ಬರವಣಿಗೆ ಮೂಲಕ ಭವಿಷ್ಯ ತಿಳಿಯಿರಿ!
ಒಂದು ಕಾಲವಿತ್ತು. ಆಗೆಲ್ಲ, ಭವಿಷ್ಯ ತಿಳಿಯಬೇಕು ಅನ್ನುವವರು, ಸೀದಾ ಜ್ಯೋತಿಷಿಗಳ ಬಳಿಗೆ ಹೋಗುತ್ತಿದ್ದರು. ಆಂಗೈ ತೋರಿಸುತ್ತಿದ್ದರು. ಕವಡೆ ಬಿಡುತ್ತಿದ್ದರು. ನಂತರ, ಅವರು ಹೇಳಿದ್ದಕ್ಕೆಲ್ಲ ಸರಿ ಸ್ವಾಮಿ, ನಿಜ ಸ್ವಾಮಿ, ಹೌದು ಸ್ವಾಮಿ' ಎಂದು ಹೂಂಗುಟ್ಟಿ ಎದ್ದು ಬರುತ್ತಿದ್ದರು. ಜ್ಯೋತಿಷಿಗಳ ಬಳಿಗೆ ಹೋಗಲು ಒಪ್ಪದವರು-ತಮ್ಮ ಹೆಸರಿನ ಮೊದಲಕ್ಷರ ಯಾವ ರಾಶಿಯದು ಎಂದು ತಿಳಿದು, ಕುತೂಹಲದಿಂದಲೇ ಪಂಚಾಂಗದ ಕಡೇ ಪುಟಗಳಲ್ಲಿದ್ದ ಭವಿಷ್ಯ ಓದುತ್ತಿದ್ದರು. ಮುಂದೆ, ಹುಟ್ಟಿದ ದಿನಾಂಕ ಹಾಗೂ ತಿಂಗಳಿನ ಆಧಾರದ ಮೇಲೆ ಭವಿಷ್ಯ ಹೇಳುವ/ನೋಡುವ ಸ್ಕೀಮು ಜಾರಿಗೆ ಬಂತು. ಭವಿಷ್ಯವನ್ನು ನಂಬದವರು ಕೂಡ ಒಂದು ಕುತೂಹಲದಿಂದ ಅದನ್ನು ಓದಿ, ಕೇಳಿ, ತಿಳಿದು ಖುಷಿಪಟ್ಟರು. ಸ್ವಾರಸ್ಯವೆಂದರೆ, ಈ ಎರಡೂ ವೆರೈಟಿಯ ಭವಿಷ್ಯಗಳಲ್ಲಿ ಹೆಚ್ಚು-ಕಡಿಮೆ ಆಗುವ ಸಾಧ್ಯತೆಗಳು ತುಂಬಾ ಇದ್ದವು. ಹೇಗೆಂದರೆ, ಜ್ಯೋತಿಷ್ಯ ಹೇಳುವವರು ಪರಿಚಿತರೇ ಆಗಿದ್ದರೆ; ನಮ್ಮಿಂದ ಉಪಕಾರಕ್ಕೆ ಒಳಗಾಗಿದ್ದರೆ-ಕಂಡದ್ದನ್ನು (?!) ಕಂಡಹಾಗೆ ಹೇಳುವ ಸಾಧ್ಯತೆ ತೀರಾ ಕಮ್ಮಿಯಿತ್ತು. ಹಾಗೆಯೇ, ಜನ್ಮದಿನಾಂಕ ತಪ್ಪಾಗಿ ನಮೂದಾಗಿದ್ದರೆ, ಆಗ ಕೂಡ ಭವಿಷ್ಯದ ಸಾಲುಗಳಲ್ಲಿ ಹೆಚ್ಚು ಕಡಿಮೆ ಆಗುವ ಸಂಭವವಿತ್ತು.
ಹೀಗಿರುವಾಗ, ನಮ್ಮ ಕೈಬರಹ, ಪತ್ರ ಬರೆಯುವ ಧಾಟಿ, ಅದರಲ್ಲಿ ಕಂಡು ಬರುವ ಶಿಸ್ತು, ಅಶಿಸ್ತು, ಅವಸರ, ಶ್ರದ್ಧೆ, ಅಕ್ಷರ ಬಳಕೆಯ ರೀತಿಯಿಂದಲೂ ಭವಿಷ್ಯ ಹೇಳಬಹುದು ಅಂದರೆ ನಂಬುತ್ತೀರಾ? ನಂಬುವವರ ಪಾಲಿಗಷ್ಟೇ ಇದು ನಿಜ. ಯಾವ ರೀತಿ ಬರೆಯುವವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿ ವಿವರಣೆಯಿದೆ.
ಕೆಲವರಿರುತ್ತಾರೆ. ಅವರ ಪತ್ರಗಳು ಮಾರುದ್ದ ಇರುತ್ತವೆ ನಿಜ. ಆದರೆ ಆ ಪತ್ರಗಳಲ್ಲಿ ಒಂದೇ ವಿಷಯವನ್ನೂ ಮತ್ತೆ ಮತ್ತೆ ರಿಪೀಟ್ ಮಾಡಿರುತ್ತಾರೆ. ಅದನ್ನು ಓದಿದವರು- ಹುಚ್ಚು, ಮುಂಡೇದು, ಒಂದೇ ವಿಷಯವನ್ನು ಹತ್ತು ಬಾರಿ ಬರ್ದಿದೆ. ಮಾಡೋಕೆ ಕೆಲ್ಸ ಇಲ್ಲ ಅನ್ಸುತ್ತೆ' ಎಂದು ಗೊಣಗುತ್ತಾರೆ. ಹೀಗೆ, ಬರೆದದ್ದನ್ನೇ ಮತ್ತೆ ಮತ್ತೆ ಬರೆದಿರುತ್ತಾರಲ್ಲ? ಅಂಥವರಿಗೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ರಿಸ್ಕ್ಗೆ ಕೈ ಹಾಕಲು ಹೆದರಿಕೆ ಇರುತ್ತದೆ. ಬೇರೆಯವರು ನಮ್ಮ ಮಾತನ್ನು ಲಕ್ಷ್ಯಗೊಟ್ಟು, ಕೇಳಲಾರರು ಎಂಬ ಶಂಕೆಯಿರುತ್ತದೆ. ಗೆಳೆಯ/ಗೆಳತಿ ನನ್ನ ಪತ್ರದ ಪ್ರತಿ ಸಾಲುಗಳನ್ನೂ ಓದುತ್ತಾನೋ(ಳೋ) ಇಲ್ಲವೋ ಎಂಬ ಅನುಮಾನವಿರುತ್ತದೆ. ಹೀಗೆ ಓದಿ ಹಾಗೆ ಮರೆತುಬಿಟ್ಟರೆ... ಎಂಬ ಸಂಕಟವಿರುತ್ತದೆ. ಈ ಕಾರಣದಿಂದಲೇ ಅವರು ಬರೆದದ್ದನ್ನೇ ಮತ್ತೆ ಮತ್ತೆ ಬರೆದಿರುತ್ತಾರೆ. ತೀರಾ ಸಾಮಾನ್ಯ ಎಂಬಂಥ ವಿಷಯ ಬರೆಯುವ ಮೊದಲೇ, ಇದು ಬಹಳ ಗುಟ್ಟಿನ ವಿಷಯ. ನೀನು ಒಬ್ಬನೇ(ಳೇ) ಇದ್ದಾಗ ಓದು ಪ್ಲೀಸ್... ಎಂದೂ ಸೇರಿಸಿರುತ್ತಾರೆ! ಪತ್ರವನ್ನು ಪೋಸ್ಟ್/ಕೊರಿಯರ್ ಮಾಡಿದ ಮರುದಿನವೇ ಫೋನ್ ಮಾಡಿ- ಕಾಗದ ಬಂತಾ? ಲೆಟರ್ ಸಿಕ್ತಾ?' ಎಂದು ಮೇಲಿಂದ ಮೇಲೆ ಕೇಳಿ ಪ್ರಾಣ ತಿನ್ನುತ್ತಾರೆ.
ಕೆಲವರು, ತಮ್ಮ ಪತ್ರವನ್ನು ದೊಡ್ಡ ಅಕ್ಷರಗಳಿಂದ ಆರಂಭಿಸುತ್ತಾರೆ. ಆದರೆ ಪತ್ರದ ಕೊನೆ ತಲುಪುವ ವೇಳೆಗೆ ಅವರು ಹೇಳಬೇಕಿರುವ ವಿಷಯದಲ್ಲಿ ಮುಕ್ಕಾಲು ಭಾಗವನ್ನಷ್ಟೇ ಹೇಳಿರುತ್ತಾರೆ. ಉಳಿದದ್ದನ್ನೂ ಹೇಳಲೇ ಬೇಕಲ್ಲ? ಕಾರಣಕ್ಕೆ ಮಾರ್ಜಿನ್ನಲ್ಲಿರುವ ಜಾಗದಲ್ಲಿ ಅಕ್ಷರ ಇನ್ನಿಲ್ಲದ ಸರ್ಕಸ್ ಮಾಡಿ ಜೋಡಿಸುತ್ತಾರೆ! ಇಂಥ ಅಕ್ಷರಗಳ ಒಡೆಯರಿಗೆ, ಜೀವನದಲ್ಲಿ ಒಂದು ಯೋಜನೆ, ಶಿಸ್ತು ಇರುವುದಿಲ್ಲ. ತಿಂಗಳ ಮೊದಲಿನಲ್ಲಿ ಬಿಂದಾಸ್ ಆಗಿ ಖರ್ಚು ಮಾಡಿಕೊಂಡು ಓಡಾಡುವ ಈ ಜನ, ತಿಂಗಳ ಕಡೆಗೆ-ಥತ್ ಜೇಬು ಖಾಲಿ ಎಂದು ಹೇಳಿಕೊಂಡೇ ಅಡ್ಡಾಡುತ್ತಿರುತ್ತಾರೆ.
ಪತ್ರ ಬರೆದು ಮುಗಿಸಿದ ನಂತರ, ಮರೆತ ಮಾತು' ಎಂದು ಬರೆದು ಅದರ ಕೆಳಗೆ ಒಂದು ದಪ್ಪ ಗೆರೆ ಎಳೆದು, ಅದುವರೆಗೂ ಹೇಳದಿದ್ದ ಒಂದು ವಿಚಾರವನ್ನು ಹೇಳುವ ಅಭ್ಯಾಸ ಹಲವರಿಗಿರುತ್ತದೆ. ಅಂಥವರು ಯಾವುದೇ ಚೌಕಟ್ಟಿಗೂ ಸಿಕ್ಕಿಕೊಳ್ಳದೇ ಬದುಕುತ್ತಿರುತ್ತಾರೆ. ಸ್ವಾರಸ್ಯವೆಂದರೆ, ಇದು ಅವರ ಪ್ಲಸ್ ಪಾಯಿಂಟ್ ಮಾತ್ರವಲ್ಲ, ಮೈನಸ್ ಪಾಯಿಂಟೂ ಆಗಿರುತ್ತದೆ. ಏಕೆಂದರೆ, ಬದುಕಿನ ಬಗ್ಗೆ ಒಂದು ಪ್ಲಾನ್ ಇರುವುದಿಲ್ಲವಲ್ಲ? ಅದೇ ಕಾರಣಕ್ಕೆ ಅವರು ಸ್ವಲ್ಪ ಸೋಮಾರಿಯ ಬದುಕು ಸಾಗಿಸಲು ಶುರುಮಾಡುತ್ತಾರೆ. ಈ ಕಾರಣದಿಂದಲೇ ಜತೆಗಿದ್ದವರ ಟೀಕೆಗೆ, ತಾತ್ಸಾರಕ್ಕೆ ಗುರಿಯಾಗುತ್ತಾರೆ.
ಎರಡು ಸಾಲುಗಳ ಮಧ್ಯೆ ಸ್ವಲ್ಪ ಜಾಸ್ತಿ ಎನ್ನುವಷ್ಟು ಅಂತರಬಿಟ್ಟು ಬರೀತಾರಲ್ಲ? ಅವರಿಗೆ ನಾನುಂಟು ಮೂರು ಲೋಕವುಂಟು ಎಂಬ ಭ್ರಮೆಯಿರುತ್ತದೆ. ನನಗೆ ಗೊತ್ತಿಲ್ಲದ ವಿಷಯವೇ ಇಲ್ಲ ಎಂಬ ಅಹಮಿಕೆಯಿರುತ್ತದೆ. ಬಡಾಯಿ ಕೊಚ್ಚಿಕೊಳ್ಳುವ ಹವ್ಯಾಸವಿರುತ್ತದೆ. ಹತ್ತು ಮಂದಿಯನ್ನು ಇಂಪ್ರೆಸ್' ಮಾಡುವ ಕಲೆ' ಸಿದ್ಧಿಸಿರುತ್ತದೆ. ಈ ಕಾರಣದಿಂದಲೇ ಅವರನ್ನು ಹಲವರು ಟೀಕಿಸುತ್ತಾರೆ. ಬಯ್ಯುತ್ತಾರೆ. ರೇಗಿಸುತ್ತಾರೆ. ಗೇಲಿ ಮಾಡುತ್ತಾರೆ. ಆದರೆ ಅದ್ಯಾವುದಕ್ಕೂ ಈ ಜನ ಕೇರ್ ಮಾಡುವುದಿಲ್ಲ. ತಲೆಕೆಡಿಸಿಕೊಳ್ಳುವುದೂ ಇಲ್ಲ. ಬದಲಿಗೆ, ಹತ್ತು ಮಂದಿಯ ಮುಂದೆ ಪುಂಗಿ ಊದಲು' ಹೊರಟೇ ಬಿಡುತ್ತಾರೆ.
ನಾನೇ ಬೇರೆ, ನನ್ನ ಸ್ಟೈಲೇ ಬೇರೆ' ಎಂಬಂಥ ಕೆಟಗರಿಯ ಜನ-ತಮ್ಮ ಪತ್ರಗಳಲ್ಲಿ ಆದಷ್ಟೂ ಹೊಸ ಪದಗಳನ್ನು ಬಳಸುತ್ತಾರೆ. ಆ ಮೂಲಕ ಓದುವವರನ್ನು ಕನ್ಫ್ಯೂಸ್ಗೆ ಕೆಡವುತ್ತಾರೆ. ಹತ್ತು ಜನರ ಮುಂದೆ ಪಾಂಡಿತ್ಯ ಪ್ರದರ್ಶಿಸಬೇಕು, ಬೇರೆಯವರಿಗಿಂತ ವಿಶೇಷ ಅನ್ನಿಸುವ ಪದಗಳು, ವಿಷಯಗಳು ನನಗೆ ಗೊತ್ತಿದೆ ಎಂದು ತೋರಿಸಿಕೊಳ್ಳಬೇಕು ಎಂಬ ಹಪಹಪಿಯಿಂದಲೇ ಅವರು ಹೀಗೆ ಮಾಡಿರುತ್ತಾರೆ. ಸ್ವಾರಸ್ಯವೆಂದರೆ, ಹಾಗೆ ಬಳಸಿದ ಪದ ಅಥವಾ ವಿಷಯದ ಬಗ್ಗೆ ಅವರಿಗೇ ಸಮಗ್ರವಾಗಿ ಗೊತ್ತಿರುವುದಿಲ್ಲ. ಯಾರಾದರೂ ಪಟ್ಟು ಹಿಡಿದು ಪ್ರಶ್ನೆ ಹಾಕಿದರೆ, ಏನಾದರೂ ಹಾರಿಕೆಯ ಉತ್ತರ ಕೊಟ್ಟು ಕಾಗೆ ಹಾರಿಸುತ್ತಾರೆ.
ನೀವು
ಯಾವ
ವರ್ಗಕ್ಕೆ
ಸೇರಿದವರು?
ಮುಂದೆ
ಓದಿರಿ
»