ರಂಗಸ್ವಾಮಿ ಮೂಕನಹಳ್ಳಿಯವರ 'ಬಾರ್ಸಿಲೋನಾ ನೆನಪುಗಳು' ಪುಸ್ತಕ ಅನಾವರಣ
ಖ್ಯಾತ ಬರಹಗಾರ, ಹಣಕಾಸು ತಜ್ಞ ಮತ್ತು 'ಒನ್ ಇಂಡಿಯಾ' ಅಂಕಣಕಾರರೂ ಆಗಿರುವ ರಂಗಸ್ವಾಮಿ ಮೂಕನಹಳ್ಳಿಯವರ 'ಬಾರ್ಸಿಲೋನಾ ನೆನಪುಗಳು' ಪುಸ್ತಕ ಒನ್ ಇಂಡಿಯಾ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ (ಆ 27) ಅನಾವರಣಗೊಂಡಿದೆ.
ಈ ವೇಳೆ, ಒನ್ ಇಂಡಿಯಾ ಸಂಸ್ಥೆಯ ಹಿರಿಯ ಅಧಿಕಾರಿಗಳು, ರಂಗಸ್ವಾಮಿ ಮೂಕನಹಳ್ಳಿ ಮತ್ತು ಪ್ರಕಾಶಕರಾದ ಕೆ.ಬಿ.ಪರಶಿವಪ್ಪ ಹಾಜರಿದ್ದರು.
ಕೆಲಸ ಎನ್ನುವುದು ಕೊರಳಿಗೆ ಬಿಗಿದ ನೇಣಿನ ಕುಣಿಕೆಯಾಗಬಾರದು! ಸಿಯಂಪ್ರೆ ಆಯ್ ಮನ್ಯಾನ !!
ಈ ಸರಣಿಯ ಲೇಖನಗಳು ಪ್ರತೀ ಸೋಮವಾರ ಒನ್ ಇಂಡಿಯಾ ಕನ್ನಡದಲ್ಲಿ ಪ್ರಕಟಗೊಳ್ಳುತ್ತಿದ್ದು, ರಂಗಸ್ವಾಮಿ ಮೂಕನಹಳ್ಳಿಯವರು ಅದನ್ನು ಪುಸ್ತಕ ರೂಪದಲ್ಲಿ, ಸ್ನೇಹ ಬುಕ್ ಹೌಸ್ ಸಹಯೋಗದೊಂದಿಗೆ ಹೊರ ತಂದಿದ್ದಾರೆ.
ಕನ್ನಡ , ಇಂಗ್ಲಿಷ್ ಅಲ್ಪ ಸ್ವಲ್ಪ ಹಿಂದಿ ಮಾತ್ರ ಗೊತ್ತಿದ್ದ ಹುಡುಗನೊಬ್ಬ ಅಚಾನಕ್ಕಾಗಿ ಯೂರೋಪಿನ ಅದರಲ್ಲೂ ಇಂಗ್ಲಿಷ್ ಭಾಷೆಯ ಗಂಧಗಾಳಿ ಇಲ್ಲದ ದೇಶಕ್ಕೆ ಹೋದಾಗ ಏನಾಗಬಹದು ? ಎಷ್ಟೆಲ್ಲಾ ಹೊಸ ವಿಷಯಗಳಿಗೆ ನಮ್ಮನ್ನ ನಾವು ಒಗ್ಗಿಸಿಕೊಳ್ಳಬೇಕು ಎನ್ನುವುದರ ಜೊತೆಗೆ , ದೇಶ , ಭಾಷೆ , ವೇಷ ಬದಲಾದರೂ ಎಷ್ಟೊಂದು ಭಾವನೆಗಳು ಒಂದೇ ಎನ್ನುವ ವಿಷಯವನ್ನ ತಿಳಿಸುವ ಬರಹಗಳು ಈ ಪುಸ್ತದಲ್ಲಿವೆ.
"ಅಂಕಣ ರೂಪದಲ್ಲಿ ಪ್ರಕಟವಾದ ಬಿಡಿ ಲೇಖನಗಳನ್ನ ಸೇರಿಸಿ ಒಂದು ಪುಸ್ತಕವನ್ನಾಗಿಸಬೇಕು ಎನ್ನುವ ಬಯಕೆ ಶುರುವಾದದ್ದು ತೀರಾ ಇತ್ತೀಚೆಗೆ. ಏಕೆಂದರೆ ಇಲ್ಲಿನ ಅನುಭವಗಳು ಗೂಗೆಲ್ ಗುರುಗಳು ಹೇಳದೆ ಇರುವಂತವು. ಸಾಮಾನ್ಯ ಪ್ರವಾಸಿಗನಾಗಿ ಹೋಗಿ ಬಂದಾಗ ದಕ್ಕದೆ ಇರುವಂತವು, ಅಲ್ಲಿನ ಸಮಾಜದಲ್ಲಿ ಒಂದಾಗಿ ಬೆರೆತು ದಕ್ಕಿಸಿಕೊಂಡಂತವು".
"ಹೀಗಾಗಿ ನಮ್ಮ ಜನರಿಗೆ ಒಂದಷ್ಟು ಅಲ್ಲಿನ ಭಾಷೆ , ಸಂಸ್ಕೃತಿಗಳ ಬಗ್ಗೆ ತಿಳುವಳಿಕೆ ನೀಡಬಲ್ಲದು , ಜೊತೆಗೆ ಇಂತಹ ಬರಹಗಳು ಒಟ್ಟಾಗಿ ಒಂದೇ ಕಡೆ ಪುಸ್ತಕ ರೂಪದಲ್ಲಿ , ಅದೂ ಕನ್ನಡದಲ್ಲಿ ಸಿಕ್ಕ ಉದಾಹರಣೆಯಿಲ್ಲ . ಆ ನಿಟ್ಟಿನಲ್ಲಿ ಇದನ್ನ ಪ್ರಥಮ ಪ್ರಯತ್ನ ಎನ್ನಬಹುದು. ಇಂತಹ ಒಂದು ಪ್ರಯತ್ನ ಒಬ್ಬರಿಂದ ಸಾಧ್ಯವಾಗುವುದಿಲ್ಲ, ಇದಕ್ಕೆ ಕಾರಣರಾದ ಎಲ್ಲರಿಗೂ ಅನಂತ ಧನ್ಯವಾದಗಳು" ಎಂದು ರಂಗಸ್ವಾಮಿ ಮೂಕನಹಳ್ಳಿ ಹೇಳಿದ್ದಾರೆ.
'ಬಾರ್ಸಿಲೋನಾ ನೆನಪುಗಳು' ಈ ಪುಸ್ತಕದಲ್ಲಿ 25 ಬಿಡಿ ಲೇಖನಗಳಿದ್ದು, ಪುಸ್ತಕದ ಬೆಲೆ 140 ರೂಪಾಯಿ. ಇದು ಎಲ್ಲಾ ಪುಸ್ತಕ ಮಳಿಗೆಯಲ್ಲಿ ಲಭ್ಯವಿದೆ. ಇನ್ನು, www.mybookadda.net ಆನ್ಲೈನ್ ಮೂಲಕವೂ ಇದನ್ನು ಖರೀದಿಸಬಹುದಾಗಿದೆ.