ವಿಷಯ ತಿಳಿದರೆ ಕೋಪಗೊಳ್ಳಲು ಸಿದ್ಧ : ಸಮೀಕ್ಷೆ
ಉದಾಹರಣೆಗೆ ದೆಹಲಿಯ ಗೃಹಿಣಿ ಅಮೃತಾ ಸಿಂಗ್ ಅಹ್ಲುವಾಲಿಯಾ, "ನಾನು ಟಿ.ವಿ. ಚಾನಲ್ ಚೇಂಜ್ ಮಾಡುವಾಗ. ಸತ್ಯಂ-ಸತ್ಯಂ ಎಂದು ಕೆಲವರು ಮಾತನಾಡುತ್ತಿದ್ದುದು ಗೊತ್ತಾಯಿತು. ಓಹ್ ಏನೋ ದೊಡ್ಡ ಹಗರಣ ಆಗಿರಬಹುದು ಅಂತ ತಿಳಿದು ಚಾನಲ್ ಬದಲಾಯಿಸಿದೆ. ಒಟ್ಟಿನಲ್ಲಿ, ಈ ಹಗರಣದ ವಿವರಗಳು ಗೊತ್ತಾದರೆ ನಾನು ಕೋಪಗೊಳ್ಳಲು ಪೂರ್ಣ ಸಿದ್ಧ" ಎಂದರು. ಇದು ಶ್ರೀಮತಿ ಅಹ್ಲುವಾಲಿಯಾ ಒಬ್ಬರ ಅಭಿಪ್ರಾಯ ಅಲ್ಲ. ಅವರ ಸ್ನೇಹಿತರೂ ಸೇರಿದಂತೆ, ದೇಶದ ಬಹುಮಟ್ಟಿಗಿನ ಜನ ಇದೇ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಶೇ.18 ಮಂದಿ ಜನರು, ಸತ್ಯಂ ಹಗರಣದ ಬಗೆಗೆ ಪೂರ್ಣ ಮಾಹಿತಿ ಹೊಂದಿದ್ದು, ಅವರ ಪ್ರಕಾರ ಈ ಹಗರಣ ಕುಸಿಯುತ್ತಿರುವ ನೈತಿಕ ಮೌಲ್ಯಗಳ ದ್ಯೋತಕವಾಗಿದೆ. ಮೈಸೂರಿನ ನಿವೃತ್ತ ಸರ್ಕಾರಿ ಉದ್ಯೋಗಿ ಮೋಹನ್ ರಾವ್ ಈ ಹಗರಣದ ಬಗೆಗೆ 4 ದಿನ ಪತ್ರಿಕೆಗಳಲ್ಲಿ ಬರುತ್ತಿರುವ ಪ್ರತಿಯೊಂದು ವರದಿಯನ್ನೂ ಒಂದು ಅಕ್ಷರ ಬಿಡದಂತೆ ಓದುತ್ತಿದ್ದಾರೆ. ಜೊತೆಗೆ, ಮೂರು ಟಿ.ವಿ. ಚಾನಲ್ಗಳಲ್ಲಿ ಸತ್ಯಂ ಹಗರಣದ ಕುರಿತು ವರದಿ ಮತ್ತು ಚರ್ಚೆಗಳನ್ನು ವೀಕ್ಷಿಸುತ್ತಿದ್ದಾರೆ. "ಇದು ಖಂಡಿತಾ ನಮ್ಮ ನೈತಿಕ ಮೌಲ್ಯಗಳ ಅಧಃಪತನದ ದ್ಯೋತಕ. ಈ ಮೌಲ್ಯಗಳನ್ನು ಚಿಕ್ಕಂದಿನಲ್ಲೇ ಮನದಟ್ಟುವಂತೆ ಕಲಿಸಬೇಕು. ರಾಮಲಿಂಗ ರಾಜುವನ್ನು ಬಂಧಿಸಿದ್ದೇನೋ ಸರಿ. ಆದರೆ, ಆತನಿಗೆ ಸರಿಯಾಗಿ ನೈತಿಕ ಶಿಕ್ಷಣ ನೀಡದ ಆತನ ಪ್ರೈಮರಿ ಸ್ಕೂಲ್ ಶಿಕ್ಷಕರನ್ನೂ ಬಂಧಿಸಬೇಕು" ಎನ್ನುತ್ತಾರೆ ರಾವ್.
ಶೇ.12 ಮಂದಿ ಜನರ ಪ್ರಕಾರ, ಸತ್ಯಂ ಹಗರಣ ಆಗಿದ್ದೇನೋ ಆಗಿಹೋಯಿತು, ಈಗ ಅದರ ವಿಷಯ ಚರ್ಚಿಸುವುದಕ್ಕಿಂತ, ಮುಂದೆ ಹೀಗಾಗದಂತೆ ಎಚ್ಚರ ವಹಿಸುವುದು ಅಗತ್ಯ. ಸತ್ಯಂ ಸಂಸ್ಥೆಯಲ್ಲಿ ಪಾರದರ್ಶಕತೆ ಇಲ್ಲದ್ದೇ ಈ ಹಗರಣಕ್ಕೆ ಕಾರಣ ಎನ್ನುತ್ತಾರೆ ಅವರು. ಬೆಂಗಳೂರಿನ ಸಾಫ್ಟ್ವ್ವೇರ್ ಎಂಜಿನಿಯರ್ ಕಿರಣ್ ಗಂಗೂಲಿ ಸಹ ಇದೇ ಅಭಿಪ್ರಾಯ ಹೊಂದಿದ್ದಾರೆ. "ಕಂಪೆನಿಗಳಲ್ಲಿ ಖಂಡಿತಾ ಪಾರದರ್ಶಕತೆ ಹೆಚ್ಚಿಸಬೇಕು. ಸತ್ಯಂ ಬೋರ್ಡಿಗೆ ಸರ್ಕಾರ ಝೀನತ್ ಅಮಾನ್ ಅವರನ್ನು ನೇಮಿಸಿದರೆ ಒಳ್ಳೆಯದು. ಆಗ ಪಾರದರ್ಶಕತೆ ಹೆಚ್ಚುವುದಲ್ಲದೆ, ಶಿವಂ ಮತ್ತು ಸುಂದರಂಗಳನ್ನಾದರೂ ಉಳಿಸುವ ಸಾಧ್ಯತೆ ಇರುತ್ತದೆ" ಎನ್ನುತ್ತಾರೆ ಗಂಗೂಲಿ.
(ಮಜಾವಾಣಿ ಬ್ಯುಸಿನೆಸ್ ಡೆಸ್ಕ್)