ದೇವರು ರುಜು ಮಾಡಿದ ಆರ್ಡೆನೆಸ್ ಎಂಬ ಮಾಯೆ!
ಥೀಸಿಸ್ ಮುಗಿದ ಖುಷಿಯಲ್ಲಿ ಸಮಯ ಸಿಕ್ಕಿದ್ದರಿಂದ ಹಳೆ ಭಾವಚಿತ್ರಗಳನ್ನ ನೋಡುತ್ತಾ ಕೂತ್ತಿದ್ದೆ. ನಾ ಬಾರ್ಸಿಲೋನಾಗೆ ಹೋಗಿ ಮೂರು ತಿಂಗಳಾಗಿತ್ತು. ಕ್ರಿಸ್ಮಸ್ ರಜೆಯ ಕಾರಣ ನನ್ನ ಪಕ್ಕದ ರೂಮಿನವಳು ಅವಳ ಮನೆಗೆ ಬೆಲ್ಜಿಯಂನ ಆಂಟ್ವರ್ಪ್ ಗೆ ಹೋಗೋಣ ಅಂದಿದ್ದಳು.
ಅದರ ಪಕ್ಕದ್ದೆ ದೇಶ Netherlandsನಲ್ಲಿ ನನ್ನ ಕಸಿನ್ ಇದ್ದಿದ್ದರಿಂದ ಅವನಿಗೆ ಈ ವಿಶಯ ತಿಳಿಸಿದೆ. ಅವನು "ಬೆಟ್ಟ ಹತ್ತುವ ಕಾರ್ಯಕ್ರಮ" ಮಾಡೋಣ, ಎರಡು ದಿವಸದ ನಂತರ ಮತ್ತೆ ಮಿಂಚಂಚೆ ಬರೆಯುತ್ತೇನೆ ಎಂದು ಸುಮ್ಮನಾದ.
ಮಾಯಾನಗರಿ 'ನ್ಯೂಯಾರ್ಕ್'ನಲ್ಲೊಂದು ವಾರಾಂತ್ಯ
ನಾನೂ ಸುಮ್ಮನೆ ಅವನ ಮನೆಗೆ ಹೋಗಿ ಚೆನ್ನಾಗಿ ಊಟ ಮಾಡಿ, ರಾಜಕುಮಾರ್ ಸಿನೆಮಾ ನೋಡಿ ಒಂದೆರೆಡು ಚೆಂದದ ಚಿತ್ರ ತೆಗೆದುಕೊಂಡು ಬರೋದು ಎಂದುಕೊಂಡಿದ್ದರೆ, 2 ದಿವಸದ ನಂತರ ಮಿಂಚಂಚೆಯಲಿ ದೊಡ್ಡ ವೇಳಾಪಟ್ಟಿಯನ್ನೆ ಬರೆದು ಕಳಿಸಿದ್ದ. ಆರ್ಡೆನೆಸ್ ಎಂಬ ಕಾಡಿನಲ್ಲಿ ನಮ್ಮ ಚಾರಣ, ಅದಕ್ಕೆ ಇಷ್ಟು ದಿವಸ, ನಾವು ಇರಬೇಕಾದ ಜಾಗ, ಅಲ್ಲಿನ ಹವಾಮಾನ, ಅದಕ್ಕೆ ತಕ್ಕದಾದ ಬಟ್ಟೆ, ಶೂಸ್ ಎಲ್ಲದರ ವಿವರಗಳನ್ನ ಅವನು ಕಳಿಸಿದ್ದ.
ಆರ್ಡೆನೆಸ್ ಬೆಲ್ಜಿಯಂ, ಲಕ್ಸಂಬರ್ಗ್, ಜರ್ಮನಿ ಹಾಗೂ ಫ್ರಾನ್ಸ್ ದೇಶದಲ್ಲಿರುವ ಕಾಡು. ದೊಡ್ಡ ಬೆಟ್ಟಗಳು, ಮೊಸ್ಸೆಲ್ಲೆ ಹಾಗೂ ಮ್ಯುಎಸೆ ನದಿಗಳಿಂದ ತುಂಬಿದ ಪ್ರದೇಶ. ಇದೊಂಥರ ಪಶ್ಚಿಮ ಘಟ್ಟದ ಹಾಗೆ. ಬಾ ಸುಮ್ನೆ ಎಂದು ತಾಕೀತು ಮಾಡಿದ ನನ್ನ ಅಣ್ಣ.
ರಾಮನಗರದ ರಣಹದ್ದು, ರಾಮ ದೇಗುಲ, ವಾರಾಂತ್ಯದ ಚಾರಣ
ನಾನು ಸ್ವಭಾವತಹ ಸೋಮಾರಿ, ರಜೆಯೆಂದರೆ ಆರಾಮಾಗಿ ಒಂದು ಈಸಿ ಚೇರ್ ಹಾಕೊಂಡು ದಿನಕ್ಕೆ ಮೂರು ಪುಸ್ತಕ ಓದುವುದಷ್ಟೆ ನನ್ನ ಪ್ರೀತಿಯ ಕೆಲಸ. ಈ ರಜೆ ಸಜೆ ಆಗದಿರಲಿ ಎಂದು ಅವನಿಗೆ "ನಾ ಬೆಲ್ಜಿಯಂನಲ್ಲಿ ಇರೋದು ರಜದಲ್ಲಿ, ನೀನು ಪಾಪ ಅಲ್ಲಿಂದ ಬರಬೇಕು, ಇನ್ನು ನಾವು ಫ್ರಾನ್ಸ್ ಹತ್ತಿರ ಹೋಗಬೇಕು, ನೀ ಹೋಗ್ಬಾರೋ " ಅಂದ್ರೆ ಅವನು ಒಳ್ಳೆ ಮೈಸೂರಿಗೆ ಹೋದಷ್ಟು ಸಲೀಸಾಗಿ ನಾನೆಲ್ಲೋ ಕೆಂಗೇರಿಯಲ್ಲಿದ್ದ ಹಾಗೆ "ಕಾರಿನಲ್ಲಿ ಬರೋದು, ಅದೇ ದಾರಿ ಬೆಳಿಗ್ಗೆ ತಯರಾಗಿರು" ಎಂದ.
ಆರ್ಡೆನೆಸ್ ಕಾಡಿನಲ್ಲಿ ಚಾರಣ
ನಾವು ಆರ್ಡೆನೆಸ್ ಕಾಡಿಗೆ ಬೆಲ್ಜಿಯಂ ಹಾಗೂ ಫ್ರಾನ್ಸ್ ನಡುವಿನ ಗಡಿಗೆ ಹೊರಟ್ವಿ. ಅವನ ಸ್ನೇಹಿತರು ಕೆಲವರು ಭಾರತದವರೇ ಅಲ್ಲಲ್ಲಿ ಓದುತ್ತಿದ್ದರಿಂದ ನಾವೆಲ್ಲರೂ ಸಮಾನ ದುಃಖಿಗಳು ಹಾಗೂ ಸಮಾನ ಸುಖಿಗಳು. 5 ದಿವಸದ ಪ್ರವಾಸದಲ್ಲಿ ಒಂದೊಂದು ದಿವಸವೂ ಇಷ್ಟಿಷ್ಟು ದೂರ ನಡೀಬೇಕು ಎಂಬ ಪ್ಲಾನ್ ಮಾಡಲಾಗಿತ್ತು. ಅಣ್ಣ ದಿನ ದಿನಕ್ಕೆ 10 ಕಿಲೋಮೀಟರ್, 12 ಕಿಲೋಮೀಟರ್, 14 ಕಿಲೋಮೀಟರ್ ಎಂದು ಏರಿಸುತ್ತಾನೆ ಇದ್ದ. ಆ ಕೊರೆಯುವ 0 ಇಂದ -3 degree ಸೆಲ್ಶಿಯಸ್ ನಲ್ಲಿ ನಡಿಬೇಕು. ನಾವೆಲ್ಲಾ ಸಸ್ಯಾಹಾರಿಗಳಾಗಿದ್ದರಿಂದ ಊಟ ನಾವೆ ತೆಗೆದುಕೊಂಡು ಹೋಗಬೇಕಾಯ್ತು.
ಮ್ಯುಎಸೆ ನದಿ ಜಾಡನ್ನು ಹಿಡಿದು
ಆದಿ ಮಾನವರ ಥರಹ ಒಂದು ಕೈಯಲ್ಲಿ ಕೋಲು, ನಕಾಶೆ ಇಟ್ಟುಕೊಂಡು ನಡೆಯಲು ಶುರು ಮಾಡಿದ್ದೆವು. ನನ್ನ ಕಣ್ಣು ಬಿಟ್ಟು ಮಿಕ್ಕಿದ್ದೆಲ್ಲಾ ಮುಚ್ಚಿಕೊಳ್ಳಲೇ ಬೇಕಾಗಿತ್ತು. ನನಗೆ ಇವೆಲ್ಲಾ ಅಭ್ಯಾಸವೆ ಇಲ್ಲ. ನಾವು ಮ್ಯುಎಸೆ ನದಿ ಜಾಡನ್ನು ಹಿಡಿದು ಹೊರಟ್ವಿ. ಆ ಛಳಿಯಲ್ಲಿ ಕಾಲು ಮರಗಟ್ಟಿನಿಂತ್ತಿತ್ತು. ಛಳಿಗಾಲವಾದ್ದರಿಂದ ಕತ್ತಲು ಬೇಗ ಆಗುವುದರಿಂದ ಸಂಜೆ 6 ಘಂಟೆಯ ಹೊತ್ತಿಗೆ ನಮ್ಮ ಈ ಕಾರ್ಯಕ್ರಮ ಪ್ರತಿ ದಿವಸ ಮುಗಿಸಬೇಕಿತ್ತು. ನಾವು ದೊಡ್ಡ ಬೆಟ್ಟ ಹತ್ತುವುದಕ್ಕಿಂತ ಚಿಕ್ಕ ಚಿಕ್ಕ ಎರಡು ಬೆಟ್ಟ ಹತ್ತುವುದು ಎಂದು ನಿರ್ಧಾರ ಮಾಡಿದ್ವಿ.
ಸಹಬಾಳ್ವೆಯ ನಿಜವಾದ ಪರೀಕ್ಷೆ
4 ಜನ ನಾಲ್ಕು ದಿಕ್ಕಿನ ಯೋಚನೆ, ಯೋಜನೆ ಇವೆಲ್ಲದರ ಮಾತುಕತೆಗಳಲ್ಲಿ ಮೊದಲ ದಿವಸ ಸಾಕಷ್ಟು ಸಮಯ ವ್ಯರ್ಥವಾಯಿತೆಂದೆ ಹೇಳಬೇಕು. ಇಂಥಲ್ಲಿಯೇ ಸಹಬಾಳ್ವೆಯ ನಿಜವಾದ ಪರೀಕ್ಷೆ ಆಗೋದು. ನಾನು ಚಾರಣಕ್ಕೆ ಯಾಕೆ ಇಷ್ಟೊಂದು ಮಹತ್ವ ಕೊಡ್ತಾರೆ ಎಂದು ಅರಿತಿದ್ದು ಇವಾಗ್ಲೇ. ಇದು ಒಂದು ಜೀವನದ ಪಾಠ.
ಬಭ್ರುವಾಹನದ ಸಂಭಾಷಣೆಗಳನ್ನ ಹೇಳಿಕೊಂಡು
ಈ ಕಾಡಿನಲ್ಲಿ 10 Hiking trailsಗಳಿವೆ. ನಾವು ಮೊದಲ ದಿವಸ ಹೋಗಿದ್ದು ವಲ್ಲೆ ದು ನಿಂಗ್ಸ್ಲಿಂಪೋ ಎಂಬುದಕ್ಕೆ. ಈ ದಾರಿಯಲ್ಲಿ ನದಿ, ಚಿಕ್ಕ ಚಿಕ್ಕ ಝರಿಗಳು, ಜಲಪಾತ, ಗುಡ್ಡ, ಸೇತುವೆ ಎಲ್ಲದರ ಮೇಲೆ ನಡೆದುಕೊಂಡು ಹೋಗಬೇಕು. ನನಗೆ ಅರ್ಧ ದಾರಿಯಲ್ಲಿಯೇ ಸುಸ್ತಾಗಿ ಕೂತುಬಿಟ್ಟೆ. ನಂತರ ರಾಜಕುಮಾರ್ ನ ಬಭ್ರುವಾಹನದ ಸಂಭಾಷಣೆಗಳನ್ನ ಹೇಳಿಕೊಂಡು ಅರ್ಧದಾರಿ ತಲುಪಿದ್ವಿ. ಇನ್ನೊಂದು 10 ನಿಮಿಷ ತಡವಾಗಿದ್ರು ಕಗ್ಗತ್ತಲು ಕವಿದು ಪ್ರಾಣಿಗಳಿಗೆ ಆಹಾರವಾಗುತ್ತಿದ್ದವೇನೋ. ಮನೆಗೆ ಬಂದಾಗ, ಯಪ್ಪೋ ಮೈಯಲ್ಲಿನ ಎಲ್ಲ ಮೂಳೆಗಳಲ್ಲಿ ನೋವು.
ಕುವೆಂಪು ಪದ್ಯದ ಹಾಗೆ ಮೈ ಝುಮ್ಮೆನಿಸುವ ಜಾಗ
ನನ್ನ ಥರಹ ಮೊದಲ ಬಾರಿಗೆ ಈ ಥರದ ಹೈಕ್ ಮಾಡೋದಾಗಿದ್ರೆ 2 ಪದರ ಬಟ್ಟೆ, ದಪ್ಪ ಶೂಸ್, 2 ಮಫ್ಲರ್, ಟೋಪಿ ಹಾಕಿಕೊಳ್ಳುವುದು ಉತ್ತಮ. ನಿಂಗ್ಸ್ಲಿಂಪೋ ಎಂಬ ತೊರೆಯ ಸುತ್ತ ನಾವು ನಡೆದುಕೊಂಡು ಹೋದ್ವಿ. ಒಂದು ರೀತಿ ಕುವೆಂಪು ಬರೆದ ದೇವರು ರುಜು ಮಾಡಿದನು ಪದ್ಯದ ಹಾಗೆ ಮೈ ಝುಮ್ಮೆನಿಸುವ ಜಾಗ. ಅಲ್ಲಲ್ಲಿ ಏಣಿಗಳು, ಮೆಟ್ಟಿಲುಗಳು ಎಲ್ಲವೂ ಹಾಕಿದ್ದರು.
ನಂತರದ ಕಥೆಗೆ ಮುಂದಿನ ವಾರ ಕಾಯಿರಿ
ಒಂದೇ ದಿವಸ ಇಷ್ಟೊಂದು ಪ್ರಕೃತಿ ಸೌಂದರ್ಯ ನೋಡಿ ನಾನು ದಂಗಾಗಿದ್ದು ನಿಜವೇ ಸರಿ. ಭಾವನೆಗಳ ಕಡಲಲ್ಲಿ ಈಜಲು ಹಾಗೆ ಕನ್ನಡದ ಕೆಲವೊಂದು ಬ್ಲಾಗ್ ಗಳನ್ನ ಓದೋದಕ್ಕೆ ಶುರುಮಾಡಿದೆ. ಖಂಡಿತ ಆ ಬರಹಗಳು ನಿರುಪಯೋಗವಾಗಿರಲ್ಲಿಲ್ಲ. ಅಂತೂ ಕಾಲು ನೋಯಿಸಿಕೊಂಡು 10 ಕಿಲೋಮೀಟರ್ ನಡೆದ್ದಿದ್ದು ಆಯಿತು. ನಂತರದ ಕಥೆಗಳಿಗೆ ಮುಂದಿನ ವಾರ ಕಾಯಿರಿ... ಸದ್ಯಕ್ಕೆ ಈ ಚಿತ್ರಗಳನ್ನ ಕಣ್ಣು ತುಂಬಿಸಿಕೊಳ್ಳಿ.