ಇಲ್ಲದಾಗ ಹಸಿವು ಹೆಚ್ಚು! ಇದ್ದಾಗ ನೂರೆಂಟು ಅಡ್ಡಿ, ಸಾವಿರ ಕಾರಣ!
ಅದು 1992ರ ಸಮಯ . ನಾನಾಗ ಎರಡನೇ ಪಿಯುಸಿ ಕಲಿಯುತ್ತಿದ್ದೆ . ನಮ್ಮ ಮನೆಗೆ ಆಸ್ಕರ್ ಎನ್ನುವ ಹೆಸರು ಕೇಳಿರದ ಕಂಪನಿಯ ಒಂದು ಟಿವಿ ಡಬ್ಬ ಬಂದು ಮೂರು ವರ್ಷವಾಗಿತ್ತು . ಅಜ್ಜಿ ರಾಮಾಯಣ ನೋಡಲಿ ಎಂದು ಕಂತಿನಲ್ಲಿ ತಂದ ಟಿವಿ ಅದಾಗಿತ್ತು . ಅಂದಿನ ದಿನಗಳಲ್ಲಿ ಟಿವಿ ಇದ್ದ ಮನೆಗಳು ಕಡಿಮೆ . ಹಾಗೂ ಹೀಗೂ 90ರ ನಂತರ ಬಹಳಷ್ಟು ಮನೆಗಳಲ್ಲಿ ಟಿವಿ ಬಂದು ಸ್ಥಾಪಿತವಾಗಿತ್ತು .
ಆದರೆ ಅದಕ್ಕೂ ಮುಂಚೆ 85/86ರಲ್ಲಿ ಟಿವಿ ಇದ್ದವರು ಶ್ರೀಮಂತರು ಎನ್ನುವ ಪಟ್ಟ ಅಕ್ಕಪಕ್ಕದವರು ಕಟ್ಟುತ್ತಿದ್ದರು . ನಮ್ಮ ಮನೆಗೆ ಟಿವಿ ಬರುವುದಕ್ಕೆ ಮುಂಚೆ ಪೀಣ್ಯದಲ್ಲಿನ ಬಹುತೇಕ ಸ್ಥಿತಿವಂತರ ಮನೆಗಳಲ್ಲಿ ಕಾಡಿ ಬೇಡಿ ಟಿವಿ ನೋಡಿದ್ದು ನೆನಪಿದೆ . ಆಗೆಲ್ಲಾ ಮೊದಲು ಹೋದವರಿಗೆ , ಪರಿಚಿತರಿಗೆ ಹೀಗೆ ಹಲವು ಆಧಾರದ ಮೇಲೆ ಟಿವಿ ನೀಡಲು ಅವಕಾಶ ನೀಡಲಾಗುತ್ತಿತ್ತು . ಇನ್ನು ಕೆಲವರ ಮನೆಯಲ್ಲಿ ಹತ್ತು ಪೈಸೆ ಇಂದ ಐವತ್ತು ಪೈಸೆ ವರೆಗೂ ದುಡ್ಡು ವಸೂಲಿ ಮಾಡಿ ಟಿವಿ ವೀಕ್ಷಣೆಗೆ ಬಿಡುತ್ತಿದ್ದರು .
ತೂಕ ಇಳಿಸಿಕೊಳ್ಳಲು ಸರಳ ಉಪಾಯ ಏನಾದರೂ ಇದೆಯಾ?
ನಮ್ಮ ಮನೆಯ ಸ್ವಲ್ಪ ದೂರದಲ್ಲಿ ಗಣೇಶನ ಮನೆಯಿತ್ತು . ಅವರ ಮನೆಯಲ್ಲಿ ನನಗೆ ನನ್ನ ತಮ್ಮನಿಗೆ ಟಿವಿ ನೋಡಲು ಬಿಡುತ್ತಿದ್ದರು . ಅಂದಿನ ದಿನದಲ್ಲಿ ಚಿತ್ರಹಾರ್ ಮತ್ತು ಚಿತ್ರ ಮಂಜರಿ ತಪ್ಪಿಸದೇ ನೋಡುತ್ತಿದ್ದೆವು . ಭಾನುವಾರ ಸಾಯಂಕಾಲದ ಸಿನಿಮಾ ಕೂಡ ಆಸ್ಥೆಯಿಂದ ನೋಡುತ್ತಿದ್ದೆವು . ಅಂದಿನ ದಿನದಲ್ಲಿ ಕ್ರಿಕೆಟ್ ಹುಚ್ಚು ಎಲ್ಲರಿಗೂ ಸ್ವಲ್ಪ ಹೆಚ್ಚು ಅನ್ನಬಹದು . ಜೈ ಕರ್ನಾಟಕ ಎನ್ನುವ ತಂಡದಲ್ಲಿ ಗಣೇಶ ಬ್ಯಾಟ್ಸಮನ್ ಆಗಿ ಆಡುತ್ತಿದ್ದ .
ಗೋಪಿ ಮತ್ತು ಸೀನ ಎನ್ನುವ ಅಣ್ಣ ತಮ್ಮಂದಿರು ಕಟ್ಟಿದ ತಂಡವದು . ಗಣೇಶ ಆಲ್ ರೌಂಡರ್ . ಓಪನಿಂಗ್ ಅಥವಾ ಒನ್ ಡೌನ್ ಬ್ಯಾಟಿಂಗ್ ಗೆ ಇಳಿಯುತ್ತಿದ್ದ . ಮುಂದೆ ಈ ಗಣೇಶ ಕರ್ನಾಟಕ ರಣಜಿಗೆ ಸೆಲೆಕ್ಟ್ ಆಗುತ್ತಾನೆ . ನಂತರ ಒಂದೆರೆಡು ಪಂದ್ಯ ಭಾರತೀಯ ಟೀಮ್ ಗೆ ಕೂಡ ಆಡುತ್ತಾನೆ . ಜಗತ್ತಿಗೆ ಈತ ದೂಡ್ಡ ಗಣೇಶ್ ಎಂದು ಪರಿಚಿತ . ಈತನ ಪೂರ್ಣ ಹೆಸರು ದೊಡ್ಡ ನರಸಯ್ಯ ಗಣೇಶ್ . ಇರಲಿ
ನಮ್ಮ ಮನೆಗೆ ಟಿವಿ ಬಂದ ಮೇಲೆ ನಿಧಾನವಾಗಿ ನಮ್ಮ ಮನೆಗೂ ಟಿವಿ ನೋಡಲು ಅಕ್ಕಪಕ್ಕದ ಮನೆಯವರು ಬರುತ್ತಿದ್ದರು . ಭಾನುವಾರ ಬೆಳಿಗ್ಗೆ ಜಾಯಂಟ್ ರೋಬಾಟ್ , ರಜನಿ ಸೀರಿಯಲ್ , ಹಮ್ ಪಾಂಚ್ , ಮುಂಗೇರಿಲಾಲ್ ಕ ಹಸಿನ್ ಸಪ್ನಾ , ಫೌಜಿ , ನುಕ್ಕಡ್ ಅನಂತರದ ದಿನಗಳಲ್ಲಿ ಭೂಮಕೇಶ್ ಭಕ್ಷಿ ಹೀಗೆ ಸಾಲು ಸಾಲು ಸೀರಿಯಲ್ ನೋಡಿ ಹಿಂದಿ ಕಲಿತದ್ದಾಯ್ತು . ಹೀಗೆ 1992 ಬಂದಾಗ ಅದೇನೂ ವಿಚಿತ್ರ ಸಂಭ್ರಮದ ವಾತಾವರಣ ಏಕೆಂದರೆ ಆಗ ಬಾರ್ಸಿಲೋನಾ ದಲ್ಲಿ ಒಲಂಪಿಕ್ಸ್ ಪಂದ್ಯಗಳನ್ನ ನೆಡೆಸುತ್ತಿದ್ದರು .
ಸಾಯಂಕಾಲ ಒಂದು ತಾಸು ಡಿಡಿ ಯಲ್ಲಿ ದಿನದ ಆಟದ ಮುಖ್ಯಾಂಶಗಳನ್ನ ತೋರಿಸುತ್ತಿದ್ದರು . ಅದನ್ನ ನಾವು ಬಿಟ್ಟ ಬಾಯಿ ಮುಚ್ಚದೆ ನೋಡುತ್ತಾ ಕುಳಿತಿರುತ್ತಿದ್ದೆವು . ನಮ್ಮ ಮನೆಯ ಎಡಕ್ಕೆ ರಾಜಣ್ಣ ಅಂತ ಒಬ್ಬರು ಇದ್ದರು . ಅವರಿಗೆ ಅಂದಿಗೆ 40/45 ವರ್ಷ ಇದ್ದಿರಬಹದು, ಮೂರು ಮಕ್ಕಳ ಅಪ್ಪ . ನಮ್ಮಂತೆ ಜಗತ್ತಿನ ಅರಿವಿಲ್ಲದ ಸ್ವಚ್ಛ ಮನಸ್ಸಿನ ಸೀದಾ ಸಾದಾ ಮನುಷ್ಯ. ಅಂದಿನ ಮಟ್ಟಿಗೆ ನಮಗೆಲ್ಲಾ ಹೊರಜಗತ್ತಿನ ದರ್ಶನಕ್ಕೆ ಈ ಟಿವಿ ಒಂದು ಪುಟಾಣಿ ಕಿಂಡಿಯಾಗಿತ್ತು.
ಖಂಡಾಂತರ ಮಾಡುವುದರಿಂದ ಕತ್ತೆ ಕುದುರೆಯಾಗದೆ ಇರಬಹದು, ಆದರೆ ಜೀವನಶೈಲಿ?
ಇವತ್ತು ಇಂಟರ್ನೆಟ್ ಜಗತ್ತನ್ನ ಕಿರಿದು ಮಾಡಿದೆ . ಆತ ಹೆಂಗಸರು ಸ್ವಿಮ್ ಡ್ರೆಸ್ ನಲ್ಲಿ ಈಜಾಡುವುದು , ಸ್ಪೋರ್ಟ್ ಮಹಿಳೆಯರನ್ನ ತೆರೆಯ ಮೇಲೆ ತೋರಿಸಿದರೆ ಸಾಕು ' ಹೋಹ್ ಏನ್ ಸಾ ಇದು ಲೇಡಿಸು ಹಿಂಗೆಲ್ಲ ಡ್ರೆಸ್ ಮಾಡಿಕೊಂಡವರೇ ' ಎಂದು ನನ್ನಪ್ಪನ ಮುಖವನ್ನ ನೋಡುತ್ತಾ ಉದ್ಘಾರ ತೆರೆಯುತ್ತಿದ್ದರು . ಚಲಚಿತ್ರದಲ್ಲಿ ಮಾತ್ರ ಇಂತಹ ಬಟ್ಟೆ ಹಾಕುತ್ತಾರೆ . ನಿಜ ಜೀವನದಲ್ಲಿ ಇದು ಸಾಧ್ಯವಿಲ್ಲ ಎಂದುಕೊಂಡಿದ್ದ ಅವರಿಗೆ ಬಾರ್ಸಿಲೋನಾ ಒಲಂಪಿಕ್ಸ್ ಹೊಸ ಪಾಠ ಕಲಿಸಿತ್ತು .
ನಾಲ್ಕೈದು ಕುರ್ಚಿ ಬಿಟ್ಟರೆ ಉಳಿದವರೆಲ್ಲ ನೆಲವೇ ಗತಿ . ವೈಯಕ್ತಿಕ ಸಮಯ ಎನ್ನುವುದಕ್ಕೆ ಬೆಲೆಯೇ ಇರಲಿಲ್ಲ . ಸಾಕಾದಾಗ ಎದ್ದು ಹೋಗುತ್ತಿದ್ದರು . ಅವರು ಹೋದ ಮೇಲೆ ಟಿವಿ ಆರಿಸಿ ಮಲಗುವುದು ಸಂಪ್ರದಾಯವಾಗಿತ್ತು . ನಮ್ಮ ಮನೆಯಿಂದ 500 ಮೀಟರ್ ಅಂತರದಲ್ಲಿ ಒಂದಲ್ಲ ಹತ್ತಾರು ಲೇಥ್ ಮಷೀನ್ ಹಾಕಿಕೊಂಡು ಸಣ್ಣ ಸಣ್ಣ ಕಾರ್ಖಾನೆಗಳು ಇದ್ದವು . ಅವುಗಳಲ್ಲಿ ದಿನ ರಾತ್ರಿ ಎನ್ನದೆ , ಶನಿವಾರ , ಭಾನುವಾರ ಎನ್ನದೆ ದುಡಿತ ನೆಡೆಯುತ್ತಲೇ ಇರುತ್ತಿತ್ತು .
ವಿಜಯದಶಮಿ ಸಮಯದಲ್ಲಿ ನಾಲ್ಕೈದು ದಿನ ಎಲ್ಲೆಡೆ ನಿಶಬ್ದ . ಅದನ್ನ ಸಹಿಸುವುದು ಕಷ್ಟವಾಗುತ್ತಿತ್ತು. ಹೌದು ನೀವು ಸರಿಯಾಗಿ ಓದಿದಿರಿ ! ಹಬ್ಬಕ್ಕೆ ಎಂದು ಈ ಕಾರ್ಖಾನೆಗಳು ಮುಚ್ಚಿದಾಗ ಉತ್ಪತ್ತಿಯಾಗುತ್ತಿದ್ದ ಆ ' ನಿಶಬ್ದ' ತಡೆದುಕೊಳ್ಳಲು ಆಗುತ್ತಿರಲಿಲ್ಲ. ಸದಾ ಗಿಜಿಗುಡುವ ಜನ ಸಂದಣಿ , ಲೇಥ್ ಮಷೀನ್ಗಳ ಸದ್ದಿನ ಜೊತೆಗೆ ನಮ್ಮ ಮನೆಯಲ್ಲಿ ಹಾಕಿದ್ದ ಸೀಲಿಂಗ್ ಫ್ಯಾನ್ ಮಾಡುವ ಕರ್ಕಶ ಸದ್ದು ಇವೆಲ್ಲ ಇದ್ದರಷ್ಟೇ ನಿದ್ದೆ !!.
ಹೀಗೆ ಇಂತಹ ವಾತಾವರಣದಲ್ಲಿ ಬೆಳೆದ ನನಗೆ ದಿನಗಳು ಕಳೆದು ಭಗವಂತನ ದಯೆಯಿಂದ ಬಾರ್ಸಿಲೋನಾ ಸೇರುವ ಸೌಭಾಗ್ಯ ಒದಗಿಬಂತು . 1992ರಲ್ಲಿ ಒಲಂಪಿಕ್ಸ್ ಆಟಗಾರರಿಗೆ ಮತ್ತು ತಂಡದ ಕೋಚ್ ಇತ್ಯಾದಿ ಸಹಾಯಕ ವರ್ಗಕ್ಕೆ ಎಂದು ಸ್ಪೇನ್ ಸರಕಾರ ಅಲ್ಲಿ ಒಂದಷ್ಟು ಹೊಸ ವಸತಿ ಸಮುಚ್ಚಯವನ್ನ ನಿರ್ಮಾಣ ಮಾಡಿತ್ತು. ಟಿವಿಯಲ್ಲಿ ಆಯಾ ದಿನದ ಆಟದ ಸಾರಾಂಶವನ್ನ ತೋರಿಸುತ್ತಿದ್ದರು , ಅದನ್ನ ನೋಡುತ್ತಾ ಇದ್ದ ನಾನು 2004ರಲ್ಲಿ ಇಂತಹ ಒಂದು ಮನೆಯನ್ನ ಕೊಳ್ಳುತ್ತೇನೆ ಎನ್ನುವ ಕನಸು ಕೂಡ ಕಂಡವನಲ್ಲ.
ಯಾರಾದರೂ ಈ ಬಗ್ಗೆ ನನಗೆ ಭರವಸೆ ಕೊಡಲು ಬಂದಿದ್ದರೆ ಅವರನ್ನ ಲೇವಡಿ ಮಾಡಿ ನಕ್ಕಿರುತ್ತಿದ್ದೆ . ಕನಸು ಇರಬೇಕು , ಗುರಿಯಿರಬೇಕು ಎನ್ನುವ ಪದಗಳನ್ನ ಹೊಟ್ಟೆ ತುಂಬಿದ ಮೇಲೆ ಕೇಳಲು -ಹೇಳಲು ಬಹು ಚಂದ. ಅಂದ ಮಾತ್ರಕ್ಕೆ ಕನಸು ಕಾಣುವುದು , ಗುರಿ ಇಟ್ಟುಕೊಳ್ಳುವುದು ತಪ್ಪಲ್ಲ , ಅಂದಿನ ದಿನದಲ್ಲಿ ಇಂತಹ ಕನಸು ಕಾಣಲು ಬೇಕಾಗುವ ಕನಿಷ್ಠ ಜ್ಞಾನ , ಎಕ್ಸ್ಪೋಷರ್ ಇಲ್ಲದ ಹುಡುಗ ಕನಸು ತಾನೇ ಹೇಗೆ ಕಾಣಲು ಸಾಧ್ಯ ?
ಪೂರ್ಣ ವಾತಾವರಣ ನಿಯಂತ್ರಣ ಉಳ್ಳ ಮನೆಯನ್ನ ಕೊಂಡಿದ್ದೆ . ಅಲ್ಲಿನ ಬಹುತೇಕ ಸ್ಥಳೀಯರು ಇಂತಹ ಮನೆಯನ್ನ ಕೊಳ್ಳಬೇಕು ಎಂದು ಕನಸು ಮಾತ್ರ ಕಾಣಬಹುದಿತ್ತು . ಕೊಳ್ಳಲು ಅಸಾಧ್ಯವಾಗಿತ್ತು . ಅಲ್ಲೇ ಹುಟ್ಟಿ ಅಲ್ಲೇ ಬೆಳೆದು , ಅಲ್ಲಿನ ಶಾಲೆಯಲ್ಲಿ ಓದಿದ ಅಲ್ಲಿನ ಜನರಿಗೆ ಸಾಧ್ಯವಾಗದ್ದು , ಕನಸೇ ಕಾಣದ ನನಗೆ ಅದು ಸಲುಭವಾಗಿ ಒಲಿದು ಬಂದಿತ್ತು . ಆದರೇನು ಪೀಣ್ಯದಲ್ಲಿ 12ವರ್ಷಕ್ಕೂ ಹೆಚ್ಚು ಸಮಯ ದಿನ ಲೇಥ್ ಮಷೀನ್ ಗಳ ಶಬ್ದ ,ಜನರ ಕೂಗಾಟದ ಶಬ್ದಕ್ಕೆ ಹೊಂದಿಕೊಂಡಿದ್ದ ಮನಸ್ಸಿಗೆ ನಿಶಬ್ದದಲ್ಲಿ ನಿದ್ದೆ ಬರುತ್ತಿರಲಿಲ್ಲ .
ಹೀಗಾಗಿ ಸೂಪರ್ ಮಾರ್ಕೆಟ್ ನಿಂದ ಒಂದು ಟೇಬಲ್ ಫ್ಯಾನ್ ತಂದು ಪೇಪರ್ ತುಂಡನ್ನ ಅರ್ಧ ಫ್ಯಾನ್ ರೆಕ್ಕೆಗೆ ಸಿಲುಕುವಂತೆ ಟೇಪ್ ಹಾಕಿ ಅಂಟಿಸಿ ಫ್ಯಾನ್ ಹಾಕುತ್ತಿದ್ದೆ . ಅದು 'ಪಟ ಪಟ ' ಅಂತ ಸದ್ದು ಮಾಡುತ್ತಿತ್ತು . ನನಗೆ ನಿದ್ದೆ ಬರುತ್ತಿತ್ತು. ಸಾಮನ್ಯವಾಗಿ ಸ್ಪೇನ್ ನಲ್ಲಿ ಸೀಲಿಂಗ್ ಫ್ಯಾನ್ ಕಡಿಮೆ, ವರ್ಷದ ಒಂದೆರೆಡು ತಿಂಗಳ ಬೇಸಿಗೆಯನ್ನ ಬಿಟ್ಟರೆ ಇಲ್ಲಿ ಫ್ಯಾನ್ ಗೆ ಕೆಲಸವಿಲ್ಲ. ಚಳಿ ಸಮಯದಲ್ಲಿ ಕೂಡ ನಾನು ಫ್ಯಾನ್ ಇನ್ನೊಂದು ಬದಿಗೆ ಸರಿಸಿ , ಅಂದರೆ ಗಾಳಿ ನನ್ನ ಬಳಿ ಬರದಂತೆ ಬೇರೆ ದಿಕ್ಕಿಗೆ ತಿರುಗಿಸಿ ಹಾಕಿರುತ್ತಿದ್ದೆ.
ಅಣ್ಣ ನಮ್ಮೊಡನೆ ದೈಹಿಕವಾಗಿಲ್ಲ, ಆದರೆ ಅಣ್ಣನ ಇಷ್ಟವಾದ ಹಾಡು ಪ್ಲೇ ಆಗುತ್ತಿದೆ
ನನಗೆ ಸದ್ದಿಲ್ಲದಿದ್ದರೆ ನಿದ್ದೆ ಬರುತ್ತಿರಲಿಲ್ಲ. ಮನುಷ್ಯ ಎಷ್ಟೇ ಆದರೂ ತನ್ನ ಒಟ್ಟು ಅಭ್ಯಾಸಗಳ ಮುದ್ದೆ ಅಲ್ಲವೇ ? ರಮ್ಯ ಬಾರ್ಸಿಲೋನಾಗೆ ಬಂದ ಪ್ರಥಮ ದಿನಗಳಲ್ಲಿ ನನ್ನ ಈ ಹುಚ್ಚಾಟ ನೋಡಿ ಶಾಕ್ ಆಗಿದ್ದಳು . ನಿಧಾನವಾಗಿ ನನ್ನ ಬಾಲ್ಯದ ಬಗ್ಗೆ ತಿಳಿದುಕೊಂಡಳು . ಇಂತಹ ಸ್ಟಿಗ್ಮಾ ಗಳಿಂದ ದೂರವಾಗಲು ಸಹಾಯ ಮಾಡಿದಳು. ಈ ರೀತಿಯ ಸದ್ದಿಲ್ಲದೇ ಮಲಗಲು ಸಾಧ್ಯವಾಗುವ ಹಂತಕ್ಕೆ ಬರಲು ಸಮಯ ಹಿಡಿಯಿತು.
ನಾವು ಜೀವನದಲ್ಲಿ ಎದುರಾಗುವ ಸನ್ನಿವೇಶಗಳನ್ನ ಎದುರಿಸುತ್ತಾ ಹೋಗಬೇಕು. ಇದು ಸರಿ , ಇದು ತಪ್ಪು ಎಂದು ಗೆರೆ ಹಾಕುವುದು ನನಗಿಷ್ಟವಿಲ್ಲದ ಕೆಲಸ. ಏಕೆಂದರೆ ಅಂದಿನ ದಿನದಲ್ಲಿ ಅದು ನಮ್ಮ ಜೀವನವಾಗಿತ್ತು! ಅದನ್ನ ಇಂದಿನ ಜೀವನಕ್ಕೆ ತುಲನೆ ಮಾಡುವುದು ಕೂಡ ನನ್ನ ಉದ್ದೇಶವಲ್ಲ. ಕೆಲವೊಮ್ಮೆ ಬದುಕು ಅನಿರೀಕ್ಷಿತ ತಿರುವುಗಳನ್ನ ಪಡೆದುಕೊಳ್ಳುತ್ತದೆ ಎಂದು ಹೇಳುವುದಷ್ಟೇ ನನ್ನ ಉದ್ದೇಶ.
ಹೀಗೆ ಬೇಡವೆಂದರೂ ನೆನೆಪಾಗುವ , ಬದುಕನ್ನ ತುಲನೆಗೆ ಹಚ್ಚುವ ಇನ್ನೊಂದು ಘಟನೆಯನ್ನ ಉಲ್ಲೇಖಿಸಿ , ಇಂದಿನ ಬರಹಕ್ಕೆ ವಿರಾಮ ಹಾಕುವೆ. ನನ್ನ ತಮ್ಮ ಲಕ್ಷ್ಮಿ ಕಾಂತನಿಗೆ ಹಾಲು , ಮೊಸರು ಎಂದರೆ ಪಂಚಪ್ರಾಣ . ಅಂದಿನ ದಿನದಲ್ಲಿ ಹೆಚ್ಚು ಹಾಲು ಮತ್ತು ಮೊಸರನ್ನ ಕೊಳ್ಳುವ ಶಕ್ತಿಯಿಲ್ಲದ ಕಾರಣ , ನಮ್ಮ ಮನೆಯಲ್ಲಿ ಮೊಸರು ಎನ್ನುವುದು ಕೇವಲ ಶಬ್ದ !! ಅದರ ಜಾಗದಲ್ಲಿ ಇದ್ದದ್ದು ಮಜ್ಜಿಗೆ , ಅದು ಸಾಮಾನ್ಯ ಮಜ್ಜಿಗೆಯಲ್ಲ ನೀರು ಮಜ್ಜಿಗೆ , ಅಂತಹ ನೀರು ಮಜ್ಜಿಗೆ ನೋಡಿ ಕಣ್ಣೀರು ಸುರಿಯುವಷ್ಟು ನೀರು ಮಜ್ಜಿಗೆ .
ಅದಕ್ಕೂ ಹಲವು ಬಾರಿ ಕಚ್ಚಾಟ ! ನಾವು ಮೂವರು ಸಹೋದರರಲ್ಲಿ ಕಾಂತ ಚಿಕ್ಕವನು, ಈ ರೀತಿಯ ಕಚ್ಚಾಟ ನೋಡಿ ಅವನು ಮಜ್ಜಿಗೆಯನ್ನ ಕೂಡ ತಿನ್ನುವುದು ಬಿಟ್ಟ , ವಯಸ್ಸಿನಲ್ಲಿ ಎಲ್ಲರಿಗಿಂತ ಕಿರಿಯನಾದರೂ ತಿಳುವಳಿಕೆಯಲ್ಲಿ ಎಲ್ಲರಿಗಿಂತ ದೊಡ್ಡವನಾಗಿದ್ದ. ಇದರಿಂದ ಬೇಸತ್ತು ನಾನು , ರಾಮ , ಅಜ್ಜಿ ಮತ್ತು ಅಮ್ಮ ಕೂಡ ಮಜ್ಜಿಗೆ ಬಿಟ್ಟೆವು. ಕಾಂತನಿಗೆ ತಕ್ಕಮಟ್ಟಿಗೆ ಮಂದವಾಗಿದ್ದ ಮೊಸರು , ಅಣ್ಣನಿಗೆ ಮಜ್ಜಿಗೆ ಸಿಗುತ್ತಿತ್ತು .
ಕಾಫಿ ಎನ್ನುವ ನಾಲ್ಕು ದಶಕದ ಸಂಗಾತಿಯ ಪುರಾಣ! ಇದು ಇಲ್ಲದಿದ್ದರೆ..
ಬಾರ್ಸಿಲೋನಾ ನಗರಕ್ಕೆ ಪಿಹೆಚ್ಡಿ ಮಾಡಲು 2002ರಲ್ಲಿ ಬಂದ ಕಾಂತನಿಗೆ ಸ್ವರ್ಗಕ್ಕೆ ಮೂರೇಗೇಣು ! ತರಹಾವರಿ ಮೊಸರುಗಳ ಸಾಮ್ರಾಜ್ಯ ಕಂಡು ಅತೀವ ಆನಂದದಲ್ಲಿ ತೇಲಿದ್ದ. ಅವನ ಆನಂದ ಭಗವಂತನಿಗೆ ಸಹ್ಯವಾಗಲಿಲ್ಲ ಎನ್ನಿಸುತ್ತದೆ. ನಂತರದ ದಿನಗಳಲ್ಲಿ ವೈದ್ಯರು ನೀನು ಲ್ಯಾಕ್ಟೋಸ್ ಇಂಟಾಲರೆಂಟ್ , ಇದನ್ನ ಪೂರ್ಣವಾಗಿ ತ್ಯಜಿಸಿದರೆ ಆರೋಗ್ಯ ಸುಧಾರಿಸುತ್ತದೆ ಎಂದರು. ಹೀಗಾಗಿ ಇಂದಿಗೆ ಕಾಂತ ಹಾಲು ಮೊಸರನ್ನ ಕೂಡ ಮುಟ್ಟುತ್ತಿಲ್ಲ . ಬದುಕೆಂದರೆ ಇಷ್ಟೇ ಅಲ್ಲವೇ ? ಇಲ್ಲದಾಗ ಹಸಿವು ಹೆಚ್ಚು ,ಏನೇ ಸಿಕ್ಕರೂ ತಿನ್ನುವ ಹುಮ್ಮಸ್ಸು . ಇದ್ದಾಗ ತಿನ್ನಲು ನೊರೆಂಟು ಅಡ್ಡಿ, ಸಾವಿರ ಕಾರಣ.