ಕಾಡೆಂದರೆ ಬರೀ ಪ್ರಾಣಿಗಳಿರುವ ಜಾಗವಲ್ಲವೋ ಅಣ್ಣ!
ಕಾಡೆಂದರೆ ಬರೀ ಪ್ರಾಣಿ ಪಕ್ಷಿಗಳಲ್ಲ. ಅವು ಸಿಗದಿದ್ದಾಗ ಬೇಸರ ಪಡಬೇಕಿಲ್ಲ. ಏಕೆಂದರೆ, ಕಾಡಲ್ಲಿ ಇನ್ನೇನೋ ಇದೆ. ಗಾಳಿಯಿದೆ, ವಾಸನೆಯಿದೆ, ಮಾನವೀಯತೆಯಿದೆ, ತನ್ಮಯತೆಯಿದೆ, ಪ್ರಕೃತಿಯಿದೆ. ಹುಡುಕುವ ಪ್ರಯತ್ನ ಮಾಡಿದರೆ ಸಿಕ್ಕೇ ಸಿಗುತ್ತದೆ.
ಕಾಡಿನ ಅನುಭವವೇ ಒಂದು ವಿಶೇಷ. ಅಲ್ಲಿಗೆ ಹೋಗುತ್ತಿದ್ದಂತೆಯೇ ಎಲ್ಲವನ್ನು ಮರೆತು ಅದ್ಯಾವುದೋ ಪ್ರಪಂಚಕ್ಕೆ ಹೋದಂತೆ ಭಾಸವಾಗಿ ಬಿಡುತ್ತೆ. ಅದರ ಪರಿಸರವೇ ಹಾಗೆ. ಮನಸ್ಸಿಗೆ ಸಂಜೀವಿನಿಯ ರೂಪದಲ್ಲಿ ನಮ್ಮ ಎಲ್ಲಾ ಭಾರವನ್ನು ತೆಗೆದೊಯ್ದು ಚಿಕಿತ್ಸೆ ನೀಡಿ ಬಿಡುತ್ತದೆ.
ಮನುಷ್ಯನು ಕಾಲಕ್ರಮೇಣ ಕಾಡಿನಿಂದ ನಾಡಿನತ್ತ ಸಂಚಾರ ಮಾಡಿದ. ಕಾಡಿನ ಸೂಕ್ಷ್ಮತೆಗಳನ್ನು ಅರಿಯುವುದು ಮರೆತುಬಿಟ್ಟ. ಆದರೆ ನಾವು ಎಷ್ಟು ಮುಂದುವರೆದರೂ ಪ್ರಕೃತಿಗೆ ತಲೆಬಾಗಲೇಬೇಕು.
ನಮ್ಮ ಪೂರ್ವಜರು ಕಾಡಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ನಮ್ಮ ವೇದಗಳಲ್ಲಿ ಕೂಡ ಕಾಡಿನ ಪ್ರಾಮುಖ್ಯತೆಯ ಬಗ್ಗೆ ಉಲ್ಲೇಖಿಸಲಾಗಿದೆ. ಅಥರ್ವ ವೇದದಲ್ಲಿ ನಾನು ನಿನ್ನಿಂದ ಏನನ್ನು ತೆಗೆದುಕೊಳ್ಳೂತ್ತೇನೂ, ಅದು ನಿನ್ನಲ್ಲಿ ಬೇಗ ಪುನಃ ಉತ್ಪನ್ನಗೊಳ್ಳಲಿ ಎಂದು ಹೇಳಲಾಗಿದೆ.
ಇದನ್ನೇ ಇವತ್ತು ಸಸ್ಟೈಬಲ್ ಡೆವೆಲಪ್ಮೆಂಟ್ ಎನ್ನುತ್ತಾರೆ. ಈ ಒಂದು ಸಿದ್ದಾಂತವನ್ನು ಚಂದ್ರಗುಪ್ತ ಮೌರ್ಯ, ಅಕ್ಬರ್, ಶಿವಾಜಿಯವರಂತಹ ರಾಜರು ಕೂಡ ಅಳವಡಿಸಿಕೊಂಡಿದ್ದರು. ಆದರೆ ಬ್ರಿಟೀಷರು ಬಂದಾಗ ನಮ್ಮ ಮೇಲೆ ಅಷ್ಟೇ ಅಲ್ಲದೆ ಕಾಡಿನ ಸಂಪನ್ಮೂಲಗಳ ಮೇಲೆಯೂ ಶೋಷಣೆ ಮಾಡಿದರು. ಆಯುರ್ವೇದದಂತಹ ವಿದ್ಯೆ ಕೂಡ ಕಾಡನ್ನು ಅವಲಂಬಿಸಿದೆ. ಕಾಡಿನ ಸಿಗುವ ಬೇರು ಸೊಪ್ಪು ಇತ್ಯಾದಿಗಳನ್ನು ಉಪಯೋಗಿಸಿ ನಮ್ಮ ಖಾಯಿಲೆಗೆ ಚಿಕಿತ್ಸೆ ನೀಡಲಾಗುತ್ತದೆ.
ಕಾಡಿನ ಸೂಕ್ಷ್ಮತೆಯನ್ನು ಅರಿಯಲು ಶುರು ಮಾಡಿದಾಗ ಅದರ ವಿಸ್ಮಯತೆಯನ್ನು ಒಂದೊಂದಾಗಿ ಬಿಚ್ಚಿಡತೊಡಗುತ್ತದೆ. ಎಲ್ಲಿಂದಲೋ ಬೀಸುವ ಗಾಳಿ ಯಾವುದೋ ಪ್ರಾಣಿಯ ವಾಸನೆ ತಂದಿರಬಹುದು. ಇದನ್ನು ಇನ್ನೊಂದು ಪ್ರಾಣಿ ಹಿಡಿದು ಎಚ್ಚೆತ್ತುಕೊಳ್ಳುತ್ತವೆ.
ಚಿಲಿಪಿಲಿ ಗುಡುವ ಹಕ್ಕಿ ಕಾಡಿನ ಕಥೆಯನ್ನು ಹೇಳುತ್ತಿರುತ್ತದೆ. ಅದರ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುತ್ತಿರುತ್ತದೆ. ನೀವು ಯಾರಾದರೂ ಪಕ್ಷಿ ತಜ್ಞರನ್ನು ಭೇಟಿ ಮಾಡಿದರೆ ಅದು ಏನು ಹೇಳುತ್ತಿರಬಹುದೆಂದು ನಿಮಗೆ ಹೇಳಿ ಬಿಡುತ್ತಾರೆ. ನೀವು ಸಾಕಿರುವ ನಾಯಿ ಏಕೆ ಬೊಗುಳುತ್ತಿದೆ? ಏಕೆ ಸಪ್ಪಗಿದೆ? ಎಂದು ನಿಮಗೆ ಹೇಗೆ ಅರಿವಾಗುತ್ತದೆಯೋ, ಅದೇ ರೀತಿ ಅವರಿಗೂ ತಿಳಿದುಬಿಡುತ್ತದೆ.
ಕಾಡನ್ನು ಬರೀ ಪ್ರಾಣಿಗಳು ಇರುವ ಜಾಗ ಎಂಬ ಮನಸ್ಥಿತಿಯನ್ನು ನಾವು ಬಿಡಬೇಕು. ಪ್ರವಾಸಿಗರು ಸಫಾರಿಗೆ ಹೋದಾಗ ಯಾವುದೇ ಪ್ರಾಣಿ ಕಾಣದಿದ್ದಾಗ ನಿರಾಶರಾಗಿ ಬಿಡುತ್ತಾರೆ. ಎಷ್ಟೋ ಬಾರಿ ನಮಗೂ ಕೂಡ ಏನೂ ಕಂಡಿರುವುದಿಲ್ಲ. ಆದರೆ ಕಾಡಿನಲ್ಲಿ ಕಳೆಯುವ ಪ್ರತಿಯೊಂದು ಕ್ಷಣವು ನಮಗೆ ವಿಶೇಷ.
ಒಮ್ಮೆ ನಮ್ಮ ತಂಡದೊಂದಿಗೆ ಬಂಡೀಪುರಕ್ಕೆ ಹೋಗಿದ್ದೆವು. ಹಲವಾರು ಸಫಾರಿ ಮಾಡಿದರೂ ನಮಗೆ ಯಾವುದೇ ಪ್ರಾಣಿಗಳು ಕಂಡಿರಲಿಲ್ಲ. ಆದರೆ ಕಾಡಿನಲ್ಲಿ ಸುತ್ತುವ ಅನುಭವವೇ ನಮಗೆ ವಿಶೇಷ ಎನಿಸುತ್ತಿತ್ತು. ಹಿಂತಿರುಗುವ ಹೊತ್ತಲ್ಲಿ ರಸ್ತೆಯಲ್ಲೆ ನಮಗೆ ಚಿರತೆ ಕಂಡಿತು. ಎಲ್ಲರಿಗೂ ಅಚ್ಚರಿ. ಆದರೆ, ಚಿರತೆ ಕಾಣಲಿಲ್ಲವೆಂದು ನಾವು ನಿರಾಶರಾಗಬೇಕಿಲ್ಲ. ಸಿಕ್ಕರೆ ಅದು ಬೋನಸ್.
ನಾವು ಕಾಡಿಗೆ ಹೋದಾಗ ಕಾಡನ್ನು ನೋಡುವ ರೀತಿ ಬದಲಾಗಬೇಕು. ಏನನ್ನೂ ಅಪೇಕ್ಷಿಸಿದೆ ಒಂದು ನಿರ್ಮಲ ಚಿತ್ತದಿಂದ ಹೋದಾಗ ಉತ್ತಮ ಅನುಭವವಾಗುವುದಂತೂ ಸತ್ಯ. ಎಷ್ಟೋ ಬಾರಿ ನಾವು ಪ್ರಾಣಿಗಳು ಹತ್ತಿರವಿದ್ದರೂ ನಮಗೆ ಕಂಡಿರುವುದಿಲ್ಲ. ಏಕೆಂದರೆ ಅದರ ಮೈಬಣ್ಣ ಅದನ್ನು ಮರೆಮಾಚಿ ಬಿಡುತ್ತದೆ. ಅದಕ್ಕೆ ನಾವು ಅದನ್ನು ನೋಡದಿದ್ದರೂ ಅದು ನಮ್ಮನ್ನು ನೋಡುತ್ತಿದೆ ಎಂಬ ಸೂಚನೆಯು ಕಾಡಿನಲ್ಲಿ ನಮಗೋಸ್ಕರ ಹಾಕಿರುತ್ತಾರೆ.
ಭಾರತದಲ್ಲಿ 70.2 ಮಿಲಿಯನ್ ಹೆಕ್ಟೇರ್ ಜಾಗದಷ್ಟು ಕಾಡಿದೆ. ಅರಣ್ಯ ಇಲಾಖೆಯು ಇದರ ಸಂರಕ್ಷಣೆಗೆಂದು ಶ್ರಮವಹಿಸುತ್ತಿದೆ. ಕಾಡನ್ನು ಕಾಯುವ ಸಿಬ್ಬಂದಿಗಳು ತಮ್ಮ ಜೀವವನ್ನೇ ಇದಕ್ಕೆ ಮುಡಿಪಾಗಿಟ್ಟಿರುತ್ತಾರೆ. ಕಾಡಿನ ವಾಚ್ಗಾರ್ಡ್ಸ್ ವಷಾನುಗಟ್ಟಲೆ ಕಾಡಿನಲ್ಲೇ ಇದ್ದುಕೊಂಡು ಅದರ ಸಂರಕ್ಷಣೆಗೆ ದುಡಿಯುತ್ತಾರೆ. ಕಾಡಿನಲ್ಲಿ ಇವರಿಗೆಂದು ಆಂಟಿ ಕೋಚಿಂಗ್ ಕ್ಯಾಂಪ್ಸ್ಗಳನ್ನು ನಿರ್ಮಿಸಿರುತ್ತಾರೆ.
ಕಾಡೆಂದ ಮೇಲೆ ಮೊಬೈಲ್ ನೆಟ್ವರ್ಕ್ ಅಥವಾ ವಿದ್ಯುತ್ ಸವಲತ್ತುಗಳು ಇರುವುದಿಲ್ಲ. ಅವರನ್ನು ಭೇಟಿಯಾಗಿ ಕೆಲಹೊತ್ತು ಅವರೊಡನೆ ಸಮಯ ಕಳೆದೆವು. ಕಾಡಿಗೋಸ್ಕರ ಅವರ ಜೀವನವನ್ನು ಮುಡಿಪಾಗಿಟ್ಟಿರುವುದರಲ್ಲಿ ಅವರಿಗೆ ಹೆಮ್ಮೆಯಿದೆ. ಅವರೊಂದಿಗೆ ಕಳೆದ ಕ್ಷಣಗಳೂ ಅವಿಸ್ಮರಣೀಯವೆ. ನಮಗೆಂದು ರುಚಿಕಟ್ಟಾದ ಅಡಿಗೆ ಮಾಡಿ ಬಡಿಸಿದರು.
ಇತ್ತೀಚಿಗೆ ಚಿಕ್ಕಮಗಳೂರಿನಲ್ಲಿ ನಡೆದಂತಹ ಭೇಟಿಯ ಪ್ರಸಂಗ ತೀರಾ ಬೇಸರ ಮೂಡಿಸಿದೆ. ಮುಂದಿನ ವಾರ ಹೊಸ ಕಾಡುಗಳ ಪರಿಚಯ ಮಾಡಿಸುತ್ತೇನೆ. ಹಾಗಾಗಿ ಕಾಡೆಂದರೆ ಏನು, ಅದನ್ನು ಯಾವ ರೀತಿ ನೋಡಬೇಕೆಂದು ನಿಮಗೆ ನನ್ನ ಅಭಿಪ್ರಾಯವನ್ನು ತಿಳಿಸಲು ಬಯಸಿದೆ. ನೀವೂ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಿ.