ವೀರಪ್ಪನ್ ಜೊತೆ ಸಫಾರಿ ಚಾಲಕ ಮುಖಾಮುಖಿಯಾದ ರೋಚಕ ಕಥೆ
ಕಾಡುಗಳ್ಳ ವೀರಪ್ಪನ್ ನನ್ನು ಬಂಡೀಪುರದ ಸಫಾರಿ ವಾಹನ ಚಾಲಕರೊಬ್ಬರು ಮುಖಾಮುಖಿಯಾದ ರೋಚಕ ಕಥೆಯನ್ನು ತಮ್ಮ ಜಂಗಲ್ ಡೈರಿ ಅಂಕಣದಲ್ಲಿ ತೆರೆದಿಟ್ಟಿದ್ದಾರೆ ಗಗನ್ ಪ್ರೀತ್.
2017ರತ್ತ ಪಯಣ ಸಾಗುತ್ತಿದೆ. ಹಳೆಯ ಸಂಕಲ್ಪಗಳನ್ನು ಮೆಲುಕು ಹಾಕುತ್ತಾ ಹೊಸ ಸಾಧನೆಯ ಬೆಳಕಿನೆಡೆಗೆ ಸಾಗೋಣ. ಜೀವನವೇ ಹಾಗಲ್ಲವೇ, ಸುಖ ದುಃಖಗಳ ಸರಮಾಲೆ, ಎರದರ ಕಡೆಗೂ ಆಗೊಮ್ಮೆ-ಈಗೊಮ್ಮೆ ಜೀಕುವ ಉಯ್ಯಾಲೆ. ಹಿಂದಿನದ್ದೆಲ್ಲ ಒಮ್ಮೆ ನೆನಪಾಗಲಿ, ಮುಂದಿನ ಕನಸುಗಳಿಗೆ ಹೊಳಪು ತುಂಬಲಿ.
ವರ್ಷದ ಕೊನೆಯಲ್ಲಿ ಪ್ರತಿಯೊಬ್ಬರದ್ದೂ ಒಂದೇ ರಾಗ, ಅಯ್ಯೋ ಈ ವರ್ಷ ಹೇಗೆ ಹೋಯಿತೆಂದು ಗೊತ್ತಾಗಲಿಲ್ಲ. ಪ್ರತಿ ವರ್ಷದ ಮೊದಲಲ್ಲಿ ನಾವು ಸಂಕಲ್ಪಗಳನ್ನು ಹಾಕಿಕೊಳ್ಳುತ್ತೇವೆ. ಈ ವರ್ಷವನ್ನೊಮ್ಮೆ ಮೆಲುಕು ಹಾಕಿ. ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಯಿತು. ಖುಷಿಯಾದ ಘಟನೆಗಳು, ನಿಮಗೆ ಪಾಠ ಕಲಿಸಿದಂಥ ಘಟನೆಗಳು, ಯಾವ ರೀತಿ ಪರಿವರ್ತನೆಗಳು ಆದವು.. ಎಲ್ಲವನ್ನೂ ಒಮ್ಮೆ ಹಿಂತಿರುಗಿ ನೋಡಿ.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]
ನನಗೂ ಕಾಡಿಗೂ ನಂಟು ಹೆಚ್ಚಾಗಿ ಬೆಳೆದಿದ್ದು ಈ ವರ್ಷವೇ. ಆ ನಂಟು ಹುಚ್ಚಾಗಿ ಹೋಯಿತು! ಕಾಡಿನ ವಾಸನೆ, ಆ ನಿಶ್ಶಬ್ದ, ಆ ಹಸಿರು, ಆ ಜೀವರಾಶಿ, ಮರಗಳ ನಡುವಿನಿಂದ ಬೀಸುವ ತಂಗಾಳಿ, ಮನಸ್ಸಿನಲ್ಲಿ ಪ್ರಶಾಂತತೆ ತರುತ್ತದೆ. ಈ ಪ್ರಪಂಚದಿಂದ ದೂರ ಸರಿದು ನಾವು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವಂತೆ ಮಾಡುತ್ತದೆ.
ಇತ್ತೀಚೆಗೆ ಮತ್ತೆ ಬಂಡೀಪುರಕ್ಕೆ ಒಂದು ಹೊಸ ತಂಡದೊಡನೆ ಹೋಗಿದ್ದೆ. ಚಳಿಗಾಲವಾದ ಕಾರಣ ಕಾಡಿನಲ್ಲಿ ಬೇಗ ಕತ್ತಲಾಗಿ ಬಿಡುತ್ತದೆ. ಕ್ಯಾಂಟರ್ ನಲ್ಲಿ ಸಫಾರಿ ಮಾಡುತ್ತಾ ಹೋಗುತ್ತಿದ್ದೆವು. ಸಾಯಂಕಾಲದ ಹೊತ್ತಿಗೆ ಕತ್ತಲಾಗಲು ಶುರುವಾಯಿತು. 6.15ರ ಸುಮಾರಿಗೆ ಪೂರ್ತಿ ಕತ್ತಲಾಯಿತು, ಗಾಡಿಯ ದೀಪಗಳನ್ನು ಚಾಲಕರಾದ ಸಿದ್ದರಾಜು ಹಚ್ಚಿದರು. ಹುಲಿ ಅಥವಾ ಚಿರತೆಗಳು ಬೆಕ್ಕಿನ ಜಾತಿಗೆ ಸೇರುತ್ತವೆ. ಅವುಗಳು ರಾತ್ರಿ ಹೊತ್ತಿನಲ್ಲಿ ಜಾಸ್ತಿ ಚಟುವಟಿಕೆಯಿಂದ ಇರುತ್ತವೆ. ಇಂತಹ ಸಮಯದಲ್ಲಿ ಅವುಗಳು ಬೇಲಿ ಅಥವಾ ದಟ್ಟವಾದ ಪ್ರದೇಶವನ್ನು ಬಿಟ್ಟು ಖಾಲಿ ಇರುವ ಜಾಗದಲ್ಲಿ ಓಡಾಡಲು ಬಯಸುತ್ತವೆ.
ಬೇಗನೆ ಕತ್ತಲೆ
ಗಾಡಿಯ ದೀಪಗಳನ್ನು ಹಾಕಿಕೊಂಡು ಹಾಗೇ ಮುಂದೆ ಹೋಗುತ್ತಿದ್ದೆವು. ಎದುರಲ್ಲಿ ಏನೋ ನಡೆದು ಹೋಗುತ್ತಿರುವಂತೆ ಅನಿಸಿತು. ಹಾಗೆ ಮುಂದೆ ಸಾಗಿದೆವು. ಒಂದು ಹೆಣ್ಣು ಹುಲಿ ಸಫಾರಿ ಗಾಡಿಗಳು ಹೋಗುವ ದಾರಿಯಲ್ಲೇ ನಡೆದು ಹೋಗುತ್ತಿತ್ತು. ಪೂರ್ತಿ ಕತ್ತಲೆ ನಮಗೆ ಆ ಹುಲಿ ಕಾಣಿಸುತ್ತಿದ್ದದ್ದು ಗಾಡಿಯ ದೀಪದ ಮೂಲಕ ಮಾತ್ರ. ಸುಮಾರು 20-25 ನಿಮಿಷ ಆ ಹುಲಿಯನ್ನು ಹಿಂಬಾಲಿಸಿದೆವು. ಅದು ಹೆಚ್ಚು ಚಟುವಟಿಕೆಯಿಂದ ಇತ್ತು. ಮುಖವನ್ನು ಮರಕ್ಕೆ ಉಜ್ಜಿ, ಮೂತ್ರವನ್ನು ಮಾಡಿ (ಸೆಂಟ್ ಮಾರ್ಕ್) ಅದರ ಇರುವಿಕೆಯನ್ನು ಅದು ಹೋಗುತ್ತಿದ್ದ ದಾರಿಯಲ್ಲಿ ಗುರುತಿಸುತ್ತಿತ್ತು. ಕಾಡಿನ ನಿಶ್ಶಬ್ದ ಹಾಗೂ ಕತ್ತಲಲ್ಲಿ ಹುಲಿಯನ್ನು ನೋಡುವ ಅನುಭವ ನನಗೆ ಹೊಸದಾಗಿತ್ತು.
ಪ್ರತಿ ದಿನವೂ ಹೊಸ ಅನುಭವ
ನಾವು ಕಾಡಿನಲ್ಲಿ ಈ ರೀತಿಯ ಉತ್ತಮ ಅನುಭವ ಪಡೆಯುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸುವುದು ಸಫಾರಿ ಗಾಡಿಯ ಚಾಲಕರು. ಪ್ರತಿ ದಿನವೂ ಅವರಿಗೆ ಒಂದು ಹೊಸ ಅನುಭವ. ಬಂಡೀಪುರದಲ್ಲಿ ಮೋಯಿನ್, ಸಿದ್ದರಾಜು, ಸಲೀನ್, ಮಾದೇವಣ್ಣ ಹಾಗೂ ಮುಂತಾದ ಅನುಭವಸ್ಥ ಚಾಲಕರಿದ್ದಾರೆ ಇವರಿಗೆ ಸುಮಾರು 25 ವರ್ಷದಷ್ಟು ಅನುಭವವಿದೆ. ಸುನೀಲ್, ಗುರುಸ್ವಾಮಿ, ಪವನ್ ರಂತಹ ಯುವ ಚಾಲಕರು ಇದ್ದಾರೆ.
ಮರೆಯಲಾರದ ಅನುಭವ
ಇವರು ಅಲ್ಲೇ ಹುಟ್ಟಿ ಬೆಳೆದವರು. ಎಲ್ಲರಿಗೂ ಕಾಡಿನ ಮೇಲೆ ಎಲ್ಲಿಲ್ಲದ ಪ್ರೀತಿ. ಮೋಯಿನ್ ಅವರನ್ನು ಮಾತನಾಡಿಸುವಾಗ ಒಮ್ಮೆ ಕಾಡಿನಲ್ಲಾದ ಒಂದು ಮರೆಯಲಾರದಂತಹ ಅನುಭವ ಯಾವುದು ಎಂದು ಕೇಳಿದೆ. ಅವರು ವೀರಪ್ಪನ್ ನನ್ನು ಎದುರಿಸಿದ್ದು ಎಂದು ಹೇಳಿದರು. ಎದೆ ಒಮ್ಮೆ ಝಲ್ ಎಂದಿತು.
ಸಫಾರಿ ಗಾಡಿ ಅಪಹರಿಸಿದ್ದ
20 ವರ್ಷಕ್ಕೂ ಹಿಂದೆ ಸಫಾರಿಗೆ ಹೋದ ಗಾಡಿಯನ್ನು ವೀರಪ್ಪನ್ ಅಪಹರಿಸಿದ್ದ, ಎಷ್ಟು ಹೊತ್ತಾದರೂ ಹಿಂತಿರುಗದ ಗಾಡಿಯನ್ನು ಹುಡುಕುತ್ತಾ ಸಫಾರಿಯ ಮತ್ತೊಂದು ಗಾಡಿ ಚಾಲಕರಾಗಿದ್ದ ಮೊಯಿನ್ ಮತ್ತು ಅವರ ಮಿತ್ರ ಹುಡುಕುತ್ತಾ ಹೋದರು. ಒಂದು ಕಡೆ ಗಾಡಿ ನಿಂತಿತ್ತು. ಏನಾಗಿರಬಹುದು ಎಂದು ಇಳಿದು ನೋಡುವಷ್ಟರಲ್ಲಿ ವೀರಪ್ಪನ್ ಥಟ್ಟನೆ ಎದುರಾಗಿ ಅವನ ಗನ್ ಅನ್ನು ಇವರೆಡೆಗೆ ಗುರಿ ಮಾಡಿ ಹಿಡಿದುಬಿಟ್ಟ.
ಅಧಿಕಾರಿಗಳನ್ನು ಕರೆತರಲು ಕಳಿಸಿದ
ಇವರಿಗೆ ಅಲ್ಲಿ ಏನಾಗುತ್ತಿದೆ ಎಂದು ಅರಿವಾಗಲು ಕೆಲ ಸಮಯ ಹಿಡಿಯಿತು. ವೀರಪ್ಪನ್ ತನ್ನ ಬೇಡಿಕೆ ಈಡೇರಿಕೆಗೋಸ್ಕರ ಆ ಸಫಾರಿ ಗಾಡಿಯನ್ನು ಅಪಹರಿಸಿದ್ದ. ಇವರಿಗೆ ಮೈ ನಡುಕ ಶುರುವಾಯಿತು. ಇವರು ಯಾರು ಎಂದು ವಿಚಾರಿಸಿ, ಅಧಿಕಾರಿಗಳಿಗೆ ವೀರಪ್ಪನ್ ಇರುವ ವಿಚಾರ ತಿಳಿಸದೇ ಅವರನ್ನು ಇಲ್ಲಿ ಕರೆತರಲು ಹೇಳಿ ಕಳುಹಿಸಿದ್ದಾನೆ.
ಪರಾರಿಯಾಗಿದ್ದ ವೀರಪ್ಪನ್
ಹಿಂತಿರುಗಿದ ಇವರಿಬ್ಬರು ಎಲ್ಲ ವಿಚಾರವನ್ನು ಇಲಾಖೆಯವರಿಗೆ ತಿಳಿಸಿ, ಒಂದು ತಂಡವನ್ನು ಮಾಡಿಕೊಳ್ಳುತ್ತಾರೆ. ಕಾಡಿನ ಸಿಬ್ಬಂದಿ ಅವನನ್ನು ಹಿಡಿಯಲು ಎಲ್ಲ ತಯಾರಿ ಮಾಡಿಕೊಂಡು ಹೊರಡುತ್ತಾರೆ. ಅಷ್ಟರಲ್ಲಿ ಈ ವಿಚಾರ ತಿಳಿದ ವೀರಪ್ಪನ್ ಪರಾರಿಯಾದನಂತೆ. ಈ ಘಟನೆಯನ್ನು ಕೇಳಿದಾಗ ನಮಗೆ ರೋಮಾಂಚನವಾಗಿತ್ತು. ಅಂದಹಾಗೆ, ಸಫಾರಿಯ ಚಾಲಕರು ಯಾವಾಗ ಖುಷಿಯಾಗುತ್ತಾರೆಂದರೆ ಅವರೊಡನೆ ಬಂದ ಪ್ರವಾಸಿಗರು ತಮಗಾದ ಅನುಭವದಿಂದ ತೃಪ್ತಿ ಪಟ್ಟಾಗ ಮಾತ್ರ.