ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಷ್ಟೇ
ಮನೆಯ ಕಾರ್ಯಕ್ರಮಕ್ಕೆ ಒಂದು 3-4 ತಿಂಗಳ ಹಿಂದೆ ಬಂದ ಅಪ್ಪನ ಚಿಕ್ಕಮ್ಮನ ಮಗನನ್ನ ಅಪ್ಪ, ಅಮ್ಮ ಊರಿನ ಮಳೆ, ಬೆಳೆ ಬಗ್ಗೆ ವಿಚಾರಿಸುತ್ತಿದ್ದರು. ಸಿಟಿಯಲ್ಲೇ ಹುಟ್ಟಿ ಬೆಳೆದ ನಮ್ಮಂಥವರಿಗಿರುವ ಕಡೆ ಊರಿನ ನಂಟು ಅವರೆ. ಅಲ್ಲಿ ದೇವಸ್ಥಾನಕ್ಕೆ ಒಮ್ಮೆ ಕಾಣಿಕೆಯೋ ಅಥವ ಮನಸ್ಸು ಮಾಡಿ ವರುಷಕ್ಕೊಮ್ಮೆ ಹೋದರೆ ಊರಿನ ಪರಿಚಯವಾಗೋದು. ಇನ್ನೆಲ್ಲಾ ಅಜ್ಜಿಯ ಕಥೆಯಲ್ಲೇ ಊರಿನ ಬಗ್ಗೆ ತಿಳಿದುಕೊಳ್ಳೋ ಪರಿಸ್ಥಿತಿ.
ಈ ಸಲ ಮಾತಾಡೋವಾಗ "ಇನ್ನು ನಮ್ಮ ಪೀಳಿಗೆಗೆ ಉತ್ತೋದು, ಬಿತ್ತೋದು ಸಾಕು. ನನ್ನ ಮಕ್ಕಳು ನಿಮ್ಮಗಳ ಥರಾನೆ ಇಂಗ್ಲಿಷ್ ಮೀಡಿಯಮ್ ಗೆ ಹೋಗ್ತಾರೆ. ನಿಮ್ ಥರಾನೆ ಕೆಲ್ಸಗಿಲ್ಸ ಮಾಡ್ಕೊಂಡು ಬೆಂಗಳೂರಲ್ಲಿ ಹಾಯಾಗಿರ್ಲಿ. ಸಾಕು ಬರ್ದಿರೋ ಮಳೇನ್ ನಂಬ್ಕೊಂಡು ಮಾಡೋ ಜೀವ್ನ" ಎಂದು ಬೇಜಾರು ಮಾಡಿಕೊಂಡು ಮಾತಾಡಿದರು.
ದಿನನಿತ್ಯ ಹೊಟ್ಟೆ ಸೇರುವ ಕಾಯಿಪಲ್ಯಗಳು ಬಂದಿದ್ದೆಲ್ಲಿಂದ?
ಈ ಮಾತುಕತೆ ನಡೆಯುತ್ತಿರುವಾಗಲೇ ಅದೇ ಸಮಯದಲ್ಲಿ ನಮ್ಮ ಮನೆಯಲ್ಲಿ ಒಂದು ಪುಸ್ತಕವನ್ನ ನೋಡಿದೆ. ಇಂಗ್ಲಿಷಿನದ್ದು. "ಮೂಂಗ್ ಓವರ್ ಮೈಕ್ರೋಚಿಪ್ಸ್" ಅಂತ. ಹೆಸರೇ ವಿಚಿತ್ರವಲ್ಲಪ್ಪ ಎಂದು ಓದುತ್ತಾ ಹೋದೆ. ನನ್ನ ಚಿಕ್ಕಪ್ಪ ಹೇಳಿದ್ದ ಮಾತುಗಳಿಗೆ ತದ್ವಿರುದ್ಧವಾದ ಮಾತುಗಳು.
"ಐಟಿ ಕಂಪೆನಿಯಲ್ಲಿನ ಕೆಲಸ ಬೇಜಾರಾಗಿ, ಇನ್ನು ಮುಂದೆ ಹಾಯಾಗಿ ನೇಗಿಲು ಹಿಡಿಯುತ್ತೀನಿ, ಬಾಸ್ ಡೆಡ್ ಲೈನ್ ಗಿಂತ ಮಳೆದೇವರ ಡೆಡ್ ಲೈನ್ ಪ್ರಿಯ" ಎಂದು ರಾಜಾರೋಷವಾಗಿ ಬರೆದಿದ್ದರು ವೆಂಕಟ್ ಐಯ್ಯರ್. ಮೊದಲ ನೋಟದಲ್ಲಿ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ವಿಷಯ ಅರಿವಾದರೂ ಸಹ ಇಲ್ಲಿ ಅವರ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳದೆ, ಬೇರೆ ಪ್ರಪಂಚಕ್ಕೆ ಹೋದರೆ ಅವರ ಸಮಸ್ಯೆ ಬಗೆ ಹರಿಯತ್ತೆ ಎಂಬ ಸಿನಿಕತನವೂ ತುಂಬಿದೆ ಎಂದು ಮೇಲ್ನೋಟಕ್ಕೆ ಅನ್ನಿಸಿತು.
ಎಂಜಿನಿಯರ್ ಮದುಮಗನಂತೆ ಕುದುರೆ ಏರಿ ಬಂದಿದ್ದು ಏಕೆ ಗೊತ್ತಾ?
ಚಿಕ್ಕಪ್ಪನಿಗೆ ಇದ್ದ ಸಮಸ್ಯೆಗಳು ಅವರು ಹಾಕುವ ದೈಹಿಕ ಶ್ರಮಕ್ಕೆ, ವರ್ಷಕ್ಕೊಮ್ಮೆ ಕಾಯುಬೇಕಾದ ಫಸಲಿಗೆ ಬೆಲೆ ಬರದೇ ಇರೋದು, ಹುಳುವಿನ ಸಮಸ್ಯೆ, ಆಗಾಗ ರಸ್ತೆ ಅಗಲೀಕರಣ ಎಂದು ಜಮೀನು ಕಡಿಮೆ ಆಗೋದು, ಇನ್ನೆಲ್ಲೋ ಬರುವ ರೆಸಾರ್ಟಿಗೆ ಭೂಮಿ ನೀಡಿದರೆ ಬರುವ ವೇಗವಾದ ದುಡ್ಡು, ಹಳ್ಳಿಯಲ್ಲೇ ಇರಬೇಕಾದ ಕೀಳರಿಮೆ... ಇವೆಲ್ಲವೂ ಅವರಿಗೆ ಇದು ಬೇಡ ಎಂಬುದು ನಿಚ್ಚಳವಾಗಿದೆ. ಅವರಿಗೆ ನಮಗಿರುವ ತಿಂಗಳ ಆದಾಯ, ಜನ ಓದಿದ್ದಾರೆ ಎಂದು ಕೊಡುವ ಮರ್ಯಾದೆ, ಒಂದೋ ಎರಡೋ ಮನೆ ಕಟ್ಟಿ ಮನೆ ಒಕ್ಕಲಿಗೆ ಕರೆಯುವ ಜನರ ಮಧ್ಯ ಅವರ ಸಾಧನೆ ಕಳಪೆ ಎಂದೆನಿಸಿರಬೇಕು.
ಇನ್ನು ಆ ಪುಸ್ತಕದಲ್ಲಿ ಬರೆಯುವ ಐಯ್ಯರ್, ಅವರಿಗೆ ಆಫೀಸಿನಲ್ಲಿ ವರ್ಷ ವರ್ಷ ಯಾರಿಗೋ ಮಸ್ಕ ಹೊಡೆದು, ಮನೆಯಲ್ಲಿ ಸಮಯ ಕಳೆಯದೆ, ಕೋಟಿಗಟ್ಟಲೆ ದುಡ್ಡು ಕೊಟ್ಟರೂ ಚಿಕ್ಕ ಜಾಗದಲ್ಲಿ ಮುಂಬೈನ ಗೌಜು ಗದ್ದಲದಲ್ಲಿ ಕಳೆಯಬೇಕು, ತಮಗೇ ಬೇಕಾದ ಹಾಗೆ ಜೀವನ ಮಾಡೋದಕ್ಕೆ ಆಗಲ್ಲ ಅನ್ನೋದು, ಒಳ್ಳೆ ಗಾಳಿ, ಊಟತಿಂಡಿ ಯಾವುದೂ ಇಲ್ಲ, ಅನ್ನುವುದು ಅವರ ಜೀವನದ ಸೋಲಾಗಿತ್ತು. ಕೈಯಲ್ಲಿ ದುಡ್ಡಿದೆ ಆರೋಗ್ಯ ಇಲ್ಲ, ಗಾಳಿ ಇಲ್ಲ ಬೆಳಕು ಇಲ್ಲ. ಇವರಿಗೆ, ಹಳ್ಳಿಯಲ್ಲಿರುವ ರೈತ ತನಗೆ ಬೇಕಾದ್ದನ್ನ ಬೆಳೆದು ತಿನ್ನುವ ಹಕ್ಕಿದೆ, ಜೊತೆ ಜೊತೆಗೆ ಒಳ್ಳೆ ಗಾಳಿ ಬೆಳಕು ಎಲ್ಲವೂ ಇದೆ. ಅತಿಯಾದ ದುಡ್ಡು ಬಳಕೆ, ಐಷಾರಾಮಿ ಬದುಕು ಬೇಕಿಲ್ಲ ಎಂಬ ವಿಷಯ ಅವರಿಗೆ ಬಹಳ ಇಷ್ಟವಾಗುತ್ತದೆ. ಎಲ್ಲವನ್ನು ಬಿಟ್ಟು ರೈತನಾಗುವ ಬಯಕೆ ಅವರಿಗೆ.
ಇದಿಷ್ಟು ನನಗೆ ಒಂದೇ ವಾರದಲ್ಲಿ ಆಗಿದ್ದು-ಓದಿದ್ದು. ಆದ್ರೂ ನಮ್ಮಂಥ ಟೆಕ್ಕಿಗಳು ಅಂದುಕೊಂಡಹಾಗೆಲ್ಲ ರೈತರಾಗೋಕ್ಕಾಗಲ್ಲ ನೋಡಿ. ನಮ್ಮ ದೇಶದಲ್ಲಿ ರೈತರ ಮಕ್ಕಳು- ವಂಶಜರಿಗೆ ಮಾತ್ರ ಭೂಮಿ ಉಳುವುದಕ್ಕೆ ಸಿಗೋದು. ಈ ಪುಸ್ತಕದಲ್ಲಿ ಸವಿವರವಾಗಿ ಅದರ ಕಥೆಯನ್ನ ಬರೆದಿದ್ದಾರೆ. ಎಲ್ಲೋ ಪಾಲಕ್ಕಾಡ್ ಅಲ್ಲಿ ಅವರ ಅಜ್ಜ ರೈತರಾಗಿದ್ದ ಖಾತೆಯನ್ನ ತೋರಿಸಿ ಪಹಣಿ ಪತ್ರ ಮಾಡಿಸಿ, ಇವರು ಮುಂಬೈ ಹತ್ರ ಒಂದು ಹಳ್ಳಿಯಲ್ಲಿ ಒಂದಷ್ಟು ಭೂಮಿ ತೆಗೆದುಕೊಳ್ಳೋಷ್ಟರಲ್ಲಿ ಅವರು ಕೆಲಸ ಬಿಟ್ಟು ಒಂದು ವರ್ಷವಾಗಿತ್ತು.
ಇದೆಲ್ಲದಕ್ಕೂ ಒಂದು ಚೂರು ಲಂಚ ಕೊಡದೆ ಮಾಡಿಸಬೇಕು ಎಂಬ ಸಿದ್ಧಾಂತಕ್ಕೆ ಕಟ್ಟು ಬಿದ್ದು ಆ ಪತ್ರ ಈ ಪತ್ರ ಎಂದು ಅಲೆದಾಡುವ ಕಥೆಯಂತೂ ಸ್ವಾರಸ್ಯಕರವಾಗಿದೆ. ಇನ್ನು ಬೆಳೆ ಬೆಳೆಯಲು ಗೂಗಲ್ ಸಹಾಯ ಪಡೆದುಕೊಂಡು ಏನೇನೋ ಪ್ರಯೋಗ ಮಾಡಿ ಕೈ ಸುಟ್ಟುಕೊಂಡು ಜೀವನ ಬೇಜಾರೆನಿಸಿದ್ದಿದೆ. ಹಳ್ಳಿಯನ್ನ ಮತ್ತೊಂದು ಕಾರ್ಪೋರೇಟ್ ಕಂಪೆನಿ ಮಾಡುವ ಹುನ್ನಾರದಲ್ಲಿ ಅವರ ತನವನ್ನ ಕಳೆದುಕೊಂಡಿದ್ದರ ಬಗ್ಗೆಯೂ ಬರೆದಿದ್ದಾರೆ. ಮುಂದಿನ ಪೀಳಿಗೆಯವರು ಯಾರೂ ರೈತರಾಗೋದಿಲ್ಲ, ಈ ಊರನ್ನ ದೊಡ್ಡ ಕ್ಲಬ್ ಒಂದು ತೆಗೆದುಕೊಂಡು ಊರನ್ನೇ ರೆಸಾರ್ಟ್ ಮಾಡವ ಪ್ರಯತ್ನ ನಡೆಯುತ್ತಿದೆ ಎಂದು ನಿಚ್ಚಳವಾಗಿ ಬರೆದಿದ್ದಾರೆ ವೆಂಕಟ್ ಅಯ್ಯರ್.
ಇದನ್ನೆ ಬದಲಾವಣೆ ಬೇಕೆಂದು ಶೋಕಿಗಾಗಿ ರೈತರಾಗುವ ಜನರ ಮಾನಸಿಕ, ದೈಹಿಕ ಶಕ್ತಿ ಪರೀಕ್ಷೆ ಮಾಡಿಕೊಳ್ಳಲು ಒಂದು ದಿವಸ ಹೊಲಗಳಲ್ಲಿ ಕೆಲಸ ಮಾಡಿದರೆ ಗೊತ್ತಾಗತ್ತೆ ಎಂದು ಬರೆಯುವ ಅವರ ಮಾತಿನಲ್ಲಿ 100ಕ್ಕೆ 100 ಸತ್ಯ. ಒಮ್ಮೆ ಆರ್ಗ್ಯಾನಿಕ್ ಮಂಡ್ಯ ಎಂಬ ಹೊಲದಲ್ಲಿ ಒಂದು ದಿವಸ ಶ್ರಮವಹಿಸಿ ಬಂದರೆ ಗೊತ್ತಾಗುತ್ತದೆ. ನೀರು, ಬಿಸಿಲು ಇವೆಲ್ಲವನ್ನು ಲೆಕ್ಕಿಸದೆ ಕೆಲಸ ಮಾಡುವ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಬರುವ ಫಸಲಿಗೆ ಕಾಯುವ ತಾಳ್ಮೆ. ಇವೆಲ್ಲವೂ ಈ ಕಸುಬಿನ ಕಲಿಕೆ. ಇನ್ನು ಕೋಟಿಗಟ್ಟಲೆಯೂ ಲಕ್ಷಗಟ್ಟಲೆ ಬೆಲೆಬಾಳುವ ಪುಡಿ ಭೂಮಿ, ಕಲುಷಿತ ಗಾಳಿ, ನೀರು, ಟ್ರಾಫಿಕ್ ಜ್ಯಾಮೂ, ಮಕ್ಕಳಿಗೆ ಅವರ ಭಾಷೆ ನೆಲದ ಬಗ್ಗೆ ಇಲ್ಲದಿರುವ ಪ್ರೇಮ ಇದು ಈ ಕಸುಬಿನ ಕಲಿಕೆ. ಒಟ್ಟಿನಲ್ಲಿ ಅವರೆ ಕೆಲಸ ಇವರಿಗೆ, ಇವರ ಕೆಲಸ ಅವರಿಗೆ ಹೆಚ್ಚು ಪ್ರೀತಿ. ದೂರದ ಬೆಟ್ಟ ನುಣ್ಣಗೆ ಅಷ್ಟೆ!