ಅವಸರದಲ್ಲಿ ಅಜ್ಜಿ ಮೈನೆರೆತ ಹಾಗೆ...
ಪತ್ರಿಕೆ
ಜೊತೆಗೆ
ಟೀವಿ,
ರೇಡಿಯೋ,
ಶಾಲೆ,
ಸಿನಿಮಾ
ಎಲ್ಲೆಲ್ಲೂ
ರವಿ...
ಅಂದ್ರೆ;
ರವಿ
ಬೆಳಗೆರೆ!
ಜೊತೆಗೆ
ಇನ್ನೇನು
ಸತ್ತು
ಹೋಯಿತು
ಎಂದು
ಎಲ್ಲರೂ
ಭಾವಿಸಿದ್ದ,
ಬೆಳಗೆರೆಯ
ಕನಸು
‘ಓ
ಮನಸೇ...’
ಪಾಕ್ಷಿಕಕ್ಕೆ
ಮತ್ತೆ
ಜೀವ
ಬಂದಿದೆ.
ಈ
ಎಲ್ಲದರ
ಮಧ್ಯೆ,
ಓದುಗರ
ಜೊತೆ
ಒಂದು
ಕುಶಲೋಪರಿ.
- ರವಿ ಬೆಳಗೆರೆ
ಅಂಥದೊಂದು ಸಾಲ ನೀವೂ ಮಾಡಿಕೊಂಡಿದ್ದಿರಬಹುದು. ಫಜೀತಿಗೆ ಸಿಕ್ಕುಬಿದ್ದಿರಬಹುದು. ಅವಮಾನಗಳಾಗಿರಬಹುದು. ಊರೇ ಬಿಟ್ಟು ಬಿಡೋಣ ಅನ್ನಿಸಿರಬಹುದು. ಜೀವನವೇ ಬೇಡ ಅನ್ನಿಸಿರಬಹುದು. ಆದರೆ ಎಲ್ಲೋ ಒಂದು ಬೆಳಕು ಹರಿದು, ಸಾಲದ ಋಣ ತೀರಿಸಿ ಕಡೆಗೊಮ್ಮೆ ಮುಕ್ತರಾಗಿಯೇ ಇರುತ್ತೀರಲ್ಲವೆ? ಹಾಗೆ ಮುಕ್ತರಾದ ಕಥೆ ನಮ್ಮೊಂದಿಗೆ ಹಂಚಿಕೊಳ್ಳಿ. ಸಾಲ ಮಾಡಿದ್ದಕ್ಕೆ ಕಾರಣ, ಅವತ್ತಿನ ಪರಿಸ್ಥಿತಿ, ಅನುಭವಿಸಿದ ಫಜೀತಿಗಳು, ಕಡೆಗೆ ಪಾರಾದ ಬಗೆ -ಎಲ್ಲವನ್ನು ಚಿಕ್ಕದಾಗಿ ಚೊಕ್ಕವಾಗಿ ‘ದಿಲ್ ನೆ ಫಿರ್ ಯಾದ್ ಕಿಯಾ...’ ಅಂಕಣಕ್ಕೆ ಬರೆದು ಕಳಿಸಿ.(ವಿಳಾಸ : ಹಾಯ್ ಬೆಂಗಳೂರ್!, ನಂ.2, ಪೆಟ್ರೋಲ್ ಬಂಕ್ ಬಳಿ, 80ಅಡಿ ರಸ್ತೆ, ಕದಿರೇನಹಳ್ಳಿ, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070)
ಯಾವತ್ತೋ ಮಾಡಿದ ಸಾಲ, ತೀರಿಸಲಾಗದೆ ಮುಖ ತಪ್ಪಿಸಿ, ಊರು ಬಿಟ್ಟು, ಮತ್ತೆ ಯಾವತ್ತೋ ಅದನ್ನು ತೀರಿಸುವ ಚೈತನ್ಯ ಬಂದು ವಾಪಸು ಕೊಟ್ಟಿರಬಹುದು. ಹುಡುಕಿಕೊಂಡು ಹೋಗಿ ಸಾಲ ಮುಟ್ಟಿಸಿ ಬಂದಿರಬಹುದು. ಆದ ಆಚಾತುರ್ಯಕ್ಕೆ ನೊಂದುಕೊಂಡಿರಬಹುದು. ಅಂಥ ಎಲ್ಲ ಅನುಭವಗಳನ್ನುಹಂಚಿಕೊಳ್ಳಿ. ಪುಟಗಳು ರುಚಿಯೇರಲಿ.
ಕಳೆದ ವಾರದ ಸಂಚಿಕೆಯಾಂದಿಗೆ ‘ಓ ಮನಸೇ’ ತಲುಪಿಸಿದ್ದಕ್ಕೆ ದೊರೆಗಳಿಂದ ಶಭಾಷ್ಗಿರಿ ಸಿಕ್ಕಿದೆ. ನೀವು ಹೊಸ ಓದುಗರನ್ನು ಪರಿಚಯಿಸಿದ್ದಕ್ಕಾಗಿ ಆ ಪತ್ರಿಕೆಯ ಸರ್ಕ್ಯುಲೇಷನ್ನೂ ಹೆಚ್ಚುತ್ತಿದೆ. ತುಂಬ ದಿನ ಈಗಿರುವ ಒಂಬತ್ತು ರುಪಾಯಿಗಳಿಗೆ ಆ ಪತ್ರಿಕೆಯನ್ನು ಕೊಡುವುದು ಸಾಧ್ಯವಾಗಲಿಕ್ಕಿಲ್ಲ. ಆದರೆ ಈಗಿರುವುದಕ್ಕಿಂತ ಚೆಂದಗೆ ಮಾಡಿಕೊಡುವ ಉತ್ಸಾಹವಂತೂ ನನ್ನಲ್ಲಿ ಮತ್ತು ಕಲ್ಕೋಡ್ರ ಟೀಮಿನಲ್ಲಿದೆ. ನಿಮ್ಮ ಹಾರೈಕೆ ಇರಬೇಕಷ್ಟೆ.
ದುಡ್ಡು-ಕಾಸಿನ ಲಾಭವಾಗದಿದ್ದರೂ, ಪ್ರತಿ ಬೆಳಗ್ಗೆ ಎಫ್.ಎಂ. ರೇನ್ ಬೋ ಕಾರ್ಯಕ್ರಮ ನಡೆಸಿಕೊಡುತ್ತಿರುವುದರಲ್ಲಿ ಮನಸ್ಸಿಗೊಂದು ಸಮಾಧಾನವಂತೂ ಸಿಗುತ್ತಿದೆ. ಕಾರ್ಯಕ್ರಮದ ಪಾಪ್ಯುಲಾರಿಟಿ ಎಷ್ಟು ಹೆಚ್ಚಿದೆಯೆಂದರೆ, ಬೆಳಗ್ಗೆ ‘ರವಿ ಬೆಳಗೆರೆ @8am ಓ ಮನಸೇ...’ ಕಾರ್ಯಕ್ರಮವನ್ನೇ ಮತ್ತೆ ರಾತ್ರಿ ರವಿ ಬೆಳಗೆರೆ @8pm ಓ ಮನಸೇ... ಅಂತ ಮರು ಪ್ರಸಾರ ಮಾಡುವುದಕ್ಕಾಗಿ ರೇನ್ ಬೋ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಒಂದು ಹಗಲು, ಬೆಳಗ್ಗೆ ಎಂಟರಿಂದ ಸಂಜೆ ಐದರ ತನಕ ಕೂತು ಒಟ್ಟಿಗೆ ಐದು ಕಾರ್ಯಕ್ರಮ ರೆಕಾರ್ಡ್ ಮಾಡಿ ಕೊಟ್ಟು ಬಿಡುವ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದ್ದೇನೆ. ಅದು ಸಾಧ್ಯವಾದರೆ, ಕೆಲಸ ನಿಜಕ್ಕೂ ಸರಾಗ, ನಿರಾಳ.
ಇದೆಲ್ಲದರ ಮಧ್ಯೆ, ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯನ್ನ ನೀವು ನೋಡ್ತಾ ಇದ್ದೀರಾದರೆ, ಅದರಲ್ಲಿ ಇತ್ತೀಚೆಗೆ ನಾನು ಧುತ್ತರಿಸಿದ್ದೇನೆ. ಪಾತ್ರ ವಕೀಲನದು, ಹೆಸರು ಹಿಮವಂತ್. ‘ಜಡ್ಜು ನೌಕರಿಯಿಂದ ಹಿಂಬಡ್ತಿ ಸಿಕ್ಕು ವಕೀಲರಾದಿರಾ?’ ಅಂತ ಗೆಳೆಯರ್ಯಾರೋ ಕೇಳಿದರು. ‘ಜಡ್ಜು ನಿವೃತ್ತನಾಗಿ ವಕೀಲನಾಗಿದ್ದಾನೆ!’ ಅಂದೆ.
ಇರುವ ಕೆಲಸಗಳ ಮಧ್ಯೆಯೇ ಎಲ್ಲದಕ್ಕೂ ಸವಡು ಮಾಡಿಕೊಳ್ಳಬೇಕು. ಅವಸರಕ್ಕೆ ಅವಸರವೂ ಇರಬೇಕು : ಅದು ಬದುಕು.