ಮುಜೆ ಔರ್ ತೋಡಾ 'ಗಟ್ಟಿ ಚಟ್ನಿ' ಚಾಯಿಯೇ ! ಕನ್ನಡ ಉಳಿಸುವುದು ನಮ್ಮ ಕೈಲಿದೆ !!
ಬಾರ್ಸಿಲೋನಾ ದಲ್ಲಿ ಕೆಲಸದ ವೇಳೆ ನನಗಂತೂ ಬಹಳ ಇಷ್ಟವಾಗಿತ್ತು. ಬೆಳಿಗ್ಗೆ ಒಂಬತ್ತರಿಂದ ಮಧ್ಯಾಹ್ನ ಒಂದೂವರೆ ತನಕ ಕೆಲಸ ಆಮೇಲೆ ಸಾಯಂಕಾಲ ನಾಲ್ಕರ ವರೆಗೆ ಬ್ರೇಕ್ ! ಆ ನಂತರ ನಾಲ್ಕರಿಂದ ಏಳೂವರೆ ವರೆಗೆ ಮತ್ತೆ ಕೆಲಸ. ಮನೆ ಕೂಡ ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಒಂದು ಕಿಲೋಮೀಟರ್ ದೂರವಷ್ಟೇ ಇದ್ದ ಕಾರಣ , ಬದುಕಲು ಬಹಳಷ್ಟು ವೇಳೆಯಿದೆ ಎನ್ನುವ ಅನುಭವವಾಗುತ್ತಿತ್ತು.
ಸಾಮಾನ್ಯವಾಗಿ ಇಲ್ಲಿನ ಜನ ನಾಲ್ಕರಿಂದ ಐದು ಕಿಲೋಮೀಟರ್ ಸುತ್ತಳೆತೆಯಲ್ಲಿ ಕೆಲಸವನ್ನ ಹುಡುಕಿಕೊಳ್ಳುತ್ತಾರೆ. ಇದು ಇಲ್ಲಿ ಅಲಿಖಿತ ನಿಯಮ. ಅಂದಮಾತ್ರಕ್ಕೆ ಎಲ್ಲರೂ ಹೀಗೆ ಎನ್ನುವ ಜನರಲೈಸೇಶನ್ ಕೂಡ ಬೇಡ. ಏಕೆಂದರೆ ಹತ್ತಾರು ಕಿಲೋಮೀಟರ್ ದೂರದಿಂದ ಪುಡಿಗಾಸಿಗೆ ದುಡಿಯುವ ಜನರನ್ನ ಕೂಡ ಇಲ್ಲಿ ಕಂಡಿದ್ದೇನೆ. ಇರಲಿ . ಬೆಂಗಳೂರಿಗೆ ಬಂದ ನಂತರ ಇಲ್ಲಿನ ಜೀವನ ಶೈಲಿಗೆ ಹೊಂದಿಕೊಳ್ಳುವುದಕ್ಕೆ ಆರು ತಿಂಗಳ ಮೇಲೆ ತೆಗೆದುಕೊಂಡಿತು.
ಬದುಕೆಂದರೆ ಹೀಗೆ ಅಲ್ವಾ ? ಗೊತ್ತಿಲ್ಲದೇ ಬಾಂಧ್ಯವ್ಯಗಳು ಬೆಸೆದು ಕೊಂಡು ಬಿಡುತ್ತವೆ
ಮಧ್ಯಾಹ್ನದ ಊಟಕ್ಕೆ ಮನೆಗೆ ಹೋಗುವುದನ್ನ ಈ ದೊಡ್ಡ ನಗರದಲ್ಲಿ ಯೋಚಿಸಲು ಕೂಡ ಆಗದ ವಿಷಯ ಎನ್ನುವ ಜ್ಞಾನೋದಯ ಬೇಗ ಆಯ್ತು. ಮಧ್ಯಾಹ್ನಕ್ಕೆ ಡಬ್ಬಿಗೆ ಸೇಬು ಒಂದಷ್ಟು ಬಾದಾಮಿಯನ್ನ ಅಮ್ಮ ನಿತ್ಯ ಹಾಕಿ ಕೊಡುತ್ತಿದ್ದಳು . ನಿತ್ಯವೂ ಮಧ್ಯಾಹ್ನಕ್ಕೆ ಹೀಗೆ ಹಣ್ಣು ಒಂದಷ್ಟು ನಟ್ಸ್ !ನನಗಷ್ಟು ಸಾಕಾಗುತ್ತಿತ್ತು. ಮಧ್ಯಾಹ್ನದ ಊಟ ಆದಷ್ಟೂ ಕಡಿಮೆ ತಿನ್ನುವುದು ಅಭ್ಯಾಸ. ಆದರೆ ಅದೇನೋ ಕಾಣೆ ಅವತ್ತು ಹೊಟ್ಟೆ ಭಯಂಕರ ಹಸಿಯಲು ಶುರುವಾಯ್ತು .
ಪಕ್ಕದಲ್ಲಿದ್ದ ಎಸೆಲ್ವಿ ರಾಗಿಗುಡ್ಡಕ್ಕೆ ಹೋಗಿದ್ದೆ . ಅಲ್ಲಿ ಒಂದು ಸೇಠು ಪರಿವಾರ ಠಿಕಾಣಿ ಹೂಡಿದ್ದರು . ಅವರ ಮಧ್ಯೆ ಹಿಂದಿ ಅಥವಾ ಮಾರ್ವಾಡಿ ಭಾಷೆಯಲ್ಲಿ ಸಂಭಾಷಿಸುತ್ತಿದ್ದರು . ನನಗೇನೂ ಅವರ ಮಾತು ಕೇಳುವ ವಿಶೇಷ ಆಸಕ್ತಿ ಇರಲಿಲ್ಲ , ಆದರೂ ಮಾತುಗಳು ಕಿವಿಗೆ ಬೀಳುತ್ತಿದ್ದವು. ಅವರ ನಡುವೆ ಇದ್ದ ಒಂದು ಹೆಣ್ಣು ಮಗು ' ಮುಜೆ ಔರ್ ತೋಡಾ 'ಗಟ್ಟಿ ಚಟ್ನಿ ಚಾಯಿಯೇ ' ಎಂದಿತು. ಮಗುವಿನ ಬಾಯಿಂದ ಬಂದ ಗಟ್ಟಿ ಚಟ್ನಿ ಎನ್ನುವ ಪದ ನನ್ನಲ್ಲಿ ಇನ್ನಿಲ್ಲದ ಆನಂದ ತಂದಿತು.
ಇದಕ್ಕೆ ಕಾರಣ ಬಹಳ ಸರಳ. ಯಾವುದೇ ಭಾಷೆ ವಲಸಿಗರು ಕಲಿಯುವಂತಾಗಲು ಮೊದಲು ಸ್ಥಳೀಯರು ಅದನ್ನ ತೀವ್ರವಾಗಿ ಬಳಸಬೇಕು, ಪ್ರೀತಿಸಬೇಕು,ಆಗ ಮಾತ್ರ ಆ ಭಾಷೆ ಅನ್ಯ ಭಾಷಿಕರೂ ಬೇಗ ಕಲಿಯುವಂತಾಗುತ್ತದೆ. ಈಗ ವಿಷಯಕ್ಕೆ ಬರೋಣ . ಗಟ್ಟಿ ಚಟ್ನಿಗೆ ಪರ್ಯಾಯವಾಗಿ ನಾವು ಕನ್ನಡಿಗರು ಅವರಿಗೆ ಹಿಂದಿಯಲ್ಲಿ ಅಥವಾ ಮಾರ್ವಾಡಿಯಲ್ಲಿ ಹೇಳಿದ್ದರೆ ಅವರು ಖಂಡಿತ ಗಟ್ಟಿ ಚಟ್ನಿ ಪದವನ್ನ ಬಳಸುತ್ತಿರಲಿಲ್ಲ . ಅಂದರೆ ಗಮನಿಸಿ ನೋಡಿ ನಾವು ಕೂಡ ಆ ಪದವನ್ನ ಬಳಸುವುದರಿಂದ ಅವರು ಕೂಡ ಬಳಸುತ್ತಿದ್ದಾರೆ.
ನಾವು ' ದೋಸಾ , ವಡಾ ' ಎನ್ನುವುದನ್ನ ಬಿಟ್ಟು ದೋಸೆ , ವಡೆ ಎನ್ನುವುದನ್ನ ಮಾಡಿದ್ದರೆ ಅವರು ಕೂಡ ಅದನ್ನೇ ಹೇಳುತ್ತಿದ್ದರು . ಇದನ್ನ ಇನ್ನಷ್ಟು ಸರಳವಾಗಿ ಹೀಗೆ ಸಮೀಕರಿಸಬಹುದು . ಯಾವುದೇ ಪದಗಳು ಅಥವಾ ಭಾಷೆ ಜನರ ಮನದಲ್ಲಿ ನೆಲೆಯೂರುವ ಮುಂಚೆ ನಾವು ಅದಕ್ಕೆ ಪರ್ಯಾಯ ಸ್ಥಳೀಯ ಪದಗಳನ್ನ ನೀಡಿದರೆ ಆಗ ಸ್ಥಳೀಯ ಭಾಷೆ ಉಳಿದುಕೊಳ್ಳುತ್ತದೆ. ಇಲ್ಲದಿದ್ದರೆ ಅದು ಕಲಬೆರೆಕೆಯಾಗಿ ತನ್ನ ಮೂಲ ಸ್ವರೂಪವನ್ನ ಕಳೆದುಕೊಳ್ಳುತ್ತದೆ. ಮತ್ತು ಸ್ಥಳೀಯರು ಯಾವಾಗ ತಮ್ಮ ಭಾಷೆಯನ್ನ ಬಿಟ್ಟು ಇತರ ಭಾಷೆಗಳಲ್ಲಿ ಸಂವಹನ ಮಾಡಲು ಶುರು ಮಾಡುತ್ತಾರೆ ಆಗ ಭಾಷೆ ನಿಧಾನವಾಗಿ ಅಳಿವಿನ ಅಂಚಿಗೆ ಸರಿಯುತ್ತಾ ಹೋಗುತ್ತದೆ.
ನಮ್ಮ 'ಊರಹಬ್ಬ' ಇಲ್ಲಾಗಿದೆ, 'ಫಿಯೆಸ್ತಾ ದೆ ಬಾರಿಯೋ' !
ಸ್ಪೇನ್ ನಲ್ಲಿ ತಮ್ಮ ಭಾಷೆ ಕಾಪಾಡಿಕೊಳ್ಳಲು ಒಂದು ಸಮಿತಿ ರಚಿಸಿದ್ದಾರೆ . ಮಾರುಕಟ್ಟೆಗೆ ಯಾವುದೇ ವಸ್ತು ಬರಲಿ ಅದಕ್ಕೆ ಒಂದು ಸ್ಪ್ಯಾನಿಷ್ ಹೆಸರಿಟ್ಟು ಮಾರುಕಟ್ಟೆಗೆ ಬಿಡುತ್ತಾರೆ . ಹೀಗಾಗಿ ಸ್ಪೇನ್ ನಲ್ಲಿ ನೀವು ಕಂಪ್ಯೂಟರ್ ಎಂದರೆ ಏನು ಎನ್ನುತ್ತಾರೆ . ಲ್ಯಾಪ್ ಟಾಪ್ ಎಂದರೆ ಏನದು ? ಎನ್ನುತ್ತಾರೆ . ಎಲ್ಲಕ್ಕೂ ಸ್ಪಾನಿಷ್ ಪದಗಳಿವೆ. ಇಲ್ಲಿ ಯಾರಾದರೂ ಕಂಪ್ಯೂಟರ್ ಎಂದರೆ ನಿಮ್ಮನ್ನ ವಿಚಿತ್ರವಾಗಿ ನೋಡುತ್ತಾರೆ , ಇಲ್ಲಿ ಅದಕ್ಕೆ ದಕ್ಕಿರುವ ಹೆಸರು ಅರ್ದಿನದೂರ್.
ಹೀಗೆ ಲ್ಯಾಪ್ ಟಾಪ್ ಇಲ್ಲಿ ಪೊರ್ತಾತಿಲ್ ಆಗಿದೆ. ಇದು ಕೇವಲ ಉದಾಹರಣೆಯಷ್ಟೇ ಹೀಗೆ ಇಂಗ್ಲಿಷ್ ಪದಗಳಿಗೆ ಪರ್ಯಾಯವಾಗಿ ಸ್ಪ್ಯಾನಿಷ್ ಪದಗಳನ್ನ ಸೃಷ್ಟಿಸಿ , ಪದಾರ್ಥ ಮಾರುಕಟ್ಟೆಯಲ್ಲಿ ಜನಪ್ರಿಯವಾಗುವುದಕ್ಕೆ ಮುಂಚೆ ಬಿಡುತ್ತಾರೆ. ಅಂದರೆ ಅವರು ಕಂಪ್ಯೂಟರ್ ಎನ್ನುವ ಪದಕ್ಕೆ ಪರ್ಯಾಯ ಸ್ಪ್ಯಾನಿಷ್ ಪದವನ್ನ ಸೃಷ್ಟಿಸಿ ಬಿಡದಿದ್ದರೆ ಅದು ಜನ ಮಾನಸದಲ್ಲಿ ಕಂಪ್ಯೂಟರ್ ಎಂದು ಉಳಿದು ಕೊಂಡು ಬಿಡುತ್ತಿತ್ತು!!
ಆ ನಂತರ ನೀವು ಯಾವುದೇ ಪದವನ್ನ ಬಿಟ್ಟರೂ ಕೂಡ ಅದನ್ನ ಜನತೆ ಒಪ್ಪಿಕೊಳ್ಳುವುದಿಲ್ಲ . ಉದಾಹರೆಣೆಗೆ ನಮ್ಮಲ್ಲಿ ನೋಡಿ ಎಲ್ಲರ ಮನಸ್ಸಿನಲ್ಲಿ ಕಂಪ್ಯೂಟರ್ ಸ್ಥಾನ ಪಡೆದ ಮೇಲೆ ನಾವು ' ಗಣಕಯಂತ್ರ ' ಎನ್ನುವುದನ್ನ ಜನರಿಗೆ ನೀಡಲು ಹೊರಟೆವು. ಅದರಿಂದ ಏನಾಗಿದೆ ? ನಮ್ಮ ಭಾಷೆ ನಮಗೆ ಅನ್ಯಗ್ರಹ ಜೀವಿಯ ಭಾಷೆಯಂತೆ ಅನಿಸ ತೊಡಗಿದೆ. ಹೀಗೆ ಸಾಕಷ್ಟು ಉದಾಹರಣೆಯನ್ನ ನೀಡಬಹದು. ನಮ್ಮ ಭಾಷೆ ಉಳಿವಿಗೆ , ಬೆಳವಣಿಗೆಗೆ ನಾವೇನು ಮಾಡಬೇಕು ಎನ್ನುವುದು ಬುದ್ದಿವಂತ ಓದುಗರಿಗೆ ಈ ವೇಳೆಗೆ ತಿಳಿದಿರುತ್ತದೆ.
ಕನ್ನಡ ಉಳಿಯಬೇಕು ಎಂದರೆ ಇಂಗ್ಲಿಷಿಗೆ ಪರ್ಯಾಯ ಪದಗಳು ಇಂಗ್ಲಿಷ್ ಪದ ಜನರ ಮನದಲ್ಲಿ ಬೇರೂರುವುದಕ್ಕೆ ಮುಂಚೆ ಸಿದ್ಧವಿರಬೇಕು . ಎಲ್ಲಕ್ಕೂ ಪರ್ಯಾಯ ಬೇಕು ಅನ್ನುವ ಹಠವೂ ಇಲ್ಲ . ಸಾಧ್ಯವಾದಷ್ಟು ಇದ್ದರೆ ಒಳ್ಳೆಯದು . ಬರಿ ಕನ್ನಡ ಫಲಕ ಇಲ್ಲದಿದ್ದರೆ ಜುಲ್ಮಾನೆ ಹಾಕಿದರೆ ಸಾಲದು . ವ್ಯಾಪಾರಸ್ಥನಿಗೆ ಒಂದು ಅಥವಾ ಎರಡು ವರ್ಷ ವೇಳೆ ನೀಡಿ ಕನ್ನಡ ಬರದಿದ್ದರೆ ಪರವಾನಿಗೆ ರದ್ದು ಪಡಿಸುತ್ತೇವೆ ಎನ್ನಬೇಕು. ನಾವು ಹೋಗುವ ಅಂಗಡಿಯಲ್ಲಿ ಕನ್ನಡಲ್ಲೇ ವ್ಯವಹರಿಸಬೇಕು. ಆಗ ಕನ್ನಡವೇಕೆ ಎಲ್ಲೆಡೆ ಕೇಳಿಸದು ?
ವಲಸಿಗರು ಎಲ್ಲಿಂದಲೇ ಬರಲಿ ಅವರು ಕೂಡ ನಮ್ಮವರೇ , ಆದರೆ ನಮ್ಮ ನೆಲದಲ್ಲಿ ನಮ್ಮತನವನ್ನ ಬಿಟ್ಟು ಬದುಕುವುದು ಮಾತ್ರ ಅಕ್ಷಮ್ಯ ಅಪರಾಧ. ಸ್ಥಳೀಯರು ಹೇಗೆ ಅಧಿಕಾರಯುತ ಸ್ಥಾನದಲ್ಲಿರಬೇಕು ಮತ್ತು ವಲಸಿಗ ಬೇಕಾಬಿಟ್ಟಿ ನಡೆದುಕೊಳ್ಳುವ ಮುನ್ನ ಒಂದಷ್ಟು ಭಯ ಆತನಲ್ಲಿರಬೇಕು. ಇಲ್ಲದಿದ್ದರೆ ಸ್ಥಳೀಯ ಸಂಸ್ಕಾರ , ರೀತಿ ರಿವಾಜುಗಳು ಕಳೆದು ಹೋಗುತ್ತವೆ. ಸ್ಥಳೀಯರ ತಾಕತ್ತು ತೋರಿಸುವ ಒಂದು ಘಟೆನಯನ್ನ ಹಂಚಿಕೊಂಡು ಇಂದಿನ ಬರಹಕ್ಕೆ ವಿರಾಮ ಹಾಡುವೆ.
ಇಸವಿ ಎರಡು ಸಾವಿರದ ಮೇ ತಿಂಗಳಲ್ಲಿ ಬಾರ್ಸಿಲೋನಾ ದ ' ಎಲ್ ಪ್ರಾತ್ ' ನಲ್ಲಿ ಇಳಿದಾಗ ಆ ನೆಲ ನನ್ನ ಬದುಕನ್ನ ಬದಲಾಯಿಸುತ್ತದೆ ಎನ್ನುವ ಕಿಂಚಿತ್ತೂ ಅರಿವಿರಲಿಲ್ಲ . ಅಲ್ಲಿಗೆ ಕೆಲಸದ ವೀಸಾ ಪಡೆದು ಪ್ರವೇಶ ಪಡೆದಿದ್ದೆ . ಹೀಗೆ ಅಲ್ಲಿಗೆ ವೀಸಾ ಪಡೆಯುಲು ಹೊರಟ ದಿನದ ಕಥೆ ಕೂಡ ಮರೆಯುವಂತಿಲ್ಲ ! . ಬೆಂಗಳೂರಿನಿಂದ ದುಬೈ ಗೆ ಕೂಡ ಎಲ್ಲವನ್ನೂ ನನ್ನ ಅಂದಿನ ಸಂಸ್ಥೆ ತಯಾರು ಮಾಡಿ ನೀಡಿತ್ತು .
ಅಮ್ಮನ ಮುಖದ ಮೇಲೆ ಮೂಡಿ ಮಾಯವಾಗುತ್ತಿದ್ದ ನಗುವನ್ನ ಮರೆಯುವುದು ಹೇಗೆ ?
ದುಬೈ ನಲ್ಲಿ ಒಂದೈದಾರು ತಿಂಗಳ ನಂತರ ನನಗೆ ಬಾರ್ಸಿಲೋನಾ ಗೆ ವರ್ಗಾವಣೆ ಆಯ್ತು . ದುಬೈನ ಬರ್ ದುಬೈ ಎನ್ನುವ ಬಡಾವಣೆಯಲ್ಲಿ ನನ್ನ ವಾಸ. ಆದರೆ ವೀಸಾ ಬೇಕೆಂದರೆ ಅಬುದಾಬಿಗೆ ಹೋಗಬೇಕಿತ್ತು . ಜೀವನದಲ್ಲಿ ಇಲ್ಲಿಯವರೆಗೆ ಒಂದೇ ಒಂದು ಫಾರಂ ಕೂಡ ನಾನು ಭರ್ತಿ ಮಾಡಿಲ್ಲ . ಎಲ್ಲವನ್ನೂ ಮಾಡಿ ಹೆಚ್ ಆರ್ ನವರು ಹೇಳಿದ ಕಡೆ ಸಹಿ ಹಾಕುವುದಷ್ಟೇ ಕೆಲಸ . ವೀಸಾ ಇಂಟೆರ್ ವ್ಯೂ ಗೆ ಅಬುಧಾಬಿಯಲ್ಲಿ ಎಂಬೆಸಿಯಲ್ಲಿ ವೇಳೆಯನ್ನ ನಿಗದಿ ಮಾಡಿದ್ದರು .
ಬೆಳಿಗ್ಗೆ 11ರ ಸಮಯ ಎಂದು ನೆನಪು . ಬೆಳಿಗ್ಗೆ ಆಲಿ ಎನ್ನುವ ಡ್ರೈವರ್ ಮನೆಯ ಮುಂದೆ ಬಂದು ಕರೆ ಮಾಡಿದ . ಅವನೂಂದಿಗೆ ಅಬುಧಾಬಿಗೆ ಪ್ರಯಾಣ . ಅಲಿ ತಮಿಳು ಭಾಷಿಕ . ಅವನಿಗೆ ಕನ್ನಡ ಬರುತ್ತಿರಲಿಲ್ಲ . ಹೀಗಾಗಿ ನಮ್ಮ ನಡುವಿನ ಭಾಷೆ ಹಿಂದಿ . ಆಲಿ ಕಾರನ್ನ ಸಾಕಷ್ಟು ವೇಗವಾಗಿ ಚಲಾಯಿಸುತ್ತಿದ್ದ . ಆತ ದುಬೈನಲ್ಲಿ ಆಗಲೇ ಐದಾರು ವರ್ಷ ಕಳೆದಿದ್ದ . ಅವನಿಗೆ ರೂಲ್ಸ್ ಗೊತ್ತಿರುತ್ತದೆ ಎಂದು ನಾನು ಯಾವ ಮಾತನ್ನು ಆಡದೆ ಸುಮ್ಮನಿದ್ದೆ .
ಅದೇನಾಯ್ತು ಗೊತ್ತಿಲ್ಲ ಆಲಿ ಕಾರನ್ನ ಸ್ಲೋ ಮಾಡಿ ರಸ್ತೆಯ ಬದಿಗೆ ಹಾಕಿ ಕಾರಿನಿಂದ ಇಳಿದು ಎರಡೂ ಕೈಯನ್ನ ಮಡಿಸಿ ದೇಹವನ್ನ ಕುಗ್ಗಿಸಿ ನಿಂತ . ಮುಂದಿನಿಂದ ಒಂದು ಐಷಾರಾಮಿ ಕಾರಿನಿಂದ ಒಬ್ಬ ಅರಬ್ ಇಳಿದು ಬಂದು ಆಲಿಯನ್ನ ಬೈಯ್ಯ ತೊಡಗಿದ . ಆಲಿ ಪೂರ್ಣ ಶರಣಾಗತಿ ತೋರುವ ಭಂಗಿಯಲ್ಲಿ ನಿಂತು ಬೇಡಿಕೊಳ್ಳುತ್ತಿದ್ದ . ನನಗೆ ದುಬೈ ಹೊಸದು . ಅಲ್ಲದೆ ಹಿಂದಿನ ರಾತ್ರಿ ಬದಲಾವಣೆಗೆ ಎಂದು ತೆಗೆದುಕೊಂಡಿದ್ದ ಹತ್ತು ಮಿಲಿಯನ್ ಪೆಸೆಟಾ ಬ್ಯಾಗಿನಲ್ಲಿ ಇತ್ತು.
ಅದನ್ನ ಜೊತೆಯಲ್ಲಿ ತಂದಿದ್ದೆ . ಆಫೀಸ್ ಶುರುವಾಗುತ್ತಿದ್ದದ್ದು ಬೆಳಗ್ಗಿನ ಹತ್ತಕ್ಕೆ ! ಹೀಗಾಗಿ ಆ ಹಣವನ್ನ ಆಫೀಸ್ ನಲ್ಲಿ ಡೆಪಾಸಿಟ್ ಮಾಡಲು ವೇಳೆ ಸಿಕ್ಕಿರಲಿಲ್ಲ . ಈಗ ನೋಡಿದರೆ ಇದ್ಯಾವುದೋ ಹೊಸ ತೊಂದರೆ ಎದುರಾಗಿತ್ತು . ಏನಾದರಾಗಲಿ ಎಂದು ಕಾರಿನಿಂದ ಇಳಿಯದೆ ಅಲ್ಲೇ ಕುಳಿತ್ತಿದ್ದೆ . ಒಂದೈದು ನಿಮಿಷದಲ್ಲಿ ಆಲಿ ಬಂದವನು ಮತ್ತೆ ನಿಧಾನವಾಗಿ ಕಾರು ಚಲಾಯಿಸಲು ಶುರು ಮಾಡಿದ .
ಆಲಿ ಅಲ್ಲಿನ ಉನ್ನತ ಸರಕಾರಿ ಹುದ್ದೆಯಲ್ಲಿದ್ದ ಅಧಿಕಾರಿಯ ಕಾರನ್ನ ಓವರ್ ಟೇಕ್ ಮಾಡಿದ್ದ ಅಲ್ಲದೆ ಸ್ಪೀಡ್ ಲಿಮಿಟ್ ಕ್ರಾಸ್ ಮಾಡಿದ್ದ. ಕ್ಷಣಾರ್ಧದಲ್ಲಿ ಬಂದ ಪೊಲೀಸರು ಅವನಿಗೆ ಜುಲ್ಮಾನೆ ಹಾಕಿದ್ದರು, ಮರು ಮಾತನಾಡದೆ ಕೊಟ್ಟು ಬಂದಿದ್ದ . ಅವನ ಪ್ರಕಾರ ಜುಲ್ಮಾನೆ ಹಾಕಿ ಬಿಟ್ಟದ್ದು ಅವನ ಪುಣ್ಯವಂತೆ ! ಕಾರಿನಲ್ಲಿ ಕುಳಿತಿದ್ದ ಅಧಿಕಾರಿ ಮನಸ್ಸು ಮಾಡಿದ್ದರೆ ನನ್ನ ವೀಸಾ ಹೋಗುತ್ತಿತ್ತು ಎಂದ .
ಅದೆಷ್ಟು ನಿಜವೋ ತಿಳಿಯದು . ನಂತರ ಆಲಿ ಇಲ್ಲಿ ಆದ ಘಟನೆಯನ್ನ ಆಫೀಸ್ ನಲ್ಲಿ ಹೇಳಬೇಡಿ ಎಂದು ಅಂಗಲಾಚಿ ಬೇಡಿಕೊಂಡ . ಅಂದಿನ ದಿನಗಳಲ್ಲಿ ಇಂತಹ ವೃತ್ತಿಗೆ ಬರುವ ಜನರ ಪಾಸ್ಪೋರ್ಟ್ ಅನ್ನು ಅವರು ಕೆಲಸ ಮಾಡುವ ಸಂಸ್ಥೆ ಒತ್ತೆ ಇಟ್ಟು ಕೊಳ್ಳುತ್ತಿತ್ತು . ಸಂಸ್ಥೆ ಇಂತಹವರ ವಿರುದ್ಧ ಒಂದು ಕೇಸ್ ದರ್ಜು ಮಾಡಿದರೆ ನಂತರ ಆರು ತಿಂಗಳ ಕಾಲ ಅವರು ದುಬೈ ಗೆ ಬರದಂತೆ ನಿರ್ಬಂಧನೆ ಏರಲಾಗುತ್ತಿತ್ತು .
ಆಲಿಯ ಬಗ್ಗೆ ನಾನು ಯಾವುದೇ ದೂರು ನೀಡಲಿಲ್ಲ . ಈ ಘಟನೆಯ ನಂತರ ಆಲಿ ಕಡಿಮೆಯೆಂದರೂ ಒಂದಿಪ್ಪತ್ತೈದು ಬಾರಿ ನನ್ನ ಏರ್ಪೋರ್ಟ್ ನಿಂದ ಪಿಕ್ ಮಾಡಿದ್ದಾನೆ . ಪ್ರತಿ ಬಾರಿ ಥ್ಯಾಂಕ್ಸ್ ಹೇಳುವುದನ್ನ ಮರೆತಿಲ್ಲ . ಬಾರ್ಸಿಲೋನಾ ಗೆ ಖುಷಿಯಾಗಿ ಬಂದದ್ದು ಆಗಿತ್ತು . ಆದರೆ ಮೊದಲ ದಿನವೇ ಅದು ' ಅಷ್ಟು ಸುಲಭವಲ್ಲ ಇಲ್ಲಿ ಬದುಕುವುದು ' ಎಂದು ಹೇಳಿದ ಹಾಗೆ ಭಾಸವಾಯ್ತು . ಒಂದು ಭಾಷೆ ಬರುತ್ತಿಲ್ಲ .
ಇಲ್ಲದಾಗ ಹಸಿವು ಹೆಚ್ಚು! ಇದ್ದಾಗ ನೂರೆಂಟು ಅಡ್ಡಿ, ಸಾವಿರ ಕಾರಣ!
ವಾಟರ್ ಅಂದರೆ ಏನು ? ಅಂತ ಕೇಳುವಷ್ಟು ಇಂಗ್ಲಿಷ್ ಜ್ಞಾನವಿಲ್ಲದ ಜನತೆ ! ಇವತ್ತಿಗೆ ಬಹಳಷ್ಟು ಬದಲಾವಣೆ ಆಗಿದೆ . ಇಲ್ಲಿ ಬದುಕುವುದು ಹೇಗೆ ? ಒಂಟಿತನ ಎಂದರೇನು ? ಎನ್ನುವುದರ ಅರಿವಾಯಿತು . ನನಗಿನ್ನೂ ನೆನಪಿದೆ ಮೊದಲ ದಿನ ಡನಪ್ ಮ್ಯಾಂಗೋ ಜ್ಯೂಸ್ ಮತ್ತು ಬ್ರೆಡ್ ಜೊತೆಗೆ ಒಂದಷ್ಟು ಚೀಸ್ ಸೇರಿಸಿ ತಿಂದು ಮಲಗಿದ್ದೆ . ಭಾಷೆ ಬಾರದ ಕಾರಣ ಭಾರತೀಯ ಪದಾರ್ಥಗಳು ಎಲ್ಲಿ ಸಿಕ್ಕುತ್ತವೆ ಎಂದು ಹುಡುಕಿಕೊಳ್ಳುವುದರಲ್ಲಿ ಹತ್ತು ದಿನವಾಯ್ತು . ದುಬೈ ನಲ್ಲಿ ಶೇಖರವಾಗಿದ್ದ ಹತ್ತು ಎಕ್ಸ್ಟ್ರಾ ಕೇಜಿಗಳು ಸದ್ದಿಲ್ಲದೇ ಕರಗಿ ಹೋಗಿದ್ದವು .
Recommended Video
ಎಲ್ಲರೂ ನಮ್ಮವರೇ , ಆದರೆ ವಲಸಿಗರು ಸ್ಥಳೀಯ ಭಾಷೆ ಮತ್ತು ಅಲ್ಲಿನ ರೀತಿ ರಿವಾಜುಗಳನ್ನ ಬೇಗ ತಮ್ಮದಾಗಿಸಿ ಕೊಳ್ಳುವುದರಿಂದ ಸಹಬಾಳ್ವೆ ಸುಲಭವಾಗುತ್ತದೆ.