ಗತವೈಭವ : ವಿಜಯನಗರದಿಂದ ಮೈಸೂರಿನವರೆಗೆ
ಗೊಂಬೆ ಪ್ರದರ್ಶನ :
ಹ್ಯೂಸ್ಟನ್ನಿನ ಕನ್ನಡ ಸಂಸ್ಕೃತಿಯ ಒಂದು ಕಿರುನೋಟ ಕಂಡುಬಂದಿದ್ದು ಎರಡು-ಮೂರು ಸಂದರ್ಭಗಳಲ್ಲಿ. ಮಯೂರಿ ಎಂಬ ಭಾರತೀಯ ಭೋಜನಗೃಹದಲ್ಲಿ ಅತಿಥಿಗಳಿಗೆ ಏರ್ಪಡಿಸಿದ್ದ ಔತಣದ ಕೋಣೆಯನ್ನು ಮೈಸೂರಿನ ಬೊಂಬೆಗಳಿಂದ ಅಲಂಕರಿಸಿದ್ದು ಮೊದಲನೆಯದು. ಮಾರನೆಯ ದಿನ ಹ್ಯೂಸ್ಟನ್ ವಸ್ತುಸಂಗ್ರಹಾಲಯದಲ್ಲಿ ದಸರಾ ಹಬ್ಬದಲ್ಲಿ ಮನೆಮನೆಗಳಲ್ಲಿ ಸಾಂಪ್ರದಾಯಿಕವಾಗಿ ಅಲಂಕರಿಸುವಂತೆ ಗೊಂಬೆಗಳನ್ನು ಮೆಟ್ಟಲುಗಳ ಮೇಲಿಟ್ಟು ಸಮಾರಂಭಕ್ಕೆ ಬಂದವರಿಗೆಲ್ಲ ಪ್ರದರ್ಶಿಸಿದ್ದು ಎರಡನೆಯದು.
ಅದೇ ಸಂಜೆ ದಸರಾ ಜಂಬೂಸವಾರಿಯನ್ನು ಪ್ರಾತಿನಿಧಿಕವಾಗಿ ಆಚರಿಸಿ ಎಲ್ಲರಿಗೂ ಮೈಸೂರಿನ ವಿಜಯದಶಮಿ ಉತ್ಸವದ ಸವಿನೆನಪುಗಳನ್ನು ತಂದುಕೊಟ್ಟಿದ್ದು ಮೂರನೆಯದು. ಕನ್ನಡ ವೃಂದದ ಅನೇಕ ಸದಸ್ಯರ ಸಹಕಾರವಿಲ್ಲದೇ ಇಂಥ ಒಂದು ಪ್ರದರ್ಶನವನ್ನು ಏರ್ಪಡಿಸುವುದು ಸಾಧ್ಯವಿಲ್ಲ. ಆದರೂ ಹಲವು ಹೆಸರುಗಳು ಮನಸ್ಸಿಗೆ ಬರುತ್ತವೆ: ಗೊಂಬೆ ಅಲಂಕಾರ - ಗೀತಾ ರಾವ್ ಮತ್ತು ಮಂಗಳಾ ಪ್ರಸಾದ್. ಧ್ವನಿ ಮತ್ತು ಚಿತ್ರಣ - ಭರತ್ ಜಯಕೀರ್ತಿ. ಉದ್ಘೋಷಕಿಯರು - ಅನು ಉಡುಪ ಅಮತ್ತು ನೀಲಾ ಚಕ್ರವರ್ತಿ. ಮೆರವಣಿಗೆಯ ನಿರ್ದೇಶನ - ವೆಂಕಟೇಶ ಗೌಡ. ಇನ್ನೂ ಅನೇಕ ಸ್ವಯಂಸೇವಕರು ದುಡಿದಿದ್ದಾರೆ.
ಈ ಎಲ್ಲ ಚಟುವಟಿಕೆಗಳ ಫಲವಾಗಿ, ಬೇಲೂರು ಶಿಲಾಬಾಲಿಕೆಯ ವರ್ಣಚಿತ್ರ ಮತ್ತು ಅನೇಕ ಮೈಸೂರು ಅರಮನೆಯ ವರ್ಣಚಿತ್ರಗಳು ಮತ್ತು ಪುಸ್ತಕಗಳು ಈಗ ಹ್ಯೂಸ್ಟನ್ ವಸ್ತುಸಂಗ್ರಾಹಲಯದಲ್ಲಿ ನೋಡಸಿಕ್ಕುತ್ತವೆ. ಈ ವರ್ಷ ಆಶಾ ಶಿವ ಅವರು ಬಿಡಿಸಿದ ಮೈಸೂರರಮನೆಯ ದಸರಾ ದೀಪಾಲಂಕಾರದ ಸುಂದರ ತೈಲಚಿತ್ರ ಮತ್ತು ಜೇಮ್ಸ್ ಬ್ಲ್ಯಾಕ್ ಅನ್ನುವ ಹ್ಯೂಸ್ಟನ್ ಕಲಾವಿದನ ಕುಂಚದಿಂದ ಉದ್ಭವವಾದ ಹಂಪಿಯ ‘‘ರಾಣಿಯ ಸ್ನಾನಗೃಹ’’ ಈಗ ರಸಿಕರಿಗೆ ಲಭ್ಯವಾಗಿವೆ.
ಮೈಸೂರು ಒಡೆಯರ ಬಗ್ಗೆ ನಡೆದ ಒಂದೆರಡು ಭಾಷಣಗಳಲ್ಲಿ ನನ್ನದೂ ಒಂದು. ‘ಕರ್ನಾಟಕ ಸಂಗೀತಕ್ಕೆ ಮೈಸೂರರಸರ ಕೊಡುಗೆ’ ಎಂಬ ವಿಷಯದ ಬಗ್ಗೆ ನಾನು ಮಾತನಾಡಿದೆ. ಜಯಚಾಮರಾಜ ಒಡೆಯರ ಕೃತಿಗಳ ಮೇಲೆ ಒಂದಷ್ಟು ಗಮನ ಸೆಳೆದು ಅವುಗಳಲ್ಲಿನ ಸಾಹಿತ್ಯವಿಶೇಷವನ್ನು ಕುರಿತು ಒಂದಿಷ್ಟು ಬೆಳಕು ಚೆಲ್ಲಲು ಯತ್ನಿಸಿದೆ. ಈ ವಿಷಯದ ಬಗ್ಗೆ ಮುಂದೆ ಒಂದು ಲೇಖನ ಬರೆಯುವ ಸಾಧ್ಯತೆ ಇದೆಯಾದ್ದರಿಂದ ಇಲ್ಲಿ ಹೆಚ್ಚಿನ ವಿವರಗಳನ್ನು ಕೊಟ್ಟಿಲ್ಲ.
ಮುಕ್ತಾಯ :
ಒಟ್ಟಾರೆ, ಈ ಕಾರ್ಯಕ್ರಮ ಸರಾಸರೀ ಕನ್ನಡಕೂಟಗಳ ಮಾಮೂಲಿನ ಕಾರ್ಯಕ್ರಮಗಳಂತಿಲ್ಲದೇ, ಮಹತ್ವಾಕಾಂಕ್ಷೆಯಿಂದ ಹುಟ್ಟಿಕೊಂಡ ವಿನೂತನ ಕಾರ್ಯಕ್ರಮ. ಇಂಥ ಚಟುವಟಿಕೆಗಳಿಗೆ ಹಣ, ಪ್ರತಿಭೆಗಳ ಜೊತೆಗೆ ಮುಂದಾಲೋಚನೆ, ದೂರಾಲೋಚನೆ ಮತ್ತು ಮುಂಜಾಗರೂಕತೆ ಅಗತ್ಯ. ಇಲ್ಲಿ ಕನ್ನಡ ಚರಿತ್ರೆ, ಕಲೆ ಮತ್ತು ಸಂಸ್ಕೃತಿಯನ್ನು ಕನ್ನಡೇತರರಿಗೆ ಅದರಲ್ಲೂ ಅಮೇರಿಕನ್ನರಿಗೆ ಪರಿಚಯಮಾಡಿಕೊಡುವ ಉದ್ದೇಶವಿದೆ. ಯಾರಿಗೆ ಗೊತ್ತು, ಇಂಥ ಒಂದು ಕಾರ್ಯಕ್ರಮದಲ್ಲಿ ಪಾಲುಗೊಂಡ ಸ್ಥಳೀಯರು ಮತ್ತು ಭಾರತೀಯ ಮೂಲದ ಮಕ್ಕಳು ಭಾರತದ ಭೂತಕಾಲದಬಗ್ಗೆ ಆಸಕ್ತಿ ತಳೆದು ಅಲ್ಲಿ ಖುದ್ದಾಗಿ ಹೋಗಿ ಸಂಶೋಧನೆ ನಡೆಸುವ ಅವಕಾಶ ಬರಬಹುದು.
ಇಂಥಾ ಸಂಕಿರಣಕ್ಕೆ ಹೋಗಿಬಂದಾಗ ನಮ್ಮ ಮುಂದೆ ಎರಡು ಗುಂಪಿನ ವ್ಯಕ್ತಿಗಳು ಪ್ರತ್ಯಕ್ಷರಾಗುತ್ತಾರೆ. ಮೊದಲ ಗುಂಪಿನವರು: ಹಾಳು ಹಂಪಿಯ ಬಳಿಯಲ್ಲೇ ಹುಟ್ಟಿ, ಅಲ್ಲಿಯೇ ಜೀವಿಸಿ, ಪ್ರತಿ ನಿತ್ಯ ಮುರಿದ ಕಲ್ಲುಗಳನ್ನು ನೋಡಿದರೂ ‘ಇದು ನನ್ನದು’ ‘ಇದು ನನ್ನ ಪೂರ್ವಜರು ಬಿಟ್ಟುಹೋದ ಆಸ್ತಿ’ ‘ಇದನ್ನು ಕಾಪಾಡಿಕೊಳ್ಳಬೇಕು’ ಇದರ ಸೃಷ್ಟಿಯ ಹಿಂದೆ ಅಡಗಿರುವ ಅದ್ಭುತ ಚರಿತ್ರೆಯ ಇಂದ್ರಜಾಲವನ್ನು ಅರ್ಥಮಾಡಿಕೊಳ್ಳಬೇಕು’ ‘ಅರ್ಥಮಾಡಿಕೊಂಡು ಪುಳಕಪಡಬೇಕು’ ಮುಂತಾಗಿ ಒಮ್ಮೆಯೂ ಕನಸಿನಲ್ಲೂ ಚಿಂತಿಸದೇ ಅಲ್ಲಿಯೇ ಸತ್ತು, ಮುರಿದ ಕಲ್ಲಿನಡಿ ಮಣ್ಣಾಗುವ ನತದೃಷ್ಟರು.
ಎರಡನೇ ಗುಂಪಿನವರು: ಪರದೇಶದ ದೂರದ ಹಳ್ಳಿಯ ದೇವಾಲಯದ ಸೂರಿನ ಚಿತ್ರವನ್ನು ಘಂಟೆಗಟ್ಟಲೆ ನೋಡುತ್ತಾ ಅದ್ಭುತವನ್ನು ಅನುಭವಿಸಿ ಅದರ ಮೇಲೆ ಕಟ್ಟಿಕೊಂಡಿರುವ ಧೂಳಿನ ಪೊರೆಯನ್ನು ಗುಡಿಸಲು ಪೊರಕೆಯನ್ನು ಹುಡುಕುವವರು. ದೇಗುಲದ ಮುರಿದ ಶಿಖರಗಳನ್ನು ಬೆಳಗಿನ ಸೂರ್ಯನ ಹೊಂಬೆಳಕಿನಲ್ಲಿ ಕಾಣಲು ಹತ್ತಾರು ಮೈಲಿ ಕಾಲ್ನಡಿಗೆಯಲ್ಲಿ ಹೋಗುವವರು. ಸಂಜೆಗತ್ತಲಿನಲ್ಲಿ ಮತ್ತೊಮ್ಮೆ ನೋಡಿ ಎರಡಕ್ಕೂ ಇರುವ ವ್ಯತ್ಯಾಸವನ್ನು ಅಭ್ಯಸಿಸಲು ಅಲ್ಲಿಯೇ ರಣಬಿಸಿನಲ್ಲಿ ಒಣಗುವ ಕಲಾರಾಧಕರು!
ಎರಡನೆಯ ವರ್ಗ ಬೆಳೆಯಲಿ ಎಂದು ಆಶಿಸುತ್ತ ವಿರಮಿಸುವೆ ಮುಂದಿನ ಕಂತಿನವರೆಗೆ.
ವಿಸೂ: ನನ್ನನ್ನು ಆಹ್ವಾನಿಸಿದ ಗೆಳೆಯ ವತ್ಸ ಕುಮಾರ್ ಮತ್ತು ನನ್ನನ್ನು ಮತ್ತು ನನ್ನ ಶ್ರೀಮತಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡ ಅತಿಥೇಯರಾದ ಗಾಯತ್ರಿ ಮತ್ತು ರಾಘವೇಂದ್ರ ಕಾಂಗೋವಿ ದಂಪತಿಗಳನ್ನು ಮನಸಾರೆ ನೆನೆಯುತ್ತೇನೆ.
ಈ ಕಾರ್ಯಕ್ರಮದ ಇತರ ವಿವರಗಳು ಬೇಕಿದ್ದವರು ಹ್ಯೂಸ್ಟನ್ ಕನ್ನಡವೃಂದದ ಜಾಲತಾಣವನ್ನು ವೀಕ್ಷಿಸಿ (ಡಿಡಿಡಿ.kಚ್ಞ್ಞಚಛಚಡ್ಟಜ್ಞಿಛಚ.ಟ್ಟಜ)