ಸ.ರಘುನಾಥ್ ಅಂಕಣ: ಸುಳಿವು ಕೊಡದೆ ಹಾರಿಹೋದ ಹಂಸಗಳು
ಬಬ್ರುವಾಹನ ನಾಟಕ ನೋಡಲು ಬಂದಿದ್ದ ಮಾಲೂರಿನ ಕವಿ ಮಿತ್ರರಾದ ತಮ್ಮಯ್ಯ, ವೇಣುಗೋಪಾಲ ವಹ್ನಿ, ಲಕ್ಷ್ಮೀನಾರಾಯಣ ಶಿವರಾತ್ರಿಯಂದು ಮಾಸ್ತಿ ರಂಗಮಂದಿರದಲ್ಲಿ ಈ ನಾಟಕ ಆಡಬೇಕೆಂದು ಕೋರಿದರು. ಮಾಸ್ತಿಯವರನ್ನು ನೋಡದಿದ್ದರೂ ಅವರ ಕಾಕನಕೋಟೆ ನಾಟಕವನ್ನು ಮೆಚ್ಚಿಕೊಂಡಿದ್ದ ನರಸಿಂಗರಾಯ, ಅವರ ಹೆಸರಿನ ರಂಗಮಂದಿರದಲ್ಲಿ ಆಡುವುದು ಭಾಗ್ಯವೆಂದುಕೊಂಡು ಒಪ್ಪಿಕೊಂಡ. ಬೇಡವೆಂದರು ಖರ್ಚಿನ ಮೇಲೆ ಐದು ಸಾವಿರ ಹೆಚ್ಚಿಗೆ ಕೊಡುವುದಾಗಿ ಹೇಳಿ, ಅದು ಸಂಗೀತ ಕಲಿಸಲು ಬಳಸಿಕೊಳ್ಳುವಂತೆ ಲಕ್ಷ್ಮೀನಾರಾಯಣ ಒಪ್ಪಿಸಿ ಒಪ್ಪಿಗೆಪಡೆದರು.
ಮೊದಲ ಬಾರಿಗೆ ಊರಿನಿಂದ ಹೊರಗೆ ಆಡಿದ ನಾಟಕ ಮಾಲೂರಿನ ಪ್ರೇಕ್ಷಕರ ಮನ ಮೆಚ್ಚುಗೆ ಪಡೆಯಿತು. ಇದರಿಂದ ಊರಿಗೆ ಊರೇ ಹೆಮ್ಮೆಪಟ್ಟಿತು. ನಾಟಕ ನೋಡಿ ಅಭಿಮಾನ ತಳೆದ ಬಂಗಾರಪೇಟೆಯ ಕವಿ ಚಾನ್ ಪಾಶ ಊರಿಗೇ ಬಂದು ಅಭಿನಂದಿಸಿದ್ದು ವಿಶೇಷವಾಗಿತ್ತು. ಇದು ಮಾಸ್ತಿಯವರ ಆಶೀರ್ವಾದವೆಂದು ಸುನಂದಳಿಗೆ ಹೇಳಿದ ನರಸಿಂಗರಾಯ, ಎರಡು ದಿನ ಅವಳಿಗೆ ಮಾಸ್ತಿಯವರ, ವ್ಯಕ್ತಿತ್ವ ಹಾಗು ಕೃತಿಗಳನ್ನು ಪರಿಚಯಿಸಿದ. ಆಗ ಅವಳಿಗೆ ತಿಳಿದುದೊಂದೇ ಅವರನ್ನು ಸ್ಮರಿಸಿ ನಮಸ್ಕರಿಸುವುದು.
ಈ ಹುಮ್ಮಸ್ಸಿನಲ್ಲಿ ಯುಗಾದಿ ನಂತರ ಮಾಲೂರಿನಲ್ಲಿ ಸದಾರಮೆ ನಾಟಕವಾಡುವ ಆಲೋಚನೆಗೆ ಬೆಂಬಲ ಸಿಕ್ಕಿ ಸಿದ್ಧತೆಗಳು ಪ್ರಾರಂಭವಾದ ಮೊದಲ ದಿನ ರಾತ್ರಿ ಹಾಸಿಗೆ ಮೇಲೆ ಕುಳಿತು ಗಂಡನಿಗೆ ತಾಂಬೂಲ ಮಡಚಿಕೊಡುತ್ತ ಅಮ್ಮಯ್ಯ, ನೀವು ಈ ಹಿಂದೆ ಕೇಳಬಯಸಿದ್ದ ವಿಶೇಷದ ಸುದ್ದಿ ಇಂದು ಸುನಂದ ಕೊಟ್ಟಳು. ಅವಳು ಬಸುರಾಗಿದ್ದಾಳೆ ಎಂದು ಹೇಳಿದಳು. ಅಪ್ಪಯ್ಯ ಮಡದಿಯ ಬೆನ್ನು ತಟ್ಟಿ, ಮುನೆಕ್ಕನಿಗೆ ಇದು ಗೊತ್ತೋ ಅಂದ. ಹೇಳಿದೆ ಅಂದಳು ಅಮ್ಮಯ್ಯ. ಕಾಡುತ್ತಿದ್ದ ಕೊರಗು ನೀಗಿತು ಎಂದ ಅಪ್ಪಯ್ಯ, ಎದ್ದು ಹೋಗಿ ಸುನಂದಳ ಕೆನ್ನೆ ಸವರಿ, ನರಸಿಂಗರಾಯನನ್ನು ಅಪ್ಪಿ, ಬೆನ್ನುತಟ್ಟಿ ಬಂದು, ಮಲಗಿದ್ದ ಹೆಂಡತಿಯ ಹಣೆಗೆ ಮುತ್ತುಕೊಟ್ಟು ಹಸನ್ಮುಖಿಯಾಗಿ ಮಲಗಿದ.
ಕೋಳಿ ಕೂಗಿತು. ಅಪ್ಪಯ್ಯ ಎದ್ದು ಗೋಡೆಗೊರಗಿ ಕುಳಿತು, ಎದೆಯವರೆಗೆ ಕಂಬಳಿ ಹೊದ್ದು ಕೈವಾರ ತಾತಯ್ಯನ ತತ್ವಪದ 'ಬಾರಯ್ಯ ಗೋವಿಂದ ಬಂಧಕವ ಬಿಡಿಸಯ್ಯ, ದೇಹವೆಂಬುವ ಬಂಡಿ ಎಳೆದು ಬಳಲಿದೆನೋ...' ಪದ ಪೂರ್ಣವಾಗಲಿಲ್ಲ. ಧ್ವನಿ ನಿಂತಿತು. ಅಮ್ಮಯ್ಯ ಆಶ್ಚರ್ಯದಿಂದ ಎದ್ದು ಕುಳಿತಳು. ಮೈ ಮುಟ್ಟಿದಳು, ತಟ್ಟಿದಳು. ಸ್ಪಂದನೆಯಿಲ್ಲ. ಅಯ್ಯೋ ಎಂದು ಅರಚಿ ಅವನ ಎದೆ ಮೇಲೆ ಒರಗಿದಳು. ಅರಚು ಕೇಳಿ ನರಸಿಂಗರಾಯ ಎದ್ದು ಬಂದ. ಒಲಿದು ಬಾಳಿದ ಜೀವಗಳೆರಡು ಪರಕ್ಕೆ ಸಂದಿದ್ದವು.
ಸೂರ್ಯ ಹುಟ್ಟಿದ. ಊರಿಗೂರೇ ನೆರೆಯಿತು. ದುಗ್ಗಪ್ಪ ಶೋಕವೇಕೆ? ದೇವರಾದರು ಅವರು ಅಂದು ದಂಪತಿ ಪಾದಕ್ಕೆ ಹಣೆ ತಾಕಿಸಿದ. ಗೋಡೆಗೊರಗಿ ಕುಳಿತಿದ್ದ ಮುನೆಕ್ಕ ಸ್ವರವನ್ನು ಶೋಕದಲ್ಲಿ ನೆನೆಸಿ, 'ದಾರಿಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ' ಎಂದು ಹಾಡುತ್ತಲೇ ತನ್ನ ಪಾಲಿನ ಜಗದ ಹಾಡನ್ನು ಮುಗಿಸಿದಳುದಿದು ದೈವಲೀಲೆ ಎಂದ ಬೀರಪ್ಪ. ಇದು ಆ ಕ್ಷಣದಿಂದ ಕಥೆಯಾಯಿತು.