ಕ್ಯಾನ್ಸರ್ ಇದೆ; ಆದರೆ ಚಿಂತೆ ಇಲ್ಲ!
ಈ ಸಂದರ್ಭದಲ್ಲಿ ಉಳಿದೆಲ್ಲರಂತೆಯೇ ಖಾಸಗಿ ಆಸ್ಪತ್ರೆಗಳ ಮೆಟ್ಟಿಲು ಹತ್ತಿ ಇಳಿದರು ರೇಖಾರಾಣಿ. ಅಲ್ಲಿ ಚಿಕಿತ್ಸೆಗೆಂದು ಲಕ್ಷ ಲಕ್ಷ ಕೇಳಿದಾಗ ಸಿಡಿಮಿಡಿಗೊಂಡ ಅಶೋಕ್- ಸಾಯೋದು ಗ್ಯಾರಂಟಿ ಅಂತಾಗಿದೆ. ಹೀಗಿರುವಾಗ ಸುಮ್ನೇ ಆಸ್ಪತ್ರೆಗೆ ಯಾಕೆ ದುಡ್ಡು ಸುರೀಬೇಕು? ನನ್ನನ್ನು ತೀರ್ಥಹಳ್ಳಿಗೆ ಕಳಿಸಿಬಿಡು ರೇಖಾ. ಅಲ್ಲಿ ನನ್ನ ತಂಗಿ ಮನೆ ಇದೆಯಲ್ಲ, ಅಲ್ಲಿರ್ತೀನಿ ನಾನು. ಆ ಹಸಿರು ಪ್ರಕೃತಿಯ ಮಧ್ಯೆ ನೆಮ್ಮದಿಯಾಗಿ ಸಾಯ್ತೀನಿ' ಅಂದರಂತೆ.
ಸರಿ, ಹಾಗೇ ಮಾಡೋಣ' ಅಂದರು ರೇಖಾ. ಅಶೋಕ್ ಅವರನ್ನು ತೀರ್ಥಹಳ್ಳಿಗೆ ಕಳಿಸಿ, ತಾವು ಬೆಂಗಳೂರಲ್ಲೇ ಇದ್ದುಕೊಂಡು ಸೀರಿಯಲ್ ಮುಂದುವರಿಸುವುದು. ಹೀಗೇ ಒಂದಷ್ಟು ಜಾಸ್ತಿ ದುಡ್ಡು ಜತೆಯಾದ ತಕ್ಷಣ ಅಶೋಕ್ಗೆ ಚಿಕಿತ್ಸೆ ಕೊಡಿಸುವುದು ಎಂಬುದು ರೇಖಾ ರಾಣಿಯ ಉದ್ದೇಶ ವಾಗಿತ್ತು.
ಆದರೆ, ನಮ್ಮ ಆಶಯಗಳಿಗೆ ವಿರುದ್ಧವಾದುದು ನಡೆಯುವುದೇ ಜೀವನದ ರಹಸ್ಯ ಮತ್ತು ಮಹತ್ವ ತಾನೆ? ಈ ಮಾತು ರೇಖಾ ರಾಣಿ- ಅಶೋಕ್ ಕಶ್ಯಪ್ ವಿಷಯದಲ್ಲೂ ನಿಜವಾಯಿತು. ಅಶೋಕ್ಗೆ ಕ್ಯಾನ್ಸರ್ ಎಂದು ಗೊತ್ತಾದ ತಕ್ಷಣ ಚಾನೆಲ್ನವರು ನಂದಗೋಕುಲ' ಸೀರಿಯಲ್ಗೆ ಗೇಟ್ಪಾಸ್ ಕೊಟ್ಟರು. ಒಂದು ವೇಳೆ ಅಶೋಕ್ ಆಕಸ್ಮಿಕವಾಗಿ ಗೊಟಕ್ ಎಂದರೆ ಧಾರಾವಾಹಿ ದಿಢೀರ್ ನಿಂತು ಹೋಗಬಹುದು. ಅಂಥ ಸಂದರ್ಭಕ್ಕೆ ಕಾಯುವ ಬದಲು ನಾವೇ ನಿಲ್ಲಿಸಿದರೆ ಚೆಂದ ಎಂಬುದೇ ಚಾನೆಲ್ನವರ ವಾದವಾಗಿತ್ತು! ಪರಿಸ್ಥಿತಿ ಹೀಗಿದ್ದಾಗಲೇ ಚಿಕಿತ್ಸೆ ಕೊಡಿಸಲಿಕ್ಕಾಗಿ ಯಾರ ಬಳಿಯೂ ಕೈ ಒಡ್ಡುವುದಿಲ್ಲ ಎಂದು ರೇಖಾರಿಂದ ಆಣೆ-ಪ್ರಮಾಣ ಮಾಡಿಸಿಕೊಂಡರು ಅಶೋಕ್ ಕಶ್ಯಪ್.
ಮುಂದೇನಾಯ್ತು ಎಂಬುದನ್ನು ರೇಖಮ್ಮ ವಿವರಿಸುವುದು ಹೀಗೆ : ಓಹ್, ಬದುಕು ಮುಗಿದೇ ಹೋಯ್ತು ಎಂಬ ಸ್ಥಿತಿ ತಲುಪಿದಾಗ ಎಲ್ಲರಿಗೂ ನೆನಪಾಗುವುದು ಸ್ನೇಹಿತರು, ಬಂಧುಗಳೇ. ಯಾರಾದರೂ ಒಬ್ಬರ ಕಡೆಯಿಂದ ಆಕಸ್ಮಿಕವಾಗಿ ಸಹಾಯ ದೊರೆತು ಒಂದಷ್ಟು ಸಹಾಯ ಆಗಬಹುದೇನೋ ಎಂಬ ಯೋಚನೆಗಳು ಬರುವುದೇ ಇಂಥ ಸಂದರ್ಭಗಳಲ್ಲಿ. ಅದರಿಂದ ನಾನೂ ಹೊರತಾಗಿರಲಿಲ್ಲ. ಆದರೆ, ನನಗೆ ಯಾರಿಂದಲೂ ಹಣದ ಸಹಾಯ ಬೇಕಿರಲಿಲ್ಲ. ಒಂದೇ ಒಂದು ಸಮಾಧಾನದ ಧೈರ್ಯದ, ಭರವಸೆಯ ಮಾತು ಬೇಕಿತ್ತು. ನಿನ್ನ ಬೆನ್ನ ಹಿಂದೆ ನಾವಿದ್ದೇವೆ. ಹೆದರಬೇಡ ಮುನ್ನುಗ್ಗು ಎಂಬ ಪ್ರೋತ್ಸಾಹದ ಅಗತ್ಯವಿತ್ತು.
ಆದರೆ, ಇಂಥ ಸಂಕಟದ ಸಂದರ್ಭದಲ್ಲಿ ಪರಮಾಪ್ತರು ಎಂದು ನಾವು ನಂಬಿದ್ದೆವಲ್ಲ? ಆ ಲಿಸ್ಟಿನಲ್ಲಿದ್ದ ಕೆಲವರು ಕೈಗೇ ಸಿಕ್ಕದೆ ತಪ್ಪಿಸಿಕೊಂಡರು. ಕೆಲವರು ಫೋನ್ಗೂ ಸಿಗದೆ ಓಡಾಡಿಬಿಟ್ಟರು. ಎಲ್ಲಿ ದುಡ್ಡು ಕೇಳಿಕೊಂಡು ಬಂದುಬಿಡ್ತಾರೋ ಎಂಬುದು ಹಲವರ ಹಳಹಳಿಕೆಯಾಗಿತ್ತು. ಅಲ್ಲಿಗೆ, ಹಲವು ಗೆಳೆಯರಿಂದ ಹಣಕಾಸಿನ ನೆರವು ಹಾಗಿರಲಿ, ಒಂದು ಸಮಾಧಾನದ ಮಾತಿಗೂ ಬರ ಬಂದಿದೆ ಎಂಬುದು ಅರ್ಥವಾಗಿ ಹೋಯಿತು.
ಮುಂದೆ
ಓದಿ
:
ಆ
ಬಡ್ಡೀಮಗಂದು
ಧೈರ್ಯ
ಅಂತಾರಲ್ಲ?
»