ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಕಧಿಮಿತ ಕುಣಿಯಲಾಗದಿದ್ದರೇನು, ಕುಳಿತು ಓದಿ!

By * ಮಾ.ವೆಂ.ಸ. ಪ್ರಸಾದ್
|
Google Oneindia Kannada News

Yaksharanga, monthly magazine on Yakshagana
ಪ್ರಾಥಮಿಕ ಶಾಲೆಯಲ್ಲಿದ್ದ ದಿನಗಳು. ಸಮೀಪದ ಊರಿನಲ್ಲಿ ರಾತ್ರಿ ಭಸ್ಮಾಸುರ ಮೋಹಿನಿ' ಯಕ್ಷಗಾನ. ನನ್ನ ಜೀವನದ ಪ್ರಪ್ರಥಮ ಯಕ್ಷಗಾನ ನೋಡಲು ನಾನೂ ಹೊಗಿದ್ದೆ. ಮರುದಿನ ಬೆಳಿಗ್ಗೆ ತಿಂಡಿ ತಿಂದು ಮಲಗಿದ್ದಷ್ಟೇ. ಏಳುವ ಹೊತ್ತಿಗೆ ಚುಮು ಚುಮು ಬೆಳಕು. ಬೆಳಿಗ್ಗೆಯೋ ಸಂಜೆಯೋ ಗೊತ್ತಾಗುವಂತಿರಲಿಲ್ಲ. ಮನೆಯಲ್ಲಿ ಅಕ್ಕ, ಅಮ್ಮ ಎಲ್ಲ ಹೋಗು, ಅರಳೀಕಟ್ಟೆಗೆ ನಮಸ್ಕರಿಸಿ ಬಾ. ಬೆಳಿಗ್ಗಿನ ತಿಂಡಿಗೆ ಅಕ್ಕಿ ರೊಟ್ಟಿ ಮಾಡಿದ್ದಾರೆ. ತಿನ್ನುವೆಯಂತೆ'. ಸರಿ, ಬೆಳಗಿನ ಮೂಡ್‌ನಲ್ಲಿ ನಾನು ಕಟ್ಟೆ ಸುತ್ತಿ ಬಂದರೆ ಮನೆಮಂದಿಯೆಲ್ಲ ಗಹಗಹಿಸಿ ನಗುತ್ತಿದ್ದಾರೆ. ಆವಾಗ ಗೊತ್ತಾಯಿತು, ಮಧ್ಯಾಹ್ನ ನಿದ್ದೆಗಣ್ಣಲ್ಲಿಯೇ ಊಟ ಮಾಡಿ ಮತ್ತೆ ಮಲಗಿದ್ದ ನನ್ನನ್ನು ಏಪ್ರಿಲ್ ಫೂಲ್ ಮಾಡಿದ್ದರು! ಅವತ್ತೇ ಕೊನೆ, ಮತ್ತೆ ಯಕ್ಷಗಾನದ ಟೆಂಟ್ ಬಳಿ ನಾನು ಸುಳಿದಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ನನಗೆ ಹಲವು ಯಕ್ಷಗಾನದ ಸುದ್ದಿಗಳು ಗೊತ್ತಾಗುತ್ತಿವೆ. ಈ ವಿಚಾರದಲ್ಲಿ ಅಪ್‌ಡೇಟ್ ಆಗುತ್ತಿದ್ದೇನೆ. ಥ್ಯಾಂಕ್ಸ್ ಟು ಯಕ್ಷರಂಗ'.

ಕರ್ನಾಟಕದ ಯಕ್ಷಗಾನಕ್ಕೆ ಮೀಸಲಾದ ಮಾಸಪತ್ರಿಕೆಯಿದು. ಕಡತೋಕ ಮಂಜುನಾಥ ಭಾಗವತರ ಪುತ್ರ ಗೋಪಾಲಕೃಷ್ಣ ಭಾಗವತ ಈ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು. ಯಕ್ಷಗಾನ ತಕಧಿಮಿತದ ವಾತಾವರಣದಲ್ಲಿಯೇ ಪತ್ರಿಕೆ ಹುಟ್ಟಿರುವುದರಿದ ಬಣ್ಣದ ವೇಷದ ಟಚ್' ಇಲ್ಲದವರಿಗೂ ಖುಷಿ ನೀಡುತ್ತದೆ, ಮಾಹಿತಿ ಒದಗಿಸುತ್ತದೆ. ಅದಾಗಲೇ ನಾಲ್ಕು ವರ್ಷ ಪೂರೈಸಿರುವ ಯಕ್ಷರಂಗಕ್ಕೆ ಈ ಕಲಾ ವಿಭಾಗದ ಪ್ರಮುಖ ಪಾತ್ರಧಾರಿಗಳು, ಬರಹಗಾರರು ಲೇಖನಿ ಝಳಪಿಸುತ್ತಾರೆ ಎಂಬುದೇ ಇದರ ಹೆಮ್ಮೆ. ಡಾ.ಎಂ.ಪ್ರಭಾಕರ ಜೋಶಿ, ಸೆಡಿಯಾಪು ಕೃಷ್ಣ ಭಟ್ಟ, ಪ್ರೊ.ಎಂ.ಎಲ್.ಸಾಮಗ, ನಾರಾಯಣ ಯಾಜಿ.... ಪಟ್ಟಿಯನ್ನು ಮುಂದುವರೆಸುತ್ತಲೇ ಹೋಗಬಹುದು!

ಯಕ್ಷಗಾನ ಅಕಾಡೆಮಿಯ ಕೇಂದ್ರ ಕಛೇರಿ ಎಲ್ಲಿರಬೇಕು, ಅರ್ಥಗಾರಿಕೆಯಲ್ಲಿ ಸಾಹಿತ್ಯ, ಮಹಿಳಾ ಯಕ್ಷಗಾನ ಸಮೀಕ್ಷೆ ಹೀಗೆ ಬಹುಸಂಖ್ಯಾತ ಲೇಖನಗಳು ಗಂಭೀರ ಚಿಂತನೆಗಳನ್ನು ಒಳಗೊಂಡಿರುವುದನ್ನು ಕಾಣುತ್ತೇವೆ. ನಾಲ್ಕು ರಕ್ಷಾಪುಟಗಳು ಬಣ್ಣದಲ್ಲಿ ಪ್ರಕಟವಾದರೆ ಒಳ ಹೂರಣದ 34 ಪುಟ ಕಪ್ಪು ಬಿಳುಪು. ಹೊನ್ನಾವರದ ಯಕ್ಷಲೋಕ ಸಂಸ್ಥೆ ಇದರ ಪ್ರಕಾಶಕರು. ಬಹುಷಃ ಇದು ಕಡತೋಕ ಭಾಗವತರ ಕುಟುಂಬ ಹುಟ್ಟು ಹಾಕಿರುವ ಸಂಸ್ಥೆಯಾಗಿರಲಿಕ್ಕೆ ಸಾಕು. ನನಗೆ ತಿಳಿದಂತೆ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅದಕ್ಕೇ ಮೀಸಲಾದ ಪತ್ರಿಕೆ ಕನ್ನಡದಲ್ಲಿ ಬೇರಾವುದೂ ಇಲ್ಲ. ಬೇರೆ ಭಾಷೆಯಲ್ಲಿ ಇರಲಿಕ್ಕೆ ಸಾಧ್ಯವಿಲ್ಲ, ಏಕೆಂದರೆ ಇದು ಕರ್ನಾಟಕದ ಕಲೆ! ಬೇರೆಡೆ ಇಲ್ಲ!

ಪತ್ರಿಕೆ ಯಾವ ಮಡಿವಂತಿಕೆಯಿಲ್ಲದೆ ಎಲ್ಲ ವರ್ಗದ ಜನರ ಅಭಿಪ್ರಾಯ, ವಿರೋಧ, ಕಹಿಗಳನ್ನು ಪ್ರಕಟಿಸುವ ಮೂಲಕ ಚರ್ಚೆಗೆ ಒಂದು ಅತ್ಯುತ್ತಮ ವೇದಿಕೆಯನ್ನು ಸೃಷ್ಟಿಸಿಕೊಡುತ್ತದೆ. ಯಕ್ಷಗಾನ ಭಕ್ತರಂತೂ ಇದನ್ನು ಒಂದು ಪಂಚಾಂಗದಂತೆ ಮನೆಗೆ ತಂದಿಟ್ಟುಕೊಳ್ಳಲೇಬೇಕು. ಯಕ್ಷರಂಗ'ದ ಬಿಡಿಪ್ರತಿಯ ಬೆಲೆ 15 ರೂ. ವಾರ್ಷಿಕ ಚಂದಾ 150 ರೂ. ತ್ರೈ ವಾರ್ಷಿಕ ಚಂದಾವನ್ನು ಒಮ್ಮೆಗೇ ಕಟ್ಟುವುದಾದರೆ ನೀವು 500 ರೂ. ಪಾವತಿಸಬೇಕು. ಅಂದರೆ ನಿಮಗೆ ಗ್ಯಾರಂಟಿ ಮೂರು ವರ್ಷದ ಮುಂಗಡ ಕಟ್ಟಿದ್ದಕ್ಕೆ 50 ರೂ ನಷ್ಟ! ಚೆಕ್ ಕಳುಹಿಸುವವರು ನಗದೀಕರಣ ವೆಚ್ಚವನ್ನು ಸೇರಿಸಿ ಕೊಡಿ ಎಂಬುದು ಪತ್ರಿಕೆಯ ವಿನಂತಿ. ವ್ಯವಸ್ಥಾಪಕ ಸಂಪಾದಕರು, ಯಕ್ಷರಂಗ ಮಾಸಪತ್ರಿಕೆ, ಹಳದೀಪುರ, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ... ಈ ವಿಳಾಸಕ್ಕೆ ನಿಮ್ಮ ಪಾವತಿಯಿರಲಿ. ಫೋನ್ ಮಾಡಿ ವಿಚಾರಿಸುವುದಾದರೆ 99862 94756ಕ್ಕೆ ಕರೆ ಮಾಡಿ.

ಕೊನೆ ಮಾತು : ನಮ್ಮ ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ'ದ ಕುರಿತು ಮೊತ್ತಮೊದಲು ಪ್ರಜಾವಾಣಿಯಲ್ಲಿ ಲೇಖನ ಪ್ರಕಟಗೊಂಡಿತ್ತು. ಆಗ ಬೆಂಗಳೂರಿನಿಂದ ಒಂದು ಫೋನ್ ಕರೆ. ನನಗೋ ವಾಚನಾಲಯಕ್ಕೆ ದೇಣಿಗೆ ನೀಡುವರೇನೋ ಎಂಬ ಆಸೆ. ಪ್ರಾಥಮಿಕ ಮಾತುಕತೆಯ ನಂತರ ಅವರು ವಿಷಯಕ್ಕೆ ಬಂದರು, "ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಪತ್ರಿಕೆಯಿದ್ದರೆ ತಿಳಿಸಿ. ಅವರ ವಿಳಾಸ ಕೊಡಿ. ಚಂದಾ ಕಳಿಸುತ್ತೇನೆ!"

ಲೇಖಕರ ವಿಳಾಸ : ಮಾ.ವೆಂ.ಸ.ಪ್ರಸಾದ್, ಮಾವಿನಸರ, ಪೋಸ್ಟ್-ಎಡಜಿಗಳೇಮನೆ. ಸಾಗರ ತಾ. ಶಿವಮೊಗ್ಗ ಜಿ. 577401 ಫೋನ್-08183 236068, 98864 07592 ಇ ಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X