ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರಿಗೂ ಕನಸಿನಲ್ಲಿ ಕನ್ಯೆಯರು ಬಂದರೆ ನನಗೆ ಮೊಸರನ್ನ ಬರುತ್ತಿತ್ತು!!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ನಾವು ಯಾವ ಪ್ರದೇಶದಲ್ಲಿರುತ್ತೇವೆ ಆ ಪ್ರದೇಶದ ಭಾಷೆ ಕಲಿಯುವುದು ಎಲ್ಲಾ ರೀತಿಯಿಂದಲೂ ಉತ್ತಮ. ಹೀಗೆ ಹೇಳಲು ಬಹಳ ಮುಖ್ಯ ಕಾರಣ ನಾವು ಅವರ ಭಾಷೆಯನ್ನ ಆಡಿದರೆ ಅವರು ನಮ್ಮನ್ನ ಸುಲಭವಾಗಿ ಅವರವನು ಎಂದು ಕೊಳ್ಳುತ್ತಾರೆ. ಒಂದು ಸಮಾಜದ ವ್ಯವಸ್ಥೆಯ ಭಾಗವಾಗಲು ಭಾಷೆ ಬಹಳ ಮುಖ್ಯ. ಆ ನಿಟ್ಟಿನಲ್ಲಿ ನಾನು ಬಹಳ ಅದೃಷ್ಟಶಾಲಿ ಎನ್ನಬಹದು. ಭಾಷೆ ಬೇಗವಾಗಿ ಕಲಿತೆ.

ಸ್ಪೇನ್ ಸಮಾಜದಲ್ಲಿ ಬಹುಬೇಗ ಒಬ್ಬನಾದೆ. ಇವೆಲ್ಲವೂ ಒಂದು ದಿನದಲ್ಲಿ ಆದದ್ದಲ್ಲ. 23ರ ಹರಯದಲ್ಲಿ ಬಹುತೇಕರು ವಯೋಸಹಜವಾಗಿ ಕನಸಿನಲ್ಲಿ ಕನ್ಯೆಯರು ಬಂದು ಹೋಗುತ್ತಿದ್ದರೆ ನನಗೆ ಮಾತ್ರ ಉಪ್ಪಿಟ್ಟು , ಚಿತ್ರಾನ್ನ , ಪುಳಿಯೋಗರೆ ಜೊತೆಗೆ ಮೊಸರನ್ನ ಉಪ್ಪಿನಕಾಯಿ ಬರುತ್ತಿತ್ತು . ಎರಡು ದಶಕದ ಹಿಂದೆ ಸ್ಪೇನ್ ನಲ್ಲಿ ಇಂದಿನ ಮಟ್ಟದ ವಲಸೆ ಇರಲಿಲ್ಲ .ಹೀಗಾಗಿ ಸದಾ ನಮ್ಮ ಊಟದ ಕೊರತೆ. ಇಂದಿಗೂ ಇಲ್ಲಿ ಭಾರತೀಯರ ಸಂಖ್ಯೆ ಬಹಳ ಕಡಿಮೆ. ಇರಲಿ

ಪ್ರಕೃತ್ತಿ, ದೈವವೆನ್ನಿ ಬದುಕನ್ನ ಚೆನ್ನಾಗಿ ಕಟ್ಟಿಕೊಳ್ಳಲು ಒಂದು ಅವಕಾಶ ಕೊಟ್ಟೇ ಕೊಡುತ್ತದೆಪ್ರಕೃತ್ತಿ, ದೈವವೆನ್ನಿ ಬದುಕನ್ನ ಚೆನ್ನಾಗಿ ಕಟ್ಟಿಕೊಳ್ಳಲು ಒಂದು ಅವಕಾಶ ಕೊಟ್ಟೇ ಕೊಡುತ್ತದೆ

ಇಲ್ಲಿನ ಸಮಾಜದ ಜೊತೆಗೆ ಬೆರೆಯದೆ ಬದುಕಿಲ್ಲ . ಸರಿ ಬೆರೆಯೋಣವೆಂದರೆ ಸಮಾನ ಗುಣಗಳು ಒಂದಷ್ಟು ಬೇಕಲ್ಲ ? ಅದನ್ನ ಎಲ್ಲಿಂದ ತರೋಣ ? ಬೀರೂ ಕುಡಿಯದ , ಸಿಗರೇಟಿಗೆ ತುಟಿ ಸೋಕಿಸದ ಪ್ರಾಣಿಯೊಡನೆ ಸ್ನೇಹ ಯಾರು ತಾನೇ ಮಾಡಿಯಾರು ? ಹಾಗೊಮ್ಮೆ ಅವರೊಂದಿಗೆ ಹೋದರೂ ಎಷ್ಟು ವೇಳೆ ಮಾತನಾಡಲು ಸಾಧ್ಯ ? ಅಲ್ಲದೆ ಇಲ್ಲಿನ ಮುಕ್ಕಾಲು ಪಾಲು ಸೋಶಿಯಲ್ ಗ್ಯಾದರಿಂಗ್ ಶುರುವಾಗುವುದು ರಾತ್ರಿ ಹತ್ತು ಅಥವಾ ಹನ್ನೊಂದು ಗಂಟೆಯ ಮೇಲೆ ! ಒಂಬತ್ತು ಗಂಟೆಗೆ ನಿದ್ರಾದೇವಿಯ ವಶವಾಗುವ ನಾನು ಇಲ್ಲಿ ಹೇಗೆ ಫಿಟ್ ಅದೇನು ?

Barcelona Memories Column By Rangaswamy Mookanahalli Part 27

ತಕ್ಕಿಲ ಇನ್ನು ಕುಡಿದಿಲ್ಲವಾ ? ಹಾಮೋನ್ ಟೆಸ್ಟ್ ಮಾಡಿಲ್ಲವಾ ? ಎಂದು ಹಾರಿ ಬರುವ ಪ್ರಶ್ನೆಗಳಿಗೆ ಉತ್ತರ ಎಲ್ಲಿಂದ ತರುವುದು ? ಇದೆಲ್ಲವನ್ನ ಮೀರಿ ನಿನಗೆ ಗರ್ಲ್ ಫ್ರೆಂಡ್ ಇಲ್ಲವ ? ಎನ್ನುವುದು ಇಲ್ಲಿ ತೀರಾ ಸಾಮಾನ್ಯವಾಗಿ ಕೇಳುವ ಪ್ರಶ್ನೆಯಾಗಿತ್ತು . ಇಲ್ಲ ಎಂದೊಡನೆ ಅಯ್ಯೋ ಪಾಪಾ ಎನ್ನುವ ನೋಟವನ್ನ ಸಹಿಸಿಕೊಳ್ಳುವ ಕಲೆ ಕೂಡ ಸಮಯ ಕಲಿಸಿತು. 16 ವರ್ಷ ಮೀರಿದರೂ ತಮ್ಮ ಮಕ್ಕಳು ಸಂಗಾತಿಯನ್ನ ಹುಡುಕಿಕೊಂಡಿಲ್ಲ ಎಂದರೆ ಅದು ಹೆತ್ತವರಿಗೆ ಚಿಂತೆಯ ವಿಷಯವಾಗುತ್ತದೆ . ನಮ್ಮಲ್ಲಿ ಹತ್ತನೇ ತರಗತಿಗೆ ಹೋಗುತ್ತಿರುವ ಮಗು ಎನ್ನುವ ಮನೋಭಾವ .

ಹೇಗೋ ಈ ಸಮಾಜದ ಜನರ ಜೊತೆಗೆ ಬೆರೆಯದೆ ಇದ್ದರೆ ಬದುಕಿಲ್ಲ ಎನ್ನುವ ಸತ್ಯ ಬಹಳ ಬೇಗ ನನ್ನ ಅರಿವಿಗೆ ಬಂತು. ಮೊದಲ ಮೂರು ತಿಂಗಳು ವಾರಾಂತ್ಯ ಬಂತೆಂದರೆ ಅದೊಂದು ಶಿಕ್ಷೆ ಎನ್ನಿಸುತ್ತಿತ್ತು. ಮಾತನಾಡಲು ಯಾರೂ ಇಲ್ಲದ ಆ ಒಂಟಿತನದ ದಿನಗಳನ್ನ ನೆನಪಿಸಿಕೊಡರೆ ಇಂದಿಗೂ ನಡುಕ ಹುಟ್ಟುತ್ತದೆ. ಹೆಜ್ಜೆ ಇಟ್ಟಾಗಿದೆ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ , ಏಕೆಂದರೆ ನಾನು ನನ್ನ ಅಮ್ಮನನ್ನ ಬಿಟ್ಟಿರಲಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯವಾಗಿತ್ತು.

ನಾನು ಕೆಲಸದ ಮೇಲೆ ದೇಶ ಬಿಟ್ಟಾಗ ಅಯ್ಯೋ ಇವನು ಇನ್ನು ಮೂರು ತಿಂಗಳಲ್ಲಿ ವಾಪಸ್ಸು ಗ್ಯಾರಂಟಿ ಎಂದುಕೊಂಡವರ ಸಂಖ್ಯೆ ಬಹಳ ದೊಡ್ಡದು. ಹೀಗಾಗಿ ಇವರ ಮಾತುಗಳನ್ನ ಸುಳ್ಳು ಎಂದು ಪ್ರೂವ್ ಮಾಡುವುದು ಮುಖ್ಯವಾಗಿತ್ತು ಕೂಡ . ಹೀಗಾಗಿ ಅಂದಿನ ನನ್ನ ಬುದ್ದಿಗೆ ಹೊಳೆದದ್ದು ವಾರಾಂತ್ಯದಲ್ಲಿ ಬಾರ್ಸಿಲೋನಾದ ಬಾರ್ ಗಳಲ್ಲಿ ಕಾಫಿ ಹಿಡಿದು ಕೂರುವುದು ಮತ್ತು ಅಲ್ಲಿ ಸಿಕ್ಕವರೊಂದಿಗೆ ಮಾತನಾಡುವುದು ಭಾಷೆ ಕಲಿಯಲು ಮತ್ತು ಸಮಾಜದೊಂದಿಗೆ ಬೆರೆಯಲು ಉತ್ತಮ ಎನ್ನಿಸಿತು .

Barcelona Memories Column By Rangaswamy Mookanahalli Part 27

 ಬೆಂಗಳೂರು ಬದಲಾಗಿರುವುದು ಕೇವಲ ಕೆಲವೇ ಕೆಲವರಿಗೆ, ಅವನಿಗಲ್ಲ! ಬೆಂಗಳೂರು ಬದಲಾಗಿರುವುದು ಕೇವಲ ಕೆಲವೇ ಕೆಲವರಿಗೆ, ಅವನಿಗಲ್ಲ!

ಇದಕ್ಕೂ ಮೊದಲು ಪ್ರತಿ ನಿತ್ಯ ಸ್ಪ್ಯಾನಿಷ್ ನ್ಯೂಸ್ ಮತ್ತು ಹಲವಾರು ಕಾರ್ಯಕ್ರಮಗಳನ್ನ ನೋಡಲು ಶುರು ಮಾಡಿದ್ದೆ . ಸಬ್ ಟೈಟಲ್ ಇಲ್ಲದೆ ನೋಡುವುದು ಉತ್ತಮ. ಭಾಷೆಯನ್ನ ಕಲಿಯಲು ಅದರ ಮೂಲದಲ್ಲಿ ವೀಕ್ಷಣೆ ಮಾಡುವುದು ಒಳ್ಳೆಯದು ಎನ್ನುವ ಭಾವನೆ ನನ್ನದು . ಹೀಗೆ ಒಂದಷ್ಟು ಭಾಷೆಯೇ ಮೇಲೆ ಹಿಡಿತ ಸಾಧಿಸಿ ಬಾರ್ ಹೊಕ್ಕಿದ್ದೆ . ನನ್ನ ಬಹುತೇಕ ಸ್ಪ್ಯಾನಿಷ್ ಹೀಗೆ ಮಗುವಿನಂತೆ ಕಲಿತೆ ಎನ್ನುವ ಹೆಮ್ಮೆ ಇಂದಿಗೂ ಇದೆ.

ಕನ್ನಡದಲ್ಲಿ ಒಂದು ಗಾದೆಯಿದೆ ' ನೀರು ಇಳಿಯದ ಗಂಟಲಿಗೆ ಕಡುಬು ತುರುಕಿದರು ' ಎಂದು . ಅಂದರೆ ನೀರು ಕೂಡ ಇಳಿಯದ ಸಣ್ಣ ಗಂಟಲಿನಲ್ಲಿ ಕಡುಬು ಹೇಗೆ ಇಳಿದೀತು ಎನ್ನುವ ಭಾವ. ಹಾಗೆ ಸ್ಪ್ಯಾನಿಷ್ ಭಾಷೆಯ ಗಂಧಗಾಳಿ ತಿಳಿಯದವರಿಗೆ ಗ್ರಾಮರ್ ಹೇಳಿಕೊಡಲು ಶುರು ಮಾಡಿದರೆ ಹೇಗೆ ಅಲ್ವಾ ? ಒಟ್ಟಿನಲ್ಲಿ ಮಕ್ಕಳಂತೆ ಸರಾಗವಾಗಿ ಜನರ ಜೊತೆ ಬೆರೆತು ಮಾತನಾಡಲು ಕಲಿತೆ.ಓದಲು ಬರೆಯಲು ಇನ್ನಷ್ಟು ಶ್ರಮದ ಅಗತ್ಯ ಇತ್ತು.

ಅಲ್ಲದೆ ಈ ಬಾರ್ ನಲ್ಲಿ ನನಗೆ ಮಾತು ಕಲಿಸದ ಬಹುತೇಕರು ಸೀನಿಯರ್ ಸಿಟಿಜನ್ ಗಳು . ಅವರಿಗೆ ನನ್ನ ಇನ್ನಷ್ಟು ಮೇಲ್ಮಟ್ಟಕ್ಕೆ ಒಯ್ಯುವ ಶಕ್ತಿ ಮತ್ತು ತಾಳ್ಮೆ ಎರಡೂ ಇರಲಿಲ್ಲ . ಆಗ ನನ್ನ ಸಹದ್ಯೋಗಿಯೊಬ್ಬ ' ನೀನೇಕೆ ಲ್ಯಾಂಗ್ವೇಜ್ ಎಕ್ಸ್ಚೇಂಜ್ ಪ್ರೋಗ್ರಾಮ್ ' ಗಳಲ್ಲಿ ಬಾಗಿಯಾಗಬಾರದು ? ಎಂದು ಪ್ರಶ್ನಿಸಿದ . ಅದಕ್ಕೆ ಬೇಕಾದ ಒಂದಷ್ಟು ಮಾರ್ಗದರ್ಶನ ಕೂಡ ಮಾಡಿದ.

ಸ್ಪ್ಯಾನಿಷ್ ಜನ ಭಾಷೆಯ ವಿಷಯದಲ್ಲಿ ಬಹಳ ಪ್ರೋತ್ಸಾಹ ನೀಡುತ್ತಾರೆ . ಒಂದೆರೆಡು ವಾಕ್ಯವನ್ನ ತಪ್ಪಿಲ್ಲದೆ ಹೇಳಿದರೆ ಸಾಕು ನಿನಗೆಲ್ಲಾ ಬರುತ್ತದೆ ಎಂದು ನಿಮ್ಮನ್ನ ಉಬ್ಬಿಸಿ ಬಿಡುತ್ತಾರೆ . ನೀವು ತಪ್ಪು ಮಾತನಾಡಿದರು ಎಂದೂ ನಗುವುದಿಲ್ಲ . ಇದು ಹೀಗಲ್ಲ ಹೀಗೆ ಎಂದು ತಿದ್ದುತ್ತಾರೆ . ಕೆಲಸದ ವತಿಯಿಂದ ತಿಂಗಳಲ್ಲಿ 4/5 ದಿನ ಇಂಗ್ಲೆಂಡ್ ನಲ್ಲಿ ಇರಬೇಕಾದ ಸನ್ನಿವೇಶಗಳು ಎದುರಾಗುತ್ತಿತ್ತು . ಅಲ್ಲಿ ಹೀಗಿಲ್ಲ .

ನೀವು ಇಂಗ್ಲಿಷ್ ಮಾತನಾಡದಿದ್ದರೆ ಕಸ ಎನ್ನುವಂತೆ ಸ್ಥಳೀಯರು ಕಾಣುತ್ತಾರೆ . ಅವರ ದುರ್ದೈವ ನೋಡಿ ಅಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿರುವ ವಲಸಿಗರು ಇಂದಿಗೆ ರಸ್ತೆಯಲ್ಲಿ ರಾಜಾರೋಷವಾಗಿ ತಮಗೆ ಬೇಕಾದ ರೀತಿಯಲ್ಲಿ ಬದುಕುತ್ತಿದ್ದಾರೆ . ಹೀಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನ ನಾನು ಹೇಳಿಕೊಡಲು ಸಿದ್ದ ಅದಕ್ಕೆ ಬದಲಾಗಿ ಹಣ ಬೇಕಿಲ್ಲ . ನನಗೆ ಸ್ಪ್ಯಾನಿಷ್ ಮತ್ತು ಕತಲಾನ್ ಕಲಿಸಿ ಎನ್ನುವುದು ನನ್ನ ಬೇಡಿಕೆಯಾಗಿತ್ತು. ಇಲ್ಲಿ ಮುಕ್ಕಾಲು ಪಾಲು ನಡೆಯುವುದು ಹೀಗೆ.

ಎಲ್ಲರೂ ತಮಗೆ ಗೊತ್ತಿರುವ ಭಾಷೆಯನ್ನ ಕಲಿಸಲು ಸಿದ್ಧರಾಗಿರುತ್ತಾರೆ , ಬದಲಿಗೆ ತಾವು ಇಷ್ಟ ಪಡುವ ಭಾಷೆಯನ್ನ ಕಲಿಸಿದರೆ ಸಾಕು ಎನ್ನುವುದು ಇಲ್ಲಿನ ಕರಾರು . ಹೀಗೆ ಕನ್ನಡ , ಇಂಗ್ಲಿಷ್ ಎಂದವನಿಗೆ ಆಶ್ಚರ್ಯ ಕಾದಿತ್ತು. ಕನ್ನಡದ ಬಗ್ಗೆ ಲವಲೇಶವೂ ಜ್ಞಾನವಿಲ್ಲದವರಿಗೆ ಅದೊಂದು ಭಾಷೆ ಎನ್ನುವುದು ಕೂಡ ತಿಳಿದಿರಲ್ಲ . ಇಂಗ್ಲಿಷ್ ಕಲಿಯಲು ಬಹಳಷ್ಟು ಜನ ಸಿಕ್ಕರು. ಎಲ್ಲಕಿಂತ ಹೆಚ್ಚು ಆಶ್ಚರ್ಯವಾದದ್ದು ನಾನು ಭಾರತೀಯ ಎಂದ ತಕ್ಷಣ ಹಿಂದಿ ಕಲಿಸುವೆಯ ? ಎಂದು ಕೇಳಿದವರ ಸಂಖ್ಯೆ ಕಂಡು .

 ದಿನಾ ಉಪ್ಪಿಟ್ಟು ತಿನ್ನುವ ನಾನು ಆಕೆಗೆ ಅನ್ಯಗ್ರಹ ಜೀವಿಯಂತೆ ಕಂಡೆ! ದಿನಾ ಉಪ್ಪಿಟ್ಟು ತಿನ್ನುವ ನಾನು ಆಕೆಗೆ ಅನ್ಯಗ್ರಹ ಜೀವಿಯಂತೆ ಕಂಡೆ!

ಹೌದು ಇಲ್ಲಿನ ಜನರಿಗೆ ಹಿಂದಿ ಎಂದರೆ ಅದು ಭಾರತೀಯರೆಲ್ಲಾ ಆಡುವ ಭಾಷೆ ಎನ್ನುವ ಭಾವನೆಯಿದೆ . ಇಲ್ಲಪ್ಪ ನಮ್ಮಲ್ಲಿ ನೂರಾರು ಭಾಷೆಗಳಿವೆ ಎಂದರೆ ಅರೆಕ್ಷಣ ಶಾಕ್ ಆಗುತ್ತಾರೆ . ನಂತರದ ಪ್ರಶ್ನೆ ನನಗೆ ಮಾಮೂಲಾಗಿ ಬಿಟ್ಟಿತ್ತು . ' ನಾವು ನಾಲ್ಕು ಭಾಷೆ ಇಟ್ಟುಕೊಂಡು ಇಷ್ಟೊಂದು ಕಿತ್ತಾಡುತ್ತೇವೆ , ನೀವು ಹೇಗೆ ಅಷ್ಟೊಂದು ಭಾಷೆ ಇಟ್ಟುಕೊಂಡು ಒಂದು ದೇಶವಾಗಿ ಉಳಿದಿದ್ದೀರಿ '? ಹೌದು ಇದೆ ಭಾರತದ ತಾಕತ್ತು .

ಸ್ಪೇನ್ ನಲ್ಲಿ ಕತಲೂನ್ಯ ರಾಜ್ಯವನ್ನ ಪ್ರತ್ಯೇಕ ದೇಶವನ್ನಾಗಿಸಲು ದಶಕಗಳಿಂದ ಹುನ್ನಾರ ನಡೆಯುತ್ತಿದೆ. 85 ಲಕ್ಷ ದಾಟದ ಪುಟ್ಟ ಪ್ರದೇಶ ಸ್ವಂತಂತ್ರ ರಾಷ್ಟ್ರವಾಗಲು ಬಯಸಿದೆ. ಹೀಗೆ ಇವರಿಗೆ ಹಿಂದಿ ಬಗ್ಗೆ ವ್ಯಾಮೋಹ ಬೆಳೆಯಲು ಬಹಮುಖ್ಯ ಕಾರಣ ಬಾಲಿವುಡ್ . ಹಿಂದಿ ಚಿತ್ರಗಳಲ್ಲಿನ ಹಾಡು ಮತ್ತು ಕುಣಿತ ಇಲ್ಲಿನ ಜನರಿಗೆ ವಿಚಿತ್ರ ಸೆಳೆತ. ಹೀಗೆ ಹಿಂದಿ ಕಲಿಸು ಎಂವರಿಗೆಲ್ಲಾ ನನಗೆ ಹಿಂದಿ ಬರುವುದಿಲ್ಲ ಎಂದು ಕೈಯನ್ನ ತಾರಾಮಯ್ಯ ಆಡಿಸುತ್ತಿದೆ .

ಶಾಲೆಯಲ್ಲಿ ಹಿಂದಿ ಒಂದು ಭಾಷೆಯಾಗಿ , ಪಠ್ಯವಾಗಿ ಇತ್ತು . ಆದರೆ ನಾನೆಂದೂ ಅದನ್ನ ಬಹಳ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ . ಉತ್ತರ ಪತ್ರಿಕೆ ಖಾಲಿ ಮಾತ್ರ ಕೊಡಬೇಡಿ . ಕೊನೆಪಕ್ಷ ಪ್ರಶ್ನೆ ಪತ್ರಿಕೆಯನ್ನ ಕಾಪಿ ಮಾಡಿ ಅದನ್ನೇ ಬರೆದಿಟ್ಟು ಬನ್ನಿ ಪಾಸ್ ಮಾಡುತ್ತಾರೆ ಎನ್ನುವ ಗುರುಗಳ ಮಾತುಗಳು ಹಿಂದಿ ಕಲಿಯದಿರಲು ಪ್ರೇರಣೆ . ಅವತ್ತು ನನ್ನದಾಗಿದ್ದ ಆ ಸಮಯವನ್ನ ಸರಿಯಾಗಿ ಉಪಯೋಗಿಸಿಕೊಂಡು ಹಿಂದಿ ಕಲಿತ್ತಿದ್ದರೆ ಇಲ್ಲಿ ಇನ್ನಷ್ಟು ಜನರ ಸ್ನೇಹ , ವಿಶ್ವಾಸ ಗಳಿಸಬಹುದಿತ್ತು .

ನನ್ನ ಉಡಾಫೆ ಮನಸ್ಥಿತಿಯಿಂದ ಹಿಂದಿ ಕಲಿಯಲಿಲ್ಲ . ಅದರಿಂದ ನಷ್ಟವಾಗಿದ್ದು ಹಿಂದಿ ಭಾಷೆಗಲ್ಲ , ವೈಯಕ್ತಿಕವಾಗಿ ನನಗಾದ ನಷ್ಟ . ಅದು ಬೇರೆಯ ಕಥೆ , ಅದನ್ನ ಅಲ್ಲಿಗೆ ಬಿಡೋಣ. ಹೀಗೆ ಭಾಷೆಯನ್ನ ಕಲಿಯಲು ಇರುವ ಸಂಘಟನೆಯಲ್ಲಿ ಬಹಳಷ್ಟು ಜನ ಸಿಕ್ಕರು. ಅದರಲ್ಲಿ ಮುಕ್ಕಾಲು ಪಾಲು ಜನ ಒಳ್ಳೆಯವರು. ಅಲ್ಲೊಬ್ಬರು , ಇಲ್ಲೊಬ್ಬರು ಕಿಡಿಗೇಡಿಗಳು ಎಲ್ಲೆಡೆಯೂ ಇರುತ್ತಾರೆ . ಅಂತಹ ಒಂದು ಘಟೆನಯನ್ನ ಹೇಳಿ ಇವತ್ತಿನ ಲೇಖನವನ್ನ ಮುಗಿಸುವೆ.

ಡ್ಯಾನಿಯಲ್ ಅಂದಿಗೆ 45/46ರ ಆಸುಪಾಸಿನ ವ್ಯಕ್ತಿ . ಅವನಿಗೆ ಇಂಗ್ಲಿಷ್ ಕಲಿಯಬೇಕಿತ್ತು . ನನಗೆ ಸ್ಪ್ಯಾನಿಷ್ . ಮೊದಲ ಮೂರು ತಿಂಗಳು ಎಲ್ಲವೂ ಚನ್ನಾಗಿತ್ತು . ಆತ ಬಹಳ ಸಭ್ಯನಾಗಿದ್ದ . ವಾರಾಂತ್ಯದಲ್ಲಿ ಕಾಫಿ ಬಾರ್ಗಳು ನಮ್ಮ ಶಾಲೆಗಳು, ನನಗೆ ತಿಳಿದ ಮಟ್ಟಿನ ಇಂಗ್ಲಿಷ್ ಅವನಿಗೆ ಕಲಿಸುತ್ತಿದೆ . ಮುಕ್ಕಾಲು ಪಾಲು ಅದು ಮಾತನಾಡಲು ಕಲಿಸುವುದಾಗಿತ್ತು . ಅವನು ಕೂಡ ಹಾಗೆ ನನಗೆ ಗೊತ್ತಿಲ್ಲದ ಅನೇಕ ಹೊಸ ಸ್ಪ್ಯಾನಿಷ್ ಪದಗಳನ್ನ ಹೇಳಿಕೊಡುತ್ತಿದ್ದ .

ನಮ್ಮಲ್ಲಿ ಹೇಗೆ ಒಂದು ಪದ ಹಲವಾರು ಅರ್ಥವನ್ನ ನೀಡುತ್ತದೆ , ನಮ್ಮಲ್ಲಿ ಹೇಗೆ ಒಂದು ಸಣ್ಣ ಬದಲಾವಣೆ ಅರ್ಥವನ್ನೇ ಬದಲಿಸಿ ಬಿಡುತ್ತದೆ ಹಾಗೆ ಸ್ಪ್ಯಾನಿಷ್ ನಲ್ಲಿ ಕೂಡ ಇಂತಹ ಬಹಳಷ್ಟು ಪದಗಳಿವೆ . ಅವುಗಳನ್ನ ನನಗೆ ತಿಳಿ ಹೇಳಿದವನು ಡ್ಯಾನಿ . ಡ್ಯಾನಿ ಮಾತನಾಡುವಾಗ ಕೈ ಸವರುವುದು , ಭುಜವನ್ನ ಮುಟ್ಟುವುದು ಮಾಡುತ್ತಿದ್ದ . ನನಗೆ ಅದರಲ್ಲಿ ವಿಶೇಷತೆ ಕಾಣಲಿಲ್ಲ. ಸ್ಪೇನ್ ನಲ್ಲಿ ಒಂದು ಹೆಣ್ಣು ಗಂಡು ಹೀಗೆ ಮಾಡುವುದು ಸ್ವಾಭಾವಿಕ .

ಆದರೆ ಒಂದು ಗಂಡು ಇನ್ನೊಂದು ಗಂಡಿಗೆ ಹೀಗೆ ಮಾಡಿದರೆ ಅದಕ್ಕೆ ಬೇರೆಯ ಅರ್ಥ ಬರುತ್ತದೆ . ಅಂದಿಗೆ ನನಗೆ ಇದರ ಬಗ್ಗೆ ಇಷ್ಟೊಂದು ಜ್ಞಾನವಿರಲಿಲ್ಲ . ಶ್ರೀನಿ ಜೊತೆಗೆ ಕೈ ಕೈ ಹಿಡಿದು ಹೋಗಿ ಮಾರಿಕೋನ್ ಎನ್ನಿಸಿಕೊಂಡಿದ್ದ ಅನುಭವ ಬಿಟ್ಟರೆ ಇದು ನನಗೆ ತೀರಾ ಹೊಸೆದು . ಡ್ಯಾನಿ ನಾನು ಕೂಡ ಅವನಂತೆ ಎಂದುಕೊಂಡಿದ್ದಾನೆ . ಅವನು ಕೈ ಸವರಿದಾಗ ನಾನು ಕೊಸರಿಕೊಳ್ಳಲಿಲ್ಲ ನೋಡಿ ! ಆಮೇಲೆ ಅಯ್ಯ ನಾನು ನಿನ್ನಂತಲ್ಲ ಎಂದು ಹೇಳಿ ಅವನಿಗೆ ಆದಿಯೋಸ್ ಹೇಳಿದಾಯ್ತು .

 ಇಲ್ಲಿ ಜನ ದಿಗಂಬರರು!, ಜಗತ್ತಿನ ಅರಿವೇ ಇಲ್ಲದೆ ಬಿಸಿಲು ಕಾಯಿಸುತ್ತಾ ಮಲಗಿ ಬಿಡುತ್ತಾರೆ ಇಲ್ಲಿ ಜನ ದಿಗಂಬರರು!, ಜಗತ್ತಿನ ಅರಿವೇ ಇಲ್ಲದೆ ಬಿಸಿಲು ಕಾಯಿಸುತ್ತಾ ಮಲಗಿ ಬಿಡುತ್ತಾರೆ

ಬದುಕೆಂದರೆ ಅದೊಂದು ಅನುಭವಗಳ ಆಗರ . ಕೆಲವು ನೆನಪಿನ ಬುತ್ತಿಯಲ್ಲಿ ಮಾಸದೆ ಉಳಿದುಕೊಳ್ಳುತ್ತವೆ . ಕೆಲವು ಪಾಠ ಕಲಿಸುತ್ತವೆ . ಕೆಲವು ನಮ್ಮ ಶಕ್ತಿ , ಬುದ್ದಿಯನ್ನ ಹೆಚ್ಚಿಸುತ್ತವೆ . ಒಟ್ಟಿನಲ್ಲಿ ಒಳಿತೋ , ಕೆಡುಕೋ ನಿರಂತರವಾಗಿ ಹೊಸತನ್ನ ಕಲಿಸುತ್ತಿರುತ್ತದೆ. ಕಲಿಯುವುದು ಮತ್ತೆ ಅದನ್ನ ಅಳವಡಿಸಕೊಳ್ಳುವುದು ಮಾತ್ರ ನಮಗೆ ಬಿಟ್ಟದ್ದು .

English summary
Barcelona Memories C olumn By Rangaswamy Mookanahalli Part 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X