ಸೋಮಾರಿ ಸುಖದ ಹೊರತು ಮತ್ತೇನು ಕಾರಣವಿರಲು ಸಾಧ್ಯ?
ಆದರೆ
ಬದುಕಿನಲ್ಲಿ
ಗುರಿಯೇ
ಇಟ್ಟುಕೊಳ್ಳದವರಿಗೆ
ಇಂಥ
ಯಾವ
ಹಳಹಳಿಯೂ
ಇರುವುದಿಲ್ಲ.
ಕಾಲ
ತಮ್ಮನ್ನು
ಕೊಂದು
ಮುಂದಕ್ಕೆ
ಸಾಗುತ್ತಿದೆ
ಅಂತ
ಅವರಿಗೆ
ಗೊತ್ತಾಗಿಯೇ
ಇಲ್ಲ.
ಗುರಿ
ತಲುಪಲಿಕ್ಕೆ
ಆಗದಿದ್ದರೆ
ಆ
ಮಾತು
ಬೇರೆ.
ತಲುಪದೆ
ಹೋಗುವುದಕ್ಕೆ
ಸಾವಿರ
ಕಾರಣಗಳಿರಬಹುದು.
ಆದರೆ
ಗುರಿಯನ್ನೇ
ಇಟ್ಟುಕೊಳ್ಳದಿರುವುದಕ್ಕೆ
ಮೂರ್ಖತನ,
ದಡ್ಡತನ,
ಸೋಮಾರಿತನ
ಹಾಗೂ
ಸೋಮಾರಿ
ಸುಖದ
ಆಸೆಯ
ಹೊರತು
ಮತ್ತೇನು
ಕಾರಣವಿರಲು
ಸಾಧ್ಯ?
ರಾಜ್ಯದ ಹಿರಿಯ ವಕೀಲರೂ, ನನ್ನ ಹಿರಿಯ ಮಿತ್ರರೂ ಆದ ಸಿ.ಎಚ್.ಹನುಮಂತರಾಯ ಅವರು ಬರೆದ ವಕೀಲರೊಬ್ಬರ ವಗೈರೆಗಳುಪುಸ್ತಕವನ್ನು ಮತ್ತೊಬ್ಬ ಹಿರಿಯರಾದ ಶರತ್ ಕಲ್ಕೋಡ್ ಓದುತ್ತಿದ್ದರು.
ಎಂಥ ಅದ್ಭುತ ಪುಸ್ತಕ ಮಾರಾಯರೇ, ಅದರಲ್ಲಿನ ಒಂದೇ ಒಂದು ಸಾಲು ನನ್ನ ಕಣ್ಣೆದುರಿಗೆ ಹೊಸ ಬೆಳಕಿನ, ಹೊಸ ಜಗತ್ತಿನ ಅನಾವರಣವನ್ನೇ ಮಾಡಿಬಿಟ್ಟಿತುಅಂತ ಉದ್ಗರಿಸಿದರು ಕಲ್ಕೋಡ್.
ಅದು ಯತಿರಾಜುಲು ನಾಯ್ದು ಮತ್ತು ದಾಸ್ ಗುಪ್ತಾ ಎಂಬಿಬ್ಬರು ಹಿರಿಯರಿಗೆ ಸಂಬಂಧಿಸಿದ ಪ್ರಸ್ತಾಪ. ಮೈಸೂರು ರಾಜ್ಯದ ಹೈಕೋರ್ಟಿಗೆ ಛೀಫ್ ಜಸ್ಟೀಸ್ ಆಗಿ ಬಂದು, ಇಲ್ಲಿ ಎಲ್ಲರ ಮನಗೆದ್ದ ಪ್ರಾಮಾಣಿಕ ನ್ಯಾಯಮೂರ್ತಿ, ಪಶ್ಛಿಮ ಬಂಗಾಳದ ಮೂಲದವರಾದ ದಾಸ್ ಗುಪ್ತಾ ಅವರನ್ನು ನೆನೆಸಿಕೊಂಡು ಯತಿರಾಜುಲು ಅವರು ಮಾಡಿದ ಭಾಷಣದ ಕುರಿತು ಬರೆಯುತ್ತಾರೆ ಹನುಮಂತರಾಯ. ಅವರ ಪ್ರಾಮಾಣಿಕತೆ, ನ್ಯಾಯಾಂಗದೆಡೆಗಿನ ಕಮಿಟ್ಮೆಂಟ್ ಎಂಥದ್ದಿತ್ತೆಂಬುದನ್ನು ವಿವರಿಸುತ್ತಾರೆ.
ಭಾಷಣ ಮಾಡಿ ವಾಪಸು ಹೊರಟ ಯತಿರಾಜುಲು, ಕಾರಿನ ತನಕ ಹೋಗಿ ಒಳಕ್ಕೆ ಹತ್ತುವ ಮೊದಲು ಹನುಮಂತರಾಯರ ಕೈಗಳನ್ನು ಹಿಡಿದುಕೊಂಡು ಆಡಿದ ಮಾತುಗಳನ್ನು ಉದ್ಧರಿಸುತ್ತಾರೆ. ಗುರಿ ತಲುಪದೆ ಇರುವುದು ದರುಂತವಲ್ಲ : ಆದರೆ, ಜೀವನದಲ್ಲಿ ಗುರಿಯನ್ನೇ ಇಟ್ಟುಕೊಳ್ಳದಿರುವುದು ಮಹಾ ದುರಂತಎಂಬ ಮಾತನಾಡಿದ್ದರಂತೆ ಯತಿರಾಜುಲು.
ಇವತ್ತಿಗಲ್ಲ, ಯಾವ ಕಾಲಕ್ಕೂ ಅದು ಸತ್ಯವಾದ ಮಾತೇ. ನಮ್ಮಲ್ಲಿ ಅನೇಕರಿಗೆ ಬದುಕಿಗೆ ಸಂಬಂಧಿಸಿದಂತೆ ಒಂದು ಫೋಕಸ್ಸೇ ಇರುವುದಿಲ್ಲ. ಅವರ ಕಣ್ಣೆದುರಿಗೆ ಗುರಿಗಳೇ ಇರುವುದಿಲ್ಲ. ಯಾರಾದರೂ ಕೇಳಿದರೆ ಅದಾಗ ಬೇಕು, ಇದಾಗಬೇಕು ಅನ್ನುತ್ತಿರುತ್ತಾರೆಯೇ ಹೊರತು ಹತ್ತು ವರ್ಷದ ನಂತರ ತಾವು ಏನಾಗಬೇಕಿತ್ತು ಮತ್ತು ಏನಾಗಿರಬಹುದು ಎಂಬುದರ ನಿಚ್ಚಳ ಕಲ್ಪನೆಯೇ ಇರುವುದಿಲ್ಲ.
ಅಫ್ ಕೋರ್ಸ್, ಬದುಕು ನಾವಂದುಕೊಂಡ ಹಾಗಿರುವುದಿಲ್ಲ, ಆ ಮಾತು ಬೇರೆ. ಆದರೆ ಬದುಕಿನಲ್ಲಿ ಪ್ರತಿಯೊಂದು ಅನಿರೀಕ್ಷಿತವಾಗೇನೂ ಇರುವುದಿಲ್ಲವಲ್ಲ? ಕೆಲವು ತಿರುವುಗಳು ಸ್ಪಷ್ಟವಿರುತ್ತವೆ. ಕೆಲವನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಇನ್ನೊಂದು ವರ್ಷದೊಳಗಾಗಿ ನಾನು ಹೀಗಿರುತ್ತೇನೆ, ಇಂಥ ಟಾರ್ಗೆಟ್ ತಲುಪಿರುತ್ತೇನೆ, ಇಷ್ಟು ದುಡಿಯುತ್ತೇನೆ, ಇಂತಿಷ್ಟು ಉಳಿಸಿರುತ್ತೇನೆ, ಈ ಸಾಧನೆ ನನ್ನದಾಗಿರುತ್ತದೆ -ಅಂತ ನಿರ್ಧರಿಸಿ ಅದರಂತೆ, ಅದಕ್ಕಾಗಿ ಬದುಕುವುದೂ ಸಾಧ್ಯವಿದೆಯಲ್ಲ?
ಅಂಥ ಸಾಧ್ಯತೆಗಳ ಬಗ್ಗೆ ಅನೇಕರು ಯೋಚಿಸಿರುವುದಿಲ್ಲ. ಲಕ್ಕು, ಇನ್ನುಫ್ಲುಯೆನ್ಸ್ ಅಥವಾ ಮತ್ಯಾವುದೋ ಪವಾಡವನ್ನು ನಿರೀಕ್ಷಿಸುತ್ತಾ ಕುಳಿತಿರುತ್ತಾರೆ. ಮುಂದಿನ ಸಲ ಕಾಂಗ್ರೆಸ್ ಸರ್ಕಾರ ಬಂದು ಬಿಟ್ಟರೆ, ನಮ್ಮ ಅಂಕಲ್ ಮಾತು ನಡೆದು, ಒಂದು ಸರ್ಕಾರಿ ಕೆಲಸ ಸಿಕ್ಕು..ಅಂತ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಾರೆಯೇ ಹೊರತು ಕಾಂಗ್ರೆಸ್ ಸರ್ಕಾರ ಬರುವ ತನಕ ಖಾಲಿ ಕೂಡುವ ಬದಲು, ಮತ್ತೊಂದು ಪುಟ್ಟ ಸಾಧನೆಯತ್ತ ಕಣ್ಣು ಕೀಲಿಸಬಹುದಲ್ಲ ಅಂತ ಅವರಿಗೆ ಅನ್ನಿಸುವುದೇ ಇಲ್ಲ. ಮುಂದಿನ ಏಪ್ರಿಲ್ ತಿಂಗಳಿಂದ ನನ್ನ ಗ್ರಹಗತಿ ಚೆನ್ನಾಗಿವೆಯಂತೆ..ಅಂತ ಮಾತಾಡಿಕೊಂಡು ಕಾಲ ಹಾಕುತ್ತಿರುತ್ತೇವೆ. ಅವರು ಯಾವ ವಿಷಯದ ಕುರಿತಾಗಿಯೂ ಫೋಕಸ್ ಆಗಿರುವುದಿಲ್ಲ. ತಮ್ಮ ಭ್ರಮೆ ಮತ್ತು ನಿರೀಕ್ಷೆಗಳಲ್ಲೇ ದಿನ, ವಾರ, ವರ್ಷ, ದಶಕಗಳನ್ನು ಕಳೆದುಬಿಟ್ಟಿರುತ್ತಾರೆ.