'ಅಮ್ಮ' ಹೀಗೇ ಇರಬೇಕೆಂದು ಯಾರು ಹೇಳಿದ್ದು ನಿಮಗೆ?
"ಅಮ್ಮ ಎಂದರೆ ಮೈಮನವೆಲ್ಲ ಹೂವಾಗುವುದಮ್ಮ ...." ಎಂದು ಸೃಜನಾ ಹಾಡುತ್ತಾ ಇದ್ದಳು. ಮನೆಯಲ್ಲಿ ಒಬ್ಬಳೆ ಇದ್ದ ಕಾರಣ ಅವಳ ಧ್ವನಿ ಏರುತ್ತಲೇ ಇತ್ತು. ಆ ಕೂಗು ಕೇಳಿದ ಹಾಗೆ ಸಡನ್ನಾಗಿ ಮನೆಯ ಮುಂದೆ ಬುಲೆಟ್ ಸದ್ದಾಯಿತು. ನೋಡಿದರೆ ಅವಳಮ್ಮ ಬುಲೆಟ್ ಏರಿ ಬರುತ್ತಿದ್ದಳು. ಅವಳೇನಾ ಎಂದು ಕಣ್ಣು ಕಣ್ಣು ಬಿಟ್ಟು ನೋಡಿದ್ದಳು. ಅವಳಮ್ಮನೇ ಆಗಿದ್ದಳು. ಅಮ್ಮ ಬಹಳ ಚೆಂದವಾಗಿ ಬೈಕ್ ಓಡಿಸಿಕೊಂಡು ಬರುತ್ತಿದ್ದಳು.
ಒಂದು ಐದು ವರ್ಷದ ಹಿಂದೆ ಇದೇ ಅಮ್ಮ ನನಗೆ ವಿಜಯನಗರದಿಂದ ಬಸವೇಶ್ವರ ನಗರಕ್ಕೆ ಒಬ್ಬಳೇ ಹೋಗೋದಕ್ಕೆ ಗೊತ್ತಾಗದೇ ಕಳೆದುಹೋಗಿ, ಯಾರೋ ಕರೆ ಮಾಡಿ ವಿಷಯ ತಿಳಿಸಿದ್ದರು. ಹೀಗಿದ್ದ ಅಮ್ಮ ಹೇಗೆ ಬದಲಾದಳು ಎಂದು ಯೋಚಿಸುತ್ತಾ ಕೂತಿದ್ದಳು.
ಮಧ್ಯ ವಯಸ್ಕ ಮಹಿಳೆಯರಲ್ಲಿ ಮತ್ತೆ ಚೈತ್ರದ ಚಿಗುರು
ಅವಳ ಸ್ಮೃತಿ ಪಲ್ಲಟದಲ್ಲಿ ಅಮ್ಮ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಪ್ರತಿಭೆ. ತಾನಾಯಿತು ತನ್ನ ಮನೆಯಾಯಿತು ಅಂತಿದ್ದಳು. ಮನೆಯ ಆಚೆ ತರಕಾರಿ ತರೋದಕ್ಕೂ ಸಹ ಹೋಗುವುದಕ್ಕೆ ಇಷ್ಟವಿರುತ್ತಿರಲ್ಲಿಲ್ಲ. ಮನೆಗೆ ಬರುವ ವಾರ ಪತ್ರಿಕೆಗಳು ಮಾತ್ರ ಅವಳಿಗೆ ಹೊರಗಿನ ಪ್ರಪಂಚದ ಪರಿಚಯ ಮಾಡಿಕೊಡುತ್ತಿತ್ತು. ಮದುವೆಯಾದ ಮೇಲೆ ಇನ್ನೂ ಮನೆಯಲ್ಲಿಯೇ ಹೈಬರ್ನೇಟ್ ಮಾಡುತ್ತಿದ್ದಳು. ತೋಟದ ಆಳು ಕಾಳುಗಳ ಜೊತೆ ಸ್ವಲ್ಪ ಆಗಾಗ ಮಾತು. "ಕಾವೇರಮ್ಮ ಅನ್ನಪೂರ್ಣೇಶ್ವರಿ ಥರ ಯಾರಿಗೆ ಯಾವಾಗ ಬಂದರೂ ಊಟ ಹಾಕದೇ ಕಳಿಸುವುದಿಲ್ಲ" ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಒಂದಷ್ಟು ಚಿನ್ನದ ಆಸೆ, ಮನೆಯಲ್ಲಿ ಕಥೆ ಮುಂದಕ್ಕೇ ಹೋಗದ ಸೀರಿಯಲ್ಲುಗಳ ಮೇಲೆ ಪ್ರೀತಿ.
ಹೀಗಿದ್ದ ಕಾವೇರಿಗೆ ಸಡನ್ನಾಗಿ ತನ್ನವರನ್ನೆಲ್ಲ ಒಂದೇ ಏಟಿಗೆ ಒಂದು ಅಪಘಾತದಲ್ಲಿ ಕಳೆದುಕೊಂಡಳು. ಬದುಕುಳಿದದ್ದು ಅವಳು ಮತ್ತು ಸೃಜನಾ ಮಾತ್ರ. ತಾನು ಹುಟ್ಟಿ ಬೆಳೆದ ಊರೇ ಅವಳಿಗೆ ಸಹ್ಯವಾಗುತ್ತಿರಲ್ಲಿಲ್ಲ. ರಸ್ತೆಯಲ್ಲಿ ನಡೆದಾಗಲೆಲ್ಲಾ ಬರಿ ಆ ಅಪಘಾತದ ರಕ್ತದ ಗುರುತುಗಳೇ. ಯಾರೋ ಬೆಂಗಳೂರಿನಲ್ಲಿ ಒಂದು ಗೊತ್ತಿಲ್ಲದಿರುವಿಕೆಯಿರುತ್ತದೆ, ಯಾರೂ ಯಾರ ಹಿನ್ನಲೆಯನ್ನು ವಿಚಾರಿಸುವುದಿಲ್ಲ, ಅವರ ಪಾಡು ಅವರದ್ದು ಹಳೆಯದ್ದನ್ನೆಲ್ಲ ಮರೆಯುವ ಅವಕಾಶ ಸಿಗುತ್ತದೆ ಎಂದು ಮಾತಾಡುತ್ತಿದ್ದನ್ನ ಕೇಳಿ ಕಾವೇರಿ ಮತ್ತು ಸೃಜನಾ ತೋಟ, ಮನೆಯನ್ನೆಲ್ಲಾ ಮಾರಿ ಬೆಂಗಳೂರಿಗೆ ಬರುತ್ತಾರೆ.
ಹೆಣ್ಣುತನದ ಸಂಭ್ರಮವನ್ನು ಇಮ್ಮಡಿಗೊಳಿಸುವ ಮದರಂಗಿ!
ಬೆಂಗಳೂರಿನ ಒಂದು ರಸ್ತೆಯಷ್ಟು ಉದ್ದ, ಒಂದು ಮಾಲಿನಷ್ಟು ಅಗಲವಿದ್ದ ಮನೆ ತೋಟವನ್ನ ಬಿಟ್ಟು ಇಲ್ಲಿ ಅಡಿಗಳ ಲೆಕ್ಕದಲ್ಲಿ ಮನೆ ತೆಗೆದುಕೊಂಡು ಒಂದು ತುಳಸಿ, ವೀಳ್ಯದೆಲೆ, ಮಲ್ಲಿಗೆ, ಟೊಮ್ಯಾಟೋ, ಕರಿಬೇವು ಬೆಳೆದರೆ ನಮ್ಮ ಗಾರ್ಡನ್ ಎಂದು ಫೋಟೋ ಹಾಕಿಕೊಳ್ಳಬೇಕಾದ ಅನಿವಾರ್ಯತೆ. ಎಲ್ಲವೂ ಕೈಗೆ ಸಿಕ್ಕಿದ್ದರೂ ಸಹ ಅಲ್ಲೇನೋ ಒಂಟಿತನ. ಸೃಜನಾ ನಿರ್ಧಾರ ಮಾಡಿದ್ದಳು, ನಾನು ಅಮ್ಮನ ಹಾಗೆ ಆಗೋಲ್ಲ ಎಂದು.
ತುಂಬಾ ಚಿಕ್ಕ ವಯಸ್ಸಿನಿಂದ ತನ್ನ ಕೆಲಸವನ್ನ ತಾನೆ ಮಾಡಿಕೊಳ್ಳುತ್ತಿದ್ದಳು. ಯಾರನ್ನೂ ನಂಬುತ್ತಿರಲ್ಲಿಲ್ಲ, ಅಮ್ಮನನ್ನ ಸಲಹೆ ಕೇಳುವ ಪರಿಪಾಠವನ್ನೂ ಬೆಳೆಸಿಕೊಂಡಿರಲ್ಲಿಲ್ಲ. ಅಗಾಧವಾದ ಪ್ರೀತಿಯಿತ್ತು ಹಾಗಿದ್ದರೂ ಅಮ್ಮ ತುಂಬಾ ಡಿಪೆಂಡೆಂಟ್ ಎಂದು ಹೀಯಾಳಿಸುತ್ತಿದ್ದಳು...
ಎಲ್ಲ ಹೆಣ್ಮಕ್ಕಳು ಕೆಲಸಕ್ಕೆ ಹೋಗುವವರೇ, ಕೆಲವರಿಗೆ ಮಾತ್ರ ಸಂಬಳ!
ಇವಷ್ಟನ್ನ ನೆನಪಿಸಿಕೊಳ್ಳುತ್ತಿದ್ದರೆ, ಅಮ್ಮ ಬುಲೆಟ್ಟಿನ ಮೇಲೆ ಸವಾರಿ ಮಾಡಿಕೊಂಡು ಬರುತ್ತಿದ್ದಾಳೆ. ಅಮ್ಮನಿಗೆ ಏನಾಯ್ತು ಎಂದು ಹೋಗಿ ನೋಡಿದರೆ, ಅಮ್ಮ ಖುಷಿಯಾಗಿ ಎಲ್ಲರನ್ನೂ ಮಾತಾಡಿಸುತ್ತಾ ನಿಂತಿದ್ದಾರೆ. "ಅಮ್ಮ ಏನಿದು" ಅಂದಾಗ, "ಎಲ್ಲರೂ ನನಗೆ ಅಮ್ಮನ ಹಾಗಿರು, ಏನೇನೋ ರಿಸ್ಕ್ ತಗೋಬೇಡ, ಗಂಭೀರವಾಗಿರು, ಮನೆಯನ್ನ ಚೆನ್ನಾಗಿ ನಡೆಸು, ಮಗಳನ್ನ ಚೆನ್ನಾಗಿ ನೋಡ್ಕೋ ಅಂತ ಹೇಳಿದ್ರೇ ಹೊರತು ನಿನ್ನ ಜೀವನದ ಆಸೆಗಳನ್ನೂ ತೀರಿಸ್ಕೋ ಎಂದು ಹೇಳಲೇ ಇಲ್ಲ, ಅದಿಕ್ಕೆ ನಾನೂ ಮನೆಯೊಳಗೇ ಕೂತಿದ್ದೆ ಈಗ ನಿನ್ನಿಂದ ಎಲ್ಲ ನೋಡಿಕೊಂಡು ಕಲಿತಿದ್ದೀನಿ ಬಿಡೆ" ಎಂದು ನಗುತ್ತಾ ಸೆಂಟರ್ ಸ್ಟಾಂಡ್ ಹಾಕಿದ್ದಳು. ರಸ್ತೆಯಲ್ಲಿದ್ದ ಹುಡುಗರೆಲ್ಲಾ ಕಾವೇರಿಯನ್ನೇ ನೋಡುತ್ತಿದ್ದರು, ಅವಳ ಸೌಂದರ್ಯಕ್ಕಲ್ಲ ಬದಲಿಗೆ ಅವಳ ಪಾರ್ಕಿಂಗ್ ಸ್ಕಿಲ್ಸ್ ಪರೀಕ್ಷೆ ಮಾಡೋದಕ್ಕೆ.
ಸೃಜನಾ ಒಂದು ತರಹ ಗಾಬರಿಯಾಗಿ "ಏನಮ್ಮ ಇದೆಲ್ಲಾ ಈಗ" ಎಂದು ಬಾಯಿ ತಪ್ಪಿ ಅಂದುಬಿಟ್ಟಳು. ಕಾವೇರಿ ಕೋಪ ಮಾಡಿಕೊಂಡು "ಅಯ್ಯೊ ಕರ್ಮವೇ ನಿಮಗೆ ಬೇಕಾದ ಹಾಗೆ ಬದಲಾಗೋಕಾಗಲ್ಲ, ಬೇಕಾಗಿದ್ದಕ್ಕೆ ಡಿಪೆಂಡ್ ಆಗಬೇಕು, ಬೇಡದಿದ್ದಕ್ಕೆ ಡಿಪೆಂಡ್ ಆಗಬಾರದು, ಮಕ್ಕಳಾಗಿದ್ದಕ್ಕೆ ನಮ್ಮ ಜೀವನವನ್ನ ಡಿಕ್ಟೇಟ್ ಮಾಡುವ ಅಧಿಕಾರ ಎಲ್ಲಿಂದ ಬರತ್ತೆ ನಿಮಗೆ, ಬೇಕಾದಾಗ ಅಮ್ಮನ ಥರ ಗಂಭೀರವಾಗಿರಬೇಕಾ" ಎಂದು ಎದ್ದು ಹೋದಳು.
ವಿಶೇಷ ಲೇಖನ: ಅಮ್ಮ... ನಮ್ಮೆಲ್ಲರ ಬದುಕಿನ ಜೀವಂತ ಪವಾಡ!
ಸೃಜನಾ ಪೇಪರ್ ತೆಗಗೆದು ನೋಡಿದಳು, ಅವತ್ತು ಅಮ್ಮಂದಿರ ದಿನ. ಅಮ್ಮ ಆದ ತಕ್ಷಣ ಅವಳ ತನವನ್ನೆಲ್ಲಾ ಬಿಟ್ಟುಹೋಗುತ್ತಾಳೆ, ತನ್ನ ಜೀವನವನ್ನೆಲ್ಲಾ ಮಕ್ಕಳು ಮನೆಗಾಗಿಯೇ ಮೀಸಲಿಡುವ ಕ್ಷಮಯಾ ಧರಿತ್ರಿ ನಾರಿಯ ಪರಿಕಲ್ಪನೆಯ ರಾಶಿ ರಾಶಿ ಕಥೆಗಳು ಬಂದಿರುತ್ತದೆ. ಅದನ್ನೇ ಓದಿ ಬೆಳೆದಿದ್ದರಿಂದೇನೋ ಅವಳಿಗೆ ಅಮ್ಮಂದಿರ ದಿವಸದಂದು ಅಮ್ಮನ ಕೆಲಸವನ್ನೆಲ್ಲಾ ಮಾಡಿ ಮಿಕ್ಕಷ್ಟು ದಿವಸ ಟಿಪಿಕಲ್ ಅಮ್ಮನ ಹಾಗಿಯೇ ಇರಬೇಕೆಂಬ ನಾರ್ಮಲ್ ಚರ್ಯೆ ಅನಿಸಿದೆ.
ಸಿಕಾಪಟ್ಟೆ ಬದಲಾದ ಅಮ್ಮನನ್ನ ಅವಳಿಗೆ ಒಪ್ಪಿಕೊಳ್ಳೋದಕ್ಕೆ ಆಗುತ್ತಿಲ್ಲ. ಅದರೆ ಅವಳ ಬುದ್ಧಿ ಸ್ವಲ್ಪ ಕೆಲಸ ಮಾಡಿ ಹೇಳಿದೆ. "ಅಮ್ಮ ಹೀಗೆ ಇರಬೇಕೆಂದು ಯಾರು ಹೇಳಿದ್ದು? ಅವಳಿದ್ದ ಹಾಗೆ ನಾನು ಅವಳನ್ನ ಒಪ್ಪಿಕೊಳ್ಳಬೇಕು, ನಮ್ಮನ್ನು ಅವಳು ಒಪ್ಪಿಕೊಂಡ ಹಾಗೆ" ಎಂದು ಅಂದುಕೊಂಡು ಬಾ ಅಮ್ಮ ರೌಂಡ್ ಹಾಕಿಸು ಎಂದು ಓಡಿ ಹೋದಳು....
ಇದು ನಮ್ಮ ಎಲ್ಲರ ಮನೆಯ ಕಥೆ. ನಿಮ್ಮ ಅಮ್ಮ ಬೈಕ್ ಓಡಿಸೋ ಬದಲು ಇನ್ನೇನೋ ಮಾಡಲು ಹೊರಟಿದ್ದಾಳೆ, ಪ್ರೋತ್ಸಾಹಿಸಿ. ಅಮ್ಮಂದಿರ ದಿನದ ಶುಭಾಶಯಗಳು...