ಸಾರಿ, ನೋ ಕ್ಯಾಶ್, ಎಟಿಎಂ ಔಟ್ ಆಫ್ ಆರ್ಡರ್!
ನೋ ಕ್ಯಾಶ್, ಎಟಿಎಂ ಔಟ್ ಆಫ್ ಆರ್ಡರ್, ಎಟಿಎಂ ಅಂಡರ್ ಮೇಂಟೆನನ್ಸ್... ಅರ್ಧ ಮುಚ್ಚಿದ ಶಟರ್, ಶಟರ್ ತೆರೆದಿದ್ದರೂ ಕೆಲಸ ಮಾಡದ ಮಷೀನ್, ಮಷೀನ್ ಕೆಲಸ ಮಾಡುತ್ತಿದ್ದರೂ ಡೆಬಿಟ್ ಕಾರ್ಡ್ ತುರುಕಿದಾಗ 'ಟ್ರಾನ್ಸಾಕ್ಷನ್ ಕ್ಯಾನ್ಸಲ್ಡ್'... ಇನ್ನೇನು ಹ್ಯಾಪ್ಮೋರೆ ಹಾಕ್ಕೊಂಡು ಹೊರಬನ್ನಿ.
ನೋ ಕ್ಯಾಶ್, ಔಟ್ ಆಫ್ ಆರ್ಡರ್ ರಟ್ಟಿನ ಬೋರ್ಡುಗಳನ್ನು, ಟ್ರಾನ್ಸಾಕ್ಷನ್ ಕ್ಯಾನ್ಸಲ್ಡ್ ಸಂದೇಶಗಳನ್ನು ಪ್ರತಿ ಎಟಿಎಂಗಳಲ್ಲಿ ಕಂಡುಕಂಡು ಗ್ರಾಹಕ ಬಸವಳಿದಿದ್ದಾನೆ. ಬಿರುಬಿಸಿಲಲ್ಲಿ ಎಟಿಎಂನಿಂದ ಎಟಿಎಮ್ಮಿಗೆ ಸುತ್ತಿಸುತ್ತಿ ಬಳಲಿ ಬೆಂಡಾಗಿದ್ದಾನೆ.[ಅಪನಗದೀಕರಣಕ್ಕೆ 5 ತಿಂಗಳು ಕಳೆದರೂ ಎಟಿಎಂಗಳು ಖಾಲಿ ಖಾಲಿ]
ಎಷ್ಟು ಅಂತ ಆನ್ ಲೈನ್ ವಹಿವಾಟಿಗೆ ಜೋತುಬೀಳುತ್ತೀರಿ, ಎಷ್ಟಂತ ನೆಟ್ ಬ್ಯಾಂಕಿಂಗ್ ಮಾಡ್ತೀರಿ, ಎಷ್ಟಂತ ಕ್ರೆಡಿಟ್ ಕಾರ್ಡ್ ಉಜ್ಜುತ್ತೀರಿ, ಎಷ್ಟು ಅಂತ ಪೇಟಿಎಂ ಬಳಸುತ್ತೀರಿ, ಎಷ್ಟು ಅಂತ ಜೇಬಲ್ಲಿ ನಯಾಪೈಸೆ ಕಾಸಿಲ್ಲದೆ ಸುತ್ತುತ್ತೀರಿ, ಎಷ್ಟು ಅಂತ ಕ್ಯಾಶ್ಲೆಸ್ ಟ್ರಾನ್ಸಾಕ್ಷನ್ ಮಾಡಿಮಾಡಿ ಸುಸ್ತಾಗುತ್ತೀರಿ?
ಇದು ಭಾರತ ಸ್ವಾಮೀ ಭಾರತ. ಎಷ್ಟು ವ್ಯಾಪಾರಿಗಳು ಕ್ಯಾಶ್ಲೆಸ್ ಟ್ರಾನ್ಸಾಕ್ಷನ್ನಿಗೆ ಅವಕಾಶ ಮಾಡಿಕೊಡುತ್ತಾರೆ. ಗುಡಿಗೆ ಹೋದಾಗ ಅರ್ಚಕರ ತಟ್ಟೆಗೆ ನಾಕಾಸು ಹಾಕಲಿಕ್ಕಾದರೂ ಕಾಂಚಾಣ ಬೇಕಾಗುತ್ತದೆ ಸ್ವಾಮಿ.[200ರೂ. ನೋಟು ಬರುತ್ತಂತೆ, ಅಂತೆ-ಕಂತೆ!]
ಪಿಬಿ ರೋಡಿನಲ್ಲಿ ಹಲಸಿನ ಹಣ್ಣು ಮಾರುವವ ಪೇಟಿಎಂ ಇಟ್ಟಿರ್ತಾನಾ, ಮಠಮಾನ್ಯಗಳಲ್ಲಿ ಆಡಳಿತ ನಡೆಸುವವರು ಕಾರ್ಡ್ ಉಜ್ಜುವ ಮಷೀನ್ ಇಟ್ಟಿರ್ತಾರಾ, ಪೆಂಡಾಲು ಹಾಕುವವನ ಕೈಲಿ ಡೆಬಿಟ್ ಕಾರ್ಡ್ ಕೊಟ್ರೆ ಏನು ಮಾಡಬೇಕು, ಸಭೆ ಸಮಾರಂಭಗಳಲ್ಲಿ ಅಡುಗೆ ಮಾಡುವ ಭಟ್ಟ ಕಾಸು ಕೈಗಿಡದಿದ್ದರೆ ಕೈಕೊಟ್ಟ!
ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರೆ, ಕೇಂದ್ರ ವಿತ್ತ ಸಚಿವರಾದ ಅರುಣ್ ಜೇಟ್ಲಿಯವರೆ, ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರೆ ಏನಾದ್ರೂ ಮಾಡಿ ಸಾರ್. ನಿಮ್ಮ ಡಿಮಾನಿಟೈಸೇಷನ್ ಮೆಚ್ಚಿಕೊಳ್ಳೋಣ, ಭ್ರಷ್ಟಾಚಾರದ ವಿರುದ್ಧದ ನಿಮ್ಮ ಹೋರಾಟವನ್ನು ಅಭಿನಂದಿಸೋಣ... ಆದರೆ, ಕೈಯಲ್ಲಿ ಕಾಸಿಲ್ಲ ಸ್ವಾಮಿ, ಜೇಬು ಖಾಲಿಯಾಗೈತೆ ಏನು ಮಾಡೋದು?
ಮನೇಲಿ ಮಗ ಹತ್ತು ರುಪಾಯಿ ಚಾಕ್ಲೇಟು ತಗೊಂಬಾ ಅಂತಾನೆ, ಹೆಂಡತಿಗೆ ಮುಕ್ಕಾಲು ಮೊಳ ಮಲ್ಲಿಗೆ ಮಾಲೆ ತಗೊಂಡು ಹೋಗಬೇಕು, ಏನೋ ಸಮಾರಂಭವಿದೆ ಬರ್ತಾ ಎನ್ನಾರ್ಕಾಲೋನಿಯ ಗಾಡಿ ಅಂಗಡಿಯವನ ಹತ್ತಿರ ಹದಿನೈದು ರುಪಾಯಿ ಅಂಬಾಡಿ ಎಲೆ ತೆಗೆದುಕೊಂಡು ಹೋಗಬೇಕು... ಎಲ್ಲಿಂದ ತಗೊಂಡು ಹೋಗೋಣ?
ಹಣ ವರ್ಗಾವಣೆ ಮಾಡಬೇಕಾದರೆ, ಪಿಚ್ಚರ್ ಟಿಕೆಟ್ ಬುಕ್ ಮಾಡಬೇಕಾದರೆ, ಮಾಲ್ ಗಳಲ್ಲಿ ಶಾಪಿಂಗ್ ಮಾಡಬೇಕಾದರೆ, ಹೋಟೆಲಿನಲ್ಲಿ ಎರಡು ಇಡ್ಲಿ ಒಂದು ವಡೆ ತಿನ್ನಬೇಕಾದರೆ, ಮಗಳ ಫೀಸು ಕಟ್ಟಬೇಕಾದರೆ, ವಿದ್ಯುತ್ ದೂರವಾಣಿ ಬಿಲ್ ಕಟ್ಟಬೇಕಾದರೆ, ಡಿಟಿಎಚ್ ಕನೆಕ್ಷನ್ ರಿಚಾರ್ಜ್ ಮಾಡಬೇಕಾದರೆ ಕಾರ್ಡನ್ನೇ ಉಜ್ಜುತ್ತೀವಿ, ನೆಟ್ ಬ್ಯಾಂಕಿಂಗ್ ಬಳಸುತ್ತೀವಿ, ನಿಜ ಆದ್ರೂ ಕೈಯಲ್ಲಿ ಕಾಸುಬೇಕೇಬೇಕು.
ಇಷ್ಟರ ಮಟ್ಟಿಗೆ ಜೀವನ ಸರಳವಾಗಿದೆ. ಒಂದು ರೀತಿ ಕೆಟ್ಟದ್ದು, ಒಂದು ರೀತಿ ಒಳ್ಳೆಯದಾದರೂ ಕೂತಲ್ಲೇ ಹಲವಾರು ಕೆಲಸಗಳಾಗುತ್ತಿವೆ. ಚಿಲ್ಲರೆ ತೊಂದರೆಯಿಲ್ಲ, ಹಳೆ ನೋಟು ಇಸಿದುಕೊಳ್ಳುವ ಪ್ರಮೇಯವಿಲ್ಲ, ಜೇಬಲ್ಲಿ ಹಣ ಇಟ್ಟುಕೊಂಡು ಇಂದು ತಿರುಗಬೇಕಿಲ್ಲ, ಪೆಟ್ರೋಲ್ ತುಂಬಿಕೊಳ್ಳುವಾಗಲೂ ಹಣದ ಸಮಸ್ಯೆ ಇರುವುದಿಲ್ಲ. ಜೀವನ ಎಷ್ಟೇ ಸಲೀಸಾಗು ಸಾಗುತ್ತಿದ್ದರೂ ಕೈಯಲ್ಲಿ ಚಿಕ್ಕಾಸು ಬೇಕೇಬೇಕು ಸಾರ್ ಬೇಕೇಬೇಕು.
ಜನರ ಸಹನೆ ಕಟ್ಟೆಯೊಡೆಯುತ್ತಿದೆ. ಮೊನ್ನೆ ಸ್ನೇಹಿತರೊಬ್ಬರು, 22 ಎಟಿಎಂ ಸುತ್ತಿಬಂದೆ ಒಂದೇ ಒಂದು ಎಟಿಎಂನಲ್ಲೂ ದುಡ್ಡಿಲ್ಲ ಅಂದ. ಮತ್ತೊಬ್ಬ ಟ್ವಿಟ್ಟರಿನಲ್ಲಿ ದಯವಿಟ್ಟು ಹಣ ನೀಡದ ಬ್ಯಾಂಕುಗಳನ್ನು ಬಂದ್ ಮಾಡಿ ಎಂದು ಆಕ್ರೋಶ ಹೊರಹಾಕಿದ. ಮತ್ತೊಂದು ಘಟನೆಯಲ್ಲಿ ಸಕಾಲದಲ್ಲಿ ನಗದು ನೀಡಲಿಲ್ಲವೆಂದು ಮಾಡಿಕೊಂಡಿದ್ದ ಒಪ್ಪಂದವನ್ನೇ ರದ್ದು ಮಾಡಿದ.
ಜೀವನ ಎಷ್ಟೇ ಸರಳ ಅನ್ನಿಸುತ್ತಿದ್ದರೂ ದುರ್ಭರವೆನ್ನಿಸುತ್ತಿದೆ. ಏಕೆಂದ್ರೆ ಹಲವಾರು ಸಂದರ್ಭಗಳಲ್ಲಿ ನಗದು ನೀಡದೆ ಕೆಲಸವಾಗುವುದಿಲ್ಲ. ಜನರ ಬಳಿ ಕಾಂಚಾಣ ಇರುವುದಿಲ್ಲವೆಂತಲ್ಲ, ಬೇಕಾದಾದಾಗ ಸಿಗುವುದಿಲ್ಲ, ಆಗಬೇಕಾದ ಕೆಲಸಗಳು ಆಗುವುದಿಲ್ಲ. ಸಹಸ್ರಾರು ವ್ಯಾಪಾರಿಗಳು ಇನ್ನೂ ಕ್ಯಾಶ್ಲೆಸ್ ವ್ಯಾಪಾರಕ್ಕೆ ತೆರೆದುಕೊಂಡಿಲ್ಲ. ಬಹುಶಃ ತೆರೆದುಕೊಳ್ಳುವುದೂ ಇಲ್ಲ.