ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರೊಂದು ವಿಲಕ್ಷಣ ಸ್ಪರ್ಧೆಗೆ ಬಿದ್ದಿರುತ್ತಾರೆ, ಗಮನಿಸಿದ್ದೀರಾ?

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ನನಗೆ ಅಂಥವರನ್ನು ಆಬ್ಸರ್ವ್‌ ಮಾಡ್ತಾ ಇರೋದೊಂದು ಚಟ. ಅವರು ಕೂಡ ಬಲುಬೇಗ ಕಣ್ಣಿಗೆ ಬೀಳುತ್ತಾರೆ. ನಾವು ಅದರೊಳಗೊಬ್ಬರಾಗಿ ಬಿಡದೆ, ಅನತಿ ದೂರ ನಿಂತು ಸುಮ್ಮನೆ ಗಮನಿಸುತ್ತ ನಿಂತರೆ ನಿಜಕ್ಕೂ ಇಂಟರೆಸ್ಟಿಂಗ್‌ ಆಗಿರುತ್ತದೆ.

ಅಯ್ಯಪ್ಪ ಸ್ವಾಮಿ seasonನಲ್ಲಿ ಮಾಲೆ ಹಾಕುವವರ ಗುಂಪೊಂದು ಊರಿನಲ್ಲಿ ಸಿದ್ಧವಾಗುತ್ತದೆ. ಅವರಿಗೆ ಅವರದೇ ಪ್ರಪಂಚ. ಅದರಲ್ಲೊಬ್ಬ ಸೀನಿಯರ್ರು ‘ಗುರುಸ್ವಾಮಿ’ ಅಂತ ಇರುತ್ತಾನೆ. ಹೆಚ್ಚು ಸಲ ಶಬರಿಮಲೈಗೆ ಹೋಗಿ ಬಂದವನು. ಉಳಿದ ಭಕ್ತರಿಗೆಲ್ಲ ಅವನೇ ಆದರ್ಶ. ಅವರ ಇಡೀ activity ಅಯ್ಯಪ್ಪನ ಸುತ್ತ ಎಂಬುದಕ್ಕಿಂತ, ಗುರುಸ್ವಾಮಿಯ ಸುತ್ತಲೇ ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಅವರಂತೆ ತಾವೂ ಆಗಬೇಕು. ಎಷ್ಟು ಭಕ್ತಿ, ಎಷ್ಟು ಅನುಭವ, ಎಷ್ಟು ಸಲ ಹೋಗಿ ಬಂದದ್ದರಿಂದ ಎಷ್ಟೆಲ್ಲ ಗೊತ್ತು! ಮೂರನೆಯ ಸಲ ಹೋಗಿ ಬರುವ ಹೊತ್ತಿಗೆ ಇವರೂ ಗುರುಸ್ವಾಮಿಯಷ್ಟೇ ಅಥಾರಿಟಿಯಿಂದ ಮಾತನಾಡುತ್ತಿರುತ್ತಾರೆ. ಆ ಇಡೀ ಗುಂಪು ಅದರಾಚೆಗೆ ಬೆಳೆಯುವುದಿಲ್ಲ.

ಸಾಯಿಬಾಬಾನ ಶಿಷ್ಯರದಾದರೂ ಅದೇ ಕಥೆ. ಅಲ್ಲಿ ಭಕ್ತ ಕೂಡ ಸ್ಪರ್ಧೆಗೆ ಬೀಳುತ್ತಾನೆ. ನಮಗೆ ಮೂರು ಸಲ ಪಾದ ನಮಸ್ಕಾರ ಸಿಕ್ತು. ಬಾಬಾ ಕೊಟ್ಟಿರೋ ಉಂಗುರ ಇದು ಗೊತ್ತಾ?ನನ್ನನ್ನು ಬಾಬಾ ಗುರುತು ಹಿಡಿದು ಮಾತನಾಡಿಸಿದರು. ಮೊದಲು ಫೋಟೋದಲ್ಲಿ ವಿಭೂತಿ ಸುರಿದಿದ್ದು ನಮ್ಮ ಮನೇಲೇ! ಹದಿಮೂರು ಸಲ ಪುಟ್ಟಪರ್ತಿಗೆ ಹೋಗ್ಬಂದಿದೀವಿ, ಹೋಲ್‌ ಫ್ಯಾಮಿಲಿ! ಹೀಗೆ ಭಕ್ತಿಯೆಂಬುದು ಡೌಲು-ಡೋಲು ಬಡಿಯುತ್ತಿರುತ್ತದೆ. ಅದರಾಚೆಗೆ ಮಾತು-ಮನಸು ಹೋಗುವುದೇ ಇಲ್ಲ. ಕಲ್ಕಿ ಥರದ ರಿಲೀಜಿಯಸ್‌ ಗ್ರೂಪುಗಳಲ್ಲಂತೂ ಇವರದೇ ಹಾವಳಿ.

ಉಳಿದ ವ್ಯವಸ್ಥೆಗಳಲ್ಲಿ ಇಂಥ ಸ್ಪರ್ಧೆ ಇರುವುದಿಲ್ಲವೆಂದುಕೊಳ್ಳಬೇಡಿ. ಒಂದು ಬ್ಯಾಂಕಿನ ಬ್ರ್ಯಾಂಚಿಗೆ, ಎಲ್ಲೈಸಿ ಬ್ರ್ಯಾಂಚಿಗೆ ಹೋಗಿ ನೋಡಿ. ಹೆಚ್ಚಿನವರ ಅಬ್ಸೆಷನ್‌ ಒಂದೇ ಆಗಿರುತ್ತದೆ. ಎಕ್ಸಾಮು ಪಾಸಾಗಬೇಕು ಎಂಬ ಗಾಳಿ ಒಂದು ಸಲ ಬೀಸಿತೆಂದರೆ, ಎಲ್ಲರಿಗೂ ಅದೇ ಗುಂಗು. ಅದು ಬಿಟ್ಟು ಬೇರೆ ಮಾತೇ ಇರುವುದಿಲ್ಲ. ಯಾತರದೋ ‘ಆ್ಯಮ್‌ವೇ’ ಥರದ ಏಜೆನ್ಸಿ ತಗೊಂಡು, ಅದರ ಸೇಲ್ಸ್‌ ಮಾಡಿ ದುಡ್ಡು ಮಾಡಬಹುದು ಅಂತ ಒಬ್ಬರು ಶುರು ಮಾಡಿಬಿಟ್ಟರೆ ಸಾಕು: ಇಡೀ ಬ್ರ್ಯಾಂಚಿನಲ್ಲಿ ಅದೇ ಮಾತು, ಅದೇ ಸ್ಪರ್ಧೆ. ಗುರು ಟೀಕು, ಮನಿ ಸ್ಕೀಮು, ಪಿಯರ್‌ಲೆಸ್‌ ಮುಂತಾದವುಗಳಿಗೆಲ್ಲ ಈ ಸಮೂಹ ಬಿದ್ದು ಬಲಿಯಾದದ್ದೇ ಈ ಕಾರಣದಿಂದಾಗಿ.

ಒಂದು ವಿಶೇಷವೆಂದರೆ, ಇವೆಲ್ಲವೂ ಸೀಜನಲ್‌. ಮಾಲೆ ತೆಗೆದು ಹಾಕಿದ ಮೇಲೆ ಗುರುಸ್ವಾಮಿ ಮನಸಿನಿಂದ ಮಾಸಿ ಹೋಗುತ್ತಾನೆ. ಹಾಗೇನೇ ಕಲ್ಕಿ, ಆ್ಯಮ್‌ವೇ, ಟಿಪ್ಪರ್‌ವೇರು, ಗುರುಟೀಕು-ಎಲ್ಲವೂ ಮುಗಿದುಹೋಗುತ್ತವೆ. ಆ ಸಮೂಹ ಮತ್ತೊಂದು ಅಂಥ ಸಂಗತಿಗಾಗಿ ಕಾಯುತ್ತ ಕೂಡುತ್ತದೆ.

ಇವರು ಮೂಲತಃ ಬೆಳೆಯಲಾಗದ ಜನ. ಒಂದು ವೃತ್ತದ, ಒಂದು ಪರಿಧಿಯ ಜನ. ಅದರಾಚೆಗೆ ಬೆಳೆಯಲಾರರು. ಯೋಚಿಸಲೂ ಅವರಿಂದಾಗದು. ಬೌದ್ಧಿಕವಾಗಿ ಇವರಿಗಿಂತ ತುಂಬ ಎತ್ತರದಲ್ಲಿರುವ ಬುದ್ಧಿಜೀವಿಗಳು, ಸಾಹಿತಿಗಳು ಕೂಡ ಅಕಾಡೆಮಿಯ ಪ್ರಶಸ್ತಿಗಳ ಕಾಲ ಬಂದುಬಿಟ್ಟರೆ ಜಗತ್ತಿನಲ್ಲಿ ಅದರ ಹೊರತಾಗಿ ಮತ್ತೇನೇನೂ ಇಲ್ಲವೇನೋ ಎಂಬಂತೆ ಆಡತೊಡಗುತ್ತಾರೆ, ಮಾತಾಡತೊಡಗುತ್ತಾರೆ. They are no better. ಹೀಗೆ ಯಾಕಾಗುತ್ತದೆ ಅಂದರೆ, ನಮ್ಮ ತಾಕತ್ತು ಇದನ್ನು ಮೀರಿ ಇರಬಹುದು ಅಂತ ಅವರಿಗೆ ಅನ್ನಿಸಿರುವುದೇ ಇಲ್ಲ.

ಟೀಕ್‌ ದಂಧೆಯವರನ್ನು ಭೇಟಿಯಾಗಿ ನೋಡಿ. ಮೊನ್ನೆ ಮೊನ್ನೆ ರೆಪ್ರಜೆಂಟೇಟಿವ್‌ ಆಗಿಬಂದ. ನೋಡ್ತಾ ನೋಡ್ತಾ ಫೀಲ್ಡ್‌ ಆಫೀಸರ್‌ ಮಾರಾಯಾ! ಇನ್ನೇನು ರೀಜನಲ್‌ ಆಫೀಸರ್‌ ಆಗಿ ಬಿಡ್ತಾನೆ. ಅವನ ಸ್ಪೀಡ್‌ ನೋಡ್ತಿದ್ರೆ ವರ್ಷದ ಕೊನೇಲಿ ಡಿ.ಜಿ.ಎಂ. ಆಗ್ತಾನೆ ಅನ್ನಿಸುತ್ತೆ. ಬೇಕಾದ್ರೆ ನೋಡ್ತಿರು, ವೈಸ್‌ ಪ್ರೆಸಿಡೆಂಟ್‌ ಅಥವಾ ಗವರ್ನರ್‌-ಎರಡರಲ್ಲೊಂದು : ಆಗೇ ಆಗ್ತಾನೆ’ ಅನ್ನುತ್ತಿರುತ್ತಾರೆ. ಯಾವುದೋ ದೊಡ್ಡ ಬ್ಯಾಂಕಿಗೆ ಡಿ.ಜಿ.ಎಂ. ಆದಂತೆ ಸಂಭ್ರಮಿಸುತ್ತಿರುತ್ತಾರೆ. ನಿಜಕ್ಕೂ ಯಾವುದೋ ರಾಜ್ಯದ ಗವರ್ನರು,ಯಾವುದೋ ದೇಶಕ್ಕೆ ವೈಸ್‌ ಪ್ರೆಸಿಡೆಂಟು ಆದಂತೆ ಬೀಗುತ್ತಿರುತ್ತಾರೆ. ಮೇಲೆ ನೋಡಿದರೆ, ಸಂಸ್ಥೆಯೇ ಬಕ್ಕ ಬಾರಲು ಬಿದ್ದು ಟೀಕು ದೊರೆ ರಾತ್ರೋರಾತ್ರಿ ಊರು ಬಿಟ್ಟು ಹೋಗಿ ಈ ಗವರ್ನರನ ಮನೆಯ ಮುಂದೆ ಪೊಲೀಸರು ಬಂದು ನಿಂತಿರುತ್ತಾರೆ!

‘ಇದೆಲ್ಲ ನಿರರ್ಥಕ’ ಅಂತ ಅವರಿಗೆ ಹೇಳಿ ನೋಡಿ: ಅರ್ಥವೇ ಆಗುವುದಿಲ್ಲ. ಅವರು ಆ ಸ್ಪರ್ಧೆಯಲ್ಲಿ ಗರ್ಕ! ಬೇರೆ ಜಗತ್ತು ಕಾಣುವುದಿಲ್ಲ. ಗುರುಸ್ವಾಮಿ ಥರಾನೇ ‘ಅಯ್ಯಪ್ಪಾ’ಅಂತ ಕೂಗುವುದು, ತಾಳ ಹಾಕುವುದು, ಭಕ್ತಿ ಪಾರವಶ್ಯದಲ್ಲಿ ರಸ್ತೆಯ ಮೇಲೆ ಕುಣಿಯುವುದು, ರೆkೂೕಲಿ ಹೊಡೆಯುವುದು-ಇವೆಲ್ಲ ದೂರು ನಿಂತು ನೋಡುವವರಿಗೆ funny ಆಗಿ ಕಾಣುತ್ತವೆ, ಜನ ನಗುತ್ತಾರೆ ಅಂತ ಅವರಿಗೆ ಅನ್ನಿಸುವುದೇ ಇಲ್ಲ. ಈ ಹುಚ್ಚಾಟಗಳನ್ನಾಡದೆ ಗಂಭೀರವಾಗಿ ಅಯ್ಯಪ್ಪನ ಪೂಜೆ ಮಾಡಿ ಮನಸಿಗೆ ನೆಮ್ಮದಿ ಪಡೆಯಬಹುದು ಅಂತಲೂ ಅವರಿಗನ್ನಿಸುವುದಿಲ್ಲ. ಅವರಿಗೆ ಸ್ಪರ್ಧೆಬೇಕು. ತನ್ನ ಭಕ್ತಿ, ತನ್ನ ಪಾರವಶ್ಯ, ತನ್ನ ಅನುಭವ, ನಾಲೆಡ್ಜು, ಬ್ಯುಸಿನೆಸ್ಸು, ಟಾರ್ಗೆಟ್ಟು, ಪ್ರಮೋಷನ್ನು, ಗವರ್ನರು, ವೈಸ್‌ ಪ್ರೆಸಿಡೆಂಟು-ಎಲ್ಲದರಲ್ಲೂ ತಾನು ಉಳಿದವರಿಗಿಂತ ಮುಂದು ಅಂತ ತೋರ್ಪಡಿಸುವ ಹಂಬಲ. ಅಷ್ಟೇಕೆ, ಗಣೇಶೋತ್ಸವದ ಚಂದಾ ಎತ್ತಲು ಕಳಿಸಿದ ಹುಡುಗರ ಪೈಕಿ ಅತಿ ಹೆಚ್ಚು ತಂದವನು ಹೇಗೆ ಬೀಗುತ್ತಿರುತ್ತಾನೋ ಗಮನಿಸಿ?

‘ಅಣ್ಣಾ...ನಂದೇ ಹೈಯೆಷ್ಟು!’ಅಂತ ಧನ್ಯತೆಯಿಂದ ಟೀಮ್‌ ಲೀಡರನ ಕೈಗೆ ಹಣಕೊಟ್ಟು ಹೋಗುವ ಹುಡುಗ, ‘ಅದಿಷ್ಟೂ ಹಣವನ್ನು ಟೀಂ ಲೀಡರು ರಾತ್ರಿ ಕುಡಿದು ಉಡಾಯಿಸಿ ಬಿಡ್ತಾನೆ ಕಣಯ್ಯ’ ಅಂತ ಹೇಳಿದರೆ ಸುತರಾಂ ನಿಮ್ಮನ್ನು ನಂಬುವುದಿಲ್ಲ.

ಇದು ಗೊತ್ತಿದ್ದೇ ವ್ಯಾಪಾರಿ ಸಂಸ್ಥೆಗಳು ತಮ್ಮ ಏಜಂಟರಲ್ಲಿ ಸ್ಪರ್ಧೆ ಹೂಡುತ್ತವೆ. ಧಾರ್ಮಿಕ ಮುಖಂಡರು ಭಕ್ತಿ ಸ್ಪರ್ಧೆ ಹೂಡುತ್ತಾರೆ. ಉತ್ಸವಗಳ ಲೀಡರುಗಳ ಕಲೆಕ್ಷನ್‌ ಸ್ಪರ್ಧೆ ಇಡುತ್ತಾರೆ. ಅದ್ಯಾವ ಪರಿ ಅವರು ಎಜೆಂಟರನ್ನು ಮೋಟಿವೇಟ್‌ ಮಾಡಿ ಫೀಲ್ಡಿಗೆ ಬಿಟ್ಟಿರುತ್ತಾರೆಂದರೆ, ಆ ಅವಧಿಯಲ್ಲಿ ಅವರು ಟಾಟಾ ಸುಮೋ ಮಾಡಿಕೊಂಡು ಊರೂರು ಅಲೆಯುತ್ತ ಕಲೆಕ್ಷನ್‌ ಮಾಡಿ, ಟಾರ್ಗೆಟ್‌ ರೀಚ್‌ ಆಗುವ ಸಂಭ್ರಮವನ್ನು ನೀವು ನೋಡಿಯೇ ಅರಿಯಬೇಕು.

ಆದರೆ ನಿಜ ಜೀವನಕ್ಕೆ ಇಂಥ ಯಾವ ಸ್ಪರ್ಧೆಗಳೂ ಬೇಕಾಗಿರುವುದಿಲ್ಲ. ಒಂದೇ ಒಂದು ಸಲ ಆ ಗುಂಪಿನಿಂದ ಈಚೆಗೆ ಬಂದು ನಿಂತು ಬಿಟ್ಟರೆ ಅದೆಲ್ಲ ಸ್ಪರ್ಧೆಎಷ್ಟೊಂದು ಅರ್ಥಹೀನ ಅಂತ ಗೊತ್ತಾಗಿಬಿಡುತ್ತದೆ. ನಾವು ಸ್ಪರ್ಧೆಗೆ ಬೀಳಬೇಕಿರುವುದು ಇಂಥ ಗುಂಪಿನೊಳಗಿನವರೊಂದಿಗಲ್ಲ. ನಮ್ಮ ತಾಕತ್ತು ಬೇರೇನೋ ಇದೆ. ಅದನ್ನು ಗುರುತಿಸಿಕೊಳ್ಳಬೇಕು. ಈ ಪರಿಧಿಯನ್ನು ದಾಟಿ ಬೆಳೆಯಬೇಕು. ಇರೋ ಎರಡು ಮೂರು ವಿಸ್ತಾರದ ‘ಬಾವಿಯಲ್ಲಿ ಈಸು ಬಿದ್ದು ಬಾವಿಗೆ ನಾನೇ ಕಿಂಗು!’ ಅಂದುಕೊಳ್ಳುವುದರಲ್ಲಿ ಅರ್ಥವಿಲ್ಲ. ಇವನಿನ್ನೂ ಬೀದಿಯಲ್ಲಿ ನಿಂತು ಭಜನೆ ಮಾಡುವ ಹೊತ್ತಿಗೆ, ನಾವು ಶಬರಿಮಲೈನ ದೇಗುಲದ ಹದಿನೆಂಟೂ ಮೆಟ್ಟಿಲು ಹತ್ತಿ ಅದರಾಚೆಗಾದರೂ ದೇವರಿದ್ದಾನಾ ಅಂತ ನೋಡುವಂತಾಗಬೇಕು.

ತಾಕತ್ತು ಅಂದರೆ ಅದು: ಗುರುಸ್ವಾಮಿಯಂತಾಗಲು ಯತ್ನಿಸುವುದು.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X