ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐನೂರು ವರ್ಷ ಹಳೆಯ ಹಬ್ಬ ; ಲಾಸ್ ಲ್ಯೂಮಿನಾರಿಯಸ್!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಇವತ್ತಿನ ಬರಹವನ್ನ ಒಂದು ಕಥೆಯ ಮೂಲಕ ಶುರು ಮಾಡುತ್ತೇನೆ. ಈ ಕಥೆ ನಾನು ಕೇಳಿದ್ದು, ನೀವು ಕೂಡ ಇದೆ ಕಥೆಯನ್ನ ಅಥವಾ ಇದಕ್ಕೆ ಆಜುಬಾಜಿನ ಕಥೆಯನ್ನ ಖಂಡಿತ ಕೇಳಿರುತ್ತೀರಿ. ಈ ಕಥೆ ಹೇಳಲು ಕಾರಣವೇನು ಎನ್ನುವುದನ್ನ ಕೊನೆಗೆ ನಿಮಗೆ ಹೇಳುತ್ತೇನೆ. ಇನ್ ಫ್ಯಾಕ್ಟ್ ಬುದ್ದಿವಂತ ಓದುಗರಾದ ನಿಮಗೆ ಕಾರಣ ಹೇಳುವ ಅವಶ್ಯಕತೆ ಕೂಡ ನನಗೆ ಬರುವುದಿಲ್ಲ , ಏಕೆಂದರೆ ಈ ಕಥೆಯ ನಂತರ ಹೇಳುವ ವಿಷಯವನ್ನ ಓದಿದ ನಂತರ ನೀವೇ ಅದಕ್ಕೆ ಲಿಂಕ್ ಮಾಡಿಕೊಂಡು ಬಿಡುತ್ತೀರಿ ಎನ್ನುವ ನಂಬಿಕೆ ನನ್ನದು. ಇರಲಿ..

ಒಂದೂರಿನಲ್ಲಿ ಒಬ್ಬ ಸ್ಥಿತಿವಂತ ವರ್ತಕನಿದ್ದನಂತೆ, ಅವನ ಬಳಿ ಹೇರಳವಾಗಿ ಹಣವಿದ್ದ ಕಾರಣವಲ್ಲದೆ ಸಭ್ಯನೂ , ದಯಾಳುವೂ ಆಗಿದ್ದ ಕಾರಣ ಬಹಳಷ್ಟು ಜನ ಆತನಂತೆ ಆಗಬೇಕು ಎನ್ನುವುದು. ಆತ ಮಾಡಿದ್ದನ್ನು ತಾವು ಶಕ್ತಿಯನುಸಾರ ಇಮಿಟೇಟ್ ಮಾಡುವುದು ಮಾಡುತ್ತಿದ್ದರಂತೆ , ಸಮಾಜ ನೋಡಿ ಅಂದಿಗೂ , ಇಂದಿಗೂ ಬದಲಾಗಲೇ ಇಲ್ಲ. ವರ್ತಕ ಒಂದು ಬೆಕ್ಕನ್ನ ತಂದು ಸಾಕುತ್ತಾನೆ. ಆತನಿಗೆ ಬೆಕ್ಕಿನ ಮೇಲೆ ಎಲ್ಲಿಲ್ಲದ ಮಮಕಾರ.

ಚಿಟಿಕೆ ಅದೃಷ್ಟವಿಲ್ಲದಿದ್ದರೆ ಎಲ್ಲಿದ್ದರೂ ಬದುಕು ಒಂದೇ !ಚಿಟಿಕೆ ಅದೃಷ್ಟವಿಲ್ಲದಿದ್ದರೆ ಎಲ್ಲಿದ್ದರೂ ಬದುಕು ಒಂದೇ !

ಅದರ ಲಾಲನೆ ಪಾಲನೆಗೆ ಕೂಡ ಇತರರ ಕೈಗೆ ಕೊಡದೆ ಸ್ವತಃ ತಾನೇ ಮಾಡುತ್ತಿದ್ದನಂತೆ , ಹೀಗಿರುವಾಗ ವರ್ತಕನ ತಂದೆಯ ವಾರ್ಷಿಕ ಶ್ರದ್ದಾ ಮಾಡುವ ದಿನ ಬರುತ್ತದೆ. ತಿಂಗಳಾನುಗಟ್ಟಲೆ ವರ್ತಕನ ಬಿಟ್ಟು ಇತರರ ಬಳಿ ಹೋಗದ ಬೆಕ್ಕು ಆತನನ್ನ ಬಿಡಲು ಒಪ್ಪಲಿಲ್ಲ , ಜೊತೆಗೆ ವರ್ತಕನಿಗೂ ಎಲ್ಲಾ ಬಿಸಿನೆಸ್ ಡೀಲ್ ಗಳಿಗೆ ಅದನ್ನ ಕರೆದೊಯ್ದು ಅಭ್ಯಾಸವಾಗಿತ್ತು , ಅದು ತನಗೆ ಇನ್ನಷ್ಟು ಅದೃಷ್ಟ ತಂದು ಕೊಟ್ಟಿದೆ ಎನ್ನುವುದು ಆತನ ನಂಬಿಕೆಯಾಗಿತ್ತು,ಹೀಗಾಗಿ ತನ್ನ ತಂದೆಯ ಶ್ರಾದ್ಧ ಮಾಡಲು ಕೂಡ ಬೆಕ್ಕನ್ನ ಪಕ್ಕದಲ್ಲಿ ಕೂಡಿಸುಕೊಂಡು ಮಾಡುತ್ತಾನೆ.

Barcelona Memories Column By Rangaswamy Mookanahalli Part 66

ಹೀಗೆ ವರ್ಷಗಳು ಉರುಳುತ್ತವೆ. ಆ ಬೆಕ್ಕು ಸಾಯುತ್ತದೆ , ಆ ಬೆಕ್ಕಿನ ಜಾಗಕ್ಕೆ ಹೊಸ ಬೆಕ್ಕು ಬರುತ್ತದೆ , ಆದರೆ ಎಲ್ಲವೂ ಮೊದಲಿನಂತೆ ಚಾಚೂ ತಪ್ಪದೆ ನಡೆಯುತ್ತಿರುತ್ತದೆ. ಹೀಗೆ ವರ್ಷಗಳು ಕಳೆಯುತ್ತವೆ. ವರ್ತಕ ಕೂಡ ಇಹಲೋಕದ ವ್ಯಾಪಾರ ಮುಗಿಸಿ ಹೊರಡುತ್ತಾನೆ. ಅವನ ಮಗ ವರ್ತಕನ ಶ್ರಾದ್ಧ ಮಾಡಲು ಕುಳಿತುಕೊಳ್ಳುತ್ತಾನೆ. ಎಲ್ಲವೂ ಸರಿ ಇದೆ , ಏನೋ ಮಿಸ್ಸಿಂಗ್ ಎನ್ನುವ ಭಾವನೆ ಬರುತ್ತದೆ. ಒಹ್ ಮರೆತು ಹೋಗಿತ್ತು , ಬೆಕ್ಕು ! ಬೆಕ್ಕೆ ಇಲ್ಲದ ಎಂತಹ ಶ್ರಾದ್ಧ !!

ತಕ್ಷಣ ತನ್ನ ಸಹಾಯಕರಿಗೆ ಹೇಳಿ ಬೆಕ್ಕನ್ನ ತರಿಸಿ ಪಕ್ಕದಲ್ಲಿ ಇರಿಸಿಕೊಂಡು ಶ್ರದ್ದಾ ಮಾಡಿ ಮುಗಿಸುತ್ತಾನೆ. ಇದು ಪ್ರಾಕ್ಟೀಸ್ ಆಗುತ್ತದೆ, ವರ್ಷಗಳು ಕಳೆದಂತೆ ಅದು ಪದ್ಧತಿಯಾಗಿ ಬದಲಾಗಿ ಬಿಡುತ್ತದೆ. ಅವನ ವಂಶಸ್ಥರು ಶ್ರದ್ದಾ ಬೆಕ್ಕಿಲ್ಲದೆ ಮಾಡುವುದಿಲ್ಲ ಎನ್ನುವ ಮಟ್ಟಕ್ಕೆ ಅದು ಕಸ್ಟಮ್ , ಪದ್ಧತಿಯಾಗಿ ಬದಲಾಗಿ ಬಿಡುತ್ತದೆ. ಇವರ ಅನುಯಾಯಿಗಳ ಮನೆಯಲ್ಲೂ ಅದೇ ಕಥೆ .

'ಚಲ್ತಾ ಹೈ' ಎನ್ನುವ ಉಡಾಫೆ ಸ್ವಭಾವ ಬಿಟ್ಟರೆ ನಾವು ಯಾರಿಗಿಂತ ಕಡಿಮೆಯಿಲ್ಲ !'ಚಲ್ತಾ ಹೈ' ಎನ್ನುವ ಉಡಾಫೆ ಸ್ವಭಾವ ಬಿಟ್ಟರೆ ನಾವು ಯಾರಿಗಿಂತ ಕಡಿಮೆಯಿಲ್ಲ !

ಸ್ಪೇನ್ ದೇಶ ಒಂದಲ್ಲ ಹಲವಾರು ನೀವು ಕೇಳಿರದ ಹಬ್ಬಗಳ ತವರು. ಇವತ್ತು ಅಂತಹ ಒಂದು ಹಬ್ಬದ ಬಗ್ಗೆ ನಿಮಗೆ ತಿಳಿಸುವ ಹಂಬಲ ನನ್ನದು. ಪ್ರತಿ ವರ್ಷ ಜನವರಿ ಹದಿನಾರರಂದು ಸ್ಯಾನ್ ಬಾರ್ತಲೋಮೆ ದೆ ಪಿನಾರೆಸ್ ಎನ್ನುವ ಹಳ್ಳಿಯಲ್ಲಿ ಲಾಸ್ ಲ್ಯೂಮಿನಾರಿಯಸ್ (Las Luminarias) ಎನ್ನುವ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಳ್ಳಿ ಸ್ಪೇನ್ ದೇಶದ ರಾಜಧಾನಿ ಮ್ಯಾಡ್ರಿಡ್ ನಿಂದ ಪಶ್ಚಿಮಕ್ಕೆ ನೂರು ಕಿಲೋಮೀಟರ್ ದೂರದಲ್ಲಿದೆ.

ಈ ಹಬ್ಬವನ್ನ ಕೇವಲ ಸ್ಪೇನ್ ಮಾತ್ರವಲ್ಲದೆ ಮೆಕ್ಸಿಕೋ ದೇಶದಲ್ಲಿ ಕೂಡ ಆಚರಣೆ ಮಾಡುತ್ತಾರೆ. ಹೆಸರು ಮಾತ್ರ ಸೇಮ್ , ಆದರೆ ಆಚರಣೆ , ಸಂಪ್ರದಾಯ ಮಾತ್ರ ಬೇರೆ. ರಸ್ತೆಯಲ್ಲಿ ಹುಲ್ಲು , ಕಡ್ಡಿಗಳು ಇತ್ಯಾದಿಗಳನ್ನ ಹಾಕಿ ಅದಕ್ಕೆ ಬೆಂಕಿಯನ್ನ ಹಚ್ಚಲಾಗುತ್ತದೆ. ಹೀಗೆ ಬೆಂಕಿ ಮುಗಿಲೆತ್ತರಕ್ಕೆ ಏರುತ್ತಿದೆಯೇನೋ ಎಂದು ಭಾಸವಾಗುವ ಮಟ್ಟಕ್ಕೆ ಬೆಂಕಿಯನ್ನ ಉಗ್ರವಾಗಿ ಹಾಕಲಾಗುತ್ತದೆ. ಈ ಬೆಂಕಿಯ ಮೇಲೆ ನೂರಾರು ಜನ ಸ್ಥಳೀಯರು ತಮ್ಮ ಕುದುರೆಯ ಮೇಲೆ ಕುಳಿತು ಒಂದು ಬದಿಯಿಂದ ರಸ್ತೆಯ ಇನ್ನೊಂದು ಬದಿಗೆ ವೇಗವಾಗಿ ಸಾಗಿ ಹೋಗುತ್ತಾರೆ.

ಹಲವಾರು ಜನರು ಹೀಗೆ ಒಂದು ಗಂಟೆಯ ಕಾಲ ಈ ರೀತಿಯ ಕೆಲಸದಲ್ಲಿ ತೊಡಗುತ್ತಾರೆ. ಇದು ಮುಗಿದ ಮೇಲೆ ನಿಮಗೆಲ್ಲಾ ಗೊತ್ತೇ ಇರುತ್ತದೆ ಸ್ಪ್ಯಾನಿಷ್ ಎಂದ ಮೇಲೆ ಕುಡಿತ ಮತ್ತು ಕುಣಿತ ಇರಲೇಬೇಕು. ಜನ ಚನ್ನಾಗಿ ಕುಡಿದು , ಕುಣಿಯುತ್ತಾರೆ. ಈ ಪದ್ದತಿಯಲ್ಲಿ ಪಾಲ್ಗೊಳ್ಳಲು ಸ್ಥಳೀಯರು ಇದ್ದರೆ ಇದನ್ನ ನೋಡಲು ಮಾತ್ರ ಸ್ಪೇನ್ ನ ಇತರ ಭಾಗ , ಯೂರೋಪಿನ ಬೇರೆ ದೇಶಗಳಿಂದ ಜನ ಬರುತ್ತಾರೆ. ಅವರು ತಿನ್ನುವುದು ಮತ್ತು ಕುಣಿಯುವುದರಲ್ಲಿ ಜೊತೆಯಾಗುತ್ತಾರೆ. ಪುಟಾಣಿ ಜಾಗದ ಆರ್ಥಿಕತೆ ಕೆಲವು ದಿನಗಳ ಕಾಲ ರಾಕೆಟ್ ವೇಗ ಪಡೆದುಕೊಳ್ಳುತ್ತದೆ.

'ಸೋಭ್ರೆ ಮೇಸ ' - ಊಟದ ಮಧ್ಯದ ಮಾತುಕತೆ! ಮಾತು ಸ್ಪ್ಯಾನಿಶರ ಬಹು ಪ್ರಮುಖ ಗುಣ !!'ಸೋಭ್ರೆ ಮೇಸ ' - ಊಟದ ಮಧ್ಯದ ಮಾತುಕತೆ! ಮಾತು ಸ್ಪ್ಯಾನಿಶರ ಬಹು ಪ್ರಮುಖ ಗುಣ !!

ನಿಮಗೆಲ್ಲಾ ನೆನಪಿರುತ್ತದೆ, ನಾನು ಸದಾ ಯೂರೋಪು ಇಂದಿಗೂ ತನ್ನತನವನ್ನ ಬಿಟ್ಟು ಕೊಡದ ಒಂದು ಪುಟಾಣಿ ಹಳ್ಳಿ ಎನ್ನುವುದನ್ನ ಹೇಳುತ್ತಿರುತ್ತೇನೆ. ಈ ಹಬ್ಬದ ವಿಷಯದಲ್ಲಿ ಕೂಡ ಅದು ಸತ್ಯ. ನಮ್ಮಲ್ಲಿ ಹೇಗೆ ಪ್ರತಿಯೊಂದಕ್ಕೂ ಒಬ್ಬ ದೇವತೆಯನ್ನ ಅಧಿಪತಿ ಎಂದು ನಂಬುತ್ತೇವೆ , ಥೇಟ್ ಹಾಗೆಯೇ ಇಲ್ಲಿ ಕೂಡ ಪ್ರತಿಯೊಂದು ಕಾರ್ಯ , ಪಾಸು ಪಕ್ಷಿ ಎಲ್ಲಕ್ಕೂ ಒಬ್ಬ ಸಂತನನ್ನ ಮೇಲ್ವಿಚಾರಕ ಅಥವಾ ಅದು ಆತನ ಅಡಿಯಲ್ಲಿ ಬರುತ್ತದೆ ಎಂದು ನಂಬುತ್ತಾರೆ.

ಸ್ಯಾನ್ ಅಂಥೋನಿಯೋ ಅಬಾದ್ , ಸಂತ ಅಂಥೋನಿ ಎನ್ನುವ ಹೆಸರಿನಿಂದ ಜನರ ಮನದಲ್ಲಿ ನೆಲೆಸಿದ್ದಾರೆ. ಇವರು ಸಂತ ಪದವಿಯನ್ನ ಪಡೆದುಕೊಂಡ ಧಾರ್ಮಿಕ ಬೋಧಕ. ಅನಿಮಲ್ ಅಥವಾ ಪಶುಗಳ ಸಾಧಕ ಬಾಧಕ ಗಳನ್ನ ಅರ್ಥಾತ್ ಅವುಗಳನ್ನ ಕಾಯುವ ರಕ್ಷಣೆ ಮಾಡುವ ಹೊಣೆ ಸಂತ ಅಂಥೋನಿ ಅವರದು ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆ. ಹೀಗಾಗಿ ಸಂತರ ಹೆಸರಿನಲ್ಲಿ ಅವರ ನೆನಪಿಗಾಗಿ ಪ್ರತಿ ವರ್ಷ ಈ ಹಬ್ಬವನ್ನ ಆಚರಿಸಲಾಗುತ್ತದೆ. ಇದು ಕಳೆದ ಐನೂರು ವರ್ಷದಿಂದ ನಡೆದು ಬರುತ್ತಿದೆ.

ಧಾರ್ಮಿಕತೆಯನ್ನ ಹೆಚ್ಚಾಗಿ ನಂಬದ ಆದರೆ ತಮ್ಮ ಟ್ರಡಿಶನ್ ನಲ್ಲಿ ನಂಬಿಕೆ ಇಟ್ಟಿರುವ ಇನ್ನಷ್ಟು ಸ್ಥಳೀಯರ ಪ್ರಕಾರ ಹದಿನೆಂಟನೇ ಶತಮಾನದಲ್ಲಿ ಈಗ ಹೇಗೆ ಕೊರೊನಾ ಎನ್ನುವ ಪಾಂಡೆಮಿಕ್ ಬಂದಿದೆ , ಹಾಗೆ ಒಂದು ರೋಗ ರೋಗ ಅದು , ಕೇವಲ ಕುದುರೆಗೆಳಿಗೆ ಬಂದಿತ್ತಂತೆ , ಸಾಲದಕ್ಕೆ ಸಾವಿರಾರು ಕುದುರೆಗಳನ್ನ ಅದು ಬಲಿ ಪಡೆಯಿತ್ತಂತೆ , ಭಯಗೊಂಡ ಅಂದಿನ ಸ್ಥಳೀಯರು ಬೆಂಕಿಯಲ್ಲಿ ಕುದುರೆಗಳನ್ನ ಓಡಿಸುವುದರಿಂದ ಅವು ಪರಿಶುದ್ಧವಾಗುತ್ತವೆ ಎಂದು ನಂಬಿದ್ದರಂತೆ , ಹೀಗಾಗಿ ರಸ್ತೆಯಲ್ಲಿ ಬೆಂಕಿ ಹಾಕಿ ಕುದುರೆಗಳನ್ನ ಓಡಿಸುತ್ತಾರೆ.

ಅದೇನು ಕಾಕತಾಳಿಯವೋ ತಿಳಿಯದು , ಕುದುರೆಗಳ ರೋಗ ಮಾಯವಾಯಿತಂತೆ !! ಅಂದಿನಿಂದ ಸ್ಥಳೀಯರಲ್ಲಿ ಇನ್ನಷ್ಟು ಭಕ್ತಿ, ನಂಬಿಕೆ ಹೆಚ್ಚಾಗುತ್ತದೆ. ಈ ಹಬ್ಬ ಇಂದಿಗೂ ಐನೂರು ವರ್ಷಗಳ ನಂತರವೂ ಜೀವಂತವಾಗಿದೆ. ಗಮನಿಸಿ ನೋಡಿ , ಅಂದಿಗೆ ಸ್ಪ್ಯಾನಿಷ್ ಜನತೆಯಲ್ಲಿ ಕೂಡ ಬೆಂಕಿ ಎಂದರೆ ಅದು ಪ್ಯೂರಿಟಿ ಎನ್ನುವ ನಂಬಿಕೆಯಿತ್ತು. ಅದು ಎಲ್ಲವನ್ನೂ ಪರಿಶುದ್ಧ ಗೊಳಿಸುತ್ತದೆ ಎನ್ನುವ ಅಗಾಧ ನಂಬಿಕೆ.

ಇವತ್ತು ಜಗತ್ತು ಛಿದ್ರವಾದ ಮನೆ. ಒಬ್ಬರು ಹೇಳಿದ್ದು ಇನ್ನೊಬ್ಬರಿಗೆ ರುಚಿಸುವುದಿಲ್ಲ. ಎಲ್ಲಕ್ಕೂ ವಿತಂಡವಾದ ಇದ್ದೆ ಇರುತ್ತದೆ. ಕಳೆದೆರೆಡು ವರ್ಷ ಕೋವಿಡ್ ಇದ್ದ ಕಾರಣ ಈ ಹಬ್ಬವನ್ನ ನಡೆಸಿರಲಿಲ್ಲ , ಈ ವರ್ಷ ಅಂದರೆ 2022 , ಜನವರಿ 16ರಂದು ಇದನ್ನ ಮತ್ತೆ ಹಳೆಯ ಜೋಷ್ ನಲ್ಲಿ ನಡೆಸಲಾಯಿತು. ಮಾಮೂಲಿನಂತೆ ಪ್ರಾಣಿದಯಾ ಸಂಘದವರು ಇದನ್ನ ಖಂಡಿಸಿ , ಕುದುರೆಗಳಿಗೆ ಹಿಂಸೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂದಿನ ವರ್ಷಗಳಲ್ಲಿ ಇದನ್ನ ಮಾಡಬಾರದು ಎನ್ನುವ ತಗಾದೆ ಇವರದು. ಸ್ಥಳೀಯರು ಐನೂರು ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಸಂಪ್ರದಾಯವನ್ನ ನಿಲ್ಲಿಸುವ ಮಾತೆ ಇಲ್ಲ ಎನ್ನುತ್ತಾರೆ. ಮುಂದುವರಿದು ಸ್ಥಳಿಯನೊಬ್ಬ ಲೈಟರ್ ಹತ್ತಿಸಿ , ಅದರ ಜ್ವಾಲೆಯ ಮೇಲೆ ವೇಗವಾಗಿ ಕೈ ಆಡಿಸಿ ನೋಡಿ ಇದು ನನ್ನ ಸುಟ್ಟಿತೆ ? ಎಂದು ಪ್ರಶ್ನಿಸುತ್ತಾನೆ. ಕುದುರೆ ಓಟವು ಕೂಡ ಅಷ್ಟೇ , ವೇಗವಾಗಿ ಸಾಗಿ ಹೋಗುವುದರಿಂದ ಕುದುರೆಗೆ ಮತ್ತು ಅದರ ಸವಾರನಿಗೆ, ಇಬ್ಬರಿಗೂ ಬೆಂಕಿಯಿಂದ ಯಾವುದೇ ಅಪಾಯವಿಲ್ಲ ಎನ್ನುತ್ತಾರೆ.

ನಾನು ಸದಾ ಧ್ಯಾನಿಸುವುದು ಒಂದೇ ಮಂತ್ರ ! ನಾವೆಲ್ಲಾ ಮೂಲದಲ್ಲಿ ಒಂದೇ ಎನ್ನುವುದೇ ಆ ಮಂತ್ರ !! ಸ್ಪೇನ್ ಒಂದೇ ಅಂತಲ್ಲ , ಇಟಲಿ , ಫ್ರಾನ್ಸ್ , ಪೋರ್ಚುಗಲ್ ಹೀಗೆ ಬಹಳಷ್ಟು ದೇಶಗಳು ಇಂದಿಗೂ ಒಂದಲ್ಲ ಇಂತಹ ಹತ್ತಾರು ನಂಬಿಕೆಗಳನ್ನ ಜತನದಿಂದ ಕಾಪಿಟ್ಟುಕೊಂಡು ಬಂದಿವೆ. ನೂರಾರು ವರ್ಷಗಳ ಹಿಂದಕ್ಕೆ ಹೋಗಿ ನೋಡಿದರೆ ನಮ್ಮ ಹಿರಿಯರು ಮತ್ತು ಜಗತ್ತಿನ ಇತರ ಹಿರಿಯರು ಬದುಕಿದ್ದ ರೀತಿಯಲ್ಲಿ ಇರುವ ಸಾಮ್ಯತೆ ಅಚ್ಚರಿ ಹುಟ್ಟಿಸುತ್ತದೆ.

ಎಲ್ಲಿಯವರೆಗೆ ಹಣ ಬದುಕನ್ನ ಓವರ್ ಟೇಕ್ ಮಾಡಿರಲಿಲ್ಲ ಅಲ್ಲಿಯವರೆಗೆ ಎಲ್ಲವೂ ವ್ಯವಸ್ಥಿತವಾಗಿತ್ತು. ಸಂಗ್ರಹಣೆ , ಮತ್ತು ವಸ್ತುವಿಗೆ ಮೌಲ್ಯ ಕಟ್ಟುವ ಮನುಷ್ಯನ ಕೆಟ್ಟ ಗುಣ ಸಮಾಜದ ಬದಲಾವಣೆಗೆ ನಾಂದಿ ಹಾಡಿತು. ಆದರೂ ಯೂರೋಪು ಇಂದಿಗೂ ತನ್ನ ಹಳೆಯ ಬೇರುಗಳನ್ನ ಬಿಡದ , ಹೊಸತನವನ್ನ ಕೂಡ ಅಪ್ಪಿಕೊಂಡ ಊರು. ಇಂಗ್ಲಿಷ್ ಕ್ಯಾಲೆಂಡರ್ ಜೊತೆ ಜೊತೆಗೆ ಸ್ಪೇನ್ , ಇಟಲಿ ಗಳಲ್ಲಿ ತಮ್ಮದೇ ಆದ ಕ್ಯಾಲೆಂಡರ್ ಕೂಡ ಉಪಯೋಗಿಸುತ್ತಾರೆ.

ನಾವು ಹೇಗೆ ಮಾಘ ಮಾಸ , ಕಾರ್ತಿಕ , ಪುಷ್ಯ ಎಂದು ತಿಂಗಳುಗಳಿಗೆ ಹೇಳುತ್ತೇವೆ , ಹಾಗೆಯೇ ಇವರು ಕೂಡ ಪ್ರತಿ ತಿಂಗಳಿಗೂ ತಮ್ಮದೇ ಆದ ಹೆಸರನ್ನ ಹೊಂದಿದ್ದಾರೆ. ಇತ್ತೀಚಿಗೆ ಇಂತಹ ಕ್ಯಾಲೆಂಡರ್ ಅಚ್ಚು ಹಾಕಿಸಿ ಹಂಚುವ ಕೆಲಸಗಳು ಕೂಡ ನಡೆಯುತ್ತಿದೆ. ಒಂದು ಜನರೇಷನ್ ನನೆಗುದಿಗೆ ಬಿದಿದ್ದ ಹಳೆಯ ಸಂಪ್ರದಾಯಗಳು ಹೊಸತನವನ್ನ ಹೊದ್ದು ಮತ್ತೆ ಯುವ ಜನತೆಯ ಮನಸ್ಸನ್ನ ಅವರಿಸಿಕೊಳ್ಳುತ್ತಿವೆ.

ನಾನಿದದ್ದು ಬಾರ್ಸಿಲೋನಾ ನಗರದಲ್ಲಿ ,ಮ್ಯಾಡ್ರಿಡ್ ನಗರಕ್ಕೆ ಐನೂರು ಕಿಲೋಮೀಟರ್ ದೂರದಲ್ಲಿ , ಬಾರ್ತಲೋಮೆ ದೆ ಪಿನಾರೆಸ್ ಗೆ ಬರೋಬ್ಬರಿ ಆರುನೂರು ಕಿಲೋಮೀಟರ್ ! ಹಲವಾರು ಬಾರಿ ಮ್ಯಾಡ್ರಿಡ್ ಗೆ ಬುಲೆಟ್ ಟ್ರೈನ್ ನಲ್ಲಿ ಪ್ರಯಾಣಿಸಿದ್ದೇನೆ, ಎರಡು ತಾಸಿನಲ್ಲಿ ಪ್ರಯಾಣ ಖತಂ ! ದೂರ ನನಗೆ ಎಂದಿಗೂ ಮಾಪನವಾಗಿಲ್ಲ. ಹೋಗಬೇಕು , ನೋಡಬೇಕು ಎಂದರೆ ಜೈ ಎಂದು ಹೊರಟು ಬಿಡುವುದು ನನ್ನ ಗುಣ.

ಲಾಸ್ ಲ್ಯೂಮಿನಾರಿಯಸ್ ಕಣ್ಣಾರೆ ಕಂಡು ನೂರಾರು ವರ್ಷದ ಪರಂಪರೆಗೆ ಸಾಕ್ಷಿಯಾಗಬೇಕು ಎನ್ನುವ ನನ್ನ ಅಸೆ ಇದುವರಗೆ ಕೈಗೂಡಿಲ್ಲ. ಇದಕ್ಕೆ ಕಾರಣ ಡಿಸೆಂಬರ್ ತಿಂಗಳು ಕ್ರಿಸ್ತ್ಮಸ್ ಹಬ್ಬದ ಪ್ರಯುಕ್ತ ರಜಾ , ಸಂಸ್ಥೆ ರಿ ಓಪನ್ ಆಗುತ್ತಿದ್ದದ್ದು ಜನವರಿ ಏಳಕ್ಕೆ , ಮತ್ತೆ ಹದಿನಾರಕ್ಕೆ ಎಲ್ಲಿಂದ ರಜಾ ಕೇಳುವುದು ? ಹೀಗಾಗಿ ಹದಿನೇಳು ವರ್ಷದಲ್ಲಿ ಒಂದು ವರ್ಷವೂ ಅಲ್ಲಿಗೆ ಹೋಗಲಾಗಲಿಲ್ಲ. ಮುಂಬರುವ ವರ್ಷದಲ್ಲಿ ಹೋಗುವ ತವಕ, ಆಸೆಯಂತೂ ಇದೆ. ಪ್ರಾಣಿ ದಯಾಸಂಘದವರು , ಕರೋನ ಮಾತೆಯವರ ಕರುಣೆಯಿದ್ದರೆ ಮುದೊಂದು ದಿನ ಇದಕ್ಕೂ ಸಾಕ್ಷಿಯಾಗುವೆ.

Recommended Video

BCCI ಕಾಂಟ್ರಾಕ್ಟ್ ನಲ್ಲಿ ರಾಹುಲ್ ಪಂತ್ ಗೆ ಬಂಪರ್ ಆದ್ರೆ ಪೂಜಾರಾ ರಹಾನೆಗೆ ಹಿಂಬಡ್ತಿ | Oneindia Kannada

ಈಗ ಮರಳಿ ಮೊದಲ ಸಾಲುಗಳನ್ನ ಓದಿ , ನಮ್ಮ ನಂಬಿಕೆ ಇತರಿರಿಗೆ ಮೂಡ ನಂಬಿಕೆ ಅನ್ನಿಸಬಹುದು. ಅವರ ನಂಬಿಕೆ ನಮಗೆ ಬಾಲಿಶ ಎನ್ನಿಸಬಹುದು. ಒಬ್ಬರ ಭಾವನೆಯನ್ನ ಇನ್ನೊಬ್ಬರು ಗೌರವಿಸುವುದು ಕಲಿತಾಗ ಸಮಾಜದಲ್ಲಿ ಶಾಂತಿ ನೆಲಸುತ್ತದೆ. ಕಾದಾಡಬೇಕು ಎಂದು ಮನಸ್ಸು ಮಾಡಿಕೊಂಡರೆ ಕಾರಣಕ್ಕೇನು ಕೊರತೆ ಅಲ್ಲವೇ ? ಒಬ್ಬರನೊಬ್ಬರು ಗೌರವಿಸುವುದು ಕಲಿಯುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದು.

English summary
Barcelona Memories Column By Rangaswamy Mookanahalli Part 66,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X