ಸ.ರಘುನಾಥ ಅಂಕಣ: ಕಾವ್ಯದಲ್ಲಿ ಕವಿ ಚಿತ್ರಿಸಿದ ಚಿಕ್ಕಬಳ್ಳಾಪುರ ಗತವೈಭವ
ಚರಿತ್ರೆ ಹಾಗೂ ಸಾಹಿತ್ಯ ಕಟ್ಟುವ ಜನಜೀವನ ಸಂಸ್ಕೃತಿಯಲ್ಲಿ ಸ್ಥಳದ ಉಗಮ, ಪ್ರಗತಿ, ಅದರ ಏರಿಳಿಕೆಗಳ ವಿವರಗಳು ಆಯಾ ಪ್ರಕಾರದ ಗುಣಲಕ್ಷಣಗಂತೆ ಇರುತ್ತದೆ. ಈ ಎರಡಕ್ಕೆ ಪ್ರದೇಶದ ವಿಸ್ತೀರ್ಣದ ಅಳತೆ ಮುಖ್ಯವಾಗಿರದು. ಹಳ್ಳಿ, ಪಟ್ಟಣ, ರಾಜ್ಯ, ದೇಶವಿರಬಹುದು. ಅಲ್ಲಿ ಆದುದು, ಇದ್ದುದಷ್ಟೆ ಮುಖ್ಯವಾಗಿರುತ್ತದೆ. ಅದನ್ನು ಈ ಎರಡೂ ತನ್ನದೇ ಶೈಲಿಯಲ್ಲಿ ವಿವರಿಸುತ್ತವೆ ಮತ್ತು ದಾಖಲಿಸುತ್ತವೆ. ಆದರೆ ಕಾವ್ಯ ವರ್ಣನೆಯನ್ನು ಆಶ್ರಯಿಸುವುದರಿಂದ ಭವ್ಯತೆಯನ್ನು ಕಟ್ಟುತ್ತದೆ.
'ಗತ ವೈಭವ' ಬರಿದೇ ಮೆಲುಕು ಹಾಕಲಿಲ್ಲ. ಅಭಿಮಾನಕ್ಕೆ, ಮರಳಿ ಹಾಗೆ ರೂಪಿಸಲು ಪ್ರೇರಣೆಯೂ ಆಗಿರುತ್ತದೆ. ನಮ್ಮ ನುಡಿ ಗಾರುಡಿಗ, ವರಕವಿ ಬೇಂದ್ರೆಯವರು ಮೊದಲು ಬರೆದುದು ಕನ್ನಡದಲ್ಲಿ ಅಲ್ಲ. ಶ್ರೀ ಆಲೂರು ವೆಂಕಟರಾಯರ 'ಕರ್ನಾಟಕ ಗತ ವೈಭವ' ಕೃತಿಯನ್ನು ಓದಿದ ನಂತರವೆಂದು ಹೇಳುವುದುಂಟು. ಈ ಮಾತಿನಂತೆ ಅವರು ಈ ಕೃತಿಯನ್ನು ಓದದಿದ್ದರೆ ನಮಗೆ ಬೇಂದ್ರೆಯೆಂಬ ಉತ್ಕೃಷ್ಟ ಕವಿ ಅಂಬಿಕಾನಯದತ್ತ ಸಿಗುತ್ತಿರಲಿಲ್ಲ. ಇಂಥ ಬೆಲೆಗಾಗಿ ಗತವೈಭವ ನಮಗೆ ಅನಿವಾರ್ಯ. ಇದಕ್ಕೆ ಯಾವುದು 'ಕುರಿತಾ'ಗುವುದೋ ಅದು 'ಭಾವ'ವಾಗಬೇಕಾಗುತ್ತದೆ. ಇಲ್ಲಿ ಚಿಕ್ಕಬಳ್ಳಾಪುರ ನಮಗೆ ಮುಖ್ಯವಾಗುವುದು.
ಸ. ರಘುನಾಥ ಅಂಕಣ: ಕವಿ ರಾಮಚಂದ್ರ ಶರ್ಮರಿಂದ ನನಗಾದ ಕಲಿಕೆಯ ಪಾಠ
ರಾಜಕಾರಣ ಮತ್ತದರ ಆಡಳಿತ ವ್ಯವಸ್ಥೆಗಾಗಿ ಕೋಲಾರ ಜಿಲ್ಲೆ ಹೋಳಾಗಿ ಭೌಗೋಳಿಕವಾಗಿ ಚಿಕ್ಕಬಳ್ಳಾಪುರ ಗಡಿರೇಖೆ ಬರೆಯಲ್ಪಟ್ಟಿತು. ಈ ರೇಖೆಗಳ ಒಳಭಾಗ 2007ರ ಆಗಸ್ಟ್ 23ರಂದು ಚಿಕ್ಕಬಳ್ಳಾಪುರ ಜಿಲ್ಲೆಯೆಂದು ನಾಮಕರಣಗೊಂಡಿತು. ಇದನ್ನು ಒಲೆ ಬೇರೆ ಅಡುಗೆ ಮಾತ್ರ ಒಂದೆ ಎಂದು ಹೇಳಬಹುದು. ಏಕೆಂದರೆ ಈ ಹತ್ತು ವರ್ಷಗಳಲ್ಲಿ ಇಲ್ಲಿನ ಸಾಂಸ್ಕೃತಿಕ ಸಾಂಪ್ರದಾಯಿಕ ಮನಸ್ಸುಗಳು ವಿದಳನಕ್ಕೆ ಒಳಗಾದುದಿಲ್ಲ. ನೀರಾವರಿ ಹಾಗೂ ಬದುಕಿಗಾಗಿ ಹೋರಾಟಗಳು ಒಂದೇ ಮಾದರಿಯವು. ಜನಭಾಷೆ, ಸಾಹಿತ್ಯ ಭಾಷೆ ಒಂದೇ. ಇದು ಮುಖ್ಯವಾಗುವ ಸಂಗತಿ.
ಚಿಕ್ಕಬಳ್ಳಾಪುರವನ್ನು ಸ್ಥಾಪಿಸಿದ್ದು ಬೆಂಗಳೂರು ನಿರ್ಮಾತೃ ಕೆಂಪೇಗೌಡನ ವಂಶದ ಮೂಲಪುರುಷ ರಣಭೈರೇಗೌಡನ ಕೊನೆಯ ಮಗ ಮಲ್ಲಗೌಡ. ಮಲ್ಲಗೌಡನ ನಂತರ ಹತ್ತನೆಯವನಾಗಿ ಆಡಳಿತಕ್ಕೆ ಬಂದವನು ಆ(ಹಾ)ವತಿ ಬೈಚಗೌಡ. ಇವನ ಕಾಲದಲ್ಲಿ ಆಂಧ್ರ (ಗುಟೂರು) ಮೂಲದವನಾದ ಮಂಗಳಗಿರಿ ಆನಂದಕವಿ ಸಂಬಂಧಿಯಾದ ದಾನವಾಮಾತ್ಯನು ಬೈಚಗೌಡನ ಮಂತ್ರಿಯಾಗಿದ್ದ ಮಲ್ಲರಸನ ವಂಶೀಯನು. ಇವನ 'ವೇದಾಂತ ರಸಾಯನಮು' ಕೃತಿಯಲ್ಲಿ ಚಿಕ್ಕಬಳ್ಳಾಪುರವನ್ನು ವರ್ಣಿಸಿದ ಕೆಲವು ಪದ್ಯಗಳಿವೆ.
'ಬಂಗಾರದ ಗಟ್ಟಿಗಳ ನೆಲಹಾಸುಗಳು, ವಜ್ರ ಕವಾಟಗಳ ಸಮೂಹ, ಹಸಿರು ಗಿರಿಸಾಲುಗಳು, ಸುಖಕರ ಮನೆ ಸಾಲುಗಳು, ಪದ್ಮರಾಗಮಣಿ ಶೋಭಿತ ಸೌಧ ಜಾಲ, ಇಂದ್ರನೀಲಮಣಿ ಕನಕ ಮನೆ ಸಮೂಹಗಳು ಈ ಪುರದೋಳು' ಇಲ್ಲಿ ಚಿಕ್ಕಬಳ್ಳಾಪುದಲ್ಲಿ ನೆಲೆಸಿದ್ದ ಸಿರಿಯನ್ನು ವರ್ಣಿಸಿದೆ.
ಸ. ರಘುನಾಥ ಅಂಕಣ: ಶಿವ ಸಂಗಮಕ್ಕೆ ನಿಃಕಳಂಕ ಅನುವರ್ತಿ ಮಾರ್ಗ
'ಕೋಟೆಗಳ ಮೇಲ್ ಬಂಗಾರದ ಹೊಳಪಿನ ಗೋಡೆಗಳ, ಮಹಡಿಗಳ ಜಾತಿ ಕೆಂಪಹರಳು ಒಪ್ಪುವ ಬಾಗಿಲುಗಳ, ನೀರು ಕೊಳಗಳ, ಘಮ್ಮೆನ್ನುವ ಹೂದೋಟಗಳ, ಅಧಿಕ ವೈಭವದಿ ಅಮರಾವತಿಯ ಅಣಕಿಸುವ ನಗರಕ್ಕೆ ಸರಿಸಮವೇ ಹುಡುಕಿದರು' ಇಲ್ಲಿ ಅಂದಿನ ಪರಿಸರ ಸಿರಿಯನ್ನು ಕಾಣುತ್ತೇವೆ.
ಇಲ್ಲಿ- ಚಿಕ್ಕಬಳ್ಳಾಪುರದಲ್ಲಿ- 'ಶ್ರೇಷ್ಠ ಜಂಬೂನದದ ರತ್ನ ಸೌಧದಲ್ಲಿ ಕಾಂತೆಯರ ಅಡುಗೆಗಳಿಂದ ಹೊಮ್ಮುವ ಪರಿಮಳ. ಸುಧೆಯ ನದಿಯ ತಾವರೆಯ ಬಳಿ ಸಂಭ್ರಮಿಸುವ ದುಂಬಿಗಳು ಬರೆವ ನಾದ ರಮಣೀಯತೆಯಿಂದ 'ಜಿನಬಲ್ಲಾಪುರ ಮೊಪ್ಪುನೆಪುಡು ರಮಾಸೀಮಂತಿನೀ ವಾಸಮೈ' (ಚಿಕ್ಕಬಳ್ಳಾಪುರ ಒಪ್ಪುತಿದ್ದುದು ಸದಾ ರಮಾಕಾಂತೆಯ ನಿವಾಸವಾಗಿ). ಇಲ್ಲಿನ ಸ್ತ್ರೀಯರು ಮಾಡುತ್ತಿದ್ದ ಅಡುಗೆಗಳ ವಾಸನೆ (ನಗರದಲ್ಲಿ)ತುಂಬಿರುತ್ತಿತ್ತು. ನದಿಯಲ್ಲಿ ತಾವರೆಗಳಿದ್ದು, ದುಂಬಿಗಳು ಬಂದು ರಮಣೀಯ ನಾದ ಮಾಡುತ್ತಿದ್ದವು. ಹೀಗೆ ಚಿಕ್ಕಬಳ್ಳಾಪುರ ನಿತ್ಯ ಲಕ್ಷ್ಮೀ ನಿವಾಸವಾಗಿ ಒಪ್ಪುತ್ತಿತ್ತು. ಇದಿಷ್ಟೇ ಅಲ್ಲ, 'ಒಬ್ಬೊಬ್ಬನೂ ಧೀರ ಗಂಡಾಗಿದ್ದನು. ಯುದ್ಧಗಳಲ್ಲಿ ಜಯಕ್ಕೆ ಹೆಸರಾದ ಪ್ರಭುಗಳು, ಭುಜಬಲ ದಿಗ್ಗಜರು, ಭಟರು ಈ ಪುರದಲ್ಲಿ ಇದ್ದರು.' ಎಂದು ಹೇಳಿ, ಚಿಕ್ಕಬಳ್ಳಾಪುರ 'ಗಂಡು'ಗಳ ಸೀಮೆಯೆಂದು ಕವಿ ಸಾರಿದ್ದಾನೆ.
Recommended Video
ಇದಕ್ಕೆ ಜೊತೆಗೂಡಿ ಜಾನಪದ ಗೀತೆಗಳೂ ಇವೆ. 'ಚಿಕ್ಕಬಳ್ಳಾಪುರದವಳು' ಎಂಬ ಈ ತೆಲುಗು ಪದದಲ್ಲಿ ಹೆಣ್ಣೊಬ್ಬಳು ತನಗಿಷ್ಟವಾದ ಸೀರೆಯನ್ನು ತನ್ನ ದುಡಿಮೆಯಿಂದ ಕೊಂಡಬಗೆಯನ್ನು ಪ್ರಿಯಕರನಿಗೆ ಹೇಳುತ್ತಾಳೆ. 'ಹುಲ್ಲು ಮಾರಿ, ಸೌದೆ ಮಾರಿ ತಾಳೆಗರಿಯ ಸೀರೆ ಕೊಂಡಳಂತೆ. ಅವಳು ನೆರಿಗೆಯಿಟ್ಟು ಸೀರೆ ಉಡಲು ನೆರಿಗೆಯಿಂದ ಓಲೆಗಳು ಹೊರಬಿದ್ದವಂತೆ. ಕಂಚಿ ಜಾತಿಯ ಮೇಕೆ ಹಾಲನ್ನು ತಲೆಗೂದಲಿಗೆ ಸವರಿ ನೀಳ ಕೂದಲನ್ನು ಬೆಳೆಸಿದಳಂತೆ,' ಇದು ಶ್ರಮಿಕ ಹೆಣ್ಣಿನ ಅಲಂಕಾರ ಪ್ರಿಯತೆಯನ್ನೂ, ಕೂದಲು ಬೆಳೆಸುವ ವೈದ್ಯವನ್ನು ತಿಳಿಸುತ್ತದೆ.
ಇಂತಹ ಆಕರಗಳು ನಮ್ಮವರ ಬದುಕಿನ ಚಿತ್ರವನ್ನು ಮಾತ್ರ ಬಿಡಿಸವುದಿಲ್ಲ. ಆ ಬದುಕನ್ನು ಹಿಡಿದು ವರ್ತಮಾನದ ಬದುಕನ್ನು ಹಸನಾಗಿ ಕಟ್ಟುವ ಆದರ್ಶವನ್ನು ನಮ್ಮ ಕಣ್ಮನಗಳಿಗೆ ತೆರೆಯುತ್ತವೆ. ಹಾಗೆಯೇ ಅಭಿಮಾನಧನರಾಗಲು ಪ್ರೇರಕವೂ ಆಗುತ್ತವೆ. ಇಲ್ಲಿ ಉಕ್ತವಾದ ಸಂಗತಿಗಳು ಮೌಲ್ಯಿಕವಾದವು ಎಂಬುದನ್ನು ಗ್ರಹಿಸಿದಾಗ ಮಾತ್ರ ನಾವು ಅಂದು ಹಾಗಿದ್ದ ನಾಡನ್ನು ಇಂದೂ ಕಟ್ಟುವುದು ಸಾಧ್ಯ.
ಸ.ರಘುನಾಥ