ಮತ್ತೆ ಆಣೆ ಪ್ರಮಾಣದ ನೆನಪು ತಂದ ಧರ್ಮಸ್ಥಳದ ಮಂಜುನಾಥ
Recommended Video
ಸರಿಯಾಗಿ ಏಳು ವರ್ಷಗಳ ಹಿಂದೆ ಹೆಚ್ಚೂಕಡಿಮೆ ಇದೇ ಸಮಯದಲ್ಲಿ ಕರ್ನಾಟಕ ರಾಜಕೀಯದಲ್ಲಿ ಏನಾಗಿತ್ತೆಂದು ಒಮ್ಮೆ ನೆನಪಿಸಿಕೊಳ್ಳಿ. ಸಾಧ್ಯವಾದರೆ ನಿಮ್ಮ ನೆನಪುಗಳನ್ನು ರಿವೈಂಡ್ ಮಾಡಿಕೊಂಡು, ಬೆಂಗಳೂರಿನಿಂದ ಹೊರಟು, ಶಿರಾಡಿ ಘಾಟ್ ತಿರುವುಗಳ ಮುಖಾಂತರ ಧರ್ಮಸ್ಥಳಕ್ಕೆ ಹೋಗಿ, ಮಂಜುನಾಥನ ಸನ್ನಿಧಿಯಲ್ಲಿ ಏನು ನಡೆಯಬೇಕಾಗಿತ್ತು ಎಂಬುದನ್ನೂ ಮನನ ಮಾಡಿಕೊಳ್ಳಿ.
2011ರ ಜೂನ್ 27ರಂದು ಎಲ್ಲರೂ ಅಂದುಕೊಂಡಂತೆ ನಡೆದಿದ್ದರೆ ಕರ್ನಾಟಕದ ಇತಿಹಾಸದಲ್ಲಿಯೇ ಕಂಡುಕೇಳರಿಯದಂತಹ, ಐತಿಹಾಸಿಕ ರಾಜಕೀಯ ವಿದ್ಯಮಾನವೊಂದು ನಡೆದುಹೋಗಬೇಕಿತ್ತು. ಧೋಧೋ ಸುರಿವ ಮಳೆಯ ನಡುವೆ ಸಹಸ್ರಾರು ಭಕ್ತಾದಿಗಳು ಆ ವಿದ್ಯಮಾನಕ್ಕೆ ಸಾಕ್ಷಿಯಾಗಲೆಂದು ಕೊಡೆ ಹಿಡಿದುಕೊಂಡು ಸಾಲುಸಾಲಾಗಿ ನಿಂತಿದ್ದರು. ಆದರೆ, ಅಂದು ಆ ಘಟನೆ ನಡೆಯಲೇ ಇಲ್ಲ. ಈ ಕಾರಣಕ್ಕಾಗಿಯೇ ಮಂಜುನಾಥ ಮುನಿಸಿಕೊಂಡನೆ? ಆತನೇ ಉತ್ತರ ಹೇಳಬೇಕು.
ಅದು ಮತ್ತಾವುದೂ ಅಲ್ಲ, ಕೆಲವೇ ದಿನಗಳ ಹಿಂದೆ ಮೂರನೇ ಬಾರಿ ಮುಖ್ಯಮಂತ್ರಿಯಾಗಿ, ಮೂರೇ ದಿನದಲ್ಲಿ ಅಧಿಕಾರವನ್ನೂ ಕಳೆದುಕೊಂಡಿರುವ ಬಿಎಸ್ ಯಡಿಯೂರಪ್ಪ ಮತ್ತು ಅದೃಷ್ಟವೆಂದರೆ ಇದು ಎಂಬಂತೆ, ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದರೂ (37) ಎರಡನೇ ಬಾರಿ ಮುಖ್ಯಮಂತ್ರಿ ಪದವಿಗೇರುತ್ತಿರುವ ಎಚ್ ಡಿ ಕುಮಾರಸ್ವಾಮಿ ನಡುವೆ ಆಗ ರಾಜಕೀಯ ಯುದ್ಧವೇ ನಡೆದುಹೋಗಿತ್ತು.
ಧರ್ಮಸ್ಥಳದ 'ಆಜೆ-ಸೂಲ' ಎಂದರೆ ಏನು?
ಅದು 'ಆಣೆ-ಪ್ರಮಾಣ'ದ ಯುದ್ಧ. ಗೆದ್ದಿದ್ದಾರು? ಸೋತಿದ್ದಾರು? ನಿಮಗೆ ಗೊತ್ತೇ ಇದೆ. ಆ ಘಟನೆ ಮತ್ತೇಕೆ ನೆನಪಿಗೆ ಬಂತೆಂದರೆ, ಎರಡನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ಕುಮಾರಸ್ವಾಮಿಯವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮೇ 22ರಂದು ಧರ್ಮಸ್ಥಳದ ಮಂಜುನಾಥನ ಪಾದಕ್ಕೆ ಉದ್ದಂಡ ನಮಸ್ಕಾರ ಮಾಡಿದ್ದಾರೆ, ಮಂಜುನಾಥನ ಆಶೀರ್ವಾದ ಪಡೆದಿದ್ದಾರೆ.
ತನ್ನನ್ನು ನಂಬಿಕೊಂಡು ಬರುವ ಭಕ್ತಾದಿಗಳ ಇಷ್ಟಾರ್ಥವನ್ನು ನೆರವೇರಿಸುವ ಧರ್ಮಸ್ಥಳದ ಮಂಜುನಾಥನ ಸನ್ನಿಧಿ ಅಂದು ರಾಜಕೀಯ ರಣಾಂಗಣವಾಗಿತ್ತು. ರಾಜಕೀಯ ವಿಷಯವನ್ನು ದೇವಸ್ಥಾನದೊಳಗೆ ತಂದಿದ್ದಾರೆ, ತಾವು ತಪ್ಪು ಮಾಡಿಲ್ಲ ಎಂಬ ನಂಬಿಕೆ ಇದ್ದರೆ 'ಆಣೆ ಪ್ರಮಾಣ' (ತುಳುವಿನಲ್ಲಿ ಆಜೆ-ಸೂಲ) ಮಾಡಬೇಕಾಗಿತ್ತು. ಹೇಡಿಯಂತೆ ವರ್ತಿಸಬಾರದಿತ್ತು ಎಂದು ದರ್ಶನ ಭಾಗ್ಯ ಕಳೆದುಕೊಂಡಿದ್ದ ಸಾವಿರಾರು ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆಲ್ಲ ಕಾರಣ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನಡುವೆ ನಡೆದಿದ್ದ ಆಣೆ ಪ್ರಮಾಣದ ಮೆಗಾ ಪ್ರಹಸನ. ಯಾವುದೋ ಕಾರಣಕ್ಕಾಗಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನಡುವಿನ ವಾಗ್ವಾದ 'ಆಣೆ ಪ್ರಮಾಣ'ದ ಮಟ್ಟಿಗೂ ಹೋಗಿ, ಕರ್ನಾಟಕದ ಜನತೆ ಮಾತ್ರವಲ್ಲ, ಇಡೀ ದೇಶದ ಜನತೆ ಇತ್ತ ತಿರುಗಿ ನೋಡುವಂತೆ ಮಾಡಿತ್ತು. ಏನಾದರೂ ಪ್ರಮಾದವಾಗಿದ್ದರೆ, ತಪ್ಪಾಗಿದ್ದರೆ, ಅನ್ಯಾಯ ನಡೆದಿದ್ದರೆ ಮಂಜುನಾಥನ ಮುಂದೆ 'ಆಣೆ ಪ್ರಮಾಣ' ಮಾಡಿದರೆ ದೇವರು ಕ್ಷಮಿಸುತ್ತಾನೆ ಎಂಬ ನಂಬಿಕೆಯಿದೆ.
ಆಣೆ ಪ್ರಮಾಣ 'ಅಗ್ನಿ ಪರೀಕ್ಷೆ'ಯಲ್ಲಿ ಯಡಿಯೂರಪ್ಪ ಫೇಲ್!
ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರು ಲೆಹರ್ ಸಿಂಗ್ ಮೂಲಕ ಸಂಧಾನಕ್ಕೆ ಯತ್ನಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡುತ್ತಿದ್ದಂತೆ ದೂರ್ವಾಸಮುನಿಯ ಅವತಾರ ತಾಳಿದ್ದ ಯಡಿಯೂರಪ್ಪನವರು, ಬನ್ನಿ ಬೇಕಾದ್ರೆ ಮಂಜುನಾಥನ ಪುಣ್ಯಕ್ಷೇತ್ರದಲ್ಲಿ ದೇವರ ಸನ್ನಿಧಿಯಲ್ಲಿ ಆಣೆ ಪ್ರಮಾಣ ನಡೆದೇಹೋಗಲಿ ಎಂದು ಕುಮಾರಸ್ವಾಮಿಗೆ ಪಂಥಾಹ್ವಾನ ನೀಡಿದ್ದರು. ಆಗಲಿ ನೋಡೇಬಿಡೋ ಎಂದು ಕುಮಾರಸ್ವಾಮಿಯವರೂ ಸವಾಲು ಸ್ವೀಕರಿಸಿದ್ದರು.
ಕ್ಷೇತ್ರ ಮಹಾತ್ಮೆ : ನಾಡಿನ ನ್ಯಾಯದೇಗುಲ "ಧರ್ಮಸ್ಥಳ"
ಇದು ಕರ್ನಾಟಕದಲ್ಲಿರುವ ಎಲ್ಲ ಲಿಂಗಾಯತ ಮಠಾಧಿಪತಿಗಳ ಕಿವಿಯನ್ನು ಮುಟ್ಟಿ, ಕರ್ನಾಟಕದ ಗಡಿಯನ್ನೂ ದಾಟಿ ದೆಹಲಿಯ ಹೈಕಮಾಂಡ್ ಗೂ ತಲುಪಿ, ಕಡೆಗೆ 'ಆಣೆ ಪ್ರಮಾಣ' ಮಾಡಿದರೆ ದೇವರಿಗೇ ಅಪಚಾರ ಮಾಡಿದಂತಾಗುತ್ತದೆ, ದೆಹಲಿಯ ಹಿರಿಯ ನಾಯಕರಿಗೆ, ಸ್ವಾಮೀಜಿಗಳಿಗೆ ಗೌರವ ನೀಡಿ ಆಣೆ ಪ್ರಮಾಣದಿಂದ ಯಡಿಯೂರಪ್ಪನವರು ಹಿಂದೆ ಸರಿದಿದ್ದರು. ಧರ್ಮಸ್ಥಳಕ್ಕೆ ತೆರಳಿ ಆಣೆ ಪ್ರಮಾಣ ಯಾವುದನ್ನೂ ಮಾಡದೆ ಕೈಮುಗಿದು, ದಕ್ಷಿಣೆ ಹಾಕಿ ಹಿಂದಿರುಗಿದ್ದರು. ಅಲ್ಲಿಗೆ ಆಣೆ ಪ್ರಮಾಣದ ಪ್ರಹಸನಕ್ಕೂ ತೆರೆ ಬಿದ್ದಿತ್ತು.