ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರವಣಿಗೆ ಮೂಲಕ ಭವಿಷ್ಯ ತಿಳಿಯಿರಿ! (ಭಾಗ 2)

By * ಎಆರ್ ಮಣಿಕಾಂತ್
|
Google Oneindia Kannada News

Handwriting is index of your personality
(ಹಿಂದಿನ ಪುಟದಿಂದ)

ಒಂದು ಸಾಲು ಬರೆಯುವುದು, ನಂತರ ಅದನ್ನು ಹೊಡೆದು ಹಾಕುವುದು; ಒಂದು ಪದ ಬರೆಯುವುದು, ನಂತರ ಅದನ್ನೂ ಹೊಡೆದು ಹಾಕಿ ಬೇರೊಂದು ಪದ ಬರೆಯುವುದು-ಹೀಗೆ ಮಾಡುತ್ತಾರಲ್ಲ? ಆ ಜನ ಅಯ್ಯೋಪಾಪ' ಎಂಬ ವರ್ಗಕ್ಕೆ ಸೇರಿದವರು. ಹೇಗೆ ಬರೆದರೆ ಏನಾಗಿಬಿಡುತ್ತೋ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ಹಾಗಾಗಿ ಅವರು, ಮಾಡಿದ ತಪ್ಪನ್ನು ತುಂಬ ಬೇಗ ಒಪ್ಪಿಕೊಂಡು ಬಿಡುತ್ತಾರೆ. ಅಷ್ಟೇ ಅಲ್ಲ, ಯಾವುದೇ ಅಭಿಪ್ರಾಯವಿರಲಿ, ಅದನ್ನು ಹತ್ತು ಮಂದಿ ಒಪ್ಪಿಕೊಂಡರೆ ಹಿಂದೆ ಮುಂದೆ ಯೋಚಿಸದೆ ಹನ್ನೊಂದನೆಯವರಾಗಿ ತಾವೂ ಒಪ್ಪಿಬಿಡುತ್ತಾರೆ.

ಕೆಲವರಿರುತ್ತಾರೆ. ಅವರ ಅಕ್ಷರಗಳು ಮಣಿ ಪೋಣಿಸಿದಷ್ಟು ಮುದ್ದು ಮುದ್ದಾಗಿರುತ್ತವೆ. ಅವರ ಬರಹದಲ್ಲಿ ತಪ್ಪುಗಳಿರುವುದಿಲ್ಲ. ಉತ್ಪ್ರೇಕ್ಷೆ ಇರುವುದಿಲ್ಲ. ಇಂಥವರ ವ್ಯಕ್ತಿತ್ವದಲ್ಲಿ ಕೆಲವರಲ್ಲಿ ವಿಪರೀತ ಧಾರಾಳತನ; ರೇಜಿಗೆ ಹುಟ್ಟಿಸುವಂಥ ಜಿಪುಣತನ-ಎರಡೂ ಇರುತ್ತದೆ. ಸ್ವಾರಸ್ಯವೆಂದರೆ, ಈ ಮುದ್ದು ಅಕ್ಷರಗಳ ಮಂದಿಗೆ ಬೊಂಬಾಟ್ ಎಂಬಂಥ ಗೆಳೆಯರ ಬಳಗ' ಇರುತ್ತದೆ. ಅಭಿಮಾನಿಗಳ ವೃಂದವಿರುತ್ತದೆ. ಇವರು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಹಾಗಿದ್ದರೂ, ಅದೇನು ಕಾರಣವೋ ಏನೋ; ಶತ್ರುಗಳು ಅನಿಸಿಕೊಂಡ ಜನ ಕೂಡ ಅವರನ್ನು ಇಷ್ಟಪಡುತ್ತಾರೆ. ಮುದ್ದಾದ ಅಕ್ಷರಗಳ ಮಂದಿಗೆ ಹತ್ತು ಮಂದಿಯ ಸಂಕಟ ಕೇಳುವುದರಲ್ಲಿ, ಅದಕ್ಕೊಂದು ಪರಿಹಾರ ಹೇಳುವುದರಲ್ಲಿ ಏನೋ ಸಂತಸ! ಆದರೆ, ತಮ್ಮ ನೋವನ್ನು ಹೆಚ್ಚಿನ ಸಂದರ್ಭದಲ್ಲಿ ಹೇಳಿಕೊಳ್ಳುವುದೇ ಇಲ್ಲ. ಈ ಕಾರಣದಿಂದಲೇ ಹಲವರು- ಅವನಿಗೇನ್ರಿ ಕಷ್ಟ,! ಮಹಾರಾಜ, ಮಹಾರಾಜನ ಥರಾ ಇದಾನೆ...' ಎಂದು ಮಾತಾಡಿಕೊಳ್ಳುತ್ತಾರೆ. ಎಷ್ಟೊಂದು ಖುಷಿಯಾಗಿ ದ್ದಾನಲ್ಲ ಎಂದುಕೊಂಡು ಹೊಟ್ಟೆ ಉರಿದುಕೊಳ್ಳುತ್ತಾರೆ ಕೂಡಾ...

ಕೆಲವರ ಗುಣ ಹೀಗೆ: ಅವರು ಪತ್ರ ಬರೆಯುವುದು ಫುಲ್‌ಸ್ಕೇಪ್ ಹಾಳೆಯಲ್ಲೇ. ಅದರ ಎರಡೂ ಬದಿಯಲ್ಲಿ ಜಾಗವಿದೆ ಎಂದು ಅವರಿಗೂ ಗೊತ್ತಿರುತ್ತದೆ. ಹಾಗಿದ್ದರೂ, ಒಂದಕ್ಕೊಂದು ಸಾಲು ಅಂಟಿಕೊಳ್ಳುವಂತೆ ಪತ್ರ ಬರೆದಿರುತ್ತಾರೆ. ಅಕ್ಷರಗಳು ಸಣ್ಣದಿರುತ್ತವೆ. ಪುಟ ತಿರುಗಿಸಿ ಬರೆದರೆ ಏನೋ ಕಳೆದುಹೋಗುತ್ತೆ ಎಂದು ಕೊಂಡವರಂತೆ ಹಾಳೆಯ ಕೊನೆಗೇ ಇರುವೆ ಗಾತ್ರದ ಅಕ್ಷರಗಳಲ್ಲಿ ಮಾತು ಮುಗಿಸಿರುತ್ತಾರೆ. ಅನುಮಾನವೇ ಬೇಡ. ಇಂಥ ಕೈ ಬರಹದ ಜನ ಜಿಪುಣರು. ಅವರ ಜಿಪುಣತನದ ಬಗ್ಗೆ ತಮಾಷೆಗಳಿರುತ್ತವೆ, ಕಥೆಗಳಿರುತ್ತವೆ. ಆದರೂ ಈ ಜನ ಜಿಪುಣತನದಿಂದ ಆಚೆಗೆ ಬರುವುದಿಲ್ಲ. ಹೋಗಲಿ, ಫುಲ್‌ಸ್ಕೇಪ್ ಹಾಳೆಯ ಇನ್ನೊಂದು ಬದಿಯಲ್ಲಿ ಬರೆಯುವ ಉದಾರತೆಯನ್ನೂ ತೋರುವುದಿಲ್ಲ.

ಪದಗಳ ಮಧ್ಯೆ ಹೆಚ್ಚು ಗ್ಯಾಪ್ ಬಿಟ್ಟು ಬರೆಯುತ್ತಾರಲ್ಲ? ಅಂಥ ಹೆಣ್ಣು ಮಕ್ಕಳಿಗೆ ಹತ್ತು ಮಂದಿ ಮೆಚ್ಚುವಂಥ ಸೌಂದರ್ಯವಿರುತ್ತದೆ. ಫ್ಯಾಷನಬಲ್ ಆಗಿ ಮಾತಾಡುವ ಕಲೆ' ಅವರಿಗೆ ಒಲಿದಿರುತ್ತದೆ. ಒಂದು ದೊಡ್ಡ ಸಾಧನೆ ಮಾಡುವಂಥ ಕೆಪ್ಯಾಸಿಟಿ ಅವರಿಗಿರುತ್ತದೆ ನಿಜ. ಆದರೆ, ಸಾಧನೆ'ಗೆ ಶ್ರಮಿಸುವ ಉತ್ಸಾಹವೇ ಇವರಿಗಿರುವುದಿಲ್ಲ. ಅಂಥ ದೊಡ್ಡ ಶ್ರದ್ಧೆಯೂ ಇರುವುದಿಲ್ಲ. ಹಾಗಾಗಿ, ದೊಡ್ಡ ಎತ್ತರ' ತಲುಪಿಕೊಳ್ಳಬಲ್ಲ ಸಾಮರ್ಥ್ಯವಿದ್ದರೂ ಇವರು ಹತ್ತರಲ್ಲಿ ಹನ್ನೊಂದನೆಯವರಾಗಿಯೇ ಉಳಿಯುತ್ತಾರೆ.

ಅಕ್ಷರಗಳನ್ನು ಒತ್ತಿ ಒತ್ತಿ ಬರೆಯುತ್ತಾರಲ್ಲ? ಅವರು ದೂರ್ವಾಸನ ವಂಶದವರು. ತಕ್ಷಣವೇ ಸಿಟ್ಟಾಗುತ್ತಾರೆ. ಯಕ್ಕಾಮಕ್ಕಾ ಬಯ್ಯುತ್ತಾರೆ. ಗೆಟ್‌ಔಟ್ ಅಂದೂಬಿಡುತ್ತಾರೆ. ಅಂದಹಾಗೆ, ಇವರೊಳಗೆ ಸ್ವಾರ್ಥ' ಹೆಚ್ಚಿರುತ್ತದೆ. ಪ್ರತಿಯೊಂದು ಕೆಲಸವನ್ನೂ ಅವರು ಲೆಕ್ಕಾಚಾರದಿಂದಲೇ ಮಾಡುತ್ತಾರೆ. ಎದುರು ನಿಂತವರಿಗೆ ಒಂದು ನಮಸ್ಕಾರ ಹೊಡೆಯಬೇಕಾಗಿ ಬಂದರೆ, ಅದರಿಂದ ಏನಾದರೂ ಉಪಯೋಗವಿದೆಯಾ ಎಂದೇ ಯೋಚಿಸುತ್ತಾರೆ.

ಚಿತ್ತುಗಳಿಲ್ಲದೆ ಅಕ್ಷರಗಳಿಂದ ಪತ್ರ ಆರಂಭಿಸಿ ಗಡಿಬಿಡಿಯಲ್ಲಿ ಮುಗಿಸುವ ಜನರಿದ್ದಾರಲ್ಲ? ಅಂಥವರಿಗೆ ತಾಳ್ಮೆ ಕಡಿಮೆ. ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅವರು ಮೊದಲು ತೋರಿದ ಉತ್ಸಾಹವನ್ನು ಕಡೆಗೆ ತೋರುವುದಿಲ್ಲ. ಈ ಕಾರಣದಿಂದಲೇ ಅವರು ಯಡವಟ್ರಾಯ' ಎಂದು ಕರೆಸಿಕೊಳ್ಳುತ್ತಾರೆ. ಒಂದು ಕೆಲಸದಲ್ಲಿ ಯಶಸ್ಸು ಪಡೆಯುವ ಮೊದಲೇ ಇನ್ನೊಂದಕ್ಕೂ ಕೈ ಹಾಕಿ ಫಜೀತಿಗೆ ಸಿಕ್ಕಿಕೊಳ್ಳುತ್ತಾರೆ. ಕೆಲವರು ಫುಲ್‌ಸ್ಕೇಪ್ ಹಾಳೆಯಲ್ಲಿಯೇ ಬರೆದಿರುತ್ತಾರೆ. ಹಾಳೆಯ ತುಂಬಾ ಬರೆದಿರುತ್ತಾರೆ. ಆದರೆ ಅಲ್ಲಿ ಫುಲ್‌ಸ್ಟಾಪ್, ಕಮಾ, ಅಲ್ಪವಿರಾಮ, ಪ್ರಶ್ನಾರ್ಥಕ ಚಿಹ್ನೆ... ಯಾವುದೂ ಇರುವುದಿಲ್ಲ. ಒಂದು ವಾಕ್ಯ ಮುಗಿದದ್ದು ಎಲ್ಲಿ? ಹೊಸ ವಾಕ್ಯ ಶುರುವಾಗಿದ್ದೆಲ್ಲಿ ಎಂಬುದೇ ಓದುವವರಿಗೆ ಅರ್ಥವಾಗುವುದಿಲ್ಲ. ಹೀಗೆ ಬರೀತಾರಲ್ಲ- ಅವರಿಗೆ ತಮ್ಮ ಮನಸ್ಸಿನ ಮೇಲೇ ನಿಯಂತ್ರಣವಿರುವುದಿಲ್ಲ. ಅವರ ಕೈ ಮತ್ತು ಬುದ್ಧಿ ಒಟ್ಟೊಟ್ಟಾಗಿ ಓಡುವುದಿಲ್ಲ.

ಪತ್ರಗಳ ಮಧ್ಯೆ, ತಮ್ಮದೇ ಬರವಣಿಗೆಯ ಮಧ್ಯೆ ಏಕಾಏಕಿ ಬೇರೊಂದು ಭಾಷೆಯ ಪದ ಬಳಸುವ ಅಭ್ಯಾಸ ಕೆಲವರಿಗಿರುತ್ತದೆ. ಇಂಥವರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಒಂದು ನೌಕರಿಯಲ್ಲಿ, ಒಂದು ಕೆಲಸದಲ್ಲಿ, ಒಂದು ಸಂಸ್ಥೆಯಲ್ಲಿ, ಒಂದೇ ಮನೆಯಲ್ಲಿ ಈ ಜನ ಹೆಚ್ಚು ದಿನ ಇರುವುದಿಲ್ಲ. ಸಣ್ಣ ಬೇಸರವಾದರೂ ಸಾಕು, ತಕ್ಷಣ ಮನಸ್ಸು ಬದಲಿಸಿ ಎದ್ದುಹೋಗಿಬಿಡುತ್ತಾರೆ. ಇಂಥವರು, ವಹಿಸಿ ಕೊಂಡ ಕೆಲಸವನ್ನು ಹತ್ತುಮಂದಿ ಒಪ್ಪುವಂತೆ ಮಾಡುತ್ತಾರೆ ನಿಜ. ಆದರೆ, ಅವರು ಒಂದೇ ವಿಷಯಕ್ಕೆ ಅಂಟಿಕೊಳ್ಳುವುದಿಲ್ಲ, ಹತ್ತು ಮಂದಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದೂ ಇಲ್ಲ.

ಒಂದು ಪತ್ರದಲ್ಲಿ ಸ್ವಲ್ಪ ಜಾಸ್ತಿಯೇ ಮಾರ್ಜಿನ್ ಬಿಟ್ಟು ಬರೆಯುತ್ತಾರಲ್ಲ? ಅಂಥವರು ಹಣಕಾಸಿನ ವಿಷಯದಲ್ಲಿ ತುಂಬ ಎಚ್ಚರ ವಹಿಸುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ -ತಮಗೆ ಲಾಸ್ ಆಗದಂತೆ ನೋಡಿಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ಗೆಳೆಯರ ಮುಂದೆ, ನಾನು ಧಾರಾಳಿ ಎಂದು ತೋರಿಸಿಕೊಳ್ಳಲೂ ಪ್ರಯತ್ನಿಸುತ್ತಾರೆ!

ಕೆಲವರಿಗೆ, ಅತೀ ಎಂಬಂಥ ಆತ್ಮವಿಶ್ವಾಸವಿರುತ್ತದೆ. ನಾನು ಯಾವತ್ತೂ ತಪ್ಪು ಮಾಡೋದೇ ಇಲ್ಲ ಎಂಬ ಅಹಂ' ಇರುತ್ತದೆ. ಇಂಥ ವರು ಪ್ರತಿಯೊಂದನ್ನೂ ಸಂಕ್ಷಿಪ್ತವಾಗಿ ಬರೆಯುತ್ತಾರೆ ನಿಜ. ಆದರೆ, ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವುದನ್ನೇ ಮರೆತುಬಿಟ್ಟಿರುತ್ತಾರೆ. Once again ನಾನು, ಅಂದ್ರೆ ಸುಮ್ನೇನಾ ಎಂಬ ಅಹಮಿಕೆಯೇ ಅವರ ಕೆಲಸ ಕೆಡಿಸಿರುತ್ತದೆ. ಅದು ಪತ್ರವಿರಬಹುದು, ನೋಟ್ಸ್ ಇರಬಹುದು, ಅರ್ಜಿ ಇರಬಹುದು... ಅದರಲ್ಲೂ ಕೆಲವೇ ಶಬ್ದಗಳಲ್ಲಿ ಮಾತು ಮುಗಿಸಿ ಕಡೆಗೆ ಸಹಿ ಮಾಡುವುದನ್ನೇ ಮರೆಯುವ ಭೂಪತಿಗಳೂ ಇರುತ್ತಾರೆ. ಅನು ಮಾನವೇ ಬೇಡ; ಅವರೆಲ್ಲ ಸೋಮಾರಿ ಸುಬ್ಬಣ್ಣರೇ ಆಗಿರುತ್ತಾರೆ!

* * * *
ಒಂದು ಸರಳ ಸತ್ಯ ಏನೆಂದರೆ, ಕೈ ಇಲ್ಲದವರಿಗೂ ಭವಿಷ್ಯವಿರುತ್ತದೆ. ಹಾಗಾಗಿ, ಬರೆಯಲು ಬಾರದವರಿಗೆ ಭವಿಷ್ಯ ಇಲ್ಲವೆ ಎಂಬ ಕೊಂಕು ಪ್ರಶ್ನೆ ಬೇಡ. ಪರಿಚಿತರ, ಗೆಳೆಯ/ಗೆಳತಿಯರ, ಬಂಧುಗಳ ಹಳೆಯ ಪತ್ರವೋ, ಬರಹದ ಸ್ಯಾಂಪಲ್ಲೋ ಜತೆಗಿದ್ದರೆ ಅದನ್ನು ಅಂಗೈಲಿ ಹಿಡಿದುಕೊಂಡೇ ಲೇಖನ ಓದಿ. ಆಗ, ಎದುರಿಗಿಲ್ಲದವರ ನಡವಳಿಕೆಯ' ದಿವ್ಯ ದರ್ಶನವಾಗಿ- ಅರೆ ಹೌದಲ್ವಾ?' ಅನಿಸಬಹುದು, ಏನೂ ಅನ್ನಿಸದೆಯೂ ಇರಬಹುದು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X