ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಣನೊಂದಿಗೆ ಜಾಣನೊಬ್ಬ ಹತ್ತು ನಿಮಿಷವಿದ್ದರೆ ಸಾಕು...

By Staff
|
Google Oneindia Kannada News


ರಿಲಿಜಿಯನ್‌ ಅನ್ನೋದು ಎರಡು ಅತಿರೇಕಗಳಿಗೆ ಮನುಷ್ಯನನ್ನು ಒಯ್ದು ಬಿಡುತ್ತದೆ. ಒಂದೋ, ದೇವರಿಗೆ ಚಿನ್ನದ ಕಣ್ಣು ಮಾಡಿಸಿ, ಕಳಸ ಕಟ್ಟಿಸಿ, ಗುಡಿಯಲ್ಲಿ ಗಂಟೆ ನೇತಾಡಿಸಿ, ಅದಕ್ಕೆ ತಮ್ಮ ಹೆಸರು ಬರೆಸಿ, ಕರೀ ಅಂಗಿ-ಪಂಚೆ ಹಾಕಿಕೊಂಡು, ಹೆಂಗಸರಿಂದ ದೂರ ಉಳಿದು ‘ಅಯ್ಯಪ್ಪೋ...’ ಅಂತ ಭಜನೆ ಕುಣಿಯುವ ಅಪಹಾಸ್ಯಕರ ಉನ್ಮಾದ ಅಥವಾ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡು, ಹೆದರಿಕೆಯಾಗುವಷ್ಟು ಗಂಭೀರವಾಗಿ ತಯಾರಾಗಿ, ಸರ್ವಸಂಗ ಪರಿತ್ಯಾಗದ ದಿರಿಸು ಧರಿಸಿ ಜೀವ ವಿಮುಖರಾಗಿಬಿಡುವ ಇನ್ನೊಂದು ಅಪಹಾಸ್ಯಕರ ಸ್ಥಿತಿ!

ಇವೆರಡರಿಂದಲೂ ತಪ್ಪಿಸಿಕೊಳ್ಳಬೇಕೆಂದರೆ ಸತ್ಯಕಾಮರು ಬೋಧಿಸಿದ ತಂತ್ರವನ್ನು ಕಲಿಯಬೇಕು. ರಜನೀಶ್‌ ರೂಢಿಸಿಕೊಂಡ್ದಿ ತುಂಟತನ, ತಮಾಷೆ, ಉಲ್ಲಾಸ, ಆನಂದಗಳಿಂದ ಕೂಡಿದ ಧರ್ಮವನ್ನು ಅಂಗೀಕರಿಸಿಕೊಳ್ಳಬೇಕು. ಕೃಷ್ಣ ಅಂಥದ್ದೊಂದು ಉಲ್ಲಾಸಕರ ಧರ್ಮವನ್ನು ಬೋಧಿಸಿದ್ದ. ಅದರಲ್ಲಿ ಮದ, ಮೋಹ, ಮತ್ಸರ, ಕಾಮ, ಪ್ರೇಮ, possessiveness -ಎಲ್ಲವೂ ಇದ್ದವು. ಅವೆಲ್ಲವನ್ನೂ ಅನುಭವಿಸುತ್ತ, ಅನುಭವಿಸುತ್ತಲೇ ಮೀರುವಂಥ ಮಜಾ ಆತನ ಧರ್ಮದಲ್ಲಿತ್ತು. ಆದರೆ ಕರ್ಮಠರು ಆ ಧರ್ಮಕ್ಕೆ ಜನಿವಾರ-ಜುಟ್ಟು ನಾಮ-ಜಪಸರ ನೇತು ಹಾಕಿ, ಅದರ ಆನಂದ ಕೊಂದುಬಿಟ್ಟರು.

ಅವರು ಕೊಂದ ಆನಂದವನ್ನು ಮತ್ತೆ ಜಾರಿಗೆ ತರಲೆಂದೆ ಈ ಸತ್ಯಕಾಮ, ರಜನೀಶ್‌, ಗುಡಿಪಾಟು ವೆಂಕಟಚಲಂ ಮುಂತಾದವರೆಲ್ಲ ಶ್ರಮಿಸಿದ್ದು. ಅದಕ್ಕೆಂದೇ ಗುರುವನ್ನು ಬದಲಿಸಿ, ಹೆಗಲಿಂದ ಕೆಳಕ್ಕಿಳಿಸಿ ಮುಂದಕ್ಕೆ ನಡೆಯುತ್ತಿರು ಅಂತ ಸತ್ಯಕಾಮ insist ಮಾಡಿದ್ದು. ಇವತ್ತು ಕೂತು ಯೋಚಿಸಿದರೆ, ಇಷ್ಟು ಚಿಕ್ಕ ಅವಧಿಯಲ್ಲಿ ಎಷ್ಟು ಜನ ಗುರುಗಳ ಕೈಹಿಡಿದು, ಕೈಬಿಟ್ಟು ಈ ದಾರಿ ನಡೆದೆನಲ್ಲ ಅನ್ನಿಸುತ್ತದೆ. ನಾನು ಕೈಹಿಡಿದು ನಡೆದ ಯಾವ ಗುರುವೂ ನನಗೆ ದಾರಿತೋರಿಸಲಿಲ್ಲ. ದಾರಿ ಮಾಡಿಕೊಳ್ಳುವುದು ಹೇಗೆಂದು ತೋರಿಸಿಕೊಟ್ಟ. ಏಕೆಂದರೆ ಆ ಗುರುವು ಕೂಡ ತನ್ನದೇ ದಾರಿ ಹಾಕಿಕೊಳ್ಳುತ್ತ, ದಾರಿ ಮಾಡಿಕೊಳ್ಳುತ್ತ, ದಾರಿನಿರ್ಮಿಸಿಕೊಳ್ಳುತ್ತ ನಡೆಯುವವನಾಗಿದ್ದ.

ಪಾ.ವೆಂ.ಆಚಾರ್ಯರು ಅಂಥ ಗುರುವಾಗಿದ್ದರು. ಶಾಮರಾಯರು ಅಂಥ ಗುರುವಾಗಿದ್ದರು. ಲಂಕೇಶರು ಕೂಡ. ಇವರಿಗೆ ಯಾರ್ಯಾರು ಶಿಷ್ಯರಾಗಿ, ಇವರೊಂದಿಗೆ ಯಾರ್ಯಾರು ಶಾಶ್ವತವಾಗಿ ನಿಂತರೋ-ಅವರೆಲ್ಲ ಅಲ್ಲೇ ಉಳಿದರು! ಅದು ನಿಜವಾದ ಅಪಾಯ. ಒಬ್ಬ ಮನುಷ್ಯನಿಂದ ನಾವು ಕಲಿಯಬೇಕಾದ್ದು ತುಂಬ ಇರುತ್ತದೆ; ನಿಜ.

ಆದರೆ ಕಲಿಯುವುದು ಹೇಗೆ ಮತ್ತು ಏನನ್ನು ಕಲಿಯಬೇಕು ಎಂಬುದನ್ನಷ್ಟೇ ನಾವು ಗುರುವಿನಿಂದ ಕಲಿತರೆ ಸಾಕು. ಅವನಿಂದ ಕಲಿಯಬೇಕಾದ್ದು ಮತ್ತೇನೂ ಇರುವುದಿಲ್ಲ. ಜಾಣನೊಂದಿಗೆ ಇನ್ನೊಬ್ಬ ಜಾಣ ಹತ್ತು ನಿಮಿಷವಿದ್ದರೂ ಸಾಕು. ಕಲಿಯಬೇಕಾದ್ದನ್ನು ಕಲಿತು ಬಿಡುತ್ತಾನೆ. ಉಳಿದದ್ದನ್ನು ಅವನಿಗೆ ಅವನ ಬದುಕು, ಅವನ ಎಕ್ಸ್‌ಪೀರಿಯನ್ಸ್‌, ಅವನ ಎಕ್ಸ್‌ಪೆರಿಮೆಂಟು ಕಲಿಸುತ್ತದೆ. ಅದು ಬಿಟ್ಟು, ಗುರುವಿನೊಂದಿಗೆ ಕಡೆತನಕ ಉಳಿದರೆ, ಗುರುವಿನಂತೆ ಅವನೂ ನಿಂತ, ಮಲೆತ ನೀರೇ! ಬುದ್ಧಿವಂತನಾದರೆ ಗುರುವೇ ಅವನನ್ನು ದೂರಕ್ಕೆ ಓಡಿಸುತ್ತಾನೆ. ಏಕೆಂದರೆ ಗುರುವಿಗೆ ಮತ್ತೊಬ್ಬ ಗುರುವನ್ನು ಹುಡುಕಿಕೊಳ್ಳಬೇಕಿರುತ್ತದೆ.

ಸಾಯಿಬಾಬಾನ ಶಿಷ್ಯರು ‘ನ ಗುರೋರಧಿಕಂ’ಅನ್ನುತ್ತಾರೆ. ಗುರುವಿಗಿಂತ ಅಧಿಕವಾದದ್ದಿಲ್ಲ ಅಂತ ಅರ್ಥ. ಅಧಿಕ ಗುರುಗಳನ್ನು ಹೊಂದಬೇಕು ಎಂಬುದು ಗೊತ್ತಿಲ್ಲದ ಜನ.

‘ನಮ್ಮ ಗುರುಗಳು ಹೇಳಿದ್ದನ್ನ ಅರ್ಥ ಮಾಡಿಕೊಳ್ಳೋದಕ್ಕೆ ಒಂದು ಜನ್ಮ ಸಾಲದು’ ಅಂತ ಯಾರಾದರೂ ಅಂದರೆ, ಅವರಿಗೆ ನೇರವಾಗಿ ಹೇಳಿ : ಈ ಜನ್ಮಕ್ಕಾಗುವಷ್ಟನ್ನು ಬೋಧಿಸಿ ಮುಂದಕ್ಕೆ ಹೋಗುವವನೇ ನಿಜವಾದ ಗುರುವು. ಜನ್ಮವಿಡೀ ಶಿಷ್ಯರನ್ನು ಕಟ್ಟಿಕೊಂಡು ಕೂಡುವವನು ಶಿಷ್ಯರಷ್ಟೇ ದಡ್ಡ.

ತುಂಬ ಚೆನ್ನಾಗಿ ಪಾಠ ಮಾಡ್ತಾರೆ ಎಂಬ ಕಾರಣಕ್ಕೆ ಜೀವನ ಪರ್ಯಂತ ಎಂಟನೇ ಕ್ಲಾಸಿನಲ್ಲಿಯೇ ಕೂಡಲಾಗುತ್ತದೆಯೇ? ದಡ್ಡ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X