ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲಲ್ಲಿ ಬರೆದ ಚಿತ್ರಕ್ಕೆ ಲಕ್ಷ ಲಕ್ಷ!

By * ಎಆರ್ ಮಣಿಕಾಂತ್
|
Google Oneindia Kannada News

Peter Longstaff, foot painting artist
ಮಗು ಮುದ್ದಾಗಿದೆ. ಆರೋಗ್ಯವಾಗಿದೆ. ಎರಡೂವರೆ ಕೆ.ಜಿ. ತೂಕವಿದೆ. ಆದರೆ... ಆದರೆ... ಮಗುವಿಗೆ ಎರಡೂ ಕೈಗಳಿಲ್ಲ! ಇಂಥದೊಂದು ಸುದ್ದಿ ಕೇಳಿದರೆ, ಭಾರತದ ಹೆಚ್ಚಿನ ತಂದೆ-ತಾಯಿಗಳು ಏನು ಮಾಡ್ತಾರೆ ಹೇಳಿ; ಮೊದಲಿಗೆ ಬೆಚ್ಚಿ ಬೀಳುತ್ತಾರೆ. ನಂತರ ಗೋಳಾಡುತ್ತಾರೆ. ದೇವ್ರೆ ಯಾಕಪ್ಪಾ ಹೀಗೆ ಮಾಡ್ದೆ ಎಂದು ಪ್ರಶ್ನೆ ಹಾಕುತ್ತಾರೆ. ಆ ಮೇಲೆ ಚೇತರಿಸಿಕೊಂಡು- ಎಲ್ಲವೂ ಶಿವನಿಚ್ಛೆ, ನಾವು ಪಡೆದುಕೊಂಡು ಬಂದದ್ದೇ ಇಷ್ಟು ಎಂದು ತಮಗೆ ತಾವೇ ಸಮಾಧಾನ ಹೇಳಿಕೊಳ್ಳುತ್ತಾರೆ. ಯಾವುದೋ ಜನ್ಮದ ತಪ್ಪಿಗೆ ಈ ಜನ್ಮದಲ್ಲಿ ಶಿಕ್ಷೆಯಾಗಿದೆ ಅಂದುಕೊಳ್ಳುತ್ತಾರೆ. ಅಥವಾ ಇದೆಲ್ಲಾ ಮನೆದೇವರ ಶಾಪವಿರಬಹುದು ಎಂಬ ನಿರ್ಧಾರಕ್ಕೆ ಬರುತ್ತಾರೆ. ಮುಂದೆ ಈ ವಿಷಯವಾಗಿಯೇ ಶಾಸ್ತ್ರ ಕೇಳುತ್ತಾರೆ. ಶಾಂತಿ ಹೋಮ ಮಾಡಿಸುತ್ತಾರೆ. ಮಗುವಿಗೆ ಆಗಿರುವ ಅಂಗವೈಕಲ್ಯ ಸರಿಹೋಗಿಬಿಟ್ಟರೆ, ನಿನಗೆ ಇಂತಿಷ್ಟು ದುಡ್ಡು ಕೊಡುತ್ತೇನೆ ಎಂದು ಇಷ್ಟದೈವಕ್ಕೆ ಹರಕೆ ಕಟ್ಟಿಕೊಳ್ಳುತ್ತಾರೆ. ಅಥವಾ ಕಡಿಮೆ ಖರ್ಚಿನಲ್ಲಿ ಆಗಬಹುದಾದ ಪೂಜೆ/ಕಾಣಿಕೆಯ ಬಗ್ಗೆ ತಿಳಿದುಕೊಂಡು ದೇವರೊಂದಿಗೇ ಚೌಕಾಶಿಗೆ ನಿಲ್ಲುತ್ತಾರೆ!

ದುರಂತವೆಂದರೆ, ಹೆಚ್ಚಿನ ಸಂದರ್ಭದಲ್ಲಿ ಯಾವ ತಾಯ್ತಂದೆಯೂ ಆ ಅಂಗವಿಕಲ ಮಗುವಿನಲ್ಲಿ ಆತ್ಮವಿಶ್ವಾಸ ಬೆಳೆಸುವ ಗೋಜಿಗೇ ಹೋಗಿರುವುದಿಲ್ಲ. ಹುಟ್ಟಿನಿಂದಲೇ ಬರುವ ಅಂಗವೈಕಲ್ಯಗಳು ಹರಕೆ ಕಟ್ಟಿಕೊಂಡರೆ, ಅಥವಾ ಹೋಮ ಮಾಡಿಸಿದರೆ ಸರಿ ಹೋಗುವುದಿಲ್ಲ ಎಂಬ ಪ್ರಾಥಮಿಕ ಅರಿವು ಕೂಡ ಬಹಳ ಜನಕ್ಕೆ ಇರುವುದಿಲ್ಲ. ಪರಿಣಾಮ, ಅಂಗವಿಕಲ ಮಗು ಹುಟ್ಟಿದೆ ಎಂದು ಗೊತ್ತಾದ ನಂತರ -ದೇವರು, ಜಪ, ತಪ, ಪೂಜೆಯ ಕಡೆಗೇ ಹೆಚ್ಚಿನವರು ವಾಲಿಕೊಳ್ಳುತ್ತಾರೆ. ಬಂಧುಗಳು, ಗೆಳೆಯರ ಮುಂದೆ ತಮ್ಮ ಮಗುವಿನ ಅವಸ್ಥೆಯ ಕುರಿತು ಸಂಕಟದಿಂದ ಮಾತಾಡುತ್ತಾರೆ. ಹತ್ತು ಮಂದಿಯ ಅನುಕಂಪ ಬಯಸುತ್ತಾರೆ. ನಂತರ, ಕೈ-ಕಾಲು ಇಲ್ಲದ ಮಕ್ಕಳಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಾವೇ ಹೇಳಿಕೊಳ್ಳುತ್ತಾರೆ. ಆ ಮಗುವನ್ನು ಬಂಧುಗಳಿಂದ, ಗೆಳೆಯರಿಂದ, ಪರಿಚಿತರಿಂದ ಹಾಗೂ ಶಿಕ್ಷಣದಿಂದ ದೂರವೇ ಉಳಿಸುತ್ತಾರೆ!

ಮತ್ತು, ಹೀಗೆ ಮಾಡುವ ಮೂಲಕ ನನ್ನಿಂದ ಯಾವ ಸಾಧನೆಯೂ ಸಾಧ್ಯವಿಲ್ಲ ಎಂಬ ಭಾವನೆ ಅಂಗವಿಕಲ ಮಗುವಿಗೂ ಬಂದುಬಿಡುವಂತೆ ಮಾಡಿಬಿಡುತ್ತಾರೆ! ಪರಿಣಾಮ ಏನಾಗುತ್ತದೆ ಅಂದರೆ- ಅದೆಷ್ಟೋ ಅಂಗವಿಕಲ ಮಕ್ಕಳ ಸುಪ್ತ ಪ್ರತಿಭೆಯ ಪರಿಚಯ ಹೊರಜಗತ್ತಿಗೆ ಆಗುವುದೇ ಇಲ್ಲ! ಅಥವಾ ಒಂದು ವೇಳೆ ಒಂದು ರಾಜ್ಯವೇ ಮೆಚ್ಚುವಂಥ ಸಾಧನೆಯನ್ನು ಅಂಗವಿಕಲನೊಬ್ಬ ಮಾಡಿದರೂ ಅದನ್ನು ತುಂಬ ಸಂಭ್ರಮದಿಂದ ಒಪ್ಪುವಂಥ ಮನಸುಗಳು ನಮ್ಮ ಮಧ್ಯೆಯೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಈ ಕಾರಣದಿಂದಲೇ ಹುಟ್ಟು ಅಂಧನಾಗಿದ್ದರೂ ಭರತನಾಟ್ಯದ ದೊರೆ ಅನ್ನಿಸಿಕೊಂಡಿರುವ ಬುಸೇಗೌಡ, ಎರಡೂ ಕಾಲಿಲ್ಲದೆಯೂ ಮಹತ್ವದ್ದನ್ನು ಸಾಧಿಸಿರುವ ನಾಗನರೇಶ್ ಮುಂತಾದವರ ಬಗ್ಗೆ ನೂರು ಮಂದಿಯಲ್ಲಿ ವಿಚಾರಿಸಿದರೂ ಎರಡು ಪುಟಗಳ ಮಾಹಿತಿ ಸಿಗುವುದಿಲ್ಲ.

ಯಾರು ಏನೇ ಹೇಳಲಿ; ಈ ವಿಷಯದಲ್ಲಿ ವಿದೇಶಿಯರು ಅದರಲ್ಲೂ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯದ ಜನರನ್ನು ನೋಡಿ ಕಲಿಯಬೇಕು. ಅಂಗವಿಕಲನೊಬ್ಬ ಮಹತ್ವದ ಸಾಧನೆಗೆ ತೊಡಗಿದ್ದಾನೆ ಎಂದು ಗೊತ್ತಾದರೆ ಸಾಕು, ಆ ದೇಶಗಳಲ್ಲಿ ಅವನ ಪರವಾಗಿ ಪ್ರಚಾರ ಮಾಡುವ ಜನ ಹುಟ್ಟಿಕೊಳ್ಳುತ್ತಾರೆ. ಅವನ ಚಿಕ್ಕದೊಂದು ಗೆಲುವನ್ನೂ ಮಹತ್ಸಾಧನೆ ಎಂದು ಬಣ್ಣಿಸಲು ಪತ್ರಿಕೆಗಳು ಪಣತೊಡುತ್ತವೆ. ವಿಕಲಾಂಗನೊಬ್ಬ ತನ್ನ ಅಂಗವೈಕಲ್ಯವನ್ನು ಮೆಟ್ಟಿ ನಿಂತದ್ದು ಹೇಗೆ? ಬದುಕಿನ ಹಾದಿನಲ್ಲಿ ಅವನಿಗೆ ಎದುರಾದ ಸಂಕಷ್ಟಗಳು ಎಂಥವು? ಈ ಹೋರಾಟದಲ್ಲಿ ಅವನ ಬೆನ್ನಿಗೆ ನಿಂತವರು ಯಾರು? ಎಂಬಿತ್ಯಾದಿ ವಿವರಗಳೆಲ್ಲ ಪತ್ರಿಕೆ ಹಾಗೂ ವೆಬ್‌ಸೈಟ್‌ಗಳಲ್ಲಿ ಮೇಲಿಂದ ಮೇಲೆ ಪ್ರಕಟವಾಗುತ್ತಲೇ ಇರುತ್ತವೆ.

ಪರಿಣಾಮ ಏನಾಗುತ್ತದೆ ಎಂದರೆ, ನಾನು ಅಂಗವಿಕಲ ಎಂಬ ಭಾವನೆ ಅಂಗವಿಕಲ ವ್ಯಕ್ತಿಗೆ ಬರುವುದೇ ಇಲ್ಲ. ಬದಲಿಗೆ, ನಾನು ವಿಶೇಷ ಸಾಧನೆ ಮಾಡಲಿಕ್ಕೆಂದೇ ಹುಟ್ಟಿದವನು. ನಾನು ಯಾರಿಗೇನು ಕಡಿಮೆ ಎಂಬ ಭಾವವೇ ಅಂಗವಿಕಲ ವ್ಯಕ್ತಿಗಳ ರಕ್ತದ ಕಣಕಣದಲ್ಲಿ ತುಂಬಿ ಹೋಗುತ್ತದೆ.

ಮುಂದೆ ಓದಿ : ಕಾಲಿಲ್ಲದ ಕಲಾವಿದನ ಚಿತ್ರಕಾವ್ಯಕ್ಕೆ ನಮಸ್ಕಾರ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X