡ್ಡಿಯಿಂದ ವಸೂಲಾದ ಏಳುಸಾವಿರಾನ ತೆಗೆದುಕೊಂಡು ಊರಕುಂಟೆ ಹೂಳೆತ್ತಿಸಬೇಕು ಸಾಲದಿದ್ದ ದುಡ್ಡನ್ನು ಅವನೇ ಹಾಕಬೇಕು ಎಂದು ಮುನೆಂಕಟೇಗೌಡ ತೀರ್ಪು ನೀಡಿದ್ದನ್ನು ಊರೇ ಕೊಂಡಾಡಿತು.
ಸಾಕಮ್ಮ ನಿಟ್ಟುಸಿರಿಟ್ಟು, ನಾನು ತೆಗೆದ ಮೂರು ತೊಲದ ತಾಳಿಬೊಟ್ಟಿದೆ. ನೀವೆಲ್ಲ ದೋಷ ಇಲ್ಲೆಂದರೆ ಅದನ್ನ ತೊಳೆಸಿ, ಪಾಲೀಷು ಮಾಡಿಸಿ ಕೊಡುತೀನಿ. ಊರುಕುಂಟೆ ಹೂಳೆತ್ತಿಸುತೀವಿ ಎಂದಳು. ನರಸಿಂಗರಾಯ ಅವಳ ಮುಖ ನೋಡಿದ. ಕಷ್ಟ ಜೀವನದ ಹೆಂಗಸು. ಹೂಳೆತ್ತಲು ಇನ್ನೂ ಹತ್ತು ಸಾವಿರವಾದರೂ ಬೇಕು. ಎಮ್ಮೆಯನ್ನೋ, ಎತ್ತುಗಳನ್ನೋ ಮಾರಬೇಕು. ಕರುಳು ಹಿಂಡಿತು. ಎದ್ದು ನಿಂತು, ನಾನೊಂದು ಮಾತು ಹೇಳಲು ಅಪ್ಪಣೆ ಬೇಕೆಂದ. ಮುನೆಂಕಟೇಗೌಡ ಮಾತಾಡು ಎಂದ.
ಕೆಂಪರಾಜ ತಪ್ಪಿತಸ್ಥ ನಿಜ. ನಾವು ಏನೇ ಜುನ್ಮಾನೆ ಹಾಕಿದರೂ ಅದು ಸಾಕಮ್ಮನಿಗೆ ಹೊರೆ. ಪರೋಕ್ಷವಾಗಿ ಮುನೆಂಕಟೇಗೌಡನಿಗೂ ದಂಡವೇ. ಇದೆಲ್ಲ ಬೇಡ. ಕೆಂಪರಾಜ ಸುನಂದಳ ಕ್ಷಮೆ ಕೇಳಿ, ಊರಿನವರ ಬಾಯಲ್ಲಿ ಒಳ್ಳೆಯನೆನಿಸಿಕೊಂಡು ಬಾಳಲಿ ಸಾಕು ಅಂದ. ಅಪ್ಪಯನಿಗೆ ತಕ್ಕ ಮಗ ಅಂದ ಸಾಕಮ್ಮ, ತಾಳಿಬೊಟ್ಟು ಬೇಡ ಅನ್ನಬಾರದು ಎಂದು ಕೈ ಮುಗಿದಳು.
ಮೋಟಪ್ಪ ನಿಂತು, ಹೇಗೂ ಸೇರಿದ್ದೀವಿ. ಸುನಂದಮ್ಮನ ಮದುವೆ ಮಾತೂ ಆಗಿಬಿಡಲಿ ಎಂದ. ಈ ಅನಿರೀಕ್ಷಿತ ಮಾತಿನಿಂದ ಸಭೆ ಮೂಕವಾಯಿತು. ಬೀರಣ್ಣ, ದುಗ್ಗಪ್ಪ ಕೆಮ್ಮಿದ್ದು ನಿರ್ಣಯವೊಂದು ಹೊರಬೀಳುವ ಸೂಚನೆಯನ್ನು ಕೊಟ್ಟಿತು. ಎಲ್ಲರೂ ಮೈಯೆಲ್ಲ ಕಿವಿಯಾಗಿ ಕುಳಿತರು. ಅಪ್ಪಯ್ಯ, ಅಮ್ಮಯ್ಯ ನೀವಿಬ್ಬರು ಸುನಂದಳನ್ನು ಸೊಸೆಯಾಗಿ ಒಪ್ಪಿಕೊಬೇಕು ಅಂದ ದುಗ್ಗಪ್ಪ. ಈ ಊರೇ ಸುನಂದಮ್ಮನ ಉಡಿದಮನೆ(ತವರು) ಎಂದ ಬೀರಣ್ಣ. ಸಭೆ ಸಮ್ಮತಿ ಎನ್ನುವಂತೆ ಓ ಎಂದಿತು.
ಪಿಲ್ಲಣ್ಣ, ಬೋಡೆಪ್ಪ, ರಂಗ ಎದ್ದು ಕುಣಿದರು. ಪೂಜಾರಿ ಶೇಷಪ್ಪ ನಾಟಕದ ದಿನವೇ ಮದುವೆ. ಮುಹೂರ್ತ ಚೆನ್ನಾಗಿದೆ ಎಂದ. ನಾಟಕಕ್ಕೆ ಬರುವ ನಾಲ್ಕೂರು ಜನರ ಮುಂದೆ ಮದುವೆ ದೇವಕಲ್ಯಾಣದಂತಿರುತ್ತೆ. ನಮ್ಮ ನಾಟಕದಲ್ಲಿ ದುಷ್ಯಂತ ಶಕುಂತಲೆಯನ್ನು ಗಾಂಧರ್ವ ವಿವಾಹ ಮಾಡಿಕೊಳ್ಳುವುದಿಲ್ಲ. ಶಾಸ್ತ್ರದಂತೆ ಮದುವೆಯಾಗಿ, ತುರ್ತು ರಾಜಕಾರ್ಯ ನಿಮಿತ್ತ ಹೊರಟು ಹೋಗುತ್ತಾನೆ. ಆಗ ತೊಡಿಸಿದ ಉಂಗುರವನ್ನೇ ಶಕುಂತಲೆ ಕಳೆದುಕೊಳ್ಳುವುದು ಎಂದು ಮೋಟಪ್ಪ ಆ ದೃಶ್ಯಕ್ಕೆ ಹೊಸ ತೀರುವು ನೀಡಿದ. ಅಪ್ಪಯ್ಯ, ಅಮ್ಮಯ್ಯ ಎದ್ದು ಕೈ ಮುಗಿದರು.