ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ ಯಾರು?
ಎಪ್ಪತ್ತೈದರ ಯಡಿಯೂರಪ್ಪ ಇಪ್ಪತ್ತೈದರ ಹುಡುಗರೂ ನಾಚುವಂತೆ ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ ಇಡೀ ರಾಜ್ಯ ಸುತ್ತಿದ್ದಾರೆ. ಒಂದು ದಿನವೂ ಅನಾರೋಗ್ಯದಿಂದ ಬಳಲಿದವರಲ್ಲ, ಜ್ವರಗಿರ ಬಂದು ಕಂಬಳಿ ಹೊದ್ದು ಮಲಗಿದವರಲ್ಲ, ಸುಸ್ತಾಗಿ ಕುಳಿತವರಲ್ಲ.
ಬಿಳಿ ಸಫಾರಿ ಧರಿಸಿಕೊಂಡು ಅದೆಷ್ಟು ಕಿಲೋಮೀಟರು ಸುತ್ತಿದ್ದಾರೋ, ಅದೆಷ್ಟು ಭಾಷಣಗಳನ್ನು ಮಾಡಿದ್ದಾರೋ, ಅದೆಷ್ಟು ಜನರನ್ನು ತಲುಪಿದ್ದಾರೋ, ಚಳಿ ಮಳೆ ಬಿಸಿಲೆನ್ನದೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಿದ್ದಾರೆ. ದಲಿತರ ಮನೆಯಲ್ಲಿ ತಿಂಡಿ ತಿಂದಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ ಅವರೊಡನೆ ಅಸಂಖ್ಯ ಸಮಾವೇಶಗಳಲ್ಲಿ ಭಾಷಣ ಬಿಗಿದಿದ್ದಾರೆ.
ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದ ಯಡಿಯೂರಪ್ಪ ಎಡವಿದ್ದು ಎಲ್ಲಿ?
ಯಡಿಯೂರಪ್ಪನವರು ಅದ್ಭುತ ಭಾಷಣಕಾರರಲ್ಲ, ಅತ್ಯದ್ಭುತ ಎನ್ನುವಂಥ ವಾಕ್ಪಟುತ್ವ ಅವರಲ್ಲಿ ಇಲ್ಲ, ಅವರ ಮಾತುಗಳನ್ನು ಕೇಳುತ್ತಲೇ ಕೂಡಬೇಕು ಅಂತ ಹಲವರಿಗೆ ಅನ್ನಿಸದೆ ಇರಬಹುದು. ಅತ್ಯಂತ ಪರಿಶುದ್ಧ ವ್ಯಕ್ತಿತ್ವದವರೂ ಯಡಿಯೂರಪ್ಪನವರು ಆಗಿಲ್ಲದಿರಬಹುದು. ಹಲವಾರು ಕಳಂಕ ಅವರಿಗೆ ಅಂಟಿಕೊಂಡಿರಬಹುದು. ಒಂದು ಬಾರಿ ಜೈಲಿಗೂ ಹೋಗಿಬಂದಿರಬಹುದು.
ಆದರೆ, ಅವರಂಥ ಇನ್ನೊಬ್ಬ ನಾಯಕನನ್ನು ಹುಟ್ಟಿಸಲು ಭಾರತೀಯ ಜನತಾ ಪಕ್ಷಕ್ಕೆ ಇನ್ನೂ ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರದು ಕಡಿಮೆ ವಯಸ್ಸೇನಲ್ಲ. ಅವರಲ್ಲಿ ಇನ್ನೂ ಸಾಕಷ್ಟು ಹುಮ್ಮಸ್ಸು ಇರಬಹುದು, ರಾಜ್ಯದ ಜನರ ಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷೆ 75ರ ಹರೆಯದಲ್ಲಿ ಇನ್ನೂ ಜಾಗೃತವಾಗಿರಬಹುದು. ಆದರೆ, ಅವರ ನಂತರ ಯಾರು?
ಈ ಪ್ರಶ್ನೆಗೆ ಭಾರತೀಯ ಜನತಾ ಪಕ್ಷದಲ್ಲಿ ಇನ್ನೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಬಿಜೆಪಿ ಹಲವಾರು ನಾಯಕರನ್ನು, ಮುಖ್ಯಮಂತ್ರಿಗಳನ್ನು, ಉಪಮುಖ್ಯಮಂತ್ರಿಗಳನ್ನು, ಸಂಸದೀಯರನ್ನು, ಶಾಸಕರನ್ನು ಕಂಡಿದೆ. ಆದರೆ, ಯಡಿಯೂರಪ್ಪನವರ ಸಾಮರ್ಥ್ಯವನ್ನು ಮ್ಯಾಚ್ ಮಾಡುವಂಥ ಇನ್ನೊಬ್ಬ ನಾಯಕ ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ.
ಫ್ಲೋರ್ ಟೆಸ್ಟ್ ಬಳಿಕ ಟ್ರಾಲ್ಸ್ ಪುಟದಲ್ಲಿ ಡಿಕೆಶಿ, ಎಚ್ಡಿಕೆ, ಬಿಎಎಸೈ
ಇದಕ್ಕೆ ಸ್ವತಃ ಯಡಿಯೂರಪ್ಪನವರೇ ಕಾರಣರಾ? ಅಥವಾ ಭಾರತೀಯ ಜನತಾ ಪಕ್ಷದಲ್ಲಿನ ವ್ಯವಸ್ಥೆಯೇ ಹಾಗಿದೆಯಾ? ಅಥವಾ ಅಂಥವರೊಬ್ಬರು ಸಿಕ್ಕೇ ಇಲ್ಲವಾ? ಅಥವಾ ಅವರೇ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲಿ, ನಾವು ಅವರ ಹಿಂದೆ ಇರೋಣ ಎಂಬ 'ಸಂತೃಪ್ತ' ಮನೋಭಾವ ಇತರ ನಾಯಕರಲ್ಲಿ ಇದೆಯಾ? ಗೊತ್ತಿಲ್ಲ.
ಅಕ್ರಮ ಗಣಿಗಾರಿಕೆಯಿಂದ ಭಾರತೀಯ ಜನತಾ ಪಕ್ಷದಲ್ಲಿ ಬಿರುಗಾಳಿಯೆದ್ದು, ಒಳಜಗಳಗಳಿಂದಾಗಿ ಒಣಪ್ರತಿಷ್ಠೆಗಳಿಂದಾಗಿ ಮೂರು ಮೂರು ಮುಖ್ಯಮಂತ್ರಿಗಳು ಬದಲಾಗಿ, ಪಕ್ಷವೇ ಇಬ್ಭಾಗವಾಗಿ, ಮತ್ತೊಂದು ಚುನಾವಣೆಯನ್ನು ಎದುರಿಸಿದಾಗ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಿದ ಭಾರತೀಯ ಜನತಾ ಪಕ್ಷದ ಸ್ಥಿತಿ ಏನಾಯಿತು ಎಂಬುದು ಎಲ್ಲರೂ ಬಲ್ಲರು.
ಇದೀಗ, ಅವರೇ ಪಕ್ಷಕ್ಕೆ ಮರಳಿ, ರಾಜ್ಯದ ಅಧ್ಯಕ್ಷ ಸ್ಥಾನ ಪಡೆದು, ಚುನಾವಣೆಯಲ್ಲಿಯೂ ಉತ್ತಮ ಸಾಧನೆ ತೋರಿದ್ದಾರೆ. ಅಧಿಕಾರದಲ್ಲಿದ್ದ ಪಕ್ಷವನ್ನೇ ಮಕಾಡೆ ಮಲಗಿಸಿದ್ದಾರೆ. ಸುಮ್ನೆ ಕಲ್ಪಿಸಿಕೊಳ್ಳಿ. ಯಡಿಯೂರಪ್ಪ ಅವರ ಇಲ್ಲದಿದ್ದರೆ, ಅವರು ಇಡೀ ರಾಜ್ಯ ಸುತ್ತದಿದ್ದರೆ, ಜನರಲ್ಲಿ ವಿಶ್ವಾಸ ಮೂಡಿಸದಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಬಿಜೆಪಿ ಹೇಗೆ ಭಿನ್ನ ಅಂತ ತೋರಿಸದಿದ್ದರೆ 104 ಸ್ಥಾನ ಗಳಿಸಲು ಸಾಧ್ಯವಾಗುತ್ತಿತ್ತೆ?
ಬಿಜೆಪಿ ಬಹುಮತದ ಕನಸು ಭಗ್ನಗೊಳಿಸಿದ್ದು 'ನೋಟಾ'
ಖಂಡಿತ ಇಲ್ಲವೇ ಇಲ್ಲ. ಆದರೆ, ಅವರ ನಂತರ ಯಾರು? ಈ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಕೇಳಿನೋಡಿ. ಅವರು ಕೂಡ ಆಕಾಶ ನೋಡುತ್ತಾರೆ, ಮಾತುಗಳಿಗೆ ತಡಕಾಡುತ್ತಾರೆ, ಇನ್ನೊಬ್ಬರತ್ತ ಬೆರಳು ಮಾಡಿ ತೋರಿಸಲು ಕೂಡ ವಿಫಲರಾಗುತ್ತಾರೆ. ಇದು ನಿಜಕ್ಕೂ ಬಿಜೆಪಿಯ ದುರ್ದೈವವೋ, ದುರಂತವೋ ಗೊತ್ತಿಲ್ಲ. ಆದರೆ, ಇದು ಮಾತ್ರ ಸತ್ಯಸ್ಯಸತ್ಯ.
ಕೆಲವೊಬ್ಬರು ನಾಯಕರು ಬೆಂಗಳೂರಿಗೆ ಮಾತ್ರ ದೊರೆಗಳು, ಪಕ್ಕದ ಜಿಲ್ಲೆಗೆ ಕಾಲಿಟ್ಟರೂ ಅವರು ಅಪರಿಚಿತರು. ಶುದ್ಧ ಮನಸ್ಸಿನ ನಾಯಕರು ಕೆಲವರಿದ್ದರೂ ಅವರು ಚುನಾವಣೆಗಳ ಮೇಲೆ ಚುನಾವಣೆ ಎದುರಿಸಿದ್ದಾರೆಯೇ ಹೊರತು, ಎಲ್ಲರೂ ಒಪ್ಪತಕ್ಕ ನಾಯಕರಾಗಿ ಹೊರಹೊಮ್ಮಲೇ ಇಲ್ಲ. ಲಿಂಗಾಯತ ಸಮುದಾಯಕ್ಕಂತೂ ಯಡಿಯೂರಪ್ಪನವರು ಅನಭಿಷಿಕ್ತ ದೊರೆ.
ಬೇರೆ ಪಕ್ಷ ನೋಡಿ. ಒಬ್ಬರನ್ನು ಮತ್ತೊಬ್ಬರು ಮೀರಿಸುವಂಥ ನಾಯಕರು ದಂಡಿದಂಡಿಯಾಗಿ ಸಿಗುತ್ತಾರೆ. ಅವರಲ್ಲಿ ಅದೆಷ್ಟು ಸಾಮರ್ಥ್ಯವಿದೆ ಎಂಬುದು ನಂತರದ ಮಾತು. ಆದರೆ ನಾಲ್ಕು ನಾಯಕರನ್ನಾದರೂ ಹೆಸರಿಸಬಹುದಾ? ಆದರೆ, ಬಿಜೆಪಿಯಲ್ಲಿ ಯಾರಿದ್ದಾರೆ? ಅಂಥ ಅನ್ಯಪಕ್ಷಗಳ ಡಜನ್ ನಾಯಕರನ್ನು ಏಕಾಂಗಿಯಾಗಿ ಎದುರಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಯಡಿಯೂರಪ್ಪ.
ಯಡಿಯೂರಪ್ಪನವರ ರಾಜಕೀಯ ಆಟ ಇನ್ನೂ ಮುಗಿಯದಿರಬಹುದು, ಮತ್ತೊಂದು ಚುನಾವಣೆ ಎದುರಿಸಿ ಜನರ ಸೇವೆ ಮುಂದುವರಿಸುತ್ತೇನೆ ಎಂದು ಹುಮ್ಮಸ್ಸಿನಿಂದ ಹೇಳಬಹುದು, ರಾಷ್ಟ್ರ ನಾಯಕರಿಗೆ ಯಡಿಯೂರಪ್ಪನವರು ಸದ್ಯಕ್ಕೆ ಅನಿವಾರ್ಯವೂ ಆಗಿರಬಹುದು. ಆದರೆ, ಅವರಿಗೆ ಪರ್ಯಾಯವಾಗಿ, ಎಲ್ಲ ನಾಯಕರ ವಿಶ್ವಾಸ ಗಳಿಸಿ ಮುನ್ನಡೆಸುವಂಥ ಯುವ ಪೀಳಿಗೆಯ ನಾಯಕನನ್ನು ಭಾರತೀಯ ಜನತಾ ಪಕ್ಷ ಹುಡುಕಲೇಬೇಕು. ಇಲ್ಲದಿದ್ದರೆ, ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಕನಸು ಕಾಣುತ್ತ ಕೂತಿರಬೇಕಾಗುತ್ತದಷ್ಟೆ.