ಚೆನ್ನಾಗಿರೋದೆಲ್ಲಾ ಆಚೆ ಕಡೆಯಿಂದಾನೆ ಬಂದಿರೋದು!
"ಮನೆಯಲ್ಲಿ ಮೊದಲನೆಯ ಸೊಸೆಗೆ ಜವಾಬ್ದಾರಿ ಜಾಸ್ತಿ. ನೀವೇ ಮನೆಯಲ್ಲಿ ನೋಡಿ, ಮೊದಲನೆಯ ಸೊಸೆಗೆ ಮಾಡಿಸುವ ಕೆಲಸ, ಅದನ್ನ ನೋಡುವ ಕಣ್ಣುಗಳು ಬಹಳ. ಸ್ವಂತ ಮಕ್ಕಳಿಗೆ ಬರದಿದ್ದದ್ದೂ ಸಹ ಸೊಸೆಗೆ ಬರಲಿ ಎಂಬ ಆಸೆ ಅಭಿಲಾಷೆ ಇರುತ್ತದೆ."
ಇಬ್ಬರು ಹುಡುಗಿಯರು ಊಬರ್ ಪೂಲಿನಲ್ಲಿ ಹಾಗೆ ಮಾತಾಡಿಕೊಳ್ಳುತ್ತಾ "ನಮ್ಮ ಭಾರತೀಯರಿಗೆ ಅದೇ ಕಣೆ ಪ್ರಾಬ್ಲಮ್, ಚೆನ್ನಾಗಿರೋದೆಲ್ಲಾ ಆಚೆ ಕಡೆಯಿಂದಾನೆ ಬಂದಿರೋದು" ಅಂತಾನೆ ನಂಬೋದು ಎಂದು ನಗುತ್ತಾ ಇದ್ದರು.
ಹುಟ್ಟೂರು ನನ್ನ ಬಾ ಎಂದು ಕರೆಯುತ್ತಿದೆ, ವಾಪಸ್ ಬರುತ್ತಿದ್ದೇನೆ!
ನನಗೆ ಅವರ ಮಾತಲ್ಲಿ ಅಂಟಿಕೊಂಡ ವಾಕ್ಯಗಳು "ಚೆನ್ನಾಗಿರೋದೆಲ್ಲ ಆಚೆಕಡೆಯಿಂದ ಬಂದಿರೋದು" ಅನ್ನೋದು. ನಿಜವಾಗಲೂ ನಮಗೆ ಹಾಗೆ ಅನ್ನಿಸುತ್ತದಾ ಅಥವಾ ನಮ್ಮ ಮನಸ್ಸನ್ನ ಹಾಗೆ ಎಲ್ಲರೂ ತಯಾರು ಮಾಡಿದ್ದಾರಾ ಎಂದು ಯೋಚಿಸುತ್ತಾ ಹೋದೆ.
ಶಾಲೆಯಲ್ಲಿ ಚರಿತ್ರೆಯನ್ನ ಓದುತ್ತಿದ್ದಾಗ ವಿಶ್ವ ಯುದ್ಧದ ಸ್ವಲ್ಪ ಭಾಗವನ್ನ ನಮಗೆ ಪರಿಚಯ ಮಾಡಿಕೊಟ್ಟಿದ್ದರು. ಅದರಲ್ಲಿ ಜರ್ಮನ್ನರಿಗೆ ಆರ್ಯರ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ ಇದ್ದದ್ದು ಒಂದು ವಾಕ್ಯದಲ್ಲಿ ಕೊಟ್ಟು ನಿಲ್ಲಿಸಿದ್ದರು. ಚಿತ್ರಾನ್ನದಂಥಿದ್ದ ನಮ್ಮ ಚರಿತ್ರೆ ಪಾಠಗಳಲ್ಲಿ ಎಗ್ಗು ಸಿಗ್ಗಿಲ್ಲದೆ ಆರ್ಯ ದ್ರಾವಿಡರ ಕಲ್ಪನೆಯನ್ನೂ ತುಂಬಿದ್ದರು. ಆಗಲೂ ನಮಗೆ ನಾವೆಲ್ಲ ದ್ರಾವಿಡರು, ಆರ್ಯರು ಬಂದು ನಮ್ಮನ್ನೆಲ್ಲ ದಕ್ಷಿಣಕ್ಕೆ ತಳ್ಳಿದ್ದರು ಎಂದು ಬಲವಾಗಿ ನಂಬಿದ್ದೆವು. ಹೀಗೆ ನಂಬಿದ್ದ ನನ್ನಂಥವರಿಗೆ ಬಾರ್ಸಿಲೋನಾಗೆ ಹೋದಾಗಲೇ ಬೇರೆಯ ಪ್ರಪಂಚ ಕಂಡಿದ್ದು.
ಸಿಟಿಗಿಂತ ಕಾಡನ್ನೇ ಇಷ್ಟಪಡುವ ಜಡೆಯಪ್ಪ ಎಂಬ ಮಾಂತ್ರಿಕ!
ನಮ್ಮ ಮನೆ ಒಡತಿ ಪೂರ್ತುಗೀಸ್ ಮಾತಾಡುವ ಬ್ರೆಝಿಲಿನವಳು. ಅವಳಿಗೆ ನನ್ನ ನೋಡಿದಾಗಲ್ಲೆಲ್ಲ ನಿನ್ನ ಮೈ ಬಣ್ಣ ಚೆನ್ನಾಗಿದೆ, ನೀನು ಯಾವ ಕ್ರೀಮ್ ಹಾಕೊತ್ಯ, ಏನು ಮೇಕಪ್ ಮಾಡ್ಕೊತ್ಯಾ ಎಂದೆಲ್ಲಾ ಹಿಂದೆ ಬಿದ್ದಿರುತ್ತಿದ್ದಳು. ನಾನು ಮಾಡುತ್ತಿದ್ದ ಸ್ನಾತಕೋತ್ತರ ಪದವಿಯಲ್ಲಿ ಗಣಿತ, ಕಂಪ್ಯೂಟರ್ ಸೈನ್ಸ್ ಮೊದಲಾಗಿದ್ದರಿಂದ ನೀವೆಲ್ಲಾ ಜೆನಿಟಿಕಲಿ ಬುದ್ಧಿವಂತರೆಂದು ಸದಾ ಹೇಳುತ್ತಿದ್ದಳು. ನಮ್ಮ ಚರಿತ್ರೆ ನಮಗೆ ನಮ್ಮ ಬುದ್ಧಿವಂತಿಕೆಯೆಲ್ಲ ಹೊರಗಿಂದ ಎರವಲಾಗಿ ಬಂದಿದ್ದು ಎಂದು ಸಾರಿಸಾರಿ ಹೇಳುತ್ತಿದ್ದೆ.
ಇವರಿಲ್ಲಿ ನಮ್ಮ ತ್ವಚೆಯನ್ನ, ಬುದ್ಧಿವಂತಿಕೆಯನ್ನ ಹೊಗಳುತ್ತಾ ಇದ್ದಾರೆ ಎಂದು ಸ್ವಲ್ಪ ಆಶ್ಚರ್ಯವಾಯಿತು. ಇದನ್ನೆ ಸೈಕಾಲಜಿ ಓದಿದ ನನ್ನ ಗೆಳತಿಯ ಹತ್ತಿರ ಕೇಳುತ್ತಿದ್ದಾಗ, ವಸಾಹತುಶಾಹಿಯವರು ಮೊದಲು ಮಾಡಿದ ಕೆಲಸವೇನಂದರೆ ನಮ್ಮ ಜನರು ಆಳೋದಕ್ಕೆ ಅಯೋಗ್ಯರು ಮತ್ತು ಆಚೆಯಿಂದ ಬಂದವರು ಮಾತ್ರ ಅವರನ್ನ ಉದ್ಧರಿಸುತ್ತಾರೆ ಎಂಬ ವಿಚಿತ್ರ ಕಲ್ಪನೆಯನ್ನ ಸುಮಾರು ಪೀಳಿಗೆಗಳಿಗೆ ತುಂಬುತ್ತಾರೆ. ಅದನ್ನೇ ನಂಬಿಕೊಂಡು ಬಂದ ನಮ್ಮ ಜನ, ಆಚೆಯಿಂದ ಬಂದವರೇ ಒಳ್ಳೆ ಆಡಳಿತ ಕೊಡೋದು ಎಂದು ಹುಚ್ಚುಚ್ಚಾಗಿ ನಂಬುತ್ತೇವೆ. ಈ ಎಲ್ಲಾ ಕಾರಣಗಳಿಂದ ನಮ್ಮ ಮನಸ್ಸನ್ನ ಹೇಗೆಲ್ಲಾ ಟ್ರೈನ್ ಮಾಡುತ್ತಾರೆ ಎಂದು ಯೋಚಿಸುತ್ತಾ ಕೂತೆ.
ಗೊರು ಗೊರು ಗೊರುಕನ ಎಂಬ ಸೋಲಿಗರ ಹಳ್ಳಿಯ ಹಾಡು
ಇದೇ ಸಮಯಕ್ಕೆ ಇತ್ತೀಚೆಗೆ ಡಾ ಕೆ ಎನ್ ಗಣೇಶಯ್ಯನವರು ಹೊರತಂದ ಆರ್ಯ ವೀರ್ಯ ಕಥಾಸಂಕಲನವನ್ನ ಓದುತ್ತಿದ್ದೆ. ಅದರಲ್ಲಿ ವಿಶ್ವಯುದ್ಧದ ಸಮಯದಲ್ಲಿ ಜರ್ಮನ್ನರು ಕಾಶ್ಮೀರದ ಕಣಿವೆಯಲ್ಲಿ ಆರ್ಯರನ್ನ ಹುಡುಕಿಕೊಂಡು ಬಂದಿದ್ದರು. ಯಹೂದಿಯರ ಮಾರಣ ಹೋಮ ಮಾಡುವ ಮುನ್ನ ಇವರೆಲ್ಲ ತಮ್ಮನ್ನ ತಾವೇ ಪ್ಯೂರಿಫೈ ಮಾಡಿಕೊಳ್ಳುವ ಸಲುವಾಗಿ ಅಲ್ಲಿನ ಹೆಣ್ಣುಮಕ್ಕಳನ್ನ ತಮಗೆ ಬೇಕಾದ ಹಾಗೆ ಬಳಸಿಕೊಂಡ ದಾರುಣ ಕಥೆಯದು. ಓದುತ್ತಾ ಓದುತ್ತಾ ಯಾವುದೇ ಯುದ್ಧ, ಏನೇ ಜಗತ್ತಿನ ಭೀಕರತೆಯಾದರೂ ಹೆಣ್ಣಿನ ಮೇಲೆ ಆಕ್ರಮಣವಾಗಿಯೇ ಕೊನೆಗಾಣುತ್ತದೆ ಎಂಬ ವಿಷಯ ಬಹಳ ಕಾಡುತ್ತದೆ. ನಾಝಿಗಳು ಆರ್ಯರು ಜರ್ಮನಿಯಿಂದ ವಲಸೆ ಬಂದವರು, ನಮ್ಮ ವೇದ ಪುರಾಣಗಳನ್ನೆಲ್ಲ ಅವರೇ ಬಂದವರು, ಮೂಲತಃ ಭಾರತೀಯರಾದ ನಾವೆಲ್ಲ ಹೆಡ್ಡರೆಂದು ಚರಿತ್ರೆಯಲ್ಲಿ ಬಿಂಬಿಸಿದ್ದರು. ಅವರ ಪೂರ್ವಜರನ್ನ, ಅವರ ಬುದ್ಧಿವಂತಿಕೆಯನ್ನ ನಕಲಿಸಲು ಹಿಟ್ಲರಿನ ಅನುಯಾಯಿ ಹಿಮ್ಲರ್ ಸುಮಾರು ಜನರನ್ನ ಭಾರತಕ್ಕೆ ಕಳಿಸಿದ್ದ. ಏನೇನೋ ಮಾಡಲು ಹೋಗಿ, ಕಡೆಗೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ತಮ್ಮ ವಿಕೃತಿಯನ್ನ ತೋರ್ಪಡಿಸಿದರು. ಇವರಿಗೂ ಆಚೆಯಿಂದ ಬಂದವರು ಹೀರೋಗಳಾಗಿದ್ದರು.
ಬೆಂಕಿಯಿಂದ ಜನಿಸಿದವಳು, ಬೆಂಕಿಯಲ್ಲಿಯೇ ಬೆಂದವಳು ನಾನು!
ನಮ್ಮತ್ತೆ ಹೀಗೆ ಮೊನ್ನೆ ಮಾತಾಡುತ್ತಿರುವಾಗ ಚೆನ್ನೈನ ಬೀಚಿನಲ್ಲಿ ಕೆಲಸ ಮಾಡುವ ಕೆಲವು ಹೆಣ್ಣುಮಕ್ಕಳು ಪಶ್ಚಿಮದಿಂದ ಬರುವ ಗಂಡಸರ ಜೊತೆ ಸಂಬಂಧ ಬೆಳೆಸಿ ಮಕ್ಕಳು ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. ನಾನು ಯಾಕಂತೆ ಎಂದು ಕೇಳುತ್ತಿದ್ದೆ. ಹೊರಗಿನ ಜೀವನ ಚೆನ್ನಾಗಿದೆ, ಅಲ್ಲಿನ ಗಂಡಸರಿಗೆ ಒಳ್ಳೆ ಶಕ್ತಿ ಇರುತ್ತದೆ, ಮತ್ತು ಒಳ್ಳೆ ಆರೋಗ್ಯ ಇರುವ ಕಾರಣ ಮಕ್ಕಳನ್ನ ಅಲ್ಲಿನವರ ಹಾಗೆ ಮಾಡಿದರೆ ಹೇಗಾದರೂ ಬದುಕಿಕೊಂಡಾರೂ ಎಂಬ ಕಲ್ಪನೆಯೆಂದು ಹೇಳಿದಾಗ ನಾನು ಅವಕ್ಕಾಗಿ ಕೂತೆ.
ಬಾರ್ಸಿಲೋನಾದಲ್ಲಿದ್ದಾಗ ನನ್ನ ಇಂಡಿಯನ್ ಸ್ನೇಹಿತನಿಗಾದ ಒಂದು ವಿಚಿತ್ರ ಅನುಭವವನ್ನ ನೆನೆಸಿಕೊಂಡೆ. ನಾವೈದು ಜನ ಚಾರಣ ಮಾಡಲು ಹೊರಟ್ಟಿದ್ದೆವು. ನಾನೊಬ್ಬಳೆ ಹುಡುಗಿಯಿದ್ದೆ, ನನಗವತ್ತು ವಿಶೇಷ ಮಾನ್ಯತೆಯಿತ್ತು. ಏನೋ ಮಾತಾಡುತ್ತಾ ಹೋಗುತ್ತಿದ್ದೆವು. ನಂತರ ನಮ್ಮ ಹಾಗೆ ಚಾರಣಕ್ಕೆ ಬಂದಿದ್ದ ಎಷ್ಟೋ ಮಂದಿ ಒಂದು ಬಿಡಾರದಲ್ಲಿ ತಂಗಿದ್ದೆವು. ಹಾಗೆ ಮಾತಾಡುತ್ತಿರುವಾಗ ಗೆಳೆಯನಿಗೆ ಲಿಥುವೇನಿಯಾದ ಹುಡುಗಿ ಪರಿಚಯವಾದಳು. ಮಾತು ಮೈಮುಟ್ಟುವ ಹಂತ ತಲುಪಿದಾಗ ನಮ್ಮೆಲ್ಲರಿಗೆ ರಾತ್ರಿ ಟ್ರೆಕ್ಕಿಂಗಿಗೆ ಈ ಮಹಾಶಯ ಬರುವ ಯಾವ ಸೂಚನೆಯೂ ಇಲ್ಲ ಎಂದು ಅರಿತೆವು.
ರಾತ್ರಿ ಚಾರಣವನ್ನ ಮುಗಿಸ್ಕೊಂಡು ಬಂದಾಗ ಗೆಳೆಯನ ಮುಖ ಇಂಗು ತಿಂದ ಮಂಗನ ಹಾಗಾಗಿತ್ತು. "ಏನ್ ಗುರು" ಅಂದ್ರೆ "ಲಿಥುವೇನಿಯಾದ ಗಂಡಸರಿಗೆ ಅಷ್ಟೊಂದು ಶಕ್ತಿ ಮತ್ತು ಒಳ್ಳೆಯ ಜೀನ್ಸ್ ಇಲ್ಲವಂತೆ, ಅದಕ್ಕೆ ಏಶಿಯಾದ ಅದರಲ್ಲೂ ಭಾರತ, ಪಾಕಿಸ್ತಾನ, ಅಫ್ಘಾನಿನ ಗಂಡಸರ ಜೊತೆ ಮಕ್ಕಳು ಮಾಡಿಕೊಂಡು ಒಳ್ಳೆ ಸಂತತಿ ಕೊಡುವ ಯೋಚನೆಯಲ್ಲಿದ್ದಾರಂತೆ. ಅದಕ್ಕೆ ರೈಮಂಡಾ ಅಷ್ಟು ಮಾತಾಡಿಸಿದ್ದು" ಎಂದು ತಲೆ ಮೇಲೆ ಕೈಹೊತ್ತು ಕೂತಿದ್ದ. ಹೀಗೆ ಜನರು ಹೇಗೆ ತಮ್ಮದಲ್ಲದನ್ನು ಬಹಳ ಶ್ರೇಷ್ಠವೆಂದು ನಂಬುತ್ತಾರೆ ಮತ್ತು ಭಗವಂತನ ಅವತಾರವೆಂದು ಅಂದುಕೊಳ್ಳುತ್ತಾರೆ ಎಂದು ತುಂಬಾ ನಕ್ಕಿದ್ದೆ.
ಸಡನ್ನಾಗಿ ಬಾರ್ಸಿಲೋನಾದ ಮನೆಯೊಡತಿ ಜೀಸಸ್ ಭಾರತದವನೆಂದು ನಮ್ಮ ಟೀವಿಯಲ್ಲಿ ಬರುತ್ತಿದೆ ಎಂದು ವಿಡಿಯೋ ಕಳಿಸಿದಳು. ಈಗ ಇನ್ನೊಂದು ಕಥೆ ಎಂದು ನಗುತ್ತಾ ಕೂತೆ....