ಹಳ್ಳಿ ಮಕ್ಕಳ ಪ್ಲಾಸ್ಟಿಕ್ ವಿರೋಧಿ ಚಳವಳಿ ದಿಲ್ಲಿ ಮುಟ್ಟಿದಾಗ…
"ನಿಮ್ಮ ಕಸ ನಿಮಗೆ - ನಾಳೆಗಳು ನಮ್ಮದು" ಹೀಗೆಂದು ಪ್ಲಕಾರ್ಟ್ ಹಿಡಿದು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಚಳವಳಿ ಕರ್ನಾಟಕದ ಗ್ರಾಮವೊಂದರಲ್ಲಿ ತಣ್ಣಗೆ ನಡೆಯುತ್ತಿದೆ.
Recommended Video
ಏಪ್ರಿಲ್ 2019ರಿಂದ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಹೆಗ್ಗಡಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಇಂಥದೊಂದು ಜಾಗೃತಿ ಆಂದೋಲನದ ರಾಯಭಾರಿಗಳಾಗಿದ್ದಾರೆ. ಈ ಮಕ್ಕಳ ತಲೆಯಲ್ಲಿ ಹೀಗೊಂದು ಗಂಭೀರ ಸ್ವರೂಪದ ಚಿಂತನೆಯನ್ನು ಜಾಗೃತಿಗೊಳಿಸಿದವರು ಶಾಲೆಯ ಡ್ರಾಮಾ ಮಾಸ್ತರಾದ ಸಂತೋಷ್ ಗುಡ್ಡಿಯಂಗಡಿ. ಸಂತೋಷ್ ಕಾಲೇಜು ಕಲಿವಾಗಿನಿಂದ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು. ಅವರ ಕಾರ್ಯಗಳ ಕುರಿತು ಇನ್ನಷ್ಟು ತಿಳಿಯೋಣ...
HOW DARE YOU? ಎಂದಳಾ ಗ್ರೇತಾ, ಭೂಮ್ತಾಯಿಗೂ ಮಾತು ಬರುವಂತಿದ್ದರೆ!
ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಕುರಿತು ಜಾಗೃತಿ
1998ರಲ್ಲಿ ಭರತ್ ಲಾಲ್ ಮೀನಾ ಉಡುಪಿ ಜಿಲ್ಲಾಧಿಕಾರಿಯಾಗಿದ್ದಾಗ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆಗ ಸಂತೋಷ್ ಬೀದಿ ನಾಟಕದಲ್ಲಿ ಪಾತ್ರ ಮಾಡಿದ್ದರು. ಇದೀಗ ನಾಟಕದ ಪಾತ್ರವೇ ಮೈದಾಳಿದಂತೆ ನಿಜ ಚಳವಳಿಯನ್ನು ಮುನ್ನಡೆಸುತ್ತಿದ್ದಾರೆ ಸಂತೋಷ್.
ಕರಗದ ಈ ದುಷ್ಟ ಪ್ಲಾಸ್ಟಿಕ್ ಅನ್ನು ಬಿಸುಟುವುದೆಲ್ಲಿ?
ನಿತ್ಯ ಬೆಳಗಾದೊಡನೆ ನಾವೆಲ್ಲಾ ಬಳಸುವ ಸೋಪು, ಪೇಸ್ಟ್, ಬ್ರಷ್, ಶ್ಯಾಂಪೂ, ಬಿಸ್ಕೆಟ್, ಚಾಕೊಲೇಟ್, ಅಡುಗೆ ಎಣ್ಣೆಯ ಕವರ್ ಹೀಗೆ ಎಲ್ಲವೂ ಪ್ಲಾಸ್ಟಿಕ್ ಪ್ಯಾಂಕಿಗ್ ನಲ್ಲಿಯೇ ಬರುವುದು. ಅವುಗಳಲ್ಲಿನ ಪದಾರ್ಥ ಬಳಸಿದ ಮೇಲೆ ಮಣ್ಣಿನಲ್ಲಿ ಬೆರೆತು ಹೋಗದ/ಕರಗದ ಈ ದುಷ್ಟ ಪ್ಲಾಸ್ಟಿಕ್ ಅನ್ನು ಬಿಸುಟುವುದೆಲ್ಲಿ?
ಕಸ ವಿಲೇವಾರಿ ಎಂಬುದೇ ಬಹಳ ತಾಳ್ಮೆ, ಸಂಯಮ ಬೇಡುವ ಸವಾಲಿನ ಕೆಲಸ. ಸರ್ಕಾರಗಳಿಗೂ, ಸಾರ್ವಜನಿಕರಿಗೂ! ಹಸಿಕಸ, ಒಣಕಸ, ಗಾಜು, ಬ್ಯಾಟರಿ, ಇತ್ಯಾದಿಗಳ ವಿಂಗಡಣೆ ಮನಸಿಟ್ಟು ಮಾಡಿದರೆ ಉಂಟು, ಇಲ್ಲವೇ ಎಲ್ಲವೂ ಕಲಸುಮೇಲೊಗರ. ಇವೆಲ್ಲ ಕಸಗಳು ಒಂದು ತೂಕವಾದರೆ ಪ್ಲಾಸ್ಟಿಕ್ ಕಸದ್ದೇ ಇನ್ನೊಂದು ತೂಕ.
ಪರಿಸರ ಸಂರಕ್ಷಣೆಗೆ ಹೋರಾಡುವ ಪುಟ್ಟ ಯೋಧರ ವಿಶೇಷ ವರದಿ
ಹೆಗ್ಗಡಹಳ್ಳಿಯ ಶಾಲಾ ಮಕ್ಕಳ ವಿಭಿನ್ನ ಚಳವಳಿ
ಪ್ಲಾಸ್ಟಿಕ್ ವಿರುದ್ಧ ವಿಶದಾದ್ಯಂತ ಅನೇಕ ಚಳವಳಿಗಳು ನಡೆದಿವೆ, ನಡೆಯುತ್ತಿವೆ. ಹೆಗ್ಗಡಹಳ್ಳಿಯ ಶಾಲಾ ಮಕ್ಕಳ ಚಳವಳಿ ಮಾತ್ರ ವಿಭಿನ್ನವಾಗಿದೆ. ವಿನೂತನವಾಗಿದೆ. ಇಲ್ಲಿನ ಮಕ್ಕಳು ಊರಿನ ರಸ್ತೆಬದಿಯಲ್ಲಿ, ತಿಪ್ಪೆಗಳಲ್ಲಿ, ಮನೆಗಳ ಆಜೂಬಾಜೂ, ಮೈದಾನಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸವನ್ನೆಲ್ಲಾ ಆಯ್ದು, ಕಂಪನಿಗಳ ಪ್ರಕಾರ ಅವುಗಳನ್ನು ವಿಂಗಡಿಸಿ, ಅವುಗಳನ್ನೆಲ್ಲಾ ಒಟ್ಟು ಮಾಡಿ "ನಾಳೆಗಳು ನಮ್ಮದು ನಿಮ್ಮ ಕಸ ನಿಮಗೆ" ಎಂಬ ಒಕ್ಕಣೆಯೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಂಪನಿಗಳಿಗೆ ಕೊರಿಯರ್ ಮುಖೇನ ಕಳುಹಿಸುತ್ತಾರೆ. ಇದು ಆ ಮಕ್ಕಳು ಪ್ರತಿ ತಿಂಗಳು ಮಾಡುವ ಕೆಲಸ.
ದೈತ್ಯ ಕಂಪನಿಗಳನ್ನು ಯೋಚಿಸುವಂತೆ ಮಾಡಿರುವ ಚಳವಳಿ
ಇಂಥದೊಂದು ಸಣ್ಣ ಚಳವಳಿ ದೈತ್ಯ ಕಂಪನಿಗಳನ್ನು ಯೋಚಿಸುವಂತೆ ಮಾಡಿರುವುದು ಸುಳ್ಳಲ್ಲ. ಕೋಲ್ಗೇಟ್ ಕಂಪನಿ ಇವರಿಂದ ಪ್ಲಾಸ್ಟಿಕ್ ತ್ಯಾಜ್ಯ ಸ್ವೀಕರಿಸಿದ ನಂತರ 2025ರಷ್ಟರಲ್ಲಿ ನಾವು ಉತ್ಪಾದಿಸಿದ ಪ್ಲಾಸ್ಟಿಕ್ ನಾವೇ ಮರುಬಳಕೆ ಮಾಡುತ್ತೇವೆ ಎಂಬುದಾಗಿ ಪತ್ರ ಬರೆದು ತಿಳಿಸಿರುತ್ತಾರೆ. ಅದೇ ರೀತಿ ನೆಸ್ಲೆ ಮತ್ತು ಯೂನಿಬಿಕ್ ಸಂಸ್ಥೆಗಳೂ ಶಾಲೆಗೆ ಪತ್ರ ಬರೆದಿವೆ.
ಚಳವಳಿಯ ಉದ್ದೇಶ ಘನವಾಗಿದ್ದರೆ ಎಂಥ ದೈತ್ಯ ಸಂಸ್ಥೆಗಳನ್ನೂ ತಮ್ಮ ಕೆಲಸದ ಬಗ್ಗೆ ಮರುಪರಿಶೀಲಿಸಿಕೊಳ್ಳುವಂತೆ ಮಾಡಬಹುದೆನ್ನುವುದನ್ನು ಹೆಗ್ಗಡಹಳ್ಳಿ ಶಾಲೆ ಮಕ್ಕಳು ತೋರಿಸಿಕೊಟ್ಟಿದ್ದಾರೆ. ಈ ಮಕ್ಕಳು ಮತ್ತು ಇವರನ್ನು ಚಳವಳಿಗೆ ತೊಡಗಿಸಿದ ಮಾಸ್ತರೂ ಅಭಿನಂದನಾರ್ಹರು.