ಸ್ಮಶಾನದಲ್ಲೇ ನಿರ್ಮಾಣವಾದ ಕನ್ನಡ ಶಾಲೆಯಲ್ಲಿ ಅಕ್ಷರ ದಾಸೋಹ
ಆ ದಿವಸ ಶನಿವಾರ ಅಕ್ಷರ ನನ್ನನ್ನ ಒಂದು ಶಾಲೆಗೆ ಕರೆದುಕೊಂಡು ಹೋಗುತ್ತೇನೆ ಎಂದ. ನಾನು ಶಾಲೆ ಬಿಟ್ಟು 12 ವರ್ಷವಾಯಿತು, ಅವನದ್ದು ಹದಿನಾಲ್ಕು. ಆಗಾಗ ಪಾಠ ಹೇಳಿಕೊಡಲು ಹೋಗಿ ಬಂದ ನೆಪವಷ್ಟೇ ಹೊರತು ಮತ್ತಿನ್ನೇನೂ ಇರಲ್ಲಿಲ್ಲ ಇಷ್ಟು ವರ್ಷ. ಅದೂ ನಮ್ಮ ಜಯನಗರದ ಭೈರಸಂದ್ರ ವಾರ್ಡಿನ ಶಾಲೆಯೆಂದ ತಕ್ಷಣ ಖುಷಿಯಾಗಿ ಹೋದೆ.
ಕನ್ನಡ ಮಾಧ್ಯಮ ಮತ್ತು ಕನ್ನಡವನ್ನ ಕಡ್ಡಾಯವಾಗಿ ಕಲಿಸುವ ಶಾಲೆಗಳು ನನಗೆ ಬಹಳ ಇಷ್ಟ. ಭಾಷೆ ಮಾತ್ರ ಕಲಿಸದೆ ನಮ್ಮ ಸಂಸ್ಕೃತಿಯನ್ನೂ ಪರಿಚಯ ಮಾಡಿಕೊಡುತ್ತದೆ ಒಂದು ಭಾಷೆ. ಭಾಷೆಯ ಸೊಗಡು, ಅದರಲ್ಲಿನ ಸೂಕ್ಷ್ಮತೆ ಎಲ್ಲವೂ ಭಾಷೆಯ ಜೊತೆ ಅಡಕ ಆಗಿರುತ್ತದೆ. ಅದೆಲ್ಲದರ ಜೊತೆ ನಮ್ಮ ನೆಲದ ಜೊತೆಗಿನ ಸಂಪರ್ಕ ಚೆನ್ನಾಗಿರುತ್ತದೆ.
ಶತಮಾನಗಳ ಇತಿಹಾಸವಿರುವ ಪಾಟರಿ ಟೌನ್ ಗೆ ಸಂಚಕಾರ
ಇದೆಲ್ಲದಕ್ಕೆ ಮಕ್ಕಳಿಗೆ ಒಂದು ಭಾಷೆಯನ್ನಾದರೂ ಸರಿಯಾಗಿ ಕಲಿಸಬೇಕು. ಅವರಿಗೆ ಓದೋದಕ್ಕೆ ಮತ್ತು ಬರೆಯೋದಕ್ಕೆ ಚೆನ್ನಾಗಿ ಬಂದಾಗ ಮಾತ್ರ ಅವರ ಆತ್ಮ ಸಂತುಷ್ಟಗೊಳ್ಳುತ್ತದೆ. ಇದು ನನಗೆ ನನ್ನಪ್ಪ ಅಮ್ಮ ಹೇಳಿಕೊಟ್ಟಿದ್ದು. ಈಗಿನ ಶಾಲೆಗಳಲ್ಲಿ ಕನ್ನಡವನ್ನ ಸರಿಯಾಗಿ ಕಲಿಸದೇ ಅಥವಾ ಪೂರ್ತಿ ನಿರ್ಲಕ್ಷಿಸಿ ಮಕ್ಕಳನ್ನ ತಮ್ಮತನದಿಂದ ದೂರ ಇಟ್ಟಿದ್ದಾರೆ.
ನಮ್ಮ ಮನೆಯಲ್ಲೇ ಎಷ್ಟೋ ಜನರಿಗೆ ಕನ್ನಡ ಸೊಗಡು ಗೊತ್ತಿಲ್ಲ. ಕನ್ನಡವನ್ನು ಕಲಿತು ಏನು ಮಾಡಬೇಕು? ಉದ್ಯೋಗ ಸಿಗುತ್ತದೆಯಾ? ಎಂದು ಪ್ರಶ್ನೆ ಮಾಡುವಷ್ಟರ ಮಟ್ಟಿಗೆ ಭಾಷೆಯನ್ನ ಬದಿಗಿರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಜಯನಗರದ ಮಧ್ಯದಲ್ಲಿ ಒಂದು ಕನ್ನಡ ಶಾಲೆ ಮಕ್ಕಳ ಹತ್ತಿರ ಒಂದು ಪೈಸೆಯನ್ನೂ ತೆಗೆದುಕೊಳ್ಳದೇ ಕಲಿಸುತ್ತಿದೆ ಎಂದರೆ ಎಷ್ಟು ಆಶ್ಚರ್ಯವಾಗುವಂಥದಲ್ಲವೆ?
22 ವರ್ಷದ ಹುಡುಗನ ಕನಸು ನನಸು
ಸಂಗಮೇಶ್ವರ ಶಾಲೆ ಜಯನಗರ 1ನೇ ಬ್ಲಾಕಿನ ಭೈರಸಂದ್ರದಲ್ಲಿದೆ. ಸುತ್ತಮುತ್ತ ಸಣ್ಣ ಮನೆಗಳು, ಸ್ಲಂಗಳು ತುಂಬಿವೆ. 38 ವರ್ಷದ ಹಿಂದೆ ಭೈರಸಂದ್ರದ ಹತ್ತಿರ ಒಂದು ದೊಡ್ಡ ಸ್ಮಶಾನವಿತ್ತು. ಆಮೇಲೆ ಒಂದು ಪಾರ್ಕಾಯಿತು. ಅದನ್ನ ಬಿಟ್ಟರೆ ತೀರಾ ಬಯಲಿನಂತೆ ಇದ್ದದ್ದು ಈ ಜಾಗ. ಒಬ್ಬ 22 ವರ್ಷದ ಹುಡುಗನಿಗೆ ಒಂದು ಕನಸಿರುತ್ತದೆ. ಸೋಲೂರಿನಲ್ಲಿ ಹುಟ್ಟಿ ಬೆಳೆದು ಗುಬ್ಬಿ ಮತ್ತು ಸಿದ್ಧಗಂಗಾ ಮಠದಲ್ಲಿ ವ್ಯಾಸಂಗ ಮಾಡಿದವರಿಗೆ ತಮಗೆ ಒಳ್ಳೆಯ ವಿದ್ಯೆ ಸಿಕ್ಕಿದ ಹಾಗೆ ಈ ಭೈರಸಂದ್ರದ ಮಕ್ಕಳಿಗೂ ವಿದ್ಯೆ ಸಿಗುಲೇಬೇಕು ಎಂಬ ಪಣ ತೊಟ್ಟು ಸ್ಮಶಾನದಲ್ಲಿಯೇ ಮೊದಲು ಪಾಠ ಮಾಡಲು ಶುರು ಮಾಡಿದರು. ಅಲ್ಲಿನ ಸುತ್ತಮುತ್ತಲಿನ ಮಕ್ಕಳು ಅಲ್ಲೆಲ್ಲೋ ಬೀದಿ ಕಸ ಗುಡಿಸುವವರ ಮಕ್ಕಳು, ಅಥವಾ ಅಂಗಡಿಯಲ್ಲಿ ಮಕ್ಕಳೇ ಕೆಲಸ ಮಾಡುತ್ತಿದ್ದ ಮಕ್ಕಳೆಲ್ಲರಿಗೂ ಶಿಸ್ತಾಗಿ ಕನ್ನಡದಲ್ಲಿ ಪಾಠ ಮಾಡುತ್ತಿದ್ದವರು ಫಾಲನೇತ್ರ ಎಂಬ 22 ವರ್ಷದ ತರುಣ. ಈ ತಿರುಗೋ ಶಾಲೆಯನ್ನ ಅಲ್ಲಿನ ಜನ ಆಡಿಕೊಂಡು ನಕ್ಕರಂತೆ. ಸ್ಮಶಾನದಲ್ಲಿ, ಪಾರ್ಕಿನಲ್ಲಿ, ರೋಡಿನಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಪಾಠ ಮಾಡಲು ಶುರು ಮಾಡಿಕೊಂಡಿದ್ದರು ಅವರು.
ಸ್ಮಶಾನದಲ್ಲಿ ಶೆಡ್ಡು, ಶೆಡ್ಡಿನಲ್ಲಿ ಶಾಲೆ
ಈಗ ಇರುವ ಶಾಲೆಯ ಕಟ್ಟಡದ ಜಾಗದಲ್ಲಿ ಒಂದು ಶೆಡ್ ನಿರ್ಮಿಸಿ ಅಲ್ಲೇ ಒಂದಷ್ಟು ಮಕ್ಕಳನ್ನ ಎಳೆದುಕೊಂಡು ಬಂದು ಅಕ್ಷರದ ದಾಸೋಹವನ್ನ ನಿರ್ಮಿಸಿದರು. ಆ ಶೆಡ್ಡಿನಲ್ಲಿ ಕನಿಷ್ಠ ಶೌಚಾಲಯವೂ ಇರಲ್ಲಿಲ್ಲ. ಮಕ್ಕಳೆಲ್ಲ ಒಂದು ಲೈನ್ ಮಾಡಿಕೊಂಡು ಉಪಾಧ್ಯಾಯರ ಜೊತೆಯಲ್ಲಿ ಬಯಲಿನಲ್ಲಿ ಕೂರಬೇಕಾದ ಪರಿಸ್ಥಿತಿಯಿತ್ತಂತೆ. ಬಕೆಟ್ ಶಾಲೆ, ಚೊಂಬಿನ ಶಾಲೆಯೆಂದೂ ಕರೆಯುತ್ತಿದ್ದರಂತೆ. ಹೀಗೆ ಸ್ಮಶಾನ, ಶೆಡ್ಡು ಎಲ್ಲಾ ಆದ ಮೇಲೆ ಒಬ್ಬರು ಭಕ್ತರು ಬಂದು ಆ ಜಾಗವನ್ನ ಒಂದು ಟ್ರಸ್ಟ್ ಮಾಡಿ, ಅದನ್ನು ನೋಂದಾಯಿಸಿಕೊಟ್ಟು ಹೋದರಂತೆ. ಒಳ್ಳೆಯ ಕೆಲಸವನ್ನ ಮಾಡುವುದಕ್ಕೆ ನಿಂತರೆ ಯಾರೋ ಬಂದು ಸಹಾಯ ಮಾಡುತ್ತಾರೆ ಎಂಬ ಮಾತು ನಿಜ ಎಂದು ಫಾಲನೇತ್ರ ನಗುತ್ತಾ ಹೇಳಿದರು. ವರ್ಷಾನುಗಟ್ಟಲೆ ಛಳಿ, ಬಿಸಿಲು ಮತ್ತು ಯಾವ ವರಮಾನವೂ ಇಲ್ಲದೆ ಬರೀ ಮಕ್ಕಳಿಗಾಗಿ ಶಾಲೆ ನಡೆಸುವ ವಿಚಿತ್ರ ಹುಚ್ಚಿಗೆ ಜನ ಏನ್ನೆನ್ನುತ್ತಾರೆ ಎಂದು ಒಮ್ಮೆಯೂ ಯೋಚಿಸದೇ ಎಲ್ಲವನ್ನೂ ನಿಭಾಯಿಸಿದರು.
ಶತಮಾನದ ಹಿಂದಿನ ಬೆಂಗಳೂರು ನೆನಪಿಸುವ ಸಿದ್ದಾಪುರದ ಸಸ್ಯಕಾಶಿ
ತಮ್ಮ ಮನೆಯ ಹಾಗೆ ಶುಚಿಯಾಗಿಟ್ಟಿದ್ದಾರೆ
ಜಯನಗರ ದಕ್ಷಿಣದ ಎಂಪಿಗೆ ಸಿಗುವ ಫಂಡಿನಿಂದ ಈಗಿನ ಕಟ್ಟಡವನ್ನೂ ನಿರ್ಮಾಣವಾಯಿತು. ಸರ್ಕಾರದಿಂದ ಮಕ್ಕಳಿಗೆ ಬಿಸಿಯೂಟ, ಇನ್ನಷ್ಟು ದಾನಿಗಳು ಬಂದು ಬೆಂಚುಗಳು, ಪುಸ್ತಕಗಳು ಎಲ್ಲವನ್ನೂ ಕೊಟ್ಟ ಪರಿಣಾಮ ಈಗ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯ ವರೆಗೆ 200 ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಓದುತ್ತಾ ಇದ್ದಾರೆ. 38 ವರ್ಷಗಳು ಯಾವ ಸ್ವಾರ್ಥವೂ ಇಲ್ಲದೆ ದುಡಿದ ಫಾಲನೇತ್ರ ಅವರಿಗೆ ಸಿಕ್ಕ ಯಶಸ್ಸು ಇದು. ನಮ್ಮ ಪೀಳಿಗೆಗೆ ತಕ್ಷಣ ಯಶಸ್ಸು ಸಿಗೋದು ಒಂದು ವ್ಯಸನವಾಗಿದೆ. ಇವತ್ತು ಬೀಜ ಬಿತ್ತಿದರೆ ನಾಳೆ ಬೆಳೆ ಕೈಗೆ ಸಿಗಬೇಕು, ಇವೆಲ್ಲವನ್ನು ಒಂದೇ ನಿಮಿಷದಲ್ಲಿ ಹೊಡೆದುಹಾಕಿ ನಮ್ಮನ್ನ ಆತ್ಮಾವಲೋಕನಕ್ಕೆ ಎಡೆಮಾಡುತ್ತದೆ. ಒಂದಷ್ಟು ಮಕ್ಕಳು ತಮ್ಮ ಶಾಲೆಯನ್ನ ತಾವೇ ಶುಚಿಗೊಳಿಸಿ, ಊಟದ ತಟ್ಟೆ, ಪಾತ್ರೆ, ಅಡುಗೆಮನೆಯನ್ನ ಶುಚಿಮಾಡಲು ಸರತಿ ಸಾಲಿನಲ್ಲಿ ನಿಂತಿದ್ದನ್ನ ಕಂಡು ಬೆರಗಾದೆ. ತಮ್ಮದೇ ಮನೆಯ ಹಾಗೆ ಖುಷಿಯಾಗಿ ಶಾಲೆಯಲ್ಲಿ ಓಡಾಡಿಕೊಂಡಿದ್ದರು.
ಮಕ್ಕಳಲ್ಲಿ ಅಕ್ಷರ ಕಲಿಯುವ ಹುಮ್ಮಸ್ಸು
ಯಾವುದೇ ಶಾಲೆಗೇ ಹೋದರು ಅಲ್ಲಿ ಮಿನಿಮಮ್ ಒಂದು ಸಣ್ಣ ಅಳುವಾದರೂ ಕೇಳುತ್ತದೆ. 200 ಮಕ್ಕಳಲ್ಲಿ ಒಬ್ಬರೂ ಅಳುತ್ತಿರಲ್ಲಿಲ್ಲ, ಆಚೆ ಕಿವಿ ಹಿಡಿದುಕೊಂಡು ನಿಂತಿರಲ್ಲಿಲ್ಲ. ಮುಖದಲ್ಲಿ ಸದಾ ನಗುವಿರುತ್ತಿತ್ತು. ನನ್ನ ಕಾಲದ ಶಾಲೆಯಲ್ಲಿಯೂ ಇದ್ದ 800 ಮಂದಿಯೂ ನಗುತ್ತಿದ್ದದ್ದನ್ನ ನಾನು ಕಂಡಿರಲ್ಲಿಲ್ಲ. ಓದಿರದ ಅಪ್ಪ ಅಮ್ಮ, ಎಲ್ಲೋ ಕುಡಿದು ಬಿದ್ದಿರುವ ಅಪ್ಪನ ಮಕ್ಕಳು, ಅಮ್ಮನ ಹೆಸರೇ ಅರಿಯದ ಮಕ್ಕಳೆಲ್ಲ ಈ ಶಾಲೆಯ ವಿದ್ಯಾರ್ಥಿಗಳು. ಅವರಿಗೆ ಆ ನೋವಿಗಿಂತ ನಾಲ್ಕು ಅಕ್ಷರ ಕಲಿಯುತ್ತಿದ್ದೇವೆ ಎಂಬ ಹುಮ್ಮಸ್ಸೇ ಅವರನ್ನ ಮುಂದೆ ತರುತ್ತಿದೆ. ಇವರ ಶಾಲೆಯಲ್ಲಿಯೇ ಹೀಗೆ ಯಾವುದೋ ಕೇರಿಯಲ್ಲಿ ಬೆಳೆದ ಹುಡುಗನ್ನನ್ನ ಅವರ ಶಾಲೆಯಲ್ಲಿ ಹೈಸ್ಕೂಲು ಇಲ್ಲದ್ದಿದ್ದ ಕಾರಣ ದೊಡ್ಡ ಸೀಏ ಹತ್ತಿರ ಸಹಾಯ ಮಾಡಿಸಿ ಬೇರೆ ಶಾಲೆಗೆ ಹಾಕಿದ್ದರಂತೆ. ಅವರಪ್ಪ ಕುಡಿದು ಕುಡಿದು ಹಾಳಾಗಿ ಹೋದ ಕಾರಣ ಬೀದಿ ಪಾಲಾದ ಸಂಸಾರವನ್ನ ಇವರು ಎತ್ತಿ ನಡೆಸಿದರಂತೆ. ಆ ಹುಡುಗ ಈಗ ದೊಡ್ಡ ಸೀಏ. ತನ್ನ ಹಳೆಯದನ್ನ ಮರೆಯದೇ ಇನ್ನೂ ಮುಖ್ಯೋಪಾಧ್ಯಾಯರನ್ನ ನೆನೆವ ಮನಸ್ಸು. ಅಲ್ಲೇ ತಿಲಕನಗರದ ಇನ್ಸ್ಪೆಕ್ಟರ್ ಸಹ ಆ ಶಾಲೆಯ ವಿದ್ಯಾರ್ಥಿ. ಅವರ ಮಗ ಇಂಗ್ಲೀಷ್ ಕಾನ್ವೆಂಟ್ ಬಿಟ್ಟು ಈ ಶಾಲೆಗೆ ಸೇರಲು ರಚ್ಚೆ ಹಿಡಿದನಂತೆ.
ಆಟೋಗಾಗಿ ಗಂಟೆಗಟ್ಟಲೆ ಕಾದುಕೂತ ನನ್ನ ಕಥೆ ವ್ಯಥೆ
ವಿದ್ಯೆ ಇಂದು ವ್ಯಾಪಾರವಾಗಿದೆ
ಒಟ್ಟಿನಲ್ಲಿ ಈ ಥರಹದ ಶಾಲೆಗಳು ಬಹಳ ಹೆಚ್ಚು ಹೆಚ್ಚಾಗಲಿ. ನೀವೂ ಸಹ ಈ ಶಾಲೆಗೆ ಮಕ್ಕಳಿಗೆ ನೆರವಾಗಬಹುದು, ಶನಿವಾರ ಇಂಗ್ಲೀಷ್ ಮತ್ತು ಕಂಪ್ಯೂಟರ್ ಹೇಳಿಕೊಡಬಹುದು, ಮಕ್ಕಳ ಓದಿಗೆ ಧನ ಸಹಾಯ ಮಾಡಬಹುದು. ವರ್ಷಕ್ಕೆ ಮೂರು ಸಾವಿರ ಮಾತ್ರ ಅವರ ಖರ್ಚು. ಇವೆಲ್ಲವನ್ನ ಆಫೀಸಿನಲ್ಲಿ ಹೇಳುತ್ತಿರುವಾಗಲೇ ಪಕ್ಕದಲ್ಲಿ ಕೂತಿದ್ದ ಸಹೋದ್ಯೋಗಿ "ಈ ವರ್ಷ ಮಗಳ ಫೀಸ್ 3 ಲಕ್ಷ" ಅಂದರು. ಎಲ್ಲಿಯ ಕನ್ನಡ ಶಾಲೆ, ಎಲ್ಲಿಯ ಆಂಗ್ಲ ಶಾಲೆಗಳು! ಸಂಗಮೇಶ್ವರದ ಎಷ್ಟು ಮಕ್ಕಳು ಓದಬಹುದೆಂದು ಲೆಕ್ಕಹಾಕಿದೆ. ದುರಾದೃಷ್ಟವಶಾತ್ ವಿದ್ಯೆ ಇಂದು ವ್ಯಾಪಾರವಾಗಿದೆ.