ಮತಹಾಕಿ ಕರ್ತವ್ಯ ನಿಭಾಯಿಸಬೇಕಾದ ಯುವಜನತೆಗೇನಾಗಿದೆ?
ಬೆಂಗಳೂರು, ಏಪ್ರಿಲ್ 18 : ಕರ್ನಾಟಕದಲ್ಲಾಗಲಿ, ಮತ್ತಾವುದೇ ರಾಜ್ಯದಲ್ಲಾಗಲಿ ಮತದಾನದ ಚಿತ್ರಣವನ್ನು ಕೂಲಂಕಷವಾಗಿ ಗಮನಿಸಿದಾಗ, ಕಂಡುಬಂದ ಸಂಗತಿಯೆಂದರೆ, ಹೆಚ್ಚಾಗಿ ಮತದಾನದ ಕರ್ತವ್ಯ ನಿಭಾಯಿಸಿದವರು ಮಧ್ಯ ವಯಸ್ಕರು ಮತ್ತು ಹಿರಿಯರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಜೀವನೋತ್ಸಾಹಿ 107 ವಯಸ್ಸಿನ ಸಾಲುಮರದ ತಿಮ್ಮಕ್ಕನಿಂದ ಹಿಡಿದುಕೊಂಡು, ನೂರರ ಗಡಿ ದಾಟಿದವರು, ಎಸ್ಸೆಸ್ಸೆಲ್ಸಿ ಪಿಯುಸಿ ಪರೀಕ್ಷೆಯಲ್ಲಿ ಜಾಣ ವಿದ್ಯಾರ್ಥಿಗಳಂತೆ 95ರ ಗಡಿಯನ್ನು ದಾಟಿದವರೆಷ್ಟೋ, ಸ್ಟ್ರೆಚರ್ ಅಥವಾ ಗಾಲಿ ಕುರ್ಚಿಯಲ್ಲಿ ಇತರರ ಸಹಾಯದಿಂದ ಬಂದು ಮತ ಚಲಾಯಿಸಿ, ಇಂಕ್ ಅಂಟಿದ ತಮ್ಮ ಎಡಗೈ ತೋರು ಬೆರಳನ್ನು ಹೆಮ್ಮೆಯಿಂದ ತೋರಿದವರೆಷ್ಟೋ?
ಬೆಂಗಳೂರು ನಗರದಲ್ಲಿ ಈ ವರೆಗೆ ಅತಿ ಕಡಿಮೆ ಮತದಾನ
ಫೋಟೋಜರ್ನಲಿಸ್ಟ್ ಗಳ ಕ್ಯಾಮೆರಾ ಯಾವಾಗಲೂ, ತಮ್ಮ ಕೈಲಾಗದಿದ್ದರೂ ಇತರರ ಸಹಾಯದಿಂದ ಬಂದು ಮತ ಚಲಾಯಿಸಿ ಕರ್ತವ್ಯ ಮೆರೆಯುವ ಇಂಥ ಹಿರಿಯರ ಮೇಲೆಯೇ ಇರುತ್ತದೆ. ಬದಲಾಗಿ, ಪ್ರಥಮ ಬಾರಿ ಮತ ಚಲಾಯಿಸುವ, ಪ್ರಜಾಪ್ರಭುತ್ವಕ್ಕೆ ನವಚೈತನ್ಯ ತುಂಬಬೇಕಾಗಿರುವ ಯುವಕ ಯುವತಿಯ ಮೇಲೆ ಏಕಿರುವುದಿಲ್ಲ? ಏಕೆಂದರೆ, ಮತದಾನಕ್ಕಾಗಿ ನಿಂತಿರುವ ಉದ್ದುದ್ದ ಸಾಲುಗಳಲ್ಲಿ ಅವರು ಇರುವುದೇ ಇಲ್ಲ!
ಇದು ಅಚ್ಚರಿಯಾದರೂ, ನಾಚಿಕೆಗೇಡಿನ ಸಂಗತಿಯಾದರೂ ಸತ್ಯವಾದದ್ದು. ಮತ ಚಲಾಯಿಸಿ ಬಂದವರೆ ನೀವೇ ಗಮನಿಸಿ ನೋಡಿ, ಬೆಳಗಿನಿಂದ ಎಷ್ಟು ಯುವಕ, ಯುವತಿಯರು ನಿಮ್ಮ ಕಣ್ಣಿಗೆ ಬಿದ್ದಿದ್ದಾರೆ? ಕಾಲೇಜಿಗೆ ರಜಾ ಇದ್ದರೂ ಜಯನಗರದ ಪಾರ್ಕುಗಳ ಬದಿಯಲ್ಲಿ ಹೆಗಲಿಗೆ ಹೆಗಲು ಸೇರಿಸಿ ಸ್ವಚ್ಛಂದವಾಗಿ ಚಕ್ಕಂದವಾಡುತ್ತ ಕುಳಿತಿದ್ದ ನೂರಾರು ಯುವಕ ಯುವತಿಯರು ಇಲ್ಲಿಯೂ ಇಲ್ಲ, ಅಲ್ಲಿಯೂ ಇಲ್ಲ. ಮತ್ತೆಲ್ಲಿ?
ವೋಟ್ ಮಾಡಲು ಅವಕಾಶ ಕೊಡದ ಅಧಿಕಾರಿಗಳಿಗೆ ಧಿಕ್ಕಾರ
ಇದು ಒಂದು ಪ್ರದೇಶದ ವಿಷಯ ಮಾತ್ರವಲ್ಲ, ಎಲ್ಲೆಲ್ಲಿಯೂ ಕಂಡುಬರುತ್ತಿರುವ ದೃಶ್ಯ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವಾರು ಹಿರಿಯರು ಕರೆ ನೀಡಿದ್ದರೂ ಯುವಜನತೆಗೆ ಮತದಾನವೆಂದರೆ ಏಕೆ ಇಷ್ಟು ನಿರ್ಲಿಪ್ತತೆ? ಏಕೆ ಈಪರಿಯ ಉದಾಸೀನತೆ. ಇಷ್ಟೆಲ್ಲ ಬರೆಯುತ್ತಿರುವಾಗಲೇ, ಉಳಿದೆಲ್ಲ ಕ್ಷೇತ್ರಗಳಿಗಿಂತ ಬೆಂಗಳೂರಿನಲ್ಲಿ ಅತಿಕಡಿಮೆ ಮತದಾನವಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ಈ ಪ್ರಣಾಳಿಕೆಗಳಲ್ಲಿ ಯಾವುದು ನಿಮ್ಮ ಗಮನ ಸೆಳೆದಿದೆ?
ಮತದಾನ ಮಾಡದ ಅರ್ಹ ಯುವಕರಿಗೆ ಯಾವುದೇ ಸವಲತ್ತುಗಳನ್ನು ನೀಡುವುದಿಲ್ಲ, ಬಸ್ ಪಾಸ್ ನೀಡುವುದಿಲ್ಲ, ಕಾಲೇಜಿಗೆ ಪ್ರವೇಶ ನೀಡುವುದಿಲ್ಲ, ಥಿಯೇಟರ್ ಪ್ರವೇಶಿಸಲು ಅವಕಾಶವನ್ನೇ ನೀಡುವುದಿಲ್ಲ, ಪೆಟ್ರೋಲ್ ಹಾಕಿಸಿಕೊಳ್ಳಲು ಬಿಡುವುದಿಲ್ಲ, ಸಿಮ್ ರಿಚಾರ್ಜ್ ಮಾಡಲ್ಲ ಎಂಬಿತ್ಯಾದಿ ನಿಯಮಗಳನ್ನು ಜಾರಿಗೆ ತರಬಾರದೇಕೆ? ಏನೇ ನಿಯಮ ತಂದರೂ ಅವೆಲ್ಲವನ್ನೂ ಧಿಕ್ಕರಿಸಿ ಹೋಗುವ ದಾರ್ಷ್ಟ್ಯತೆ ಇವರಲ್ಲಿರುತ್ತದೆ ಎಂಬುದು ಬೇರೆ ಮಾತು.
ಉದಾರಹಣೆಯಾಗಿ, ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ಹೆಲ್ಮೆಟ್ ಕೂಡ ಹಾಕದೆ, ಲಂಡ್ ಪ್ಯಾಂಟ್ ಹಾಕಿಕೊಂಡು, ಮೂರುಮೂರು ಜನ ಕುಳಿತುಕೊಂಡು, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿಕೊಂಡು, ಟ್ರಾಫಿಕ್ ಪೊಲೀಸ್ ಊದುವ ಶೀಟಿಯನ್ನೂ ತಮಾಷೆ ಮಾಡಿಕೊಂಡು ಭರ್ರನೆ ಸಾಗುವ ಪಡ್ಡೆಗಳನ್ನು ಹಿಡಿದು ನೋಡಿ ಮತದಾನ ಮಾಡಿದ್ದಾರಾ ಎಂದು! ಮತದಾನ ಮಾಡು ಎಂದು ಯಾರನ್ನೂ ಬಲವಂತ ಮಾಡಲು ಸಾಧ್ಯವಲ್ಲ. ಆದರೆ, ಇದು ಗಾಳಿ, ನೀರು ಕುಡಿಯುವ ಎಲ್ಲರ ಕರ್ತವ್ಯವಲ್ಲವೆ?
ಸೋಷಿಯಲ್ ಮೀಡಿಯಾದಲ್ಲೆಲ್ಲ ಮತದಾನ ಮಾಡಿದ ಮೇಲೆ ಸೆಲ್ಫಿಗಳನ್ನು ತೆಗೆದುಕೊಂಡು ಎಲ್ಲರೂ ಪ್ರದರ್ಶಿಸಿದ್ದೇ ಪ್ರದರ್ಶಿಸಿದ್ದು. ಹಲವಾರು ಪೋಸ್ಟ್ ಗಳಲ್ಲಿ ವ್ಯಂಗ್ಯ, ವಿಡಂಬನೆ, ಟೀಕೆ, ತಿರಸ್ಕಾರಗಳಿರುತ್ತಿದ್ದರೂ, ಇದು ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿ. ಆದರೆ, ಇವೆಲ್ಲ ಮುಖಗಳ ನಡುವೆ ಮುಖ ಹುದುಗಿಸಿ ಕುಳಿತಿರುವ ಯುವಜನತೆಯೆಲ್ಲಿ? ಮತದಾನ ಮಾಡಿದ ಯುವಜನತೆಗೆ ಆಯಾ ಕ್ಷೇತ್ರದ ರಾಜಕಾರಣಿಗಳು ಪುರಸ್ಕಾರ ಘೋಷಿಸಬಾರದೇಕೆ?