ಯಾವ ಸಂದರ್ಶನವೂ ಬೇಡ ಎಂದು ಎದ್ದು ಹೊರಟೇಬಿಟ್ಟರು ಅನಂತ್!
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ 2018 ಇನ್ನೇನು ಕೆಲವೇ ದಿನಗಳಿದ್ದ ಸಮಯವದು. ಅನಂತ್ ಕುಮಾರ್ ಅವರ ಸಂದರ್ಶನಕ್ಕೆಂದು ಕೆಲವೇ ಕೆಲವು ಮಾಧ್ಯಮಗಳಿಗೆ ಅವಕಾಶ ನೀಡಲಾಗಿತ್ತು. ಒನ್ಇಂಡಿಯಾ ಕನ್ನಡ ಪೋರ್ಟಲ್ ಕೂಡ ಅವರ ಸಂದರ್ಶನಕ್ಕೆ ತಯಾರಾಗಿತ್ತು. ಸಮಯಾವಕಾಶ ಕಡಿಮೆಯಿತ್ತು, ಅವರು ಕೂಡ ಮಲ್ಲೇಶ್ವರದಲ್ಲಿ ರೋಡ್ ಶೋ ಮಾಡಿ ಸ್ವಲ್ಪ ತಡವಾಗಿಯೇ ಬಂದಿದ್ದರು.
ನೇರವಾಗಿ ಸಂದರ್ಶನದ ಕುರ್ಚಿಯನ್ನು ಏರುವ ಮೊದಲು, 'ಬರ್ರೀ ಸ್ವಲ್ಪ ಹರಟೆ ಹೊಡೆಯೋಣ, ಸಂದರ್ಶನ ಇದ್ದೇ ಇರುತ್ತದೆ. ಹೀಗೆ ಆರಾಮವಾಗಿ ಮಾತನಾಡಲು ಸಮಯವಾದರೂ ಎಲ್ಲಿ ಸಿಗುತ್ತದೆ' ಎಂದು ದುಂಡು ಮೇಜಿನ ಸುತ್ತ ಕೂಡಿಸಿಕೊಂಡು ಹರಟೆ ಹೊಡೆಯಲು ಆರಂಭಿಸಿದರು. ಅಂದು ಅನಂತ್ ಕುಮಾರ್ ಅವರು ವಿಶಿಷ್ಟ ಲಹರಿಯಲ್ಲಿದ್ದರು.
ಅನಂತ್ ಕುಮಾರ್ ಮುಖ್ಯಮಂತ್ರಿ ಆಗಲೇ ಇಲ್ಲ: ಕಾರಣ ಏನು?
ಎಲ್ಲರಿಗೂ ಚಹಾ ತರಲು ಹೇಳಿ, ಸಣ್ಣಗೆ ಕೆಮ್ಮಲು ಆರಂಭಿಸಿದಾಗ ಕುಡಿಯಲು ಬಾಟಲಿಯಲ್ಲಿ ಇಟ್ಟಿದ್ದ ನೀರನ್ನು ಎತ್ತಿಕೊಂಡರು. 'ಏನ್ರೀ ಇದು ತಣ್ಣಗಿದೆ? ಮೊದಲೇ ಏಸಿಯಿಂದಾಗಿ ನಡುಗುತ್ತಿದ್ದೇನೆ, ಇಷ್ಟು ತಣ್ಣಗಿನ ನೀರನ್ನು ಕುಡಿಯಕ್ಕಾಗುತ್ತೇನ್ರೀ' ಅಂತ ಅಲ್ಲಿದ್ದ ಪಕ್ಷದ ಕಾರ್ಯಕರ್ತರಿಗೆ ಪ್ರೀತಿಯಿಂದಲೇ ದಬಾಯಿಸಿ, ತಣ್ಣಗಿಲ್ಲದ ನೀರನ್ನು ತರಿಸಿಕೊಂಡು ಗುಟುಕರಿಸಿದ್ದರು. ಸಣ್ಣದಾದ ಕೆಮ್ಮಿನ ಜೊತೆ ಅವರ ಮಾತು ನಿರರ್ಗಳವಾಗಿತ್ತು.
ಅನಂತ ಕುಮಾರ್ ಮಾಡಿದ ಮಹತ್ವದ ಸಾಧನೆಗಳೇನು? ವಿವರ ಇಲ್ಲಿದೆ...
ಇನ್ನೇನು ಹತ್ತು ನಿಮಿಷದಲ್ಲಿ ನಮ್ಮ ಹರಟೆ ಮುಗಿಯುತ್ತದೆ, ಸಂದರ್ಶನಕ್ಕೆ ಅಣಿಯಾಗಬೇಕು ಎಂದು ಬೇಗಬೇಗನೆ ಚಹಾ ಗುಟುಕರಿಸಿದರೂ ಅವರ ಮಾತು ನಿಲ್ಲುತ್ತಲೇ ಇರಲಿಲ್ಲ. ಕರ್ನಾಟಕ ರಾಜಕಾರಣದಿಂದ ಆರಂಭವಾದ ಮಾತು ದೇಶದ ರಾಜಕೀಯದತ್ತ ಹೊರಳಿತು. ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ತಮಗೆ ಹಂಚಿಕೊಳ್ಳಬೇಕೆನಿಸಿದ ವಿಷಯಗಳನ್ನೆಲ್ಲ ಯಾವುದೇ ಮುಚ್ಚುಮರೆ, ಯಾವುದೇ ಹಮ್ಮಿಬಿಮ್ಮುಗಳಿಲ್ಲದೆ ಹಂಚಿಕೊಂಡಿದ್ದರು.
ಅನಂತ್ ಹೆಸರು ಕೂಡ ತೇಲಿಬಂದಿತ್ತು
ಆ ಸಮಯದಲ್ಲಿ ಭಾರತೀಯ ಜನತಾ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯವನ್ನು ದಾಟಿ, ಸಾರ್ವಜನಿಕ ವಲಯದಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ಹಲವಾರು ವಿರೋಧಿಗಳು ತಮ್ಮ ನಾಲಿಗೆಯನ್ನು ಹರಿಯಬಿಡುತ್ತಿದ್ದರು. ಬಿಜೆಪಿಯಿಂದ ಮುಖ್ಯಮಂತ್ರಿ ಪಟ್ಟಕ್ಕೆ ಇಂಥವರೇ ಸೂಕ್ತ ಎಂಬ ಮಾತು ಬಂದಾಗ ಅನಂತ್ ಕುಮಾರ್ ಅವರ ಹೆಸರು ಕೂಡ ಹರಿದಾಡತೊಡಗಿತ್ತು. ಆ ಚಾಲ್ತಿಯಲ್ಲಿದ್ದ ಮಾತು ಅಸಂಬದ್ಧವೂ ಆಗಿರಲಿಲ್ಲ, ಅಕಾಲಿಕವೂ ಆಗಿರಲಿಲ್ಲ. ಏಕೆಂದರೆ, ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾಗಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಾಗ ಯಾರು ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿ ಅಂತ ಬಂದಾಗ, ಮುಂಚೂಣಿಯಲ್ಲಿದ್ದದ್ದೇ ಅನಂತ್ ಕುಮಾರ್ ಅವರ ಹೆಸರು.
ಊಹಾಪೋಹಗಳಿಗೆ ಅನಂತ್ ತೆರೆ
ಈ ಬಗ್ಗೆ ಆ ಮಾತುಕತೆಯಲ್ಲಿ ಪ್ರಸ್ತಾಪಿಸಿದಾಗ, ಅಷ್ಟೇ ನಿರುಮ್ಮಳವಾಗಿ ಈ ಸುದ್ದಿಯನ್ನು ಅನಂತ್ ಕುಮಾರ್ ಅವರು ನಿರಾಕರಿಸಿದ್ದರು. ಇಂಥ ಸುದ್ದಿಗಳ ಬಗ್ಗೆ ಚರ್ಚೆ ಮಾಡುವುದು ಅನಗತ್ಯ. ಯಡಿಯೂರಪ್ಪನವರೇ ನಮ್ಮ ಭಾರತೀಯ ಜನತಾ ಪಕ್ಷದ ಏಕೈಕ ಮತ್ತು ಸರ್ವಸಮ್ಮತ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಲ್ಲ ಊಹಾಪೋಹಗಳಿಗೂ ಅನಂತ್ ಕುಮಾರ್ ಅವರು ತೆರೆ ಎಳೆದಿದ್ದರು. ಈ ಸಮಯದಲ್ಲಿ ಇಲ್ಲದ ಮಾತುಗಳನ್ನಾಡುವುದು ಸಮಂಜಸವೂ ಅಲ್ಲ ಅಂತ ಅವರು ಮುತ್ಸದ್ದಿತನವನ್ನು ಮೆರೆದಿದ್ದರು. ಅನಂತ್ ಅವರು ಮೇಲೆ ಗೌರವ ಭಾವ ಮೂಡಿತ್ತಿದ್ದುದೇ ಈ ಕಾರಣಕ್ಕೆ. ಮನಸ್ಸು ಮಾಡಿದ್ದರೆ ಅವರು ಕೂಡ ದಾಳ ಎಸೆಯಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ.
ಮಾಜಿ ಸಿಎಂ ಪತ್ನಿಯನ್ನು ಸೋಲಿಸಿ ರಾಜಕೀಯ ಬದುಕು ಆರಂಭಿಸಿದ್ದ ಅನಂತ್ ಕುಮಾರ್
ಸೀಕ್ರೆಟ್ ಹಂಚಿಕೊಳ್ಳುತ್ತಿದ್ದ ಅಟಲ್, ಅಡ್ವಾಣಿ
ಮಾತನ್ನು ಬೇರೆಡೆ ತಿರುಗಿಸಿದ ಅನಂತ್ ಕುಮಾರ್ ಅವರು, ತಮ್ಮ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರು ಇಟ್ಟ ವಿಶ್ವಾಸ ಮತ್ತು ತಮ್ಮೊಂದಿಗೆ ಅಂತಹ ಹಿರಿಯ ನಾಯಕರು ಹಂಚಿಕೊಳ್ಳುತ್ತಿದ್ದ ರಹಸ್ಯಗಳ ಬಗ್ಗೆ ಅವರು ಅಂದು ಮುಚ್ಚುಮರೆಯಿಲ್ಲದೆ ಮಾತನಾಡಿದ್ದರು. ಆ ಮಟ್ಟಿನ ನಂಬಿಕೆಯನ್ನು ಅವರು ರಾಷ್ಟ್ರಮಟ್ಟದಲ್ಲಿ ಗಳಿಸಿದ್ದರು. ಅಂದು ಲೋಕಸಭಾ ಸ್ಪೀಕರ್ ಯಾರು ಆಗುತ್ತಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಹಲವಾರು ಹೆಸರುಗಳು ಕೂಡ ತೇಲಿಬಂದಿದ್ದವು. ಜಿಎಂಸಿ ಬಾಲಯೋಗಿ ಅವರು ಆಗುತ್ತಾರೆ ಎಂಬ ಸಂಗತಿಯನ್ನು ರಹಸ್ಯವಾಗಿ ಇಡಲಾಗಿತ್ತು ಮತ್ತು ಆ ಸಂಗತಿಯನ್ನು ಅನಂತ್ ಅವರೊಂದಿಗೆ ಮಾತ್ರ ಹಂಚಿಕೊಳ್ಳಲಾಗಿತ್ತು. ಆದರೆ, ಬಾಯಿತಪ್ಪಿ ಅವರು ಬಾಲಯೋಗಿ ಅವರ ಹೆಸರನ್ನು ಕೆಲ ಮಾಧ್ಯಮಗಳ ಮುಂದೆ ಹೇಳಿಬಿಟ್ಟ ಸಂಗತಿಯನ್ನು ಕೂಡ ಅನಂತ್ ನಮ್ಮೊಂದಿಗೆ ಹಂಚಿಕೊಂಡಿದ್ದರು.
ಆತ್ಮೀಯ ಒಡನಾಡಿ ಅನಂತ್ ಕುಮಾರ್ ಅಗಲಿಕೆಗೆ ಕಣ್ಣೀರಾದ ಅಡ್ವಾಣಿ
ಸಂದರ್ಶನದಿಂದ ಎದ್ದು ಹೊರಟೇಬಿಟ್ಟರು
ಹೀಗೆ ಹಲವಾರು ವಿಷಯಗಳ ಮಾತುಗಳು ಹರಿಯುತ್ತಲೇ ಎರಡು ಗಂಟೆ ಕಳೆದೇ ಹೋಗಿತ್ತು. ಒಂದು ಮಾಧ್ಯಮದ ಜೊತೆ ಸಂದರ್ಶನಕ್ಕೆ ಅನಂತ್ ಕುಮಾರ್ ಅಣಿಯಾದರು. ಏರು ಮಾತಿನ ಪ್ರಶ್ನೆಗಳ ಬಾಣಗಳನ್ನೆಲ್ಲ ನೇರವಾಗಿಯೇ ಎದುರಿಸಿ ಬ್ಯಾಲನ್ಸ್ಡ್ ಉತ್ತರ ನೀಡುತ್ತಿದ್ದರು ಅನಂತ್ ಕುಮಾರ್. ಅವರನ್ನು ಮಾತಿನಲ್ಲಿ ಸಿಲುಕಿಸುವುದು, ಸೋಲಿಸುವುದು ಸಾಧ್ಯವೇ ಇರಲಿಲ್ಲ. ಎಲ್ಲ ಪ್ರಶ್ನೆಗಳಿಗೂ ಅವರಲ್ಲಿ ಉತ್ತರವಿರುತ್ತಿತ್ತು. ಮಾತು ಆಡಾಡುತ್ತಲೇ ಕೆಮ್ಮು ಜಾಸ್ತಿಯಾಗತೊಡಗಿತು. ತರಿಸಿಕೊಂಡ ಬಿಸಿ ನೀರನ್ನು ಗುಟುಕರಿಸುತ್ತ ಸಂದರ್ಶನವನ್ನೂ ಮುಗಿಸುವ ಹಂತಕ್ಕೆ ಬಂದರು. ಇನ್ನೇನು ನಮ್ಮ ಸರದಿಯಿತ್ತು. ಆದರೆ, ಕೆಮ್ಮು ಎಷ್ಟು ಜಾಸ್ತಿಯಾಯಿತೆಂದರೆ ಅವರಿಗೆ ಮಾತಾಡಲೂ ಕಷ್ಟವಾಗುತ್ತಿತ್ತು. ಯಾವ ಸಂದರ್ಶನವೂ ಬೇಡ ಎಂದು ಎದ್ದು ಹೊರಟೇಬಿಟ್ಟರು. ನಮ್ಮಲ್ಲಿ ಕೂಡ ಕೇಳಬೇಕಾಗಿದ್ದ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡವು. ಅವರು ಇನ್ನೆಂದೂ ಸಿಗಲಾರದಂಥ ಸ್ಥಳಕ್ಕೆ ಪಯಣ ಬೆಳೆಸಿಬಿಟ್ಟಿದ್ದಾರೆ.