ವಸಂತ, ನಾಳೆಯೇ ನಾನು ರೈಲನೇರಿ ಬರುವ ದಿವಸ
ಬರುವ ಕಾತರದ ಆತುರದ ಚೆನ್ನಿಗ ವಸಂತ,
'ಬಂದು ಬಿಡಲೇ, ಬಂದುಬಿಡಲೇ' ಎಂದು ಕೇಳುವುದೇಕೆ ಎಂದು ಮನಸು ಹೇಳುತಿದೆ. 'ಮೋಜಿರುವ ಜೋಡಿಗಳು ಕುಲಕಬೇಕು ಹಗಲಿರುಳು' ಎಂದು ರಸಿಕನಾಡಿದ ಮಾತು ನೆನಪಾಗುತ್ತಿದೆ. ನಿಜವಲ್ಲವೆ ಅವನ ಮಾತು? ಆದರೆ ಇದಕ್ಕೆ ಯಾರನೇನು ಕೇಳುವುದು ಎಂದು ಹೇಳಲಾಗುತ್ತಿಲ್ಲ ನನಗೆ.
ನಿನ್ನ ಮನಸ್ಸಿನ ಸ್ಥಿತಿಯನ್ನು ನೆನೆದಾಗಲೆಲ್ಲ ಬಂದುಬಿಡು ಎಂದು ಹೇಳಬೇಕೆನ್ನಿಸುತ್ತದೆ. ಆದರೆ ಹೇಳಲಾರೆ. ನಿನ್ನ ಬಾರೆಂದು ಕರೆವ ಭಾವನೆಯನ್ನು ಅದುಮಿಡಲಾಗದೆ, ಬಚ್ಚಲಲ್ಲಿ ಸ್ನಾನ ಮಾಡುವಾಗ ಬಕೆಟ್ಟು ಖಾಲಿ ಮಾಡಿ, ಜೋರಾಗಿ ಶಬ್ದ ಮಾಡುತ್ತ ನೀರು ಸುರಿಯುವಂತೆ ನಲ್ಲಿ ತಿರುಗಿಸಿ 'ಬಂದುಬಿಡು ವಸಂತ ಬಂದುಬಿಡು' ಎಂದು ಅನೇಕ ಸಲ ಕೂಗಿದ್ದೇನೆ. ಆದರೆ ಆ ಕೂಗು ನಿನಗೆ ಕೇಳಿಸುವಂತಿರದು. ಇದೇ ನನ್ನ ದುರದೃಷ್ಟ ವಸಂತ.
ವಿರಹ ಮಾಸದಲ್ಲಿ ನುಗ್ಗಿ ಬರುತಿರುವ ಶಕುಂತಲೆಯ ನೆನಪಲ್ಲಿ ಪ್ರೇಮ ಪತ್ರ
ಈ ಆಷಾಢ, ಈ ಅಗಲಿಕೆ, ಈ ರೀತಿಯ ನಿವೇದನೆಗಳು ಜಗತ್ತಿನಲ್ಲಿ ಹೊಸವಲ್ಲ. ಈ ದಿನಗಳಿಗೆ ನಾವಿಬ್ಬರು ಹೊಸಬರಷ್ಟೆ. ಮುಂದೆ ನಾವು ಹಳಬರ ಸಾಲಿಗೆ ಸೇರುತ್ತೇವೆ.
ವಸಂತ, ಶ್ರಾವಣ, ಶೃಂಗಾರಮಾಸ, ಮಧುಮಾಸ ಯಾರಿಗೂ ಯಾವ ವಯಸ್ಸಿನವರಿಗೂ ಹಳೆಯದಲ್ಲ. ನಮ್ಮಂಥ ಯುವ ಜೋಡಿಗಳಲ್ಲಿ ಬಯಕೆಗಳ ತೀವ್ರತೆ ಕೊಂಚ ಹೆಚ್ಚಿಗಿರಬಹುದಷ್ಟೆ. ಇದು ಎಂತಹ ಮಾತಿನ ಸಮಾಧಾನ ಅಲ್ಲವೆ? ನೀನು ಬರಲೆಂಬುದೇ ನನ್ನ ನಿರೀಕ್ಷೆ.
ನಿನ್ನ ಕಾಗದ ಬಂದ ಕೂಡಲೆ ರೂಮಿಗೋಡಿದೆ. ಓದಿದಾಗ ಮನಸ್ಸು 'ಬಂದುಬಿಡು' ಎಂದು ಹೇಳೆಂದು ಒತ್ತಾಯಿಸಿತು. ಬಾ ಎಂದು ಬರೆಯುವುದೆಂದು ನಿಶ್ಚಯಿಸಿದೆ. ಕಾಗದ ತರಲು ಅಪ್ಪನ ಮೇಜಿನ ಬಳಿಗೆ ಹೋಗುತಿದ್ದಾಗ ಅಮ್ಮ ಹೇಳಿದಳು- 'ಕ್ಯಾಲೆಂಡರು ನೋಡಲು ಹೋಗುತ್ತಿರುವೆಯ? ಇಂದಿಗೆ ಆಷಾಢ ಮುಗಿಯುತ್ತೆ.' ಈ ಇಡೀ ತಿಂಗಳಲ್ಲಿ ಅಮ್ಮನಾಡಿದ ಸುಖ ಕೊಡುವ ಮಾತಿದು. ಈ ಕಾಗದವನ್ನು ಸ್ಪೀಡ್ ಪೋಸ್ಟಿನಲ್ಲಿ ಕಳಿಸುತ್ತಿರುವೆ ವಸಂತ. ಇದನ್ನು ನೀನು ಓದುತ್ತಿರುವಾಗಲೇ ಬಂದೇನು.
ಮುಂಜಾನೆ ಆರಕ್ಕೆ ನಮ್ಮೂರ ಬಿಡುವುದು
ಹನ್ನೆರಡು ಬೋಗಿಗಳ ರೈಲು.
ಗುರುತಿನವ ಹಿರಿಯ ಚಾಲಕ ಓಡಿಸುವ, ಬಸವನಹುಳುವಿನ ವೇಗ
ಆದರೂ ವಸಂತ 'ನಾಳೆಯೇ ನಾನು ಬರುವ ದಿವಸ.'